Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಹುಚ್ಚ' ವೆಂಕಟ್: ಕರುಣೆ ತೋರಿಸಬೇಕಿಲ್ಲ, ಮಾಧ್ಯಮದವರನ್ನು ದೂರಬೇಕಿಲ್ಲ!
Recommended Video
ವೆಂಕಟರಮಣ ಲಕ್ಷ್ಮಣ್ ಎಂಬ ಸಿನೆಮಾ ಕ್ಷೇತ್ರದ ವ್ಯಕ್ತಿಯ ಸಾರ್ವಜನಿಕ ವರ್ತನೆ ಆತನ ನಿರೀಕ್ಷೆಯಂತೆಯೇ ಮತ್ತೊಮ್ಮೆ ಸುದ್ದಿ ಕೇಂದ್ರಕ್ಕೆ ಬಂದಿದೆ. ಹುಚ್ಚ ವೆಂಕಟ್ ಎಂದು ಗುರುತಿಸಿಕೊಂಡ, ರಾಜ್ಯದ ಎಲ್ಲಾ ಮಾಧ್ಯಮಗಳನ್ನೂ ಆವರಿಸಿಕೊಂಡ ವ್ಯಕ್ತಿ ಗುರುವಾರ ಮಡಿಕೇರಿಯಲ್ಲಿ ತೋರಿಸಿದ ಅಗ್ರೆಸಿವ್ ನಡವಳಿಕೆ ಇದಕ್ಕೆ ಕಾರಣ. ಆದರೆ ಇದನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಕಡಿಮೆ ಎಲ್ಲರೂ ವಿಫಲರಾಗಿದ್ದಾರೆ.
ಆತನಿಗೆ ಚಿಕಿತ್ಸೆ ಅಗತ್ಯವಿದೆ, ಆತನನ್ನು ಎಲ್ಲರೂ (ಮಾಧ್ಯಮಗಳು) ಉಪಯೋಗಿಸಿಕೊಂಡು ಬೀದಿಗೆ ಬಿಟ್ಟಿದ್ದಾರೆ ಎಂಬ ಚರ್ವಿತ ಚರ್ವಣ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಇಂತಹದೊಂದು ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಅದನ್ನು ನಿವಾರಿಸಿಕೊಳ್ಳಿವುದಕ್ಕೆ ಇರುವ ಮಾರ್ಗಗಳೇನು? ಎಂಬುದನ್ನು 'ಫಿಲ್ಮಿಬೀಟ್ ಕನ್ನಡಕ್ಕೆ' ಇಲ್ಲಿ ವಿವರಿಸುವ ಪ್ರಯತ್ನ ಮಾಡುತ್ತಿದೆ.
ಹುಚ್ಚ ವೆಂಕಟ್ ವಿಚಾರದಲ್ಲಿ ಪ್ರಥಮ್ ನೀಡಿದ ಸಲಹೆ ಬಗ್ಗೆ ಒಮ್ಮೆ ಗಮನ ಕೊಡಿ
ವೆಂಕಟ್ ಅಪರಾವತಾರಗಳ ಮೂಲ:
ಕನ್ನಡ ಮಾಧ್ಯಮಗಳ ರಿಯಾಲಿಟಿ ಶೋಗಳಿಂದಾಗಿ ರಾಜೇಶ್ ಎಂಬ ಬುಡಕಟ್ಟು ಸಮುದಾಯ ಯುವಕನೊಬ್ಬ ಮುನ್ನೆಲೆಗೆ ಬಂದಿದ್ದಕ್ಕೆ ರಾಜ್ಯ ಸಾಕ್ಷಿಯಾಗಿತ್ತು. ಮಾಧ್ಯಮಗಳು ನೀಡುವ ಪ್ರಚಾರ ಮತ್ತು ಅದನ್ನು ಅರಗಿಸಿಕೊಳ್ಳಲಾಗದಿದ್ದರೆ ಎಂತಹ ಅನಾಹುತಗಳು ಜರುಗುತ್ತವೆ ಎಂಬುದಕ್ಕೆ ರಾಜೇಶ್ ತೆಗೆದುಕೊಂಡ ಆತ್ಮಹತ್ಯೆ ನಿರ್ಧಾರ ದೊಡ್ಡ ಉದಾಹರಣೆ. ಹಾಗಂತ ಇದೇ ನೆಲೆಯಲ್ಲಿ ವೆಂಕಟ್ ಪ್ರಕರಣವನ್ನೂ ನೋಡಬಹುದಾ? ಖಂಡಿತಾ ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು.
