ಡಾ.ರಾಜ್ ಕುಮಾರ್ ಸಿನಿಮಾ ಟೈಟಲ್ ಮರುಬಳಕೆಗೆ ಬೀಳುತ್ತಾ ಬ್ರೇಕ್?
ಸ್ಯಾಂಡಲ್ ವುಡ್ ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳ ಹೆಸರುಗಳನ್ನು ಮರುಬಳಕೆ ಮಾಡಿ ಸಿನಿಮಾಗಳನ್ನು ಮಾಡಲಾಗುತ್ತಿದೆ. ಅದರಲ್ಲೂ ಡಾ.ರಾಜ್ ಕುಮಾರ್ ನಟನೆಯ ಐಕಾನಿಕ್ ಸಿನಿಮಾಗಳ ಟೈಟಲ್ಗಳನ್ನು ಮತ್ತೆ ಬಳಸಿಕೊಂಡು ಈಗಾಗಲೇ ಅನೇಕ ಸಿನಿಮಾಗಳು ತೆರೆಮೇಲೆ ಬಂದಿವೆ. ಆದರೀಗ ಡಾ. ರಾಜ್ ಕುಮಾರ್ ಸಿನಿಮಾಗಳ ಹೆಸರನ್ನು ಮರುಬಳಕೆ ಮಾಡುವ ವಿಚಾರವಾಗಿ ರಾಜ್ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.
ಈ ವಿಚಾರವಾಗಿ ಡಾ.ರಾಜ್ ಅಭಿಮಾನಿಗಳ ಸಂಘಟನೆ ಇಂದು (ಆಗಸ್ಟ್ 30) ಫಿಲ್ಮ್ ಚೇಂಬರ್ ಗೆ ಭೇಟಿ ನೀಡಿ ಈ ಬಗ್ಗೆ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ. ಡಾ.ರಾಜ್ ಕುಮಾರ್ ನಟನೆಯ ಕೆಲವು ಸಿನಿಮಾಗಳ ಹೆಸರನ್ನು ಮರುಬಳಕೆ ಮಾಡುತ್ತಿರುವ ಸಿನಿಮಾ ತಂಡಗಳಿಗೆ ರಾಜ್ ಅಭಿಮಾನಿ ಸಂಘಟನೆ ಎಚ್ಚರಿಕೆ ನೀಡಿದೆ. ಒಂದು ವೇಳೆ ಇನ್ಮುಂದೆ ಡಾ.ರಾಜ್ ಸಿನಿಮಾಗಳ ಹೆಸರನ್ನು ಬಳಸಿಕೊಂಡು ಸಿನಿಮಾ ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಇಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದ್ದ ರಾಜ್ ಅಭಿಮಾನಿಗಳ ಸಂಘಟನೆ, ವಾಣಿಜ್ಯ ಮಂಡಳಿ ಮುಂಭಾಗದಲ್ಲಿ ಘೋಷಣೆಗಳನ್ನು ಕೂಗಿದರು. ರಾಜ್ ಕುಮಾರ್ ಸಿನಿಮಾಗಳ ಹೆಸರನ್ನು ಬಳಕೆ ಮಾಡದಂತೆ ಎಚ್ಚರಿಕೆ ನೀಡಿದರು. ಡಾ.ರಾಜ್ ಕುಮಾರ್ ಅದ್ಭುತವಾದ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಆ ಸಿನಿಮಾದ ಹೆಸರುಗಳನ್ನು ಬಳಿಸಿಕೊಂಡು ಹೊಸ ಸಿನಿಮಾಗಳನ್ನು ಮಾಡಲಾಗುತ್ತಿದೆ. ಟೈಟಲ್ಗೆ ಸರಿಯಾದ ಸಿನಿಮಾಗಳು ಮೂಡಿಬಂದಿರುವುದಿಲ್ಲ, ಇದು ರಾಜ್ ಸಿನಿಮಾಗಳಿಗೆ ಮಾಡುವ ಅವಮಾನ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಡಾ.ರಾಜ್ ಕುಮಾರ್ ಸಿನಿಮಾಗಳನ್ನು ಹುಡುಕಿದ್ರೆ ಹೊಸ ಸಿನಿಮಾಗಳು ಸಿಗುತ್ತವೆ. ಹೊಸ ಸಿನಿಮಾಗಳ ಪೋಸ್ಟರ್ಗಳು ಬರುತ್ತಿವೆ, ಇದಕ್ಕೆ ಕಡಿವಾಣ ಹಾಕಬೇಕೆಂದು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಈ ವಿಚಾರವಾಗಿ ಇಂದು ರಾಜ್ ಅಭಿಮಾನಿ ಸಂಘಟನೆ ಫಿಲ್ಮ್ ಚೇಂಬರ್ಗೆ ತೆರಳಿ ಮನವಿ ಸಲ್ಲಿಸಿದ್ದಾರೆ.
