ಎಸಿಪಿ ಚಂದನ್ ಟಾರ್ಗೆಟ್ ಮಾಡಿದ ದರ್ಶನ್ ಫ್ಯಾನ್ಸ್; ಆ ವೀಡಿಯೋದಲ್ಲಿ ಏನಿದೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆರೋಪಿಯಾಗಿ ಜೈಲು ಸೇರಿದ್ದಾರೆ. ಕಾನೂನಿನ ಮುಂದೆ ಎಲ್ಲರೂ ಒಂದೇ, ಎಂತಹ ಪ್ರಭಾವಿಗಳೇ ಆದರೂ ಕಾನೂನಿಗೆ ತಲೆಬಾಗಲೇಬೇಕು ಎನ್ನುವುದು ಈ ಪ್ರಕರಣದಿಂದ ಸಾಬೀತಾಗಿದೆ. ಪೊಲೀಸರ ದಕ್ಷತೆ, ಕಾರ್ಯವೈಖರಿಯನ್ನು ಜನ ಶ್ಲಾಘಿಸುತ್ತಿದ್ದಾರೆ.
ನಟ ದರ್ಶನ್ ತಪ್ಪು ಮಾಡಿದ್ದಾರೋ ಇಲ್ಲವೋ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಆದರೆ ಪ್ರಕರಣದಲ್ಲಿ ಅವರು ಕೈವಾಡ ಇದೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದಂತೆ ನಟ ದರ್ಶನ್ ಬಂಧನವಾಗಿತ್ತು. ಮೈಸೂರಿನ ಖಾಸಗಿ ಹೋಟೆಲ್ನಲ್ಲಿದ್ದ ಅವರನ್ನು ದಿಢೀರನೆ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರಲಾಗಿತ್ತು. ಬಳಿಕ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ವಿಚಾರಣೆ ನಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿಬರುತ್ತಿದ್ದಕ್ಕೆ ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಹಾಗೂ ವಿಜಯನಗರದ ಎಸಿಪಿ ಚಂದನ್ ಕುಮಾರ್ ಕಾರ್ಯಪ್ರವೃತ್ತರಾಗಿದ್ದರು. ಜೂನ್ 11ರಂದು ಬೆಳಗ್ಗೆ ಮೈಸೂರಿನಲ್ಲಿ ಎಸಿಪಿ ಚಂದನ್, ನಟ ದರ್ಶನ್ನನ್ನು ವಶಕ್ಕೆ ಪಡೆದರು. ಮೊದಲಿಗೆ ನಾನ್ ಬರ್ತೀನಿ ನೀವು ನಡೀರಿ. ನಿಮ್ಮ ಜೊತೆ ಬಂದರೆ ಜನ ತಪ್ಪು ತಿಳಿದುಕೊಳ್ತಾರೆ. ನನ್ನ ಕಾರಿನಲ್ಲಿ ಬರುತ್ತೇನೆ ಎಂದು ದರ್ಶನ್ ಹೇಳಿದ್ದರಂತೆ.
ದರ್ಶನ್ ಮಾತಿಗೆ ಎಸಿಪಿ ಚಂದನ್, ನೀನ್ಯಾರು? ನಿನ್ ಕಥೆ ಏನು ಗೊತ್ತು, ಜೀಪ್ ಹತ್ತು ಅಂದಿದ್ದಾರೆ. ಅಷ್ಟಕ್ಕೆ ಥಂಡಾ ಹೊಡೆದ ದರ್ಶನ್ ಜೀಪ್ ಹತ್ತಿ ಬಂದಿದ್ದಾರೆ ಎಂದು ವರದಿಯಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎಲ್ಲಾ 17 ಜನ ಆರೋಪಿಗಳು ಇದೀಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಪೊಲೀಸರು ಚಾರ್ಜ್ಶೀಟ್ ಸಲ್ಲಿಸಲು ಮುಂದಾಗಿದ್ದಾರೆ.
ಎಸಿಪಿ ಚಂದನ್ ಕಾರ್ಯದಕ್ಷತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ನಟ ದರ್ಶನ್ ಅಭಿಮಾನಿಗಳು ಮಾತ್ರ ಅವರನ್ನು ಟಾರ್ಗೆಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಮನಸ್ಸಿಗೆ ಬಂದಂತೆ ಪೋಸ್ಟ್ ಹಾಕುತ್ತಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಎಸಿಪಿ ಚಂದನ್ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ ಅಷ್ಟೇ. ಇಲ್ಲಿ ಯಾರಿಗೂ ಯಾರ ಬಗ್ಗೆಯೂ ವೈಯಕ್ತಕ ದ್ವೇಷ ಇಲ್ಲ.
ಸದ್ಯ ಹಳೇ ವೀಡಿಯೋವೊಂದನ್ನು ವೈರಲ್ ಮಾಡಿ ಕೆಲ ಅಂದಾಭಿಮಾನಿಗಳು ವಿಕೃತಿ ಮೆರೆಯುತ್ತಿದ್ದಾರೆ. ಈ ವರ್ಷ ನಟ ದರ್ಶನ್ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. 'ಕಾಟೇರ' ಸಕ್ಸಸ್ ಸಂಭ್ರಮದಲ್ಲಿ ಸೆಲೆಬ್ರೇಷನ್ ಜೋರಾಗಿತ್ತು. ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಆರ್ಆರ್ ನಗರದ ದರ್ಶನ್ ನಿವಾಸದ ಮುಂದೆ ಜಮಾಯಿಸಿ ನೆಚ್ಚಿನ ನಟನನ್ನು ನೋಡಿ ಕೈ ಕುಲುಕಿ ಶುಭ ಕೋರಿದ್ದರು.
ಹುಟ್ಟುಹಬ್ಬದ ದಿನ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಎಸಿಪಿ ಚಂದನ್ ಸಹ ಅಲ್ಲಿಗೆ ಹೋಗಿದ್ದರು. ನಟ ದರ್ಶನ್ ಕೈ ಕುಲುಕಿ ಶುಭ ಕೋರಿದ್ದರು. ಈ ವೀಡಿಯೋವನ್ನು ಕೆಲವರು ವೈರಲ್ ಮಾಡಿ ಏನೇನೋ ಕಾಮೆಂಟ್ ಹಾಕುತ್ತಿದ್ದಾರೆ. ಹುಲಿ ಅಂತೆ ಹುಲಿ, ಈ ಹುಲಿಗೆ ಹೆಬ್ಬುಲಿ ಡಿ ಬಾಸ್ ಎಂದು ಹಾಕಿದ್ದಾರೆ.
ದರ್ಶನ್ ಸರ್ ಬರ್ತ್ಡೇಗೂ ಅವನೇ ಸೆಕ್ಯೂರಿಟಿ ಆಗಿದ್ದ, ಇವಾಗ ಡಿಬಾಸ್ ಜೈಲಿಂದ ರಿಲೀಸ್ ಆಗಬೇಕಾದ್ರೆ ಇವನೇ ಸೆಕ್ಯೂರಿಟಿ ಆಗಿರ್ತಾನೆ ಅಂತೆಲ್ಲಾ ಬರೆದು ವೈರಲ್ ಮಾಡುತ್ತಿದ್ದಾರೆ. ಈ ಅಂದಾಭಿಮಾನಕ್ಕೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಹಾಕುತ್ತಿದ್ದಾರೆ.


Click it and Unblock the Notifications











