ಹೆಣ್ಣನ್ನು ನಿಂದಿಸುವ ಮಟ್ಟಕ್ಕೆ ಇಳಿಯಬಾರದು ಅಭಿಮಾನ; ಅಶ್ವಿನಿ ಬಗ್ಗೆ ಅವಹೇಳನಕಾರಿ ಪೋಸ್ಟ್ಗೆ ಆಕ್ರೋಶ
ಸೋಷಿಯಲ್ ಮೀಡಿಯಾವನ್ನು ಕೆಲವರು ಹುಚ್ಚರ ಸಂತೆ ಎನ್ನುತ್ತಾರೆ. ಇಲ್ಲಿ ಯಾರು, ಯಾರ ಬಗ್ಗೆ ಏನು ಬೇಕಾದರೂ ಬರೆಯಬಹುದು ಎನ್ನುವಂತಾಗಿಬಿಟ್ಟಿದೆ. ಎಲ್ಲವೂ ಒಂದು ಮಿತಿಯಲ್ಲಿದ್ದರೆ ಚೆನ್ನ. ಮಿತಿ ಮೀರಿದರೆ ಭಾರೀ ಸಮಸ್ಯೆ ಎದುರಾಗುತ್ತದೆ. ಟ್ರೋಲ್, ಮೀಮ್ ಅಂತೆಲ್ಲಾ ಇತ್ತೀಚೆಗೆ ಸೋಶಿಯಲ್ ಮೀಡಿಯಾ ಕಸದ ಗುಂಡಿಯಾಗುತ್ತಿದೆ. ಇನ್ನು ಅವಹೇಳಕಾರಿ ಪೋಸ್ಟ್ಗಳ ಭರಾಟೆಯೂ ಜೋರಾಗಿದೆ.
ನೇರವಾಗಿ ಹೇಳಲು ಧೈರ್ಯ ಇಲ್ಲದಿದ್ದರೂ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಳುವುದು ಸುಲಭ ಎನ್ನುವಂತಾಗಿದೆ. ಇದೇ ಕಾರಣಕ್ಕೆ ಕೆಲವರು ಇನ್ಸ್ಟಾಗ್ರಾಂ, ವಾಟ್ಸಾಪ್, ಫೇಸ್ಬುಕ್ ರೀತಿಯ ಸೋಶಿಯಲ್ ಮೀಡಿಯಾ ಫ್ಲಾಟ್ಪಾರ್ಮ್ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಯಾರು ಯಾರ ಹೆಸರಿನಲ್ಲಿ ಬೇಕಾದರೂ ಫೇಕ್ ಖಾತೆಗಳನ್ನು ತೆರೆದು ಮನಸ್ಸಿಗೆ ಬಂದಂತೆ ಪೋಸ್ಟ್ ಮಾಡುವಂತಾಗಿಬಿಟ್ಟಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದು ಕಷ್ಟ ಎನ್ನುವಂತಾಗಿಬಿಟ್ಟಿದೆ.

ಖ್ಯಾತ ನಾಮರ ಹೆಸರಿನಲ್ಲಿ ಸಾಕಷ್ಟು ಫೇಕ್ ಸೋಶಿಯಲ್ ಮೀಡಿಯಾ ಖಾತೆಗಳಿವೆ. ರಾಜಕೀಯ ಮುಖಂಡರು, ಸಿನಿಮಾ ತಾರೆಯರ ಹೆಸರಿನಲ್ಲಿ ಇಂತಹ ನಕಲಿ ಫೇಸ್ಬುಕ್, ಇನ್ಸ್ಟಾ ಖಾತೆಗಳ ಹಾವಳಿ ಜಾಸ್ತಿ ಆಗುತ್ತಿದೆ. ಒಂದ್ಕಾಲದಲ್ಲಿ ಸ್ಟಾರ್ ನಟರ ಅಭಿಮಾನಿಗಳು ಬೀದಿಗಿಳಿದು ಕಿರಿಕ್ ಮಾಡಿಕೊಳ್ಳುತ್ತಿದ್ದರು. ನಟರ ಸಿನಿಮಾಗಳು ಬಿಡುಗಡೆ ಆದಾಗ ಥಿಯೇಟರ್ಗಳ ಮುಂದೆ ಜಮಾಯಿಸಿ ಸಂಭ್ರಮಿಸುತ್ತಿದ್ದರು. ಈ ಸಂಭ್ರಮದ ವೇಳೆ ಗಲಾಟೆ, ಗದ್ದಲಗಳು ನಡೆಯುತ್ತಿದ್ದವು. ಅಭಿಮಾನಿಗಳ ಮತ್ತೊಬ್ಬ ನಟನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಗಳು ನಡೆದಿವೆ.