"ವೆಂಕಟ್ ಪಾಲ್ಗೊಂಡ ಒಂದೆರಡು ಪ್ಯಾನಲ್ ಚರ್ಚೆಗಳಲ್ಲಿ ನಾನೂ ಪಾಲ್ಗೊಂಡಿದ್ದೇನೆ. ನನಗೆ ಆತ ಯಾವತ್ತೂ ಅಬ್ ನಾರ್ಮಲ್ ವ್ಯಕ್ತಿಯಾಗಿ ಕಾಣಿಸಿಲ್ಲ. ಆತ ನಟ ಮತ್ತು ಆತನ ಇಂತಹ ವರ್ತನೆಗಳೂ ಕೂಡ ನಟನೆಯ ಭಾಗವೇ ಆಗಿರುವ ಸಾಧ್ಯತೆ ಇದೆ. ಆತನಿಗೆ ಪ್ರಚಾರ ಗೀಳು ಬೆಳೆದುಬಂದಿದೆ. ಆ ಕಾರಣಕ್ಕಾಗಿಯೇ ಆತ ಸಿನೆಮಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾನೆ ಅನ್ನಿಸುತ್ತೆ. ಆದರೆ ಅಲ್ಲಿ ಸಿಗದ ಯಶಸ್ಸಿನ ಹಿನ್ನೆಲೆಯಲ್ಲಿ ತಾನು ಜನಮಾನಸದಿಂದ ಮರೆಯಾಗುತ್ತೇನೆ ಎಂಬ ಆತಂಕಕ್ಕೆ ಆತ ಒಳಗಾಗಿರಬಹುದು. ಇದರಿಂದಾಗಿ ನಿರಂತರ ಪ್ರಚಾರದಲ್ಲಿ ಇರುವ ಕಾರಣಕ್ಕಾಗಿಯೇ ಆತನ ಎಲ್ಲಾ ಸಹಿಸಲು ಸಾಧ್ಯವಿಲ್ಲದ ಸಾರ್ವಜನಿಕ ವರ್ತನೆಗಳು ರೂಪುಗೊಂಡಿವೆ,'' ಎನ್ನುತ್ತಾರೆ ಬೆಂಗಳೂರು ಮೂಲದ ಖ್ಯಾತ ಮನೋವೈದ್ಯ ಡಾ. ಎ. ಶ್ರೀಧರ್.
ಮಡಿಕೇರಿ ಬೀದಿಯಲ್ಲಿ ಕಾರಿನ ಗ್ಲಾಸ್ ಒಡೆದು 'ಹುಚ್ಚಾಟ' ಮಾಡಿದ ವೆಂಕಟ್
ಇದು ವೆಂಕಟ್ ಹಾಗೂ ಆತನ ವ್ಯಕ್ತಿತ್ವದ ಮನೋವೈಜ್ಞಾನಿಕ ವಿಶ್ಲೇಷಣೆ. ವ್ಯಕ್ತಿಯೊಬ್ಬ ಮಾನಸಿಕವಾಗಿ ದುರ್ಬಲನಾಗುವುದಕ್ಕೂ, ಮಾನಸಿಕ ದುರ್ಬಲ ಅಂತ ನಟಿಸುವುದಕ್ಕೂ ವ್ಯತ್ಯಾಸ ಇದೆ.
ಪೂರಕ ಸಾಕ್ಷಿಗಳು:
ತಜ್ಞರು ಹೇಳುವಂತೆ ವೆಂಕಟ್ ವರ್ತನೆಗಳ ಹಿಂದೆ ಪ್ರಚಾರದ ಪ್ರಬಲ ಉದ್ದೇಶವೊಂದು ಕೆಲಸ ಮಾಡಿಕೊಂಡು ಬಂದಿರಬಹುದು. ಇದಕ್ಕೆ ಪೂರಕ ಎಂಬಂತೆ ಒಂದಷ್ಟು ಸಾಕ್ಷಿಗಳು ಸಿಗುತ್ತವೆ. ಸಿನೆಮಾ ವರದಿಗಾರರು ಹೇಳುವಂತೆ, ವೆಂಕಟ್ ಹಿಂದೆ ಫಿನಾಯಿಲ್ ಕುಡಿದ ಪ್ರಕರಣದಲ್ಲಿ, ಮದುವೆ ಪ್ರಸಂಗಗಳಲ್ಲಿ ಮೊದಲು ಕರೆ ಮಾಡಿದ್ದು ಮಾಧ್ಯಮಗಳಿಗೆ.
