ಫಿಲಂ ಚೇಂಬರ್ ನಿಯೋಗದಿಂದ ಸಿಎಂ ಭೇಟಿ: ಚಿತ್ರಮಂದಿರ ತೆರೆಯಲು ಮನವಿ
ಕೊರೊನಾ ಅನ್ಲಾಕ್ 3ರಲ್ಲಿ ಚಿತ್ರಮಂದಿರಗಳು ತೆರೆಯಲು ಅನುಮತಿ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ರಾಜ್ಯ ಸರ್ಕಾರ ಥಿಯೇಟರ್ ಮಾಲೀಕರಿಗೆ ಮತ್ತೆ ನಿರಾಸೆ ಮಾಡಿದೆ. ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಿದ ಸರ್ಕಾರ ಚಿತ್ರಮಂದಿರಗಳು ಕಾರ್ಯನಿರ್ವಹಿಸಲು ಅವಕಾಶ ಕೊಟ್ಟಿಲ್ಲ.
ಈ ಹಿನ್ನೆಲೆ ಇಂದು (ಜುಲೈ 6) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ 'ಥಿಯೇಟರ್ ತೆರೆಯಲು ಅನುಮತಿಸಬೇಕು' ಎಂದು ಮನವಿ ಮಾಡಿದೆ.
ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿದ ಸದಸ್ಯರು, ಚಿತ್ರಮಂದಿರಕ್ಕೆ ಅವಕಾಶ ಸೇರಿದಂತೆ ಒಳಾಂಗಣ ಚಿತ್ರೀಕರಣ, ಥಿಯೇಟರ್ಗಳ ವಿದ್ಯುತ್ ಶುಲ್ಕ, ನೀರಿನ ಶುಲ್ಕ ಮತ್ತು ಆಸ್ತಿ ತೆರಿಗೆಯಲ್ಲಿ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸಿಎಂ ಭೇಟಿ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ''ಚಲನಚಿತ್ರ ಮಂದಿರಗಳನ್ನು ತೆರೆಯಲು ಅವಕಾಶ ಕೋರಿ ಸಿಎಂ ಭೇಟಿ ಮಾಡಿದ್ದೇವೆ. ಒಳಾಂಗಣ ಚಿತ್ರೀಕರಣಕ್ಕೂ ಅನುಮತಿ ಕೇಳಿದ್ದೇವೆ. ಸಿಎಂ ಉತ್ತಮವಾಗಿ ಸ್ಪಂದಿಸಿದ್ದಾರೆ. ಇನ್ನು ನಾಲ್ಕೈದು ದಿನಗಳಲ್ಲಿ ಚರ್ಚಿಸಿ ಬೇಡಿಕೆ ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದಾರೆ'' ಎಂದು ತಿಳಿಸಿದರು.
ವಾಣಿಜ್ಯ ಮಂಡಳಿ ಸಿಎಂಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಏನಿದೆ?
ಕೋವಿಡ್ 19 ಮೊದಲನೆ ಹಾಗೂ ಎರಡನೇ ಅಲೆ ಹಿನ್ನೆಲೆಯಲ್ಲಿ ಚಿತ್ರರಂಗವೂ ಅದರಲ್ಲೂ ಸುಮಾರು 12 ತಿಂಗಳ ಕಾಲ ಚಿತ್ರಮಂದಿರಗಳು ಸ್ಥಗಿತಗೊಂಡು ಸಾಕಷ್ಟು ಆರ್ಥಿಕ ಸಮಸ್ಯೆ, ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ದೊರಕಿಲ್ಲದಿರುವ ಸಂದರ್ಭವನ್ನು ಸಹ ಉದ್ಯಮ ಎದುರಿಸಿದೆ.
ಇತ್ತೀಚಿಗೆ ನೆರೆ ರಾಜ್ಯಗಳಾದ ತೆಲಂಗಾಣ, ಗುಜರಾತ್, ಆಂಧ್ರಪ್ರದೇಶದಲ್ಲಿ ಚಿತ್ರಮಂದಿರಗಳ ಪುನರಾರಂಭಕ್ಕೆ ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಗುಜರಾತ್ ಮತ್ತು ಇತರೆ ರಾಜ್ಯಗಳಲ್ಲಿ ಕೋವಿಡ್ನಿಂದ ಉಂಟಾದ ನಷ್ಟಕ್ಕೆ ಅಲ್ಲಿನ ಸರ್ಕಾರಗಳು ಚಿತ್ರಮಂದಿರಗಳಿಗೆ ವಿದ್ಯುತ್ ಶುಲ್ಕ, ನೀರಿನ ಶುಲ್ಕ ಹಾಗೂ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡಿರುತ್ತದೆ.
ಆದ್ದರಿಂದ ತಾವು ದಯಮಾಡಿನಮ್ಮ ಈ ಮನವಿಯನ್ನು ಪರಿಗಣಿಸಿ, ಕರ್ನಾಟಕ ರಾಜ್ಯಾದ್ಯಂತ ಚಿತ್ರಮಂದಿರಗಳು ಪುನರಾರಂಭಗೊಳ್ಳಲು ಹಾಗೂ ಒಳಾಂಗಣ ಚಿತ್ರೀಕರಣಕ್ಕೆ, ವಿದ್ಯುತ್ ಶುಲ್ಕ, ನೀರಿನ ಶುಲ್ಕ, ಆಸ್ತಿ ತೆರಿಗೆಯಲ್ಲಿ ಸಂಪೂರ್ಣ ವಿನಾಯಿತಿ ನೀಡುವ ಮೂಲಕ ಚಿತ್ರೋದ್ಯಮವು ಉಳಿದು, ಬೆಳೆಯಲು ಸಹಕರಿಸಬೇಕೆಂದು ವಿನಂತಿಸಲಾಗಿದೆ.


Click it and Unblock the Notifications











