ದರ್ಶನ್ ಭಯದಲ್ಲಿದ್ದಾರೆ, ಕ್ಲೋಸ್ ಆಗಿರೋರು ಸಿಕ್ಕರೂ ಮಾತನಾಡ್ತಿಲ್ಲ - ಕೆ ಮಂಜು
ದರ್ಶನ್ ಹುಡುಗರ ವಿರುದ್ದ ರಮ್ಯಾ ನಿಗಿ ನಿಗಿ ಕೆಂಡವಾಗಿದ್ದಾರೆ. ಅಸಹ್ಯ.. ಅಶ್ಲೀಲ.. ಅಸಭ್ಯ.. ಸಂದೇಶ ಕಳುಹಿಸಿದವರ ವಿರುದ್ದ ದೂರನ್ನು ದಾಖಲಿಸಿದ್ದಾರೆ. ಮತ್ತೊಂದು ಕಡೆ ಪ್ರಥಮ್ ತಮ್ಮ ರೋಷಾವಷದ ಪ್ರದರ್ಶನ ಮಾಡುತ್ತಿದ್ದಾರೆ. ಸತ್ಯಾಗ್ರಹ ಕೈ ಬಿಟ್ಟು ಆಗಿದ್ದೆಲ್ಲಾ ಆಯ್ತು ಮುಂದಕ್ಕೋಗಣ ಎಂದು ಪ್ರಥಮ್ ಹೇಳಿದ್ದಾರದರೂ ಮುಂದೆ ನನ್ನ ತಂಟೆಗೆ ಬರಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೊಂದು ಕಡೆ ವಕೀಲ್ ಸಾಬ್ ಜಗದೀಶ್ ಎಚ್ಚರ ಆದಾಗೆಲ್ಲ ಗುಡುಗುತ್ತಿದ್ದಾರೆ. ಆ ಕಡೆ ಪ್ರಥಮ್ ಈ ಕಡೆ ದರ್ಶನ್ ಇಬ್ಬರ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ಚಿತ್ರರಂಗ ಗೊಂದಲಕ್ಕೀಡಾಗಿದೆ. ದರ್ಶನ್ - ರಮ್ಯಾ ವಿಚಾರದಲ್ಲಿ ಇಬ್ಬಾಗವಾಗಿದೆ. ಕೆಲವರು ದರ್ಶನ್ ಮತ್ತು ಅವರ ಅಭಿಮಾನಿಗಳ ಪರ ವಕಾಲತ್ತು ವಹಿಸುತ್ತಿದ್ದಾರೆ. ಇನ್ನೂ ಕೆಲವರು ರಮ್ಯಾಗೆ ಬೆಂಬಲ ನೀಡುತ್ತಿದ್ದಾರೆ.

ಸಂದರ್ಭ.. ಸನ್ನಿವೇಶ.. ವಾತಾವರಣ ಹೀಗಿರುವಾಗ ಇದೀಗ ಕೆ.ಮಂಜು ರಂಗಪ್ರವೇಶಿಸಿದ್ದಾರೆ. ದರ್ಶನ್ ಮತ್ತು ರಮ್ಯಾ ಪ್ರಕರಣದ ಕುರಿತು ಮಾತನಾಡಿದ್ದಾರೆ.
ಹೌದು, ಕೆ.ಮಂಜು.. ಕನ್ನಡದ ಗಂಡುಗಲಿ ನಿರ್ಮಾಪಕ ಅಂತಲೇ ಹೆಸರಾದವರು ಕೆ. ಮಂಜು . ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸಿನಿಮಾ ಸೇರಿದಂತೆ ಸುದೀಪ್, ಯಶ್ ತನಕ ಕನ್ನಡದ ಬಹುತೇಕ ಸ್ಟಾರ್ ಹೀರೋಗಳ ಚಿತ್ರಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಇವರದ್ದು.
