ಬ್ಯಾಕ್ ಟು ಬ್ಯಾಕ್ ಸೋಲು ಕಂಡಿದ್ದ ಆರ್ಸಿಬಿ ಗೆಲ್ಲಲು ಈತನೇ ಬರಬೇಕಾಯಿತು; ಹರ್ಷವ್ಯಕ್ತಪಡಿಸಿದ ಸುನಿ

ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇಪ್ಪತ್ತನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ ( ಏಪ್ರಿಲ್ 15 ) ಮುಖಾಮುಖಿಯಾದವು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕದ ಆಟದ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು 175 ರನ್ಗಳ ಪೈಪೋಟಿಯುತ ಗುರಿಯನ್ನು ನೀಡಿತು.
ಈ ಗುರಿಯನ್ನು ಬೆನ್ನತ್ತಲು ಯತ್ನಿಸಿದ ಡೆಲ್ಲಿ ಕ್ಯಾಪಿಟಲ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 151 ರನ್ ಕಲೆಹಾಕಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು 23 ರನ್ಗಳ ಅಂತರದ ಗೆಲುವನ್ನು ದಾಖಲಿಸಿ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಏರಿಕೆ ಕಂಡಿತು.
ಬ್ಯಾಟಿಂಗ್ ವಿಭಾಗದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿ ನೆರವಾದರೆ ಬೌಲಿಂಗ್ನಲ್ಲಿ ವೈಶಾಖ್ ವಿಜಯ್ಕುಮಾರ್ ಮೂರು ವಿಕೆಟ್ ಪಡೆದು ಗೆಲುವಿಗೆ ಪ್ರಮುಖ ಕಾರಣರಾದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಬ್ಯಾಟ್ಸ್ಮನ್ಗಳಾದ ಡೇವಿಡ್ ವಾರ್ನರ್ ಹಾಗೂ ಅಕ್ಷರ್ ಪಟೇಲ್ ಸೇರಿದಂತೆ ಲಲಿತ್ ಯಾದವ್ ಅವರ ವಿಕೆಟ್ಗಳನ್ನೂ ಸಹ ವಿಜಯ್ ಕುಮಾರ್ ವೈಶಾಖ್ ಕಬಳಿಸಿದರು.
ಹೀಗೆ ನಿನ್ನೆ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಸರೆಯಾದ ಬೌಲರ್ ವಿಜಯ್ ಕುಮಾರ್ ವೈಶಾಖ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದ್ದು, ಈತ ಬೆಂಗಳೂರು ಮೂಲದ ಕ್ರಿಕೆಟಿಗ, ಕನ್ನಡಿಗ ಎಂಬ ಪ್ರಶಂಸೆಗಳು ಜೋರಾಗಿವೆ. ಈ ಬಗ್ಗೆ ಕನ್ನಡ ಚಲನಚಿತ್ರರಂಗದ ನಿರ್ದೇಶಕ ಹಾಗೂ ಕ್ರಿಕೆಟ್ ಪ್ರೇಮಿ ಸಿಂಪಲ್ ಸುನಿ ಸಹ ಟ್ವೀಟ್ ಮಾಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲೋಕೆ ಕನ್ನಡಿಗನೇ ಬರಬೇಕಾಯಿತು ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.
"ಬೇರೆನಿಲ್ಲ ಬ್ಯಾಟಿಂಗ್ ಸುಮಾರಗಿತ್ತಲ್ಲ, ಅದಿಕ್ಕೆ ಬೌಲಿಂಗ್ ಚೆನ್ನಾಗಿತ್ತು, ನಾವ್ ಅವತ್ತಿಂದ ಹೇಳ್ತಿದ್ದೋ,ಒಬ್ಬ ಕನ್ನಡ ಪ್ಲೇಯರ್ ನ ಹಾಕೋಳ್ರೋ.. ದೆಸೆ ತಿರುಗುತ್ತೆ ಅಂತ ನೋಡಿ,Dummy ಬೌಲಿಂಗ್ ಅನ್ಕೊಂಡಿದ್ದೋರೆಲ್ಲಾ ಶಾಕ್ ಆಗೋರೆ. vyshak ವಿಜಯ 20/3, ಸಿರಾಜ್ ಬೆಂಕಿ 23/2,ಕೊಹ್ಲಿ 3 ಕ್ಯಾಚು.. ನಮ್ದೇ ಮ್ಯಾಚು. Rcb 174/6 ಹಾಗೂ Dc 151/9" ಎಂದು ಟ್ವೀಟ್ ಮಾಡಿರುವ ಸುನಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕನ್ನಡದ ಆಟಗಾರನನ್ನು ಹಾಕಿಕೊಂಡ್ರೆ ಪಕ್ಕಾ ಗೆಲ್ತಾರೆ ಅಂತ ಮೊದಲಿಂದ ಹೇಳುತ್ತಿದ್ದೆವು, ಈಗ ಅದು ನಡೆದಿದೆ ನೋಡಿ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇದಾದ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಸಿಂಪಲ್ ಸುನಿ ಒಂದೇ ದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡು ತಂಡಗಳ ಮೇಲೆ ಗೆದ್ದ ಹಾಗೆ ಆಯಿತು, ಒಂದು ಗೌತಮ್ ಎಂಪಿ ಆಗಿರೋ ಡೆಲ್ಲಿ ಕ್ಯಾಪಿಟಲ್ಸ್ ಮೇಲೆ, ಮತ್ತೊಂದು ಗಂಭೀರ್ ಮೆಂಟರ್ ಆಗಿರೋ ಲಕ್ನೋ ಸೂಪರ್ ಜೈಂಟ್ಸ್ ಮೇಲೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಳೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ಬಳಿಕ ಮೈದಾನದಲ್ಲಿದ್ದ ಆರ್ಸಿಬಿ ಅಭಿಮಾನಿಗಳತ್ತ ನೋಡಿ ಸೈಲೆಂಟಾಗಿರಿ ಎಂದು ಸಿಗ್ನಲ್ ಕೊಟ್ಟಿದ್ದ ಗಂಭೀರ್ ತಂಡಗಳು ಸೋತವು ಎಂದು ಸಿಂಪಲ್ ಸುನಿ ಸಂಭ್ರಮಿಸಿದ್ದಾರೆ.


Click it and Unblock the Notifications











