ಕಾಂತಾರ, ಪುಷ್ಪದಂತಹ ಸಿನಿಮಾಗಳು ಚಿತ್ರೋದ್ಯಮವನ್ನು ನಾಶಪಡಿಸುತ್ತಿವೆ ಎಂದಿದ್ದ ಅನುರಾಗ್ ಕಶ್ಯಪ್ ಮತ್ತೆ ಹೇಳಿದ್ದೇನು?
ಈ ಹಿಂದೆ ಕನ್ನಡದ ಸೂಪರ್ ಹಿಟ್ ಕಾಂತಾರ, ತೆಲುಗಿನ ಪುಷ್ಪ ಸಿನಿಮಾಗಳು ಚಿತ್ರೋದ್ಯಮವನ್ನು ಹಾಳುಮಾಡುತ್ತಿವೆ ಎಂದು ನೆಗೆಟಿವ್ ಕಾಮೆಂಟ್ ಮಾಡಿದ್ದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತೆ ಅವುಗಳ ಬಗ್ಗೆ ಮಾತನಾಡಿದ್ದಾರೆ. ಪ್ಯಾನ್ ಇಂಡಿಯಾ ಪದವನ್ನು ಹೇಗೆ ಸಿನಿಮಾವನ್ನು ವಿಸ್ತರಿಸುವ ಬದಲು ವ್ಯಾಪಾರಕ್ಕೆ ಬಳಸಲಾಗಿದೆ ಎಂದು ಹೇಳಿದ್ದಾರೆ.
ದಶಕಗಳಿಂದ ಹೆಚ್ಚು ಬಳಸುತ್ತಿರುವ "ಪ್ಯಾನ್ ಇಂಡಿಯಾ" ಎಂಬ ಪದವು ಹೊಸದಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದನ್ನು ಸಿನೆಮಾದ ಗಡಿಗಳನ್ನು ದೂರ ಮಾಡಲುವ ಬದಲು "ವ್ಯಾಪಾರ" ಉದ್ದೇಶಗಳಿಗಾಗಿ ಸಂಪೂರ್ಣವಾಗಿ ಬಳಸಲಾಗಿದೆ ಎಂದು ಅನುರಾಗ್ ಕಶ್ಯಪ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ ಡಿಸೆಂಬರ್ನಲ್ಲಿ, ಅನುರಾಗ್ ಕಶ್ಯಪ್ ಮತ್ತೊಬ್ಬ ಕಾಶ್ಮೀರಿ ಫೈಲ್ಸ್ ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರೊಂದಿಗೆ ಟ್ವಿಟರ್ನಲ್ಲಿ ವಾಗ್ವಾದ ನಡೆಸಿದ್ದರು. ಈ ವೇಳೆ "ಕಾಂತಾರ ಮತ್ತು ಪುಷ್ಪದಂತಹ ಚಲನಚಿತ್ರಗಳು ಚಿತ್ರೋದ್ಯಮವನ್ನು ನಾಶಪಡಿಸುತ್ತಿವೆ: ಅನುರಾಗ್ ಕಶ್ಯಪ್" ಎಂಬ ಶೀರ್ಷಿಕೆಯೊಂದಿಗೆ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದರು.
