ಅಭಿಮಾನಿಗಳ ಮನಸ್ಸನ್ನು ಎಷ್ಟು ಸಾರಿ ಗೆಲ್ತೀರಾ ಶಿವಣ್ಣ?
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ. ವಯಸ್ಸು 60 ದಾಟಿದ್ರು ಶಿವಣ್ಣನ ಕ್ರೇಜ್ ಯಾರಿಗಿಂತ ಕಮ್ಮಿ ಇಲ್ಲ. ವರ್ಷಕ್ಕೆ ಮೂರು ಸಿನಿಮಾ ಬಿಡುಗಡೆ ಆಗುತ್ತದೆ. ಸದಾ ಐದಾರು ಸಿನಿಮಾಗಳು ಅವರ ಕೈಯಲ್ಲಿ ಇರುತ್ತದೆ.
ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳಲ್ಲಿ ಶಿವರಾಜ್ಕುಮಾರ್ ಪ್ರೇಕ್ಷಕರನ್ನು ರಂಜಿಸುತ್ತಾ ಬರ್ತಿದ್ದಾರೆ. ಇನ್ನು ಕನ್ನಡ ಚಿತ್ರರಂಗದ ಅಜಾತಶತ್ರು ಶಿವಣ್ಣ. ಅವರ ಒಳ್ಳೆಯ ನಡೆ-ನುಡಿಯೇ ಇದಕ್ಕೆ ಕಾರಣ. ಯಾವುದೇ ಹಮ್ಮುಬಿಮ್ಮು ಇಲ್ಲದೇ ಸದಾ ಎಲ್ಲರನ್ನು ಪ್ರೋತ್ಸಾಹಿಸುತ್ತಾ ಎಲ್ಲರೊಟ್ಟಿಗೆ ಒಬ್ಬರಾಗಿ ದೊಡ್ಮನೆ ಯುವರಾಜ ಇದ್ದುಬಿಡುತ್ತಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಾರೆ.

ಸಾಕಷ್ಟು ಹೊಸ ಪ್ರತಿಭೆಗಳಿಗೆ ಶಿವಣ್ಣ ಬೆಂಬಲವಾಗಿ ನಿಂತಿದ್ದಾರೆ. ಮುಂದೆ ಕೂಡ ನಿಲ್ಲುತ್ತಾರೆ. ಅದೇ ಕಾರಣಕ್ಕೆ ಇಡೀ ಚಿತ್ರರಂಗಕ್ಕೆ ಸೆಂಚುರಿ ಸ್ಟಾರ್ ಅಂದ್ರೆ ಅಚ್ಚುಮೆಚ್ಚು. 'ಮಾರ್ಟಿನ್' ಚಿತ್ರಕ್ಕಾಗಿ ಶಿವಣ್ಣ ತಮ್ಮ 'ಭೈರತಿ ರಣಗಲ್' ಚಿತ್ರದ ರಿಲೀಸ್ ಡೇಟ್ ಮುಂದೂಡಿದ್ದಾರೆ. ಧ್ರುವ ಸರ್ಜಾ ಅವರ ಒಂದೇ ಒಂದು ಮನವಿಗೆ ಹಿಂದು ಮುಂದು ನೋಡದೇ ಈ ನಿರ್ಧಾರಕ್ಕೆ ಬಂದಿದ್ದಾರೆ. ಅದೇ ಕಾರಣಕ್ಕೆ ನಮ್ಮ ಹೃದಯ ಎಷ್ಟು ಬಾರಿ ಗೆಲ್ತೀರಾ ಶಿವಣ್ಣ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
ನರ್ತನ್ ನಿರ್ದೇಶನದ 'ಭೈರತಿ ರಣಗಲ್' ಚಿತ್ರವನ್ನು ತಮ್ಮದೇ ಬ್ಯಾನರ್ನಲ್ಲಿ ಶಿವಣ್ಣ ನಿರ್ಮಿಸಿ ನಟಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಶೂಟಿಂಗ್ ಮುಗಿದು ಪೋಸ್ಟ್ ಪ್ರೊಡಕ್ಷನ್ ಕೊಂಚ ತಡವಾಗಿದ್ದರಿಂದ ರಿಲೀಸ್ ಡೇಟ್ ಮುಂದೂಡಲಾಗಿತ್ತು. ಸೆಪ್ಟೆಂಬರ್ನಲ್ಲೇ ಸಿನಿಮಾ ತೆರೆಗೆ ಬರುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಪದೇ ಪದೇ ರಿಲೀಸ್ ಡೇಟ್ ಬದಲಾಯಿತು.

