ಯಶ್ 'ರಾಮಾಯಣ' ಚಿತ್ರಕ್ಕೆ ಕೈ ಜೋಡಿಸುತ್ತಾರಾ ಜೋಗಿ ಪ್ರೇಮ್ ? ಏನಿದು ವೈರಲ್ ನ್ಯೂಸ್?
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ದೊಡ್ಡದಾಗಿ ಸದ್ದು ಮಾಡುವ ಸುಳಿವು ಸಿಕ್ತಿದೆ. 'ರಾಮಾಯಣ' ಕಥೆಯನ್ನು ಪ್ರಪಂಚಕ್ಕೆ ಹೇಳುವ ಪ್ರಯತ್ನ ಇದು ಎಂದು ಚಿತ್ರತಂಡ ಹೇಳ್ತಿದೆ. 4000 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ನಿರ್ಮಾಪಕರೇ ಹೇಳಿದ್ದಾರೆ. ಇನ್ನು ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ನಟಿಸುತ್ತಿರುವುದು ನಿರೀಕ್ಷೆ ಹುಟ್ಟಾಕ್ಕಿದೆ.
ಎರಡು ಭಾಗಗಳಾಗಿ 'ರಾಮಾಯಣ' ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಮೊದಲ ಭಾಗ ಮುಂದಿನ ವರ್ಷ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ 2ನೇ ಭಾಗದ ಚಿತ್ರೀಕರಣ ಕೂಡ ಶುರುವಾಗಿದೆ ಎನ್ನಲಾಗ್ತಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಎ. ಆರ್ ರಹಮಾನ್ ಜೊತೆಗೆ ಹಾಲಿವುಡ್ ಮ್ಯೂಸಿಕ್ ಡೈರೆಕ್ಟರ್ ಹ್ಯಾನ್ಸ್ ಜಿಮ್ಮರ್ ಟ್ಯೂನ್ ಹಾಕುತ್ತಿದ್ದಾರೆ.

ಅಂದಹಾಗೆ 'ರಾಮಾಯಣ' ಚಿತ್ರದ ಹಾಡಿಗೆ ಜೋಗಿ ಪ್ರೇಮ್ ಸಾಹಿತ್ಯ ಬರೆಯುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಸಿನಿಮಾ ದೇಶ ವಿದೇಶದ ಭಾಷೆಗಳಿಗೆ ಡಬ್ ಆಗಲಿದೆ. ಅದೇ ರೀತಿ ಕನ್ನಡ ವರ್ಷನ್ ಸಿನಿಮಾ ಹಾಡುಗಳಿಗೆ ಪ್ರೇಮ್ ಸಾಹಿತ್ಯ ಬರೆಯುತ್ತಾರೆ ಎಂದು ಯಾರೋ ಸುದ್ದಿ ತೇಲಿ ಬಿಟ್ಟಿದ್ದಾರೆ. ಆದರೆ ಇದೆಲ್ಲಾ ಫೇಕ್ ಎನ್ನಲಾಗ್ತಿದೆ. ಯಾರೋ ಜೋಗಿ ಪ್ರೇಮ್ ಅಭಿಮಾನಿಗಳು ಈ ರೀತಿ ಕಲ್ಪಿಸಿಕೊಂಡು ಸುದ್ದಿ ಹರಿಬಿಟ್ಟಿರುವ ಸಾಧ್ಯತೆಯಿದೆ.
ಪ್ರೇಮ್ ಸಿನಿಮಾಗಳಲ್ಲಿ ಹಾಡುಗಳು ಹಿಟ್ ಆಗುತ್ತದೆ. ಅವರಿಗೆ ಸಂಗೀತ ಪ್ರೇಮಿಗಳ ನಾಡಿಮಿಡಿತ ಗೊತ್ತಿದೆ. ಅಷ್ಟೇ ಅಲ್ಲ, ಅವರ ಸಿನಿಮಾ ಹಾಡುಗಳ ಸಾಹಿತ್ಯವೂ ಹಿಟ್ ಆಗುತ್ತದೆ. ತಮ್ಮ ಸಿನಿಮಾ ಗೀತೆಗಳಿಗೆ ತಾವೇ ಸಾಹಿತ್ಯ ಬರೆದಿರುವುದು ಇದೆ. ಅದೆಲ್ಲವೂ ಹಿಟ್ ಆಗಿದೆ. 'KD' ಚಿತ್ರದ 'ಸೆಟ್ ಆಗಲ್ಲ ಹೊಗೆ ನಂಗೂ ನಿಂಗೂ' ಹಾಡಿಗೂ ಪ್ರೇಮ್ ಪದಗಳನ್ನು ಪೋಣಿಸಿದ್ದಾರೆ.

