ಬಾಲಿವುಡ್ನಲ್ಲೇ ಬಿಡಾರ ಹೂಡುತ್ತಾರಾ ಹರ್ಷ ? ಕನ್ನಡಕ್ಕೆ ಮರಳಿ ಬರಲ್ವಾ ? ಬಾಘಿ 4 ಡೈರೆಕ್ಟರ್ ಮನದ ಮಾತು
ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ. ಅದರಲ್ಲಿಯೂ ಕನ್ನಡ ಚಿತ್ರರಂಗದಿಂದ ಇಲ್ಲಿಯವರೆಗೆ ಅನೇಕ ನಾಯಕಿಯರು ಪರಭಾಷೆಗೆ ವಲಸೆ ಹೋಗಿದ್ದಾರೆ. ಕೆಲವರು ಅಲ್ಲಿಯೇ ಬದುಕು ಕಟ್ಟಿಕೊಂಡರೆ ಇನ್ನು ಹಲವರು ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಮರಳಿ ಬಂದಿದ್ದಾರೆ.
ಇನ್ನೂ ಹೀಗೆ ಗುಳೆ ಹೋಗುವರಲ್ಲಿ ಕೆಲವರು ಚಿತ್ರ ಮತ್ತು ಪಾತ್ರ ಚೆನ್ನಾಗಿದೆ ಎಂದು ಹೋದರೆ, ಇನ್ನು ಕೆಲವರು ಇಲ್ಲಿ ಸಿಗುವ ಸಂಭಾವನೆಗಿಂತ ಹೆಚ್ಚು ಅಲ್ಲಿ ಸಿಗುತ್ತೆ ಎಂದು ಹೋಗುತ್ತಾರೆ. ಎಲ್ಲವೂ ಅವರವರ ನಿರ್ಧಾರ ಮತ್ತು ಬದುಕಾದರೂ ಈಗೀಗ ನಾಯಕಿಯರ ಹಿಂದೆ ಹಿಂದೆಯೇ ಕನ್ನಡದ ನಿರ್ದೇಶಕರು ಕೂಡ ಪರಭಾಷೆಯಲ್ಲಿ ಅವಕಾಶ ಪಡೆಯುತ್ತಿದ್ದಾರೆ. ಅಲ್ಲಿಯೂ ಕೂಡ ಗೆಲ್ಲುತ್ತಿದ್ದಾರೆ.

ಆದರೆ. ಹೀಗೆ ಹೋಗಿ ಗೆದ್ದ ಪ್ರಶಾಂತ್ ನೀಲ್ ಮಾತ್ರ ಕನ್ನಡ ಚಿತ್ರರಂಗಕ್ಕೆ ಮರಳಿ ಬರುವ ಮನಸ್ಸು ಮಾಡಲಿಲ್ಲ. ಈ ಹಿನ್ನೆಲೆ ಕನ್ನಡದ ಮತ್ತೊಬ್ಬ ಡೈರೆಕ್ಟರ್ ಎ.ಹರ್ಷ ಕೂಡ ಎಲ್ಲಿ ಪ್ರಶಾಂತ್ ನೀಲ್ ಅವರಂತೆಯೇ ಪರಭಾಷೆಯಲ್ಲಿ ಬಿಡಾರ ಹೂಡುತ್ತಾರೆ ಎನ್ನುವ ಭಯ ಹಲವರಲ್ಲಿದೆ.
ಯಾಕೆಂದರೆ.. ಹರ್ಷ ಮಾಡಿರುವ ''ಬಾಘಿ 4'' ಗೆದ್ದಿದೆ. ಬಾಕ್ಸಾಫೀಸ್ನಲ್ಲಿ 200 ಕೋಟಿ.. 300 ಕೋಟಿ.. ಹಣದ ಹೊಳೆ ಹರಿಯದಿದ್ದರೂ ಕೂಡ ''ಬಾಘಿ 4'' ನಿರ್ಮಾಪಕರ ಕೈ ಹಿಡಿದಿದೆ. ನಿರ್ಮಾಪಕರಿಗೆ ನಷ್ಟವಾಗದಂತೆ ಹರ್ಷ ನೋಡಿಕೊಂಡಿದ್ದಾರೆ. ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎನ್ನುವ ಮಾತು ಬಾಲಿವುಡ್ನಲ್ಲಿ ಕೇಳಿ ಬರುತ್ತಿದೆ. ಖುದ್ದು ಹರ್ಷ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಂತೆ ''ಬಾಘಿ 4'' ವಿಶ್ವದಾದ್ಯಂತ ₹89.03 ಕೋಟಿ ಹಣವನ್ನು ಗಳಿಸಿದೆ. ಆ ಪೈಕಿ ಭಾರತದ ಪಾಲು ₹62.74 ಕೋಟಿ ಇದೆ.