ಇಂಥಾ ಕೆ.ಮಂಜು ಸದ್ಯ ದರ್ಶನ್ ಮತ್ತು ರಮ್ಯಾ ವಿಚಾರದಲ್ಲಿ ಕೆಲ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ. ಆ ಪೈಕಿ Tv9 ಕನ್ನಡಗೆ ನೀಡಿರುವ ಸಂದರ್ಶನದಲ್ಲಿ ದರ್ಶನ್ ನೊಂದಿರುವ ಜೀವ ಮತ್ತಷ್ಟು ಅವರನ್ನು ನೋಯಿಸಬೇಡಿ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಕೆ.ಮಂಜು ಅಶ್ಲೀಲವಾದ ಕಮೆಂಟ್ಗಳನ್ನು ಮಾಡಿ ಎಂದು ಯಾವ ಸ್ಟಾರ್ ಕೂಡ ತನ್ನ ಅಭಿಮಾನಿಗಳಿಗೆ ಹೇಳಲ್ಲ ಇದು ಅಭಿಮಾನದ ಹೆಸರಿನಲ್ಲಿ ಕೆಲವು ಥರ್ಡ್ ಕ್ಲಾಸ್ ಜನ ಮಾಡುತ್ತಿರುವ ಕೆಲಸ ಎಂದು ಹೇಳಿದ್ದಾರೆ. ಬೇಕು ಬೇಕಂತಲೇ ಅವರ ಅವರ ನಡುವೆ ತಂದಿಟ್ಟು ತಮಾಷೆಯನ್ನು ನೋಡ್ತಿದ್ದಾರೆ ಎಂದು ಹೇಳಿದ್ದಾರೆ. ನಮ್ಮವರು ಕೂಡ ಸಾಮಾನ್ಯರೇನಲ್ಲ ಕೆಲವರು ಬಿಟ್ಟಿ ಬಿಲ್ಡಪ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಮುಂದುವರೆದು ರಮ್ಯಾ ಅವರಿಗೆ ಆ ರೀತಿ ಮೆಸೇಜ್ ಕಳುಹಿಸಿದ್ದು ತಪ್ಪು ಅವರು ಕಾನೂನು ಮೂಲಕ ಹೋರಾಡುತ್ತಿದ್ದಾರೆ ಅವರಿಗೆ ಒಳ್ಳೆಯದಾಗಲಿ ದುರುಳರಿಗೆ ಶಿಕ್ಷೆಯಾಗಲಿ ಎಂದಿರುವ ಕೆ.ಮಂಜು, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ರಮ್ಯಾ ಹೇಳಿದ ತಕ್ಷಣ ಸಿಕ್ಕಿ ಬಿಡುತ್ತಾ ? ಹೇಳದಿದ್ದರೆ ಸಿಗಲ್ವಾ ? ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು.. ಈ ಪ್ರಕರಣ ಬೆಳಕಿಗೆ ಬಂದಾಗಲೇ ಹಲವಾರು ಜನ ಅವರ ಅವರ ಅಭಿಪ್ರಾಯಗಳನ್ನು ಹೇಳಿದ್ದಾರೆ. ಪಾಸಿಟಿವ್ ನೆಗೆಟಿವ್ ಏನೇ ಇರಲಿ ಮಾತನಾಡಿದ್ದಾರೆ. ಈಗ ಮತ್ತೆ ಮಾತನಾಡುವ ಅವಶ್ಯಕತೆ ಏನಿದೆ ? ಎಂದು ಪ್ರಶ್ನೆಯನ್ನು ಕೇಳಿರುವ ಕೆ.ಮಂಜು ಈ ಘಟನೆ ನಡೆದಿದ್ದನ್ನು ನೀವು ನೋಡಿದ್ದೀರಾ..? ನಾವು ನೋಡಿದ್ದೀವಾ..? ಪ್ರಕರಣ ನ್ಯಾಯಾಲಯದಲ್ಲಿದೆ .. ನ್ಯಾಯಾಲಯ ತೀರ್ಮಾನ ಮಾಡುತ್ತೆ.. ಹೀಗಿರುವಾಗ ಪದೇ ಪದೇ ಅದೇ ಮಾತುಗಳನ್ನು ಮಾತನಾಡುವ ಅವಶ್ಯಕತೆ ಇಲ್ಲ ಎನ್ನುವುದು ನನ್ನ ವ್ಯೆಯಕ್ತಿಕ ಅಭಿಪ್ರಾಯ ಎಂದಿದ್ದಾರೆ.
ದರ್ಶನ್ ಏನು ಬೇರೆಯವರಾ ? ಅಲ್ವಲ್ಲಾ.. ನಮ್ಮವರೇ ನಮ್ಮ ಕಲಾವಿದರೇ. ರಮ್ಯಾನೂ ಬೇರೆಯವರಲ್ಲ ಅವರು ಕೂಡ ನಮ್ಮ ಕಲಾವಿದರೇ .. ನಾವೆಲ್ಲ ಒಂದಾಗಿರೋಣ ಎಂದಿರುವ ಕೆ.ಮಂಜು ಇವತ್ತು ದರ್ಶನ್ ತಾವಾಯ್ತು.. ತಮ್ಮ ಸಿನಿಮಾದ ಚಿತ್ರೀಕರಣವಾಯ್ತು.. ದೇವಸ್ಥಾನ ಆಯ್ತು ಎಂದುಕೊಂಡು ಸುಮ್ಮನೆ ಇದ್ದಾರೆ. ತುಂಬಾ ಕ್ಲೋಸ್ ಆಗಿರುವವರು ಸಿಕ್ಕರೂ ಕೂಡ ಮಾತನಾಡುತ್ತಿಲ್ಲ. ಏನೋ ಆಗಿ ಬಿಟ್ಟರೆ ಅಂತ ಭಯ. ಈಗಾಗಲೇ ನೊಂದು ಹೋಗಿರುವ ಜೀವ ಅದು, ನೊಂದು ಹೋದ ಜೀವಕ್ಕೆ ಮತ್ತೆ ಮತ್ತೆ ಚುಚ್ಚಬಾರದು ಎನ್ನುವುದು ನನ್ನ ಅನಿಸಿಕೆ ಎಂದು ಹೇಳಿದ್ದಾರೆ.


Click it and Unblock the Notifications










