'ಜೇಮ್ಸ್'ಗೆ ತೆರಿಗೆ ವಿನಾಯಿತಿ ನೀಡಿ: ಸರ್ಕಾರಕ್ಕೆ ಅಭಿಮಾನಿಗಳ ಒತ್ತಾಯ
ಪುನೀತ್ ರಾಜ್ಕುಮಾರ್ ನಟನೆಯ 'ಜೇಮ್ಸ್' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಸ್ವಾಗತಕ್ಕೆ ಅಭಿಮಾನಿಗಳು ತಯಾರಾಗಿದ್ದಾರೆ.
ಇದೀಗ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಸರ್ಕಾರದ ಬಳಿ ಮನವಿಯೊಂದನ್ನು ಇರಿಸಿದ್ದಾರೆ. ಪುನೀತ್ ಗೌರವಾರ್ಥವಾಗಿ ಅವರ ನಟನೆಯ ಕೊನೆಯ ಸಿನಿಮಾ ಆದ 'ಜೇಮ್ಸ್'ಗೆ ತೆರಿಗೆ ವಿನಾಯಿತಿ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.
ರಾಜ್ಯ ಸರ್ಕಾರ ನಿನ್ನೆಯಷ್ಟೆ ಹಿಂದಿ ಸಿನಿಮಾ 'ದಿ ಕಶ್ಮೀರ್ ಫೈಲ್ಸ್'ಗೆ ತೆರಿಗೆ ವಿನಾಯಿತಿ ಘೋಷಿಸಿದೆ. ಇದೇ ರೀತಿಯಲ್ಲಿ ಪುನೀತ್ ರಾಜ್ಕುಮಾರ್ ಗೌರವಾರ್ಥ 'ಜೇಮ್ಸ್' ಸಿನಿಮಾಕ್ಕೂ ತೆರಿಗೆ ವಿನಾಯಿತಿ ನೀಡಬೇಕು ಆ ಮೂಲಕ 'ಜೇಮ್ಸ್' ಸಿನಿಮಾವನ್ನು ಕಡಿಮೆ ಟಿಕೆಟ್ ದರದಲ್ಲಿ ಹೆಚ್ಚಿನ ಮಂದಿ ನೋಡುವಂತಾಗಬೇಕು ಎಂಬುದು ಅಭಿಮಾನಿಗಳ ಆಶಯ.

ಕರ್ನಾಟಕ ಸರ್ಕಾರವು ಈ ಹಿಂದೆ ಕೆಲವಾರು ಕನ್ನಡ ಸಿನಿಮಾಗಳಿಗೆ ತೆರಿಗೆ ವಿನಾಯಿತಿ ಘೋಷಿಸಿದೆ. ಶೈಕ್ಷಣಿಕ, ಐತಿಹಾಸಿಕ ಸಿನಿಮಾಗಳಿಗೆ ತೆರಿಗೆ ವಿನಾಯಿತಿಯ ಲಾಭ ದೊರೆತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯ ಸಿನಿಮಾಗಳಿಗೆ ತೆರಿಗೆ ವಿನಾಯಿತಿ ದೊರೆತಿದ್ದು ಇಲ್ಲ.
ಸರ್ಕಾರ, ವಿಶೇಷವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪುನೀತ್ ಬಗ್ಗೆ ಬಹಳ ಅಕ್ಕರೆ, ಈಗಾಗಲೇ ಸಿಎಂ ಅವರು ಪುನೀತ್ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಿಸಿದ್ದಾರೆ. ಅಪ್ಪು ಅಗಲಿದ ಸಂದರ್ಭದಲ್ಲಿ ಸಹ ಸರ್ಕಾರ ದೊಡ್ಡ ಮಟ್ಟದಲ್ಲಿ ನೆರವು ನೀಡಿದೆ. ಇದೀಗ 'ಜೇಮ್ಸ್' ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುವ ಮೂಲಕ ಮತ್ತೊಮ್ಮೆ ಅಪ್ಪುಗೆ ಗೌರವ ಸಲ್ಲಿಸುತ್ತಾರಾ ಸಿಎಂ ಎಂಬುದನ್ನು ಕಾದು ನೋಡಬೇಕಿದೆ.
ಪುನೀತ್ ರಾಜ್ಕುಮಾರ್ ಸರ್ಕಾರದ ಯಾವುದೇ ಜಾಹೀರಾತುಗಳಿಗೆ ಸಂಭಾವನೆ ಪಡೆಯದೆ ಉಚಿತವಾಗಿ ನಟಿಸಿ ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪಿಸುವ ಕಾರ್ಯಕ್ಕೆ ನೆರವಾಗಿದ್ದರು. ಇದೇ ಆಧಾರದಲ್ಲಿ ಅವರ ಕೊನೆಯ ಸಿನಿಮಾಗಳಿಗೆ ತೆರಿಗೆ ವಿನಾಯಿತಿ ನೀಡಬೇಕೆಂಬುದು ಅಭಿಮಾನಿಗಳ ಒತ್ತಾಯ.
ಸ್ವತಃ ಸಿನಿಮಾ ಪ್ರೇಮಿ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ನಿನ್ನೆಯಷ್ಟೆ ರಾಜಾಜಿನಗರದ ಒರಾಯಿನ್ ಮಾಲ್ನಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾವನ್ನು ಕೊಂಡಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ''ಈ ಸಿನಿಮಾ ನೋಡಿದ ಬಳಿಕ ನನಗೆ ಮಾತನಾಡಲು ಆಗುತ್ತಿಲ್ಲ. ಯಾವ ರೀತಿ ಕಾಶ್ಮೀರದಲ್ಲಿ ಪಂಡಿತರ ಮೇಲೆ ದಾಳಿಯಾಗಿತ್ತು ಎನ್ನುವದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಅದೆಷ್ಟೋ ಜನ ಉಗ್ರರ ಕೈಲಿ ಸಿಕ್ಕಿ ಪ್ರಾಣವನ್ನ ಬಿಟ್ಟಿದ್ದಾರೆ. ಹೀಗಾಗಿಯೇ ಅಲ್ಲಿ ಆರ್ಟಿಕಲ್ 370 ಅನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತೆರವುಗೊಳಿಸಿತು. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಪ್ರತಿಯೊಬ್ಬ ಭಾರತೀಯರು ಈ ಸಿನಿಮಾವನ್ನ ನೋಡಬೇಕು. ಹೀಗಾಗಿ ನಾನು ಸಿನಿಮಾದ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿ ಅದೇಶ ಮಾಡುತ್ತೇನೆ' ಎಂದರು.


Click it and Unblock the Notifications