ಇನ್ನೂ ಟೈಗರ್ ಶ್ರಾಫ್ ವೃತ್ತಿ ಬದುಕಿನಲ್ಲಿ ಅತೀ ಹೆಚ್ಚು ಹಣ ಗಳಿಸಿದ 7ನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಕೂಡ ''ಬಾಘಿ 4'' ಪಾತ್ರವಾಗಿದೆ. ಈ ಹಿನ್ನೆಲೆ ಎ.ಹರ್ಷ ಸ್ಯಾಂಡಲ್ವುಡ್ಗೆ ಕಂ ಬ್ಯಾಕ್ ಮಾಡ್ತಾರಾ ..? ಮಾಡಿದರು ಕೂಡ ಯಾವಾಗ..? ಎನ್ನುವ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ. ಈ ಪ್ರಶ್ನೆಗಳಿಗೆ ಖುದ್ದು ಹರ್ಷ ನಿಮ್ಮ ''ಫಿಲ್ಮಿಬೀಟ್ ಕನ್ನಡ''ಗೆ ಉತ್ತರ ನೀಡಿದ್ದಾರೆ.
ಈ ಕುರಿತು ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿರುವ ಹರ್ಷ ''ಕನ್ನಡ ನನಗೆ ಬದುಕು ನೀಡಿದೆ. ಬದುಕು ರೂಪಿಸಿದೆ. ಅಲ್ಲಿಂದ ಇಲ್ಲಿಯವರೆಗೆ ಬಂದಿದ್ದೇನೆ ಅಂದರೆ ಅದಕ್ಕೆ ಕಾರಣ ನಮ್ಮ ಊರು.. ನಮ್ಮ ನಾಡು.. ನಮ್ಮ ಜನ. ಡ್ಯಾನ್ಸರ್ ಆಗಿದ್ದವನನ್ನು ಕರೆದುಕೊಂಡು ಬಂದು ನಿರ್ದೇಶಕನ ಸ್ಥಾನದಲ್ಲಿ ಕೂರಿಸಿದ್ದಾರೆ. ನಮ್ಮ ಜನರನ್ನು ನಾನು ಮರೆಯಲು.. ಅವರನ್ನು ಬಿಡಲು.. ಸಾಧ್ಯವೇ ಇಲ್ಲ. ನಿಜಾ ದುಡ್ಡು ಜಾಸ್ತಿ ಸಿಗಬಹುದು.. ಹೆಸರು ಜಾಸ್ತಿ ಸಿಗಬಹುದು.. ಆದರೆ ಬಂದ ದಾರಿಯನ್ನು ಮರೆಯುವವನು ನಾನಲ್ಲ. 200 % ನಾನು ಕನ್ನಡದಲ್ಲಿ ಮುಂದಿನ ಚಿತ್ರ ಮಾಡುವುದು ಪಕ್ಕಾ. ಈಗಾಗಲೇ ಎರಡು ಮೂರು ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲಿಯೇ ಒಳ್ಳೆಯ ಸುದ್ದಿಯ ಜೊತೆ ಮತ್ತೆ ನಿಮ್ಮ ಮುಂದೆ ಬರ್ತಿನಿ'' ಎಂದು ಹೇಳಿದ್ಧಾರೆ.