"ಸಾಕಷ್ಟು ದಿನ ಆತನ ಕುರಿತು ಯಾವುದೇ ಸುದ್ದಿ ಬಾರದಿದ್ದರೆ ನೇರವಾಗಿ ಟಿವಿ ಕಚೇರಿಗಳಿಗೆ ಬಂದು ಬಿಡುತ್ತಿದ್ದ,'' ಎಂದು ಸಿನೆಮಾ ಪತ್ರಕರ್ತೆಯೊಬ್ಬರು ನೆನಪಿಸಿಕೊಳ್ಳುತ್ತಾರೆ. ತಾನೇ ತಾನಾಗಿ ಪ್ರಚಾರದ ಸರಕಾಗುತ್ತೀನಿ ಎಂದು ಬರುವವರನ್ನು ಮಾಧ್ಯಮಗಳು ಪರೀಕ್ಷಿಸಿ ವೇದಿಕೆ ಒದಗಿಸುವಷ್ಟು ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳದ ಹೊತ್ತಿದು. ಹಾಗಾಗಿ ವೆಂಕಟ್ ಸಹಜವಾಗಿಯೇ 'ಮೀಡಿಯಾ ಡಾರ್ಲಿಂಗ್' ಆಗಿ ಹೋಗಿದ್ದಾನೆ. ಆತನಲ್ಲಿ ಗೀಳಿನ ರೂಪದಲ್ಲಿ ಆರಂಭವಾದ ಪ್ರಚಾರಪ್ರಿಯತೆ ಇವತ್ತಿಗೆ ಮಾನಸಿಕ ವ್ಯಸನವಾಗಿರುವ ಸಾಧ್ಯತೆಯೂ ಇದೆ. ಹಾಗಂತ ಸಾವರ್ಜನಿಕವಾಗಿ ಅಸಭ್ಯ ವರ್ತನೆ ಮೂಲಕವಾದರೂ ಸರಿ, ಪ್ರಚಾರದಲ್ಲಿ ಇರಬೇಕು ಎಂಬ ಮನಸ್ಥಿತಿಗೆ ಕಾನೂನು ಕ್ರಮ ಪರಿಣಾಮಕಾರಿಯಾಗಬಲ್ಲದೆ ಹೊರತು ಮನೋವೈದ್ಯರ ಚಿಕಿತ್ಸೆ ಅಲ್ಲ ಎಂಬುದು ಗಮನಿಸಬೇಕಿರುವ ಪ್ರಮುಖ ಅಂಶ.
ಕಾಲಲ್ಲಿ ಚಪ್ಪಲಿ ಇಲ್ಲ, ಕೊಳಕು ಬಟ್ಟೆ, ಚೆನ್ನೈನಲ್ಲಿ ಹುಚ್ಚ ವೆಂಕಟ್ ಅಲೆದಾಟ
ರಾಂಧವ ಪ್ರಚಾರ ದಾರಿ ತಪ್ಪಿತಾ?:
ಕಳೆದ ಕೆಲವು ತಿಂಗಳಿಗಳಿಂದ ಮಾಧ್ಯಮಗಳಿಂದ ದೂರವೇ ಇದ್ದ ವೆಂಕಟ್ ಸುದ್ದಿಕೇಂದ್ರಕ್ಕೆ ಬಂದಿದ್ದು ರಾಂಧವ ಚಿತ್ರ ತಂಡದ ಚೆನ್ನೈ ಭೇಟಿಯ ಮೂಲಕ. ಅಲ್ಲಿ ಚಿತ್ರತಂಡಕ್ಕೆ ವೆಂಕಟ್ ಹುಚ್ಚನ ರೀತಿಯಲ್ಲಿ ನಡೆದಾಡುತ್ತಿದ್ದ ದೃಶ್ಯಗಳು ಸಿಕ್ಕವು ಎಂಬುದು ನ್ಯೂಸ್ ಪೆಗ್ ಆಯಿತು. ಇದು ಎಷ್ಟರ ಮಟ್ಟಿಗೆ ಸತ್ಯ? ಇದನ್ನು ಪರೀಕ್ಷೆಗೆ ಒಳಪಡಿಸಬೇಕಿದೆ. ಒಂದು ವೇಳೆ ಚಿತ್ರ ತಂಡವೇ ಇಂತಹದೊಂದು ಸನ್ನಿವೇಶವನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದರೆ ಅದು ಶಿಕ್ಷಾರ್ಹ ಅಪರಾಧ ಮಾತ್ರ ಅಲ್ಲ, ಸಾಮಾಜಿಕ ಸ್ವಾಥ್ಯಕ್ಕೂ ಇಂತಹ ವರ್ತನೆಗಳು ಹಾನಿಕಾರಕ.