ಈ ಬಗ್ಗೆ ಇತ್ತೀಚೆಗೆ ಜೂಮ್ಗೆ ನೀಡಿದ ಸಂದರ್ಶನದಲ್ಲಿ ಅನುರಾಗ್ ಕಶ್ಯಪ್ ಅವರನ್ನು ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಅವರು, "ತಮ್ಮ ಉತ್ತರಗಳನ್ನು, ಹೇಳಿಕೆಗಳನ್ನು ಇಂದು, ನಾಳೆ ಅಥವಾ ನಂತರದ ದಿನಗಳಲ್ಲಿ ಮತ್ತೆ ಮತ್ತೆ ಮೌಲ್ಯೀಕರಿಸುವ ಅಗತ್ಯವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
"ಪ್ಯಾನ್ ಇಂಡಿಯಾ ಎಂಬ ಪದವನ್ನು ಸಂಪೂರ್ಣವಾಗಿ ವ್ಯಾಪಾರ ಉದ್ದೇಶಗಳಿಗಾಗಿ ಬಳಸಲಾಗಿತ್ತಿದೆ. ಇದರಿಂದ ಕೆಲವೇ ಕೆಲವು ಸೀಮಿತ ಜನರು ಮಾತ್ರ ಅದರಿಂದ ಪ್ರಯೋಜನ ಪಡೆಯುತ್ತಾರೆ. ನನಗೆ ಅನಿಸಿದ್ದನ್ನು ಹೇಳಿದ್ದೇನೆ. ಕಾಲಾನಂತರದಲ್ಲಿ, ನಾನು ಏನು ಹೇಳಲು ಪ್ರಯತ್ನಿಸುತ್ತಿದೆ ಎಂದು ಜನ ನೋಡುತ್ತಾರೆ ಅಥವಾ ನಾನು ತಪ್ಪು ಮಾಡಿದ್ದೇನೆ ಎಂಬುದನ್ನು ನಾನು ನೋಡುತ್ತೇನೆ. ನಾನು ಹಲವು ಉದಾಹರಣೆಗಳನ್ನು ನೋಡಿದ್ದೇನೆ. ಕೆಲಸ ಮಾಡಿದ ಪ್ರತಿಯೊಂದು ಪ್ಯಾನ್ ಇಂಡಿಯಾ ಚಲನಚಿತ್ರವು ಎಂದಿಗೂ ಪ್ಯಾನ್ ಇಂಡಿಯಾ ಆಗಿರುವುದಿಲ್ಲ" ಎಂದಿದ್ದಾರೆ.

ಕೆಜಿಎಫ್ ಪ್ಯಾನ್ ಇಂಡಿಯಾ ಆಗಿರಲಿಲ್ಲ!
"ಕೆಜಿಎಫ್ ಚಿತ್ರ ಬಿಡುಗಡೆಯಾದಾಗ, ಅದನ್ನು ಪ್ಯಾನ್ ಇಂಡಿಯಾ ಚಿತ್ರ ಎಂದು ಕರೆಯಲಾಗಲಿಲ್ಲ. ಕೆಜಿಎಫ್ ಅನ್ನು ಹಿಂದಿಯಲ್ಲಿ ಡಬ್ ಮಾಡಿ ಎಕ್ಸೆಲ್ ಎಂಟರ್ಟೈನ್ಮೆಂಟ್ ಬಿಡುಗಡೆ ಮಾಡಿದೆ. ಬಾಹುಬಲಿಯನ್ನು ಕೂಡ ಹಾಗೆ ಕರೆಯಲಿಲ್ಲ. ಅದನ್ನು ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ಪ್ಯಾನ್-ಇಂಡಿಯಾ ಪದವನ್ನು ವ್ಯಾಪಾರದ ಸಲುವಾಗಿ ರಚಿಸಲಾಗಿದೆ. ಸಿನಿಮಾವನ್ನು ವಿಸ್ತರಿಸುವ ಸಲುವಾಗಿಯಲ್ಲ" ಎಂದು ಮತ್ತೆ ಹೇಳಿದ್ದಾರೆ.