ಅಂದಹಾಗೆ ಈಗಾಗಲೇ ಡಾ.ರಾಜ್ ಕುಮಾರ್ ನಟನೆಯ ಅನೇಕ ಸಿನಿಮಾಗಳ ಟೈಟಲ್ ಬಳಿಸಿಕೊಂಡು ಸಾಕಷ್ಟು ಸಿನಿಮಾಗಳು ತಯಾರಾಗಿವೆ. ಎರಡು ಕನಸು, ಗಾಂಧಿನಗರ, ವಾಲ್ಮೀಕಿ, ಅಮ್ಮ, ಸ್ವಯಂವರ, ಉಯ್ಯಾಲೆ, ತಾಯಿಗೆ ತಕ್ಕ ಮಗ, ದೇವರ ಮಕ್ಕಳು, ಭಲೇ ಜೋಡಿ, ಬಹದ್ದೂರ್ ಗಂಡು ಹೀಗೆ ಡಾ.ರಾಜ್ ಕುಮಾರ್ ನಟನೆಯ ಸಾಕಷ್ಟು ಸಿನಿಮಾಗಳ ಹೆಸರುಗಳು ಮರು ಬಳಕೆಯಾಗಿವೆ. ಆದರೆ ಸಿನಿಮಾಗಳು ಹೇಳಿಕೊಳ್ಳುವಷ್ಟು ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ. ಹಾಗಾಗಿ ರಾಜ್ ಸಿನಿಮಾಗಳ ಹೆಸರುಗಳನ್ನು ಇನ್ಮುಂದೆ ಯಾರು ಬಳಿಸಿಕೊಳ್ಳಬಾರದು ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.

ಇತ್ತೀಚಿಗಷ್ಟೆ ನಿರ್ದೇಶಕ ದಿನೇಶ್ ಬಾಬು ತಮ್ಮ ಹೊಸ ಚಿತ್ರಕ್ಕೆ ಕಸ್ತೂರಿ ನಿವಾಸ ಎಂದು ಟೈಟಲ್ ಇಟ್ಟಿದ್ದರು. ಆದರೆ ರಾಜ್ ಅಭಿಮಾನಿಗಳ ವಿರೋಧದ ಬಳಿಕ ಹೆಸರನ್ನು ಬದಲಾಯಿಸಿದರು. ಚಿತ್ರಕ್ಕೆ ಕಸ್ತೂರಿ ನಿವಾಸ ಬದಲಿಗೆ ಕಸ್ತೂರಿ ಮಹಲ್ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದಲ್ಲಿ ಮೊದಲು ರಚಿತಾ ರಾಮ್ ಕಾಣಿಸಿಕೊಂಡಿದ್ದರು. ಬಳಿಕ ರಚಿತಾ ಕೂಡ ಸಿನಿಮಾದಿಂದ ಹೊರ ನಡೆದರು. ರಚಿತಾ ಜಾಗಕ್ಕೆ ಶಾನ್ವಿ ಶ್ರೀವಾತ್ಸವ್ ಎಂಟ್ರಿಕೊಟ್ಟಿದ್ದು, ಈಗಾಗಲೇ ಚಿತ್ರೀಕರಣ ಸಹ ಮುಗಿಸಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಟ್ರೈಲರ್ ಕೂಡ ಬಿಡುಗಡೆ ಮಾಡಲಾಗಿದೆ.
ಅಭಿಮಾನಿಗಳ ವಿರೋಧದ ಬಳಿಕ ಇನ್ಮುಂದೆ ಡಾ.ರಾಜ್ ಕುಮಾರ್ ಸಿನಿಮಾ ಟೈಟಲ್ಗಳ ಮರು ಬಳಕೆಗೆ ಬ್ರೇಕ್ ಬೀಳುತ್ತಾ ಎಂದು ಕಾದುನೋಡಬೇಕು.


Click it and Unblock the Notifications