ಮುಂದುವರೆದು ಈ ಕುರಿತು ಮಾತನಾಡಿರುವ ಹರ್ಷ ''ಬಾಲಿವುಡ್ನಲ್ಲಿ ನನಗೆ ನೀಡಿದ ಕೆಲಸ ನಾನು ಮಾಡಿದ್ದೇನೆ. ಫಲಿತಾಂಶದಿಂದ ಚಿತ್ರದ ನಿರ್ಮಾಪಕರು ಖುಷಿಯಾಗಿದ್ದಾರೆ. ಚಿತ್ರದ ನಾಯಕ ಕೂಡ ಖುಷಿಯಾಗಿದ್ದಾರೆ. ಇದಕ್ಕಿಂತ ನಿರ್ದೇಶಕನಾಗಿ ನನಗೆ ಇನ್ನೇನು ಬೇಕು..? ಇನ್ನು ''ಭಜರಂಗಿ 2'' ಚಿತ್ರದಿಂದ ಬಿಡುವು ಇರದೇ ಕೆಲಸ ಮಾಡುತ್ತಾ ಬಂದಿದ್ದೇನೆ. ''ಭಜರಂಗಿ 2'' ಬಿಡುಗಡೆಯಾದ ಒಂದು ತಿಂಗಳ ನಂತರ ''ವೇದಾ'' ಕೆಲಸ ಶುರು ಮಾಡಿದೆ. ''ವೇದಾ'' ಬಿಡುಗಡೆಯಾಗಿ ಎರಡು ತಿಂಗಳ ನಂತರ ತೆಲುಗಿನಲ್ಲಿ ''ಭೀಮ'' ಶುರು ಮಾಡಿದೆ. ''ಭೀಮ'' ಬಿಡುಗಡೆಯಾಗಿ ಮೂರು ನಾಲ್ಕು ತಿಂಗಳಾಗಿತ್ತು. ಅಷ್ಟರಲ್ಲಿ ''ಬಾಘಿ 4'' ಅವಕಾಶ ಸಿಕ್ತು. ಹೀಗಾಗಿ ಸ್ವಲ್ಪ ಆಯಾಸವಾಗಿದೆ. ಚೂರು ವಿಶ್ರಾಂತಿ ಪಡೆದು ಆ ನಂತರ ಮತ್ತೆ ಕೆಲಸಕ್ಕಿಳಿಯುವ ಆಲೋಚನೆ ಇದೆ, ಮರಳಿ ಕನ್ನಡ ಚಿತ್ರರಂಗಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ.
ಅಂದ್ಹಾಗೇ ''ಬಾಘಿ 4'' ಚಿತ್ರದ ನಂತರ ಹರ್ಷಗೆ ಹಿಂದಿ ಚಿತ್ರರಂಗದಲ್ಲಿ ಕೂಡ ಹಲವು ಅವಕಾಶಗಳು ಬರುತ್ತಿವೆ. ಹರ್ಷ ಅವರ ಕೆಲಸವನ್ನು ನೋಡಿ ಹಲವರು ಮೆಚ್ಚಿಕೊಂಡು ಹರ್ಷ ಜೊತೆ ಮಾತನಾಡಿದ್ದಾರೆ. ಕೆಲ ಯೋಜನೆಗಳು ಅಂತಿಮ ಕೂಡ ಆಗಿವೆ. ಆದರೆ ಆ ಕುರಿತು ಮಾತನಾಡುವಂತೆ ಇಲ್ಲ. ಯಾಕೆಂದರೆ ಅಗ್ರಿಮೆಂಟ್ ಪ್ರಕಾರ ಸುದ್ದಿಯನ್ನು ಹೇಳಬೇಕಾದವರೇ ಹೇಳಬೇಕು. ಈ ಹಿನ್ನೆಲೆ ಬಾಲಿವುಡ್ನ ಮುಂದಿನ ಚಿತ್ರದ ಕುರಿತು ಕೂಡ ಸರಿಯಾದ ಸಮಯಕ್ಕೆ ಮಾಹಿತಿ ಎಲ್ಲರಿಗೆ ಸಿಗುತ್ತೆ, ಆದರೆ ಅದಕ್ಕಿಂತ ಮೊದಲು ಕನ್ನಡ ಚಿತ್ರದ ಕೆಲಸ ಶುರುವಾಗುತ್ತೆ ಎಂದು ಕೂಡ ಹರ್ಷ ''ಫಿಲ್ಮಿಬೀಟ್ ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