ಹೀಗೆ ಪ್ಯಾನ್ ಇಂಡಿಯಾ ಎಂದು ಹೇಳುವುದರಿಂದ ಕೆಲವರಿಗೆ ಮಾತ್ರ ಲಾಭ. ಪ್ಯಾನ್ ಇಂಡಿಯಾ ಹೆಸರಲ್ಲಿ ಹೆಚ್ಚಿನ ಬಜೆಟ್ ಪಡೆಯುತ್ತಿದ್ದಾರೆ. ಕೆಲವರು ಹೆಚ್ಚಿನ ಸಂಬಳ ಪಡೆಯುತ್ತಿದ್ದಾರೆ. ಆದರೆ ಸಿನಿಮಾಗೆ ಹೋಗುತ್ತಿರುವ ವೆಚ್ಚ ಎಷ್ಟು? ಪ್ಯಾನ್ ಇಂಡಿಯಾ ಎಂದು ಹೇಳುವ ಮೂಲಕ ಇದೊಂದು ಬಿಗ್ ಬಜೆಟ್ ಸಿನಿಮಾ ಎಂಬುದನ್ನು ತಿಳಿಸುತ್ತಾರೆ. ಆದರೆ ಕಥೆ ಎಲ್ಲಿರುತ್ತದೆ?" ಎಂದು ಪ್ರಶ್ನಿಸಿದ್ದಾರೆ.
ಮುಂದುವರಿದು ಕಬ್ಜಾ ಉದಾಹರಣೆ ನಿಡಿದ ನಿರ್ದೇಶಕ, ಯಶ್ ನಟನೆಯ ಕೆಜಿಎಫ್ ಚಿತ್ರ ಭರ್ಜರಿ ಹಿಟ್ ಆಗಿದ್ದರೂ, ಅಂತಹದ್ದೆ ನಿರೂಪಣೆಯ ಮೇಲೆ ಬಂದ ಇತರ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿವೆ. ಇದರಲ್ಲಿ ಉಪೇಂದ್ರ, ಶಿವರಾಜಕುಮಾರ್, ಕಿಚ್ಚ ಸುದೀಪ ನಟನೆಯ ಆಕ್ಷನ್ ಸಿನಿಮಾ ಕಬ್ಜಾ ಸೇರಿ ಹಲವು" ಎಂದು ಹೇಳಿದ್ದಾರೆ.
"ಒಂದು ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ, ಕೆಜಿಎಫ್ನಂತಹ ಒಂದು ಹಿಟ್ ನೀಡಲು ಎಷ್ಟು 'ಕಬ್ಜಾ'ಗಳು ಬಿಡುಗಡೆಯಾಗಲಿವೆ? ಹೆಚ್ಚಿನ ಬಜೆಟ್, ಒಂದೇ ರೀತಿಯ ಶಾಟ್ಗಳು, ಒಂದೇ ರೀತಿಯ ವಿಷಯಗಳು, ಎಲ್ಲವೂ ಪುನರಾವರ್ತನೆಯಾಗಲಿದೆ. ಒಂದು ಹಿಟ್ ಚಿತ್ರ ಗಳಿಸಿದ ಹಣ ಮತ್ತು ಇನ್ನೊಂದು ಚಿತ್ರ ಮಾಡಿದ ನಷ್ಟವನ್ನು ಹೋಲಿಕೆ ಮಾಡಿ. ನೀವು ಅವುಗಳನ್ನು ಹೊಲಿಕೆ ಮಾಡಿದಾಗ ಚಿತ್ರೋದ್ಯಮ ಎಷ್ಟು ಹಣ ಕಳೆದುಕೊಂಡಿದೆ ಎಂಬುದು ನಿಮಗೆ ತಿಳಿಯಲಿದೆ. ಅದೇ ರೀತಿ ತೆಲುಗಿನಲ್ಲಿ ಮತ್ತು ಎಲ್ಲಾ ಕಡೆ ನಡೆಯುತ್ತಿದೆ. ಹಾಗಾಗಿ ಈ ಪ್ರವೃತ್ತಿಗಳ ಬಗ್ಗೆ ನಾನು ತುಂಬಾ ಹೆದರುತ್ತೇನೆ" ಎಂದು ಆತಂಕ ಹೊರಹಾಕಿದ್ದಾರೆ.


Click it and Unblock the Notifications










