ಕೋರ್ಟ್ ಆದೇಶದಂತೆ ಕಂಗನಾ ವಿರುದ್ಧ FIR ದಾಖಲಿಸಿದ ಕ್ಯಾತಸಂದ್ರ ಪೊಲೀಸ್
ರೈತ ವಿರೋಧಿ ಹೇಳಿಕೆಗೆ ಸಂಬಂಧಪಟ್ಟಂತೆ ಕೋರ್ಟ್ ಆದೇಶದಂತೆ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ತುಮಕೂರು ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ತುಮಕೂರಿನ ಕ್ಯಾತಸಂದ್ರ ಪೊಲೀಸರು ಸೋಮವಾರ ನಟಿ ಕಂಗನಾ ವಿರುದ್ಧ ಕಲಂ 44, 108, 153, 153 (ಎ), 504 ಐಪಿಸಿ-1860ರ ಅಡಿ ಅಪರಾಧವೆಸಗಿರುತ್ತಾರೆ ಎಂದು ಎಫ್ ಐ ಆರ್ ದಾಖಲಿಸಿದ್ದಾರೆ.
ಕೇಂದ್ರ ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿದ ರೈತರನ್ನು ಪರೋಕ್ಷವಾಗಿ ಕಂಗನಾ ರಣಾವತ್ ಭಯೋತ್ಪಾದಕರಿಗೆ ಹೋಲಿಸಿದ್ದರು. ಕಂಗನಾ ಅವರ ಹೇಳಿಕೆ ಖಂಡಿಸಿ ತುಮಕೂರಿನ ವಕೀಲ ರಮೇಶ್ ನಾಯಕ ಕೋರ್ಟ್ನಲ್ಲಿ ಕೇಸ್ ದಾಖಲಿಸಿದ್ದರು.

ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ತಮಕೂರು ಜೆಎಂಎಫ್ಸಿ ನ್ಯಾಯಾಧೀಶ ವಿನೋದ್ ಬಾಲನಾಯಕ್ ಅಕ್ಟೋಬರ್ 9 ರಂದು ನಟಿಯ ವಿರುದ್ಧ ಎಫ್ ಐ ಆರ್ ದಾಖಲಿಸಲು ಆದೇಶಿಸಿದ್ದರು. ನ್ಯಾಯಾಧೀಶರ ಆದೇಶದಂತೆ ಈಗ ಕಂಗನಾ ವಿರುದ್ಧ ಕೇಸ್ ದಾಖಲಾಗಿದೆ.

ಕಂಗನಾ ರಣಾವತ್ ಏನೆಂದು ಟ್ವೀಟ್ ಮಾಡಿದ್ದರು?
'ಸಿಎಎಯಿಂದ ಒಬ್ಬರ ನಾಗರೀಕತೆಯೂ ಹೋಗಲಿಲ್ಲ, ಆದರೆ ಇವರು ರಕ್ತದ ನದಿಯನ್ನೇ ಹರಿಸಿದರು. ಅದೇ ಭಯೋತ್ಪಾದಕರು ಈಗ ಮತ್ತೆ ಪ್ರತಿಭಟಿಸುತ್ತಿದ್ದಾರೆ. ಮಲಗಿರುವವರನ್ನು ಎಬ್ಬಿಸಬಹುದು, ತಪ್ಪು ತಿಳಿದಿರುವವರಿಗೆ ಸರಿಯಾದ ಮಾಹಿತಿ ಕೊಡಬಹುದು, ಆದರೆ ಮಲಗಿರುವಂತೆ ನಟಿಸುತ್ತಿರುವವರಿಗೆ, ದಡ್ಡರಂತೆ ನಟಿಸುತ್ತಿರುವವರಿಗೆ ಏನು ತಿಳಿಹೇಳಿದರೆ ಏನು ಪ್ರಯೋಜನ?' ಎಂದು ಟ್ವೀಟ್ ಮಾಡಿದ್ದರು.
ಕಂಗನಾ ಟ್ವೀಟ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಮಾರನೇಯ ದಿನ ಮತ್ತೊಂದು ಟ್ವೀಟ್ ಮಾಡಿದ ಕಂಗನಾ ರಣೌತ್, 'ಪಪ್ಪುವಿನ ಸೇನೆ ಸುಳ್ಳು ಸುದ್ದಿಗಳನ್ನು ಇಟ್ಟುಕೊಂಡು ಗಲಾಟೆಗಳನ್ನು ಮಾಡುತ್ತಿದೆ' ಎಂದಿದ್ದಾರೆ. ನಾನು ರೈತರನ್ನು ಭಯೋತ್ಪಾದಕರು ಎಂದಿಲ್ಲ, ನಾನು ಹಾಗೆ ಹೇಳಿದ್ದಾಗಿ ಸಾಬೀತು ಮಾಡಿದರೆ ನಾನು ಕ್ಷಮೆ ಕೇಳುತ್ತೇನೆ'' ಎಂದಿದ್ದರು.


Click it and Unblock the Notifications