'ಜೋಗಿ' ಚಿತ್ರದ 'ಬೇಡುವೆನು ವರವನ್ನು', 'ಹೊಡಿ ಮಗಾ ಹೊಡಿ ಮಗಾ' ಅದೇ ರೀತಿ 'ಜೋಗಯ್ಯ' ಚಿತ್ರಕ್ಕಾಗಿ 'ಓಡೊಲೆ' ಇನ್ನು 'ಡಿಕೆ' ಚಿತ್ರಕ್ಕೆ 'ಸೇಸಮ್ಮ ಸೇಸಮ್ಮ', 'ದಿ ವಿಲನ್' ಚಿತ್ರಕ್ಕಾಗಿ ಟಿಕ್ ಟಿಕ್ ಟಿಕ್, 'ಲವ್ ಆಗೋಯ್ತು', 'ರಣ ರಣ ರಾವಣ' ಇನ್ನು 'ಏಕ್ ಲವ್ ಯಾ' ಚಿತ್ರಕ್ಕೆ 'ಹೇಳು ಯಾಕೆ' ಹೀಗೆ ಹಲವು ಹಿಟ್ ಗೀತೆಗಳಿಗೆ ಪ್ರೇಮ್ ಸಾಹಿತ್ಯ ಬರೆದಿದ್ದಾರೆ. ಹಾಗಾಗಿ ಅಭಿಮಾನಿಗಳು ಪ್ರೇಮ್ 'ರಾಮಾಯಣ' ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದರೆ ಚೆನ್ನಾಗಿರುತ್ತದೆ ಎಂದು ಊಹಿಸಿಕೊಂಡು ಹೀಗೊಂದು ಸುದ್ದಿ ವೈರಲ್ ಮಾಡಿರುವಂತೆ ಕಾಣ್ತಿದೆ.
'ರಾಮಾಯಣ' ಬಹಳ ದೊಡ್ಡ ಸಿನಿಮಾ. ಪ್ರತಿ ವಿಭಾಗದಲ್ಲಿ ಅದ್ಭುತ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಲಕ್ಷ್ಮಣನಾಗಿ ರವಿ ದುಬೆ, ಮಂಡೋದರಿಯಾಗಿ ಕಾಜಲ್ ಅಗರ್ವಾಲ್, ಶೂರ್ಪನಖಿಯಾಗಿ ರಕುಲ್, ದಶರಥನಾಗಿ ಅರುಣ್ ಗೋವಿಲ್ ಹೀಗೆ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಚಿತ್ರದ ಆಲ್ಬಮ್ ಬಗ್ಗೆಯೂ ಬಹಳ ನಿರೀಕ್ಷೆಯಿದೆ. ಕನ್ನಡ ಹಾಡುಗಳಿಗೆ ಯಾರು ಸಾಹಿತ್ಯ ಬರೆಯುತ್ತಾರೆ ಎನ್ನುವ ಕುತೂಹಲ ಕೂಡ ಇದೆ.
ಐಮ್ಯಾಕ್ಸ್ ವರ್ಷನ್ನಲ್ಲಿ ನಿತೇಶ್ ತಿವಾರಿ 'ರಾಮಾಯಣ' ಸಿನಿಮಾ ತೆರೆಗೆ ಬರಲಿದೆ. ಹಾಲಿವುಡ್ ಸಂಸ್ಥೆಗಳು ಚಿತ್ರಕ್ಕಾಗಿ ಜೋಡಿಸುತ್ತಿವೆ. ನಿಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಇದು ಸಹಜವಾಗಿಯೇ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.


Click it and Unblock the Notifications