ಇನ್ನು ಮಡಿಕೇರಿಯಲ್ಲಿ ನಡೆದ ಘಟನೆಯನ್ನೇ ತೆಗೆದುಕೊಂಡರೆ ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯೊಬ್ಬನ ನಡೆತೆಗಿಂತ ಬೇಕಂತಲೇ ಪ್ರಚಾರದ ಸನ್ನಿವೇಶವೊಂದನ್ನು ಸೃಷ್ಟಿಸುವ ವೆಂಕಟ್ ವರ್ತನೆ ಢಾಳಾಗಿದೆ. ಇಡೀ ಘಟನೆಗೆ ಸಾಕ್ಷಿಯಾದ ಸ್ಥಳೀಯ ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು, "ಎಟಿಎಂನಿಂದ ಹಣ ತೆಗೆದುಕೊಂಡು ಹೊರಬಂದ ಯುವಕನನ್ನು ವೆಂಕಟ್ ಅಟ್ಟಿಸಿಕೊಂಡು ಹೋದ. ಯುವಕನ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿದ,'' ಎಂದು ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ. ಅವರು ಕಟ್ಟಿಕೊಟ್ಟ ಘಟನೆಯ ದೃಶ್ಯಾವಳಿಗಳನ್ನು ಗಮನಿಸಿದರೆ, ಇಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡ ವೆಂಕಟ್ ನಡೆತೆ ಎಂಬುದಕ್ಕಿಂತ, ತನ್ನ ಸುತ್ತ ಮತ್ತೊಂದು ಸುತ್ತಿನ ಪ್ರಭಾವಳಿಗಾಗಿ ಹಪಾಹಪಿ ತೋರಿಸಿದ ವೆಂಕಟ್ ವರ್ತನೆ ಕಾಣಿಸುತ್ತದೆ.
ವೆಂಕಟ್ನನ್ನು ನಿವಾರಿಸಿಕೊಳ್ಳುವುದು ಹೇಗೆ?:
ಮಾಧ್ಯಮಗಳು ಇಂತಹದೊಂದು ವ್ಯಕ್ತಿತ್ವದಿಂದ ದೂರ ಉಳಿಯುವುದು ಸದ್ಯ ತೆಗೆದುಕೊಳ್ಳಬೇಕಿರುವ ದೃಢ ನಿರ್ಧಾರ. "ಮಾನಸಿಕವಾಗಿ ಸಮಸ್ಯೆಗೆ ಒಳಗಾದವರು ಸಾವರ್ಜನಿಕವಾಗಿ ಅಗ್ರೆಸಿವ್ ಆಗುವುದು ಅತ್ಯಂತ ಕಡಿಮೆ. ಅದರಲ್ಲೂ ಕ್ರೀಯಾಶೀಲ ಕ್ಷೇತ್ರಗಳಲ್ಲಿರುವವರು ಖಿನ್ನತೆಗೆ ಒಳಗಾದರೆ ಅಂತರ್ಮುಖಿಗಳಾಗುತ್ತಾರೆ. ಖಿನ್ನತೆಗೆ ಒಳಗಾದವರಂತೆ ನಟಿಸುವವರು ಮಾತ್ರವೇ ಇಂತಹ ವರ್ತನೆಗಳನ್ನು ತೋರಿಸಬಲ್ಲರು. ವೆಂಕಟ್ ಮಾಧ್ಯಮಗಳನ್ನೂ ಹೇಗೆ ತನ್ನ ಪ್ರಚಾರದ ವೇದಿಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಒಂದು ಫಾರ್ಮುಲಾ ಕಂಡುಕೊಂಡಂತೆ ಕಾಣಿಸುತ್ತಿದೆ. ಇದನ್ನು ಮಾಧ್ಯಮಗಳು ಅರ್ಥಮಾಡಿಕೊಂಡು ಆತನಿಂದ ದೂರ ಉಳಿಯಬೇಕಿದೆ ಹಾಗೂ ಆತನಿಗೆ ಕಾನೂನಿನ ಕ್ರಮದ ಬಿಸಿ ಮುಟ್ಟಿಸಬೇಕಿದೆ,'' ಎನ್ನುತ್ತಾರೆ ಡಾ. ಶ್ರೀಧರ್.
ಇದು ಸದ್ಯ ಆಗಬೇಕಿರುವ ಕೆಲಸ. ವೆಂಕಟ್ಗೆ ಮರುಕ ತೋರಿಸಿ ದಿಕ್ಕು ತಪ್ಪುವ ಬದಲು, ಆತನಿಗೆ ಸಾರ್ವಜನಿಕ ವರ್ತನೆಗಳ ಪಾಠ ಮತ್ತು ಕಾನೂನು ಕೈಗೆತ್ತಿಕೊಂಡರೆ ಪರಿಣಾಮಗಳೇನಿರುತ್ತವೆ ಎಂಬುದನ್ನು ಅರ್ಥಪಡಿಸಬೇಕಿದೆ. ಅದಕ್ಕಾಗಿ ಮಾಧ್ಯಮಗಳ ಮನಸ್ಥಿತಿ ಮೊದಲು ಬದಲಾಗಬೇಕಿದೆ, ಇನ್ನಷ್ಟು ಸೂಕ್ಷ್ಮವಾಗಬೇಕಿದೆ.