ಫಿಲ್ಮ್ ಚೇಂಬರ್ ಎದುರು ಸುದೀಪ್ ಫ್ಯಾನ್ಸ್ ಪ್ರತಿಭಟನೆ: ಸುದೀಪ್ ಪತ್ರದ ಬಗ್ಗೆ ಭಾ. ಮಾ ಹರೀಶ್ ಪ್ರತಿಕ್ರಿಯೆ
ತಮ್ಮ ನೆಚ್ಚಿನ ನಟ ಸುದೀಪ್ ವಿರುದ್ಧ ನಿರ್ಮಾಪಕರಾದ ಎಂ. ಎನ್ ಕುಮಾರ್ ಹಾಗೂ ರಹಮಾನ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸುದೀಪ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಕೆಲವೆಡೆ ಪ್ರತಿಭಟನೆ ನಡೆಸಿ ಇಬ್ಬರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಫಿಲ್ಮ್ ಚೇಂಬರ್ ಮುಂದೆ ಕೂಡ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಫಿಲ್ಮ್ ಚೇಂಬರ್ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ನಟ ಸುದೀಪ್ ಮೋಸ ಮಾಡಿದ್ದಾರೆ ಎಂದು ಒಬ್ಬರ ಹಿಂದೊಬ್ಬರಂತೆ ಸಿನಿಮಾ ನಿರ್ಮಾಪಕರು ಆರೋಪ ಮಾಡ್ತಿದ್ದಾರೆ. ಫಿಲ್ಮ್ ಚೇಂಬರ್ನಲ್ಲಿ ಸುದ್ದಿಗೋಷ್ಠಿ ನಡೆಸಿ ನ್ಯಾಯ ಕೊಡಿಸಿ ಎಂದು ಕೇಳುತ್ತಿದ್ದಾರೆ. ಸುದೀಪ್ ಅಡ್ವಾನ್ಸ್ ಪಡೆದು ಕಾಲ್ಶೀಟ್ ಕೊಟ್ಟಿಲ್ಲ ಎಂದು ನಿರ್ಮಾಪಕ ಎಂ.ಎನ್ ಕುಮಾರ್ ಆರೋಪಿಸಿದ್ದರು. ಇನ್ನು 'ಹುಚ್ಚ' ಸಿನಿಮಾ ನಿರ್ಮಿಸಿದ್ದ ರಹಮಾನ್, ಸುದೀಪ್ ನಂಬಿ 2 ಸಿನಿಮಾ ರೀಮೆಕ್ ರೈಟ್ಸ್ ತಂದೆ. ಆ ಸಿನಿಮಾಗಳು ನಿರ್ಮಾಣ ಆಗಲಿಲ್ಲ. ಹಾಗಾಗಿ ನನ್ನ 35 ಲಕ್ಷ ರೂ. ವಾಪಸ್ ಕೊಡಿ ಎಂದು ಮನವಿ ಮಾಡಿದ್ದಾರೆ.

