ಫೈಟರ್ ವಿವೇಕ್ ಸಾವು; ನಟಿ ರಚಿತಾ ರಾಮ್ ಮೊದಲ ಪ್ರತಿಕ್ರಿಯೆ
ನಟ ಅಜಯ್ ರಾವ್ ಮತ್ತು ರಚಿತಾ ರಾಮ್ ನಟನೆಯ 'ಐ ಲವ್ ಯೂ ರಚ್ಚು' ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ನಡೆದ ದುರ್ಘಟನೆ ಇಡೀ ಚಿತ್ರರಂಗಕ್ಕೆ ಆಘಾತ ತಂದಿದೆ. ಚಿತ್ರೀಕರಣ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಫೈಟರ್ (ಸಾಹಸ ಕಲಾವಿದ) ವಿವೇಕ್ ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ನಿನ್ನೆ ಸಿನಿಮಾ ನಿರ್ದೇಶಕ ಶಂಕರ್ ರಾಜ್, ಸಾಹಸ ಕಲಾವಿದ ವಿನೋದ್, ಕ್ರೇನ್ ಚಾಲಕ ಮುನಿಯಪ್ಪ ಅವರನ್ನು ಬಂಧಿಸಿದ್ದು, ಇಂದು ನ್ಯಾಯಾಂಗದ ಮುಂದೆ ಹಾಜರುಪಡಿಸಿದ್ದು, ಮೂವರಿಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Recommended Video
ಲವ್ ಯು ರಚ್ಚು ಸಿನಿಮಾದ ಸಾಹಸ ದೃಶ್ಯ ಚಿತ್ರೀಕರಣ ಬಿಡದಿಯ ಜೋಗರಪಾಳ್ಯ ಗ್ರಾಮದಲ್ಲಿ ನಡೆಯುತ್ತಿತ್ತು. ಹೈ ಟೆನ್ಷನ್ ವಿದ್ಯುತ್ ಲೈನ್ ಕೆಳಗೆ ಅನುಮತಿ ಪಡೆಯದೆ ಚಿತ್ರೀಕರಣ ಮಾಡಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿದ್ಯುತ್ ತಂತಿಗೆ ರೋಪ್ ತಗುಲಿದ ಪರಿಣಾಮ ಈ ದುರಂತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ರಂಜಿತ್ ಎನ್ನುವ ಮತ್ತೋರ್ವ ವ್ಯಕ್ತಿಗೂ ಗಂಭೀರ ಗಾಯಗಳಾಗಿದೆ. ಅವರನ್ನು ಆರ್ ಆರ್ ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಬಳಿಕ ನಟಿ ರಚಿತಾ ರಾಮ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ತಡವಾಗಿ ಪ್ರತಿಕ್ರಿಯೆ ನೀಡಿದ ರಚಿತಾ
ಘಟನೆ ನಡೆದು ಒಂದು ದಿನದ ಬಳಿಕ ಮೌನ ಮುರಿದಿರುವ ರಚಿತಾ, ವಿವೇಕ್ ಆತ್ಮಕ್ಕೆ ಶಾಂತಿ ಕೋರಿ ಟ್ವೀಟ್ ಮಾಡಿದ್ದಾರೆ. ಚಿತ್ರೀಕರಣ ಸಮಯದಲ್ಲಿ ನಟಿ ರಚಿತಾ ರಾಮ್ ಸ್ಥಳದಲ್ಲಿ ಇರಲಿಲ್ಲ. ಅಜಯ್ ರಾವ್ ಭಾಗದ ಚಿತ್ರೀಕರಣ ನಡೆಯುತ್ತಿದ್ದು, ಸಾಹಸ ಕಲಾವಿದ ವಿನೋದ್ ನೇತೃತ್ವದಲ್ಲಿ ಆಕ್ಷನ್ ದೃಶ್ಯ ಸೆರೆ ಹಿಡಿಯಲಾಗುತ್ತಿತ್ತು. ಈ ಸಮಯದಲ್ಲಿ ಇಂಥ ದುರಂತ ಸಂಭವಿಸಿದೆ.

ಶಾಂತಿ ಕೋರಿ ಟ್ವೀಟ್
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಚಿತಾ ರಾಮ್, "ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ ಫೈಟರ್ ವಿವೇಕ್ ಅವರ ಆತ್ಮಕ್ಕೆ ಸಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ" ಎಂದು ಟ್ವೀಟ್ ಮಾಡಿದ್ದಾರೆ.

ನೆಟ್ಟಿಗರ ಕಾಮೆಂಟ್
ರಚಿತಾ ರಾಮ್ ಟ್ವೀಟ್ಗೆ ನೆಟ್ಟಿಗರು ಕಾಮೆಂಟ್ ಮಾಡಿ 'ಟ್ವೀಟ್ ಮಾತ್ರನಾ ಅಥವಾ ಅವರ ಕುಟುಂಬಕ್ಕೆ ಏನಾದರು ಸಹಾಯ ಮಾಡುತ್ತೀರಾ' ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ನಟ-ನಟಿಯರಿಗೆ ಕೊಡುವ ರಕ್ಷಣೆ ಉಳಿದವರಿಗೂ ಸಿಗಲಿ ಎಂದು ಹೇಳಿದ್ದಾರೆ.

