ಚಲನಚಿತ್ರ, ಕಿರುತೆರೆ ರಂಗದವರಿಗೆ ಆರ್ಥಿಕ ನೆರವು: ಅವಧಿ ವಿಸ್ತರಿಸಿದ ಸರ್ಕಾರ
ಸಂಕಷ್ಟದಲ್ಲಿದ್ದ ಚಿತ್ರರಂಗ ಹಾಗೂ ಕಿರುತೆರೆ ಕಲಾವಿದರು, ತಂತ್ರಜ್ಞರಿಗೆ ಸರ್ಕಾರವು ಆರ್ಥಿಕ ನೆರವು ಘೋಷಿಸಿತ್ತು. ಜೂನ್ 5 ರ ಒಳಗೆ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸುವಂತೆ ಈ ಹಿಂದೆಯೇ ಆದೇಶ ಹೊರಡಿಸಲಾಗಿತ್ತು. ಆ ನಂತರ ಅವಧಿ ವಿಸ್ತರಿಸಿ ಜುಲೈ 9 ರ ಒಳಗೆ ಅರ್ಜಿ ಸಲ್ಲಿಸುವಂತೆ ಹೇಳಲಾಯಿತು. ಈಗ ಮತ್ತೆ ಅವಧಿಯನ್ನು ವಿಸ್ತರಿಸಲಾಗಿದೆ.
ಸರ್ಕಾರದ ಹೊಸ ಆದೇಶದಂತೆ ಅರ್ಹ ಫಲಾನುಭವಿಗಳು ಜುಲೈ 31ರ ವರೆಗೆ ನೆರವಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹರಿಗೆ ಸರ್ಕಾರದ ವತಿಯಿಂದ ಮೂರು ಸಾವಿರ ರು. ಹಣ ನೆರವಿನ ರೂಪದಲ್ಲಿ ದೊರೆಯಲಿದೆ.
ಅವಧಿ ವಿಸ್ತರಣೆ ಬಳಿಕವೂ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಸೇವಾಸಿಂಧು ಪೋರ್ಟಲ್ನಲ್ಲೇ ಸಲ್ಲಿಸಬೇಕು. ಅರ್ಜಿ ಇಲ್ಲವೇ ಶಿಫಾರಸ್ಸು ಪತ್ರಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಯಾವುದೇ ಕಚೇರಿಗಳಲ್ಲಿ ಸ್ವೀಕರಿಸಲಾಗುವುದಿಲ್ಲ. ಅರ್ಜಿ ನಮೂನೆ ಮತ್ತು ಇನ್ನಿತರ ಷರತ್ತುಗಳಿಗಾಗಿ www.sevasindhu.karnataka.gov.in ಗೆ ಭೇಟಿ ನೀಡಿ ಪಡೆದುಕೊಳ್ಳಬಹುದು.

ರಾಜ್ಯದಲ್ಲಿ ಎರಡನೇ ಅಲೆಯ ವೇಳೆ ಸರ್ಕಾರ ವಿಧಿಸಿದ್ದ ನಿರ್ಬಂಧದಿಂದಾಗಿ ಬಾಧಿತರಾಗಿದ್ದ ಸಮಾಜ ವಿವಿಧ ವರ್ಗದವರಿಗೆ ಮುಖ್ಯಮಂತ್ರಿ ಯವರು 2021ರ ಜೂನ್ 3 ರಂದು ವಿಶೇಷ ಪರಿಹಾರದ ಎರಡನೇ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದರು. ಇದರಲ್ಲಿ ಚಲನಚಿತ್ರೋದ್ಯಮ ಹಾಗೂ ಕಿರುತೆರೆ ಮಾಧ್ಯರಮದಲ್ಲಿ ತೊಡಗಿಕೊಂಡಿರುವ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ತಲಾ ಮೂರು ಸಾವಿರ ರೂ. ಪರಿಹಾರವನ್ನು ನೀಡಲಾಗುತ್ತಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಪಿ.ಎಸ್. ಹರ್ಷ ಅವರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಇಚ್ಛಿಸುವ ಕಲಾವಿದರು ವೃತ್ತಿ ನಿರತರಾಗಿರಬೇಕು. 35 ವರ್ಷಕ್ಕೂ ಹೆಚ್ಚಿನ ವಯಸ್ಸಿನವರಾಗಿರಬೇಕು. ಕಲಾಸೇವೆ ಮಾಡಿರುವ ಕನಿಷ್ಟ ಒಂದು ಫೊಟೊ ಆದರೂ ಲಗತ್ತಿಸಬೇಕು. ಅರ್ಜಿ ಸಲ್ಲಿಸುವ ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರಬಾರದು ಹಾಗೂ ಯಾವುದೇ ಸರ್ಕಾರಿ ನೌಕರರಾಗಿರಬಾರದು.
2021/22 ನೇ ಸಾಲಿನ ಸಾಮಾನ್ಯ, ವಿಶೇಷ, ಗಿರಿಜನ ಉಪಯೋಜನೆಗಳಡಿ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಚಟುವಟಿಕೆಗೆಂದು ಧನಸಾಹಯ ಪಡೆದವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ. ಅರ್ಜಿ ಸಲ್ಲಿಸುವ ಕಲಾವಿದರು ತಮ್ಮ ಹೆಸರು, ವಿಳಾಸ, ಕಲಾ ಪ್ರಕಾರ, ಆಧಾರ್ ಸಂಖ್ಯೆ, ದೂರವಾಣಿ ಸಂಖ್ಯೆ, ಬ್ಯಾಂಕ್ ಸಂಖ್ಯೆ, ಆಧಾರ್ನ ಫೋಟೊ, ಬ್ಯಾಂಕ್ ಪಾಸ್ ಬುಕ್ನ ಫೋಟೊವನ್ನು ಲಗತ್ತಿಸಬೇಕು. ಕಲಾವಿದರು ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಸಲ್ಲಿಸಬಹುದು ಅಥವಾ ಜಿಲ್ಲೆಯ ಯಾವುದೇ ನಾಗರೀಕ ಸೇವಾ ಕೇಂದ್ರದ ಮೂಲಕ ಭರ್ತಿ ಮಾಡಬಹುದು.


Click it and Unblock the Notifications