ಅಭಿಮಾನಿಗಳ ಈ ತಿಕ್ಕಾಟ ಈಗ ಸೋಶಿಯಲ್ ಮೀಡಿಯಾಗೆ ಶಿಫ್ಟ್ ಆಗಿದೆ. ನಮ್ಮ ನೆಚ್ಚಿನ ನಟನೇ ಗ್ರೇಟ್ ಎಂದು ಸಾರಿ ಹೇಳುವ ಪ್ರಯತ್ನದಲ್ಲಿ ಮತ್ತೊಬ್ಬ ನಟನನ್ನು ಹೀಯಾಳಿಸುವುದು, ಕೀಳುಮಟ್ಟದಲ್ಲಿ ಕಾಮೆಂಟ್ ಮಾಡುವುದು ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಈ ರೀತಿ ಕೆಸರೆರಚಾಟ ಮಾಡಲಾಗುತ್ತಿದೆ. ಕಿಡಿಗೇಡಿಗಳು ಫೇಕ್ ಅಕೌಂಟ್ಗಳಿಂದ ಪೋಸ್ಟ್ ಮಾಡಿ ಬೇರೆಯವರ ಹೆಸರಿಗೆ ಮಸಿ ಬಳೆಯುವ ಕೆಲಸ ಮಾಡುತ್ತಿದ್ದಾರೆ.
ಸೈಬರ್ ಕ್ರೈಂ ಬಳಿ ಇಂತಹ ಸಾಕಷ್ಟು ದೂರುಗಳು ಬರುತ್ತಿರುತ್ತವೆ. ಆದರೆ ಕಾಮೆಂಟ್ ಮಾಡಿದವರನ್ನು ಹುಡುಕುವುದು ಅಷ್ಟು ಸುಲಭವೂ ಅಲ್ಲ. ಸೋಶಿಯಲ್ ಮೀಡಿಯಾ ಬಳಕೆಗೆ ಕಟ್ಟಿನ ನಿಯಮ ಜಾರಿಗೆ ತರುವವರೆಗೂ ಇದನ್ನು ತಡೆಯಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಇಂತಹ ಸಾಕಷ್ಟು ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತದೆ.

ಸದ್ಯ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಬಗ್ಗೆ ಕಿಡಿಗೇಡಿಯೊಬ್ಬನ ಕೀಳುಮಟ್ಟದ ಪೋಸ್ಟ್ ಭಾರೀ ಚರ್ಚೆ ಹುಟ್ಟಾಕಿದೆ. ಆ ಪೋಸ್ಟ್ನಲ್ಲಿರುವ ಪದಗಳನ್ನು ಇಲ್ಲಿ ಬಳಸುವುದಕ್ಕೂ ಆಗುವಂತಿಲ್ಲ. 'ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದರಿಂದಲೇ ಆರ್ಸಿಬಿ ಪದೇ ಪದೆ ಸೋಲುತ್ತಿದೆ" ಎನ್ನುವುದು ಆ ಪೋಸ್ಟ್ ಸಾರಾಂಶ. ಒಬ್ಬ ಮಹಿಳೆಯ ಕುರಿತು ಯಾರೇ ಆಗಲಿ ಈ ಮಟ್ಟಿಗೆ ಮಾತನಾಡುವುದು, ಪೋಸ್ಟ್ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ. ನಟ ದರ್ಶನ್ ಅಭಿಮಾನಿಯೊಬ್ಬ ಈ ಪೋಸ್ಟ್ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಆದರೆ ಇದನ್ನು ದರ್ಶನ್ ಆಪ್ತರು, ಅಭಿಮಾನಿಗಳು ಒಪ್ಪುತ್ತಿಲ್ಲ.