ಅಜಯ್ ರಾವ್ ಪ್ರತಿಕ್ರಿಯೆ
ಇನ್ನು ಈ ಬಗ್ಗೆ ನಟ ಅಜಯ್ ರಾವ್ ನಿನ್ನೆಯೇ ಪ್ರತಿಕ್ರಿಯೆ ನೀಡಿದ್ದರು. ''ದೃಶ್ಯದ ಚಿತ್ರೀಕರಣದಲ್ಲಿ ನಾನು ಇರಲಿಲ್ಲ. ಆದರೆ ಘಟನೆ ನಡೆದ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ಇದ್ದೆ. ಜೋರಾಗಿ ಸದ್ದು ಬಂದಾಗಲೇ ಏನೋ ನಡೆದಿದೆ ಎನ್ನುವುದು ಗೊತ್ತಾಗಿದ್ದು. ನಾನು ಸದಾ ಸುರಕ್ಷತೆಗೆ ಮಹತ್ವ ನೀಡುತ್ತೇನೆ. ಇತ್ತೀಚೆಗಷ್ಟೆ ಮೆಟಲ್ ರೋಪ್ ಬಗ್ಗೆ ಪ್ರಶ್ನೆ ಮಾಡಿದ್ದೆ. ಆದರೆ ಹಾಗೆ ಪ್ರಶ್ನೆ ಮಾಡಿದ್ದರಿಂದ ನಾನು ಕೆಟ್ಟವನಾಗಿದ್ದೆ. ಹೀಗೆ ಪ್ರಶ್ನೆಗಳನ್ನು ಮಾಡಿದರೆ ಕೆಲಸದಲ್ಲಿ ಮೂಗು ತೂರಿಸುತ್ತಾರೆ ಎಂಬ ನಿಂದನೆ ಅನುಭವಿಸಬೇಕಾಗುತ್ತದೆ'' ಎಂದಿದ್ದಾರೆ.

ನ್ಯಾಯಸಿಗೋವರೆಗೂ ಚಿತ್ರೀಕರಣಕ್ಕೆ ಹೋಗಲ್ಲ- ಅಜಯ್
''ಸಾಹಸ ನಿರ್ದೇಶಕ ವಿನೋದ್ ಜೊತೆ ಮಾತನಾಡುವ ಅವಕಾಶವೇ ನನಗೆ ಸಿಕ್ಕಿಲ್ಲ. ನಾನು ಬಹಳ ಮುಂಜಾಗೃತೆ ಇರುವ ವ್ಯಕ್ತಿ. ಸುರಕ್ಷತೆ ಸಂಬಂಧ ಸಾಕಷ್ಟು ಪ್ರಶ್ನೆಗಳನ್ನು ಚಿತ್ರೀಕರಣ ಸೆಟ್ನಲ್ಲಿ ಕೇಳುತ್ತಲೇ ಇದ್ದೆ. ಆದರೆ ನಾನು ನಟಿಸುತ್ತಿರುವ ಸಿನಿಮಾದಲ್ಲಿಯೇ ಅವಘಡ ನಡೆದಿದೆ. ವಿವೇಕ್ಗೆ ನ್ಯಾಯ ಸಿಗುವ ವರೆಗೆ ನಾನು ಚಿತ್ರೀಕರಣಕ್ಕೆ ಹೋಗುವುದಿಲ್ಲ'' ಎಂದು ನಟ ಅಜಯ್ ರಾವ್ ಹೇಳಿದ್ದಾರೆ.

ಗಾಯಾಳು ರಂಜಿತ್ ಹೇಳಿಕೆ
ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ರಂಜಿತ್ ಮಾತನಾಡಿ, ''ನಾನು ಏಳು ವರ್ಷದಿಂದ ಮಾಸ್ಟರ್ ಬಳಿ ಕೆಲಸ ಮಾಡ್ತಿದ್ದೇನೆ. ಅವರು ಈ ರೀತಿ ನಿರ್ಲಕ್ಷ್ಯ ಮಾಡುವ ವ್ಯಕ್ತಿಯಿಲ್ಲ. ಶೂಟಿಂಗ್ನಲ್ಲಿ ಎಲ್ಲ ಸ್ಟಂಟ್ ಚೆನ್ನಾಗಿ ಆಗ್ತಿತ್ತು. ಟೇಕ್ ಮಾಡೋದಕ್ಕೆ ರಿಹರ್ಸಲ್ ಮಾಡ್ತಿದ್ವಿ. ಪಕ್ಕದಲ್ಲೇ ಮಾಸ್ಟರ್ ಹೀರೋ ಅವರದ್ದು ಶೂಟ್ ಮಾಡ್ತಿದ್ರು. ಮೊದಲೇ ಆ ತೋಟದೊಳಗೆ ಕ್ರೇನ್ ಬರಲ್ಲ ಅಂತ ಹೇಳಿದ. ಆಮೇಲೆ ಹೇಗೋ ಒಳಗೆ ಬಂದ. ಮೊದಲು ಒಂದು ಸಲ ಮರ ಟಚ್ ಮಾಡಿದ. ಆಗಲೇ ನಾವು ಎಚ್ಚರಿಸಿದ್ವಿ. ಆದರೆ ಇನ್ನೊಂದು ಅಚಾನಕ್ ಆಗಿ ಹೈಟೆನ್ಷನ್ ವೈರ್ ಟಚ್ ಮಾಡಿದಾಗ ಹೀಗೆ ಆಯಿತು. ಇಲ್ಲಿ ಮಾಸ್ಟರ್ನ ಆರೋಪಿ ಮಾಡುವುದು ಸರಿಯಿಲ್ಲ'' ಎಂದು ಹೇಳಿದ್ದಾರೆ.


Click it and Unblock the Notifications