ಫಿಲ್ಮ್ ಚೇಂಬರ್ ಎದುರು ಪ್ರತಿಭಟನೆ ನಡೆಸಿದ ಸುದೀಪ್ ಅಭಿಮಾನಿಗಳು "ಸಾಕ್ಷಿ, ಆಧಾರ ಇಲ್ಲದೇ ಬಂದು ಆರೋಪ ಮಾಡುವವರನ್ನು ಫಿಲ್ಮ್ ಚೇಂಬರ್ ಒಳಗೆ ಸೇರಿಸಲೇಬಾರದು ಎಂದು ಮನವಿ ಮಾಡಿದರು. ನಿರ್ಮಾಪಕರಾದ ಎಂ. ಎನ್ ಕುಮಾರ್ ಮತ್ತು ರೆಹಮಾನ್ ಎರಡು ದಿನಗಳ ಒಳಗೆ ಕ್ಷಮೆ ಕೇಳದೇ ಇದ್ದರೆ ನಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಅಭಿಮಾನಿಗಳು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ. ಈ ಹಿಂದಿನ ಸಂದರ್ಶನಗಳಲ್ಲಿ ಸುದೀಪ್ ಬಗ್ಗೆ ನಿರ್ಮಾಪಕ ರಹಮಾನ್ ಚೆನ್ನಾಗಿಯೇ ಮಾತನಾಡಿದ್ದರು. ಈಗ ನೋಡಿದರೆ 20 ವರ್ಷಗಳ ಹಿಂದಿನ ಕಥೆ ಹೇಳೋಕೆ ಬಂದಿದ್ದಾರೆ. ಇದೆಲ್ಲದರ ಹಿಂದೆ ದೊಡ್ಡ ಪಿತೂರಿ ನಡೀತಿದೆ" ಎಂದಿದ್ದಾರೆ.
ಮತ್ತೊಂದು ಕಡೆ ಚಾಮರಾಜನಗರದಲ್ಲಿ ಸುದೀಪ್ ಅಭಿಮಾನಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಸುದೀಪ್ ವಿರುದ್ಧ ಆರೋಪ ಮಾಡಿರುವ ಎಂ.ಎನ್ ಕುಮಾರ್ ಹಾಗೂ ರಹಮಾನ್ ವಿರುದ್ಧ ಘೋಷಣೆ ಕೂಗಿದರು. ಕುಮಾರ್ಗೆ ಬೆಂಬಲ ಸೂಚಿಸಿರುವ ನಿರ್ಮಾಪಕರಾದ ಎ. ಗಣೇಶ್, ಪ್ರವೀಣ್ ಕುಮಾರ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಮಾರ್, ಗಣೇಶ್ ಹಾಗೂ ಪ್ರವೀಣ್ ಅವರ ಬ್ಯಾನರ್ ತಂದು ರಸ್ತೆ ಮಧ್ಯದಲ್ಲೇ ಚಪ್ಪಲಿ ಸೇವೆ ಮಾಡಿ, ಧಿಕ್ಕಾರ ಕೂಗಿದ್ದಾರೆ. ತಮ್ಮ ನಟನ ವಿರುದ್ಧ ಆರೋಪ ಮಾಡಿದ್ದನ್ನು ಖಂಡಿಸಿದ್ದಾರೆ.

ಇನ್ನು ನಿರ್ಮಾಪಕ ರೆಹಮಾನ್ ಆರೋಪ ಮಾಡುತ್ತಿದ್ದಂತೆ ಸುದೀಪ್ ಫಿಲ್ಮ್ ಚೇಂಬರ್ಗೆ ಪತ್ರ ಬರೆದಿದ್ದರು. ಅಭಿಮಾನಿಗಳು ಕೂಡ ಚೇಂಬರ್ಗೆ ಮನವಿ ಪತ್ರ ನೀಡಿದ್ದಾರೆ. ಇರದ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮ. ಹರೀಶ್ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. "ಸುದೀಪ್ ಅವರ ಅಭಿಮಾನಿಗಳು ಮನವಿ ಪತ್ರ ನೀಡಿದ್ದಾರೆ. ಆರೋಪ ಮಾಡುತ್ತಿರುವವರು ಕ್ಷಮೆ ಕೇಳಬೇಕು ಅಂತ ಪತ್ರದಲ್ಲಿ ಒತ್ತಾಯಿಸಿದ್ದಾರೆ. ನಿನ್ನೆ ಸುದೀಪ್ ಅವರು ಪತ್ರ ಬರೆದಿದ್ದಾರೆ. ಅವರು ಕಾನೂನಾತ್ಮಕವಾಗಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಯಾರ್ಯಾರ ಹೆಸರನ್ನು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೋ ಅವರ ಗಮನಕ್ಕೆ ಎಲ್ಲವನ್ನು ತರುತ್ತೇವೆ. ಕ್ಷಮೆ ಕೇಳೋದು ಬಿಡೋದು ಅವರಿಗೆ ಬಿಟ್ಟಿದ್ದು" ಎಂದು ಭಾಮಾ ಹರೀಶ್ ತಿಳಿಸಿದ್ದಾರೆ.


Click it and Unblock the Notifications