ಅಶ್ವಿನಿ ಪುನೀತ್ ರಾಜ್ಕುಮಾರ್ ಕುರಿತ ಅವಹೇಳನಕಾರಿ ಪೋಸ್ಟ್ ವಿಚಾರ ನಟ ದರ್ಶನ್ ಗಮನಕ್ಕೂ ಬಂದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಡಿ ಕಂಪನಿ ತಂಡದ ಪ್ರಮುಖ ಅಡ್ಮಿನ್ ಹಾಗೂ ದರ್ಶನ್ ಅಭಿಮಾನಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪುನೀತ್ ದರ್ಶನ್ ಗೌಡ್ರು ಫಿಲ್ಮಿಬೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಪೋಸ್ಟ್ ಬಗ್ಗೆ ನಟ ದರ್ಶನ್ ಬೇಸರ ವ್ಯಕ್ತಪಡಿಸಿದ್ದು, ಯಾರೇ ಆಗಲಿ ಇದು ತಪ್ಪು" ಎಂದು ಹೇಳಿರುವುದಾಗಿ ಮಾಹಿತಿ ನೀಡಿದ್ದಾರೆ.
ಅಭಿಮಾನ ಯಾವುದೇ ಕಾರಣಕ್ಕೂ ಎಲ್ಲೆ ಮೀರಬಾರದು. ಈ ಮಾತು ಎಲ್ಲಾ ಅಭಿಮಾನಿಗಳಿಗೂ ಅನ್ವಯಿಸುತ್ತದೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಕುರಿತಾದ ಪೋಸ್ಟ್ ವೈರಲ್ ಬೆನ್ನಲ್ಲೇ ಕೆಲವರು ದರ್ಶನ್ ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ ತೂಗುದೀಪ ಬಗ್ಗೆಯೂ ಇಂತದ್ದೇ ಕೀಳುಮಟ್ಟದ ಕಾಮೆಂಟ್ ಮಾಡಿದ್ದಾರೆ. ಹಾಗಾಗಿ ಅಭಿಮಾನ ಎನ್ನುವುದು ಎತ್ತ ಸಾಗಿದೆ ಎನ್ನುವ ಆತಂಕ ವ್ಯಕ್ತವಾಗುತ್ತಿದೆ. ಹೆಣ್ಣು ಮಕ್ಕಳ ಬಗ್ಗೆ ಇಷ್ಟು ಕೀಳಾಗಿ ಚಿಂತಿಸುವ ಮನಸ್ಥಿತಿ ಯಾಕೆ ಬರುತ್ತದೆ? ಎಂದು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಕೀಳುಮಟ್ಟದ ಮಾತನಾಡಿದ ಆ ವ್ಯಕ್ತಿಗೆ ಶಿಕ್ಷೆ ಆಗಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.
ಸ್ಟಾರ್ ನಟರು ಕೂಡ ಈ ಬಗ್ಗೆ ಗಮನ ಹರಿಸಬೇಕು. ತಮ್ಮ ಅಭಿಮಾನಿಗಳಿಗೆ ಈ ಬಗ್ಗೆ ಖಡಕ್ ಸೂಚನೆ ನೀಡಬೇಕು. ಇಲ್ಲದಿದ್ದರೆ ಅಭಿಮಾನ ಅತಿರೇಕಕ್ಕೆ ಹೋಗಿ ಇಂತಹ ಘಟನೆಗಳು ಪದೆ ಪದೇ ನಡೆಯುತ್ತಿರುತ್ತದೆ. ತಮ್ಮ ನೆಚ್ಚಿನ ನಟನ ಬಗ್ಗೆ ಅಭಿಮಾನ ಇರಲಿ. ಮತ್ತೊಬ್ಬ ನಟನ ಬಗ್ಗೆ ಅವರ ಕುಟುಂಬದವರ ಬಗ್ಗೆ ದುರಾಭಿಮಾನ ಒಳ್ಳೆಯದಲ್ಲ. ಬಹಿರಂಗವಾಗಿ ಮಾತನಾಡಲು ಧೈರ್ಯ ಇಲ್ಲದವರೇ ಈ ರೀತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ಬಳಿಕ ಅಕೌಂಟ್ ಹೆಸರು, ಡಿಪಿ ಬದಲಿಸುತ್ತಾರೆ.


Click it and Unblock the Notifications