'ಭೈರತಿ ರಣಗಲ್' ರಿಲೀಸ್ ಡೇಟ್ ನವೆಂಬರ್ 15ಕ್ಕೆ ಯಾಕೆ ಹೋಯ್ತು ಎನ್ನುವುದನ್ನು ಬಿಗ್ಬಾಸ್ ಖ್ಯಾತಿಯ ಪ್ರಥಮ್ ವಿವರಿಸಿದ್ದಾರೆ. ಸಿನಿಮಾ ಸಂಪೂರ್ಣವಾಗಿ ಸಿದ್ಧವಾಗಿದೆ ಆದರೂ 'ಮಾರ್ಟಿನ್' ಕಾರಣಕ್ಕೆ ಇಷ್ಟು ತಡವಾಗುವಂತಾಗಿದೆ. ಶಿವಣ್ಣನ ನಿರ್ಧಾರಕ್ಕೆ ಕಾರಣ ಏನು? ಎನ್ನುವುದನ್ನು ಪ್ರಥಮ್ ಹೇಳಿದ್ದಾರೆ. ಶಿವಣ್ಣನ ಒಳ್ಳೆಗುಣ ಹಾಗೂ ಧ್ರುವ ಜೊತೆಗಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.
ಸೆಪ್ಟೆಂಬರ್ 27ಕ್ಕೆ 'ಭೈರತಿ ರಣಗಲ್' ಸಿನಿಮಾ ರಿಲೀಸ್ ಆಗಬೇಕಿತ್ತು. ಸೆನ್ಸಾರ್ ಮುಗಿದ ಬಳಿಕ ಅಕ್ಟೋಬರ್ 4ಕ್ಕೆ ಸಿನಿಮಾ ರಿಲೀಸ್ ಮಾಡುವ ಬಗ್ಗೆ ಶಿವಣ್ಣ ದಂಪತಿ ಚರ್ಚೆ ನಡೆಸುತ್ತಿದ್ದರಂತೆ. ಅಕ್ಟೋಬರ್ 11ಕ್ಕೆ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ತೆರೆಗೆ ಬರ್ತಿದೆ. ಎರಡೂ ಸಿನಿಮಾಗಳಿಗೆ ಅದರದ್ದೇ ಆದ ಕ್ರೇಜ್ ಇದೆ. ಹಾಗಾಗಿ ಧ್ರುವ ಸರ್ಜಾ ಅವರು ಶಿವಣ್ಣನಿಗೆ ಫೋನ್ ಮಾಡಿ ಮನವಿ ಮಾಡಿಕೊಂಡಿದ್ದರು. ಅಕ್ಟೋಬರ್ 4ಕ್ಕೆ 'ಭೈರತಿ ರಣಗಲ್' ರಿಲೀಸ್ ಬೇಡ ಎಂದು ಕೇಳಿಕೊಂಡರು. ಅದಕ್ಕೆ ಶಿವಣ್ಣ ನಿರ್ಧಾರ ಬದಲಿಸಿದರು ಎಂದು ಪ್ರಥಮ್ ಹೇಳಿದ್ದಾರೆ.
ಅಕ್ಟೋಬರ್ 11ಕ್ಕೆ 'ಮಾರ್ಟಿನ್' ಬರ್ತಿದೆ ಅಲ್ವಾ? ನಮ್ಮ ಸಿನಿಮಾ ಬಂದರೆ ಸುಮ್ಮನೆ ಸಮಸ್ಯೆ ಆಗತ್ತದೆ. ಸರಿ ಬಿಡು 'ಭೈರತಿ ರಣಗಲ್' ರಿಲೀಸ್ ಮುಂದೂಡೋಣ, 'ಮಾರ್ಟಿನ್' ಕೂಡ ನಮ್ಮ ಸಿನಿಮಾನೇ ಎಂದು ಶಿವಣ್ಣ ದಂಪತಿ ತೀರ್ಮಾನಿಸಿದ್ದರು ಎಂದು ಪ್ರಥಮ್ ವಿವರಿಸಿದ್ದಾರೆ. ದೊಡ್ಡ ಸಿನಿಮಾಗಳನ್ನು ಹಬ್ಬದ ವೀಕೆಂಡ್ನಲ್ಲಿ ರಿಲೀಸ್ ಮಾಡುವ ಪ್ರಯತ್ನ ನಡೆಯುತ್ತದೆ. ಹಾಗಾಗಿ ದಸರಾಗೂ ಮನ್ನ 'ಭೈರತಿ ರಣಗಲ್' ಚಿತ್ರ ತೆರೆಗೆ ತರುವ ಲೆಕ್ಕಾಚಾರ ನಡೆದಿತ್ತು. 'ಮಾರ್ಟಿನ್' ಚಿತ್ರವನ್ನು ಕೂಡ ಅದೇ ಕಾರಣಕ್ಕೆ ಅಕ್ಟೋಬರ್ 11ಕ್ಕೆ ರಿಲೀಸ್ ಮಾಡಲಾಗ್ತಿದೆ.
ಎ. ಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರಕ್ಕಾಗಿ ಧ್ರುವ 3 ವರ್ಷ ವ್ಯಯಿಸಿದ್ದಾರೆ. 80ರಿಂದ 100 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ದೇಶ ವಿದೇಶದ ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಇನ್ನು ದಸರಾ ಸಂಭ್ರಮದಲ್ಲಿ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಸಹ 'ಮಾರ್ಟಿನ್' ಎದುರು ರಿಲೀಸ್ ಆಗಲಿದೆ.


Click it and Unblock the Notifications











