'ಕೋಟಿಗೊಬ್ಬ 3' ಸಿನಿಮಾ ನಿರ್ಮಾಪಕ ಸೂರಪ್ಪಬಾಬು ವಿರುದ್ಧ ಎಫ್ಐಆರ್
'ಕೋಟಿಗೊಬ್ಬ-3' ಸಿನಿಮಾ ನಿರ್ಮಾಪಕ ಸೂರಪ್ಪಬಾಬು ವಿರುದ್ಧ ಚಿತ್ರದುರ್ಗ ನಗರ ಠಾಣೆಯಲ್ಲಿ ಸಿನಿಮಾ ವಿತರಕ ಖಾಝಾಫೀರ್ ದೂರು ದಾಖಲಿಸಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
'ಕೋಟಿಗೊಬ್ಬ 3' ಸಿನಿಮಾವನ್ನು ಚಿತ್ರದುರ್ಗ, ಬಳ್ಳಾರಿ, ದಾವಣೆಗೆರೆ ಜಿಲ್ಲೆಗಳಿಗೆ ವಿತರಣೆ ಮಾಡಲು 2 ಕೋಟಿ 90 ಲಕ್ಷ ರೂಪಾಯಿಗಳಿಗೆ ಖಾಝಾಫೀರ್ ಅವರು ನಿರ್ಮಾಪಕ ಸೂರಪ್ಪ ಬಾಬು ಬಳಿ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಖಾಝಾಫೀರ್ 60 ಲಕ್ಷ ರೂಪಾಯಿ ಹಣವನ್ನು ಮುಂಗಡವಾಗಿ ಸೂರಪ್ಪ ಬಾಬುಗೆ ಕೊಟ್ಟಿದ್ದರು. ಆದರೆ ಆ ಬಾಕಿ ಹಣ ನೀಡದ ಕಾರಣ ಸೂರಪ್ಪಬಾಬು ಸಿನಿಮಾ ವಿತರಣೆಯನ್ನು ಬೇರೆಯವರಿಗೆ ನೀಡಿ ಒಂದು ದಿನ ತಡವಾಗಿ ಸಿನಿಮಾ ಬಿಡುಗಡೆ ಮಾಡಬೇಕಾಯ್ತು.
ಇದೀಗ ಖಾಝಾಫೀರ್ ತಾವು ಸೂರಪ್ಪ ಬಾಬುಗೆ ನೀಡಿದ ಅಡ್ವಾನ್ಸ್ ಹಣ 60 ಲಕ್ಷವನ್ನು ವಾಪಸ್ ಕೇಳಿದ್ದು, ಹಣವನ್ನು ಕೊಡುವುದಿಲ್ಲ ಎಂದು ಸೂರಪ್ಪ ಬಾಬು ಹೇಳಿದ್ದಾರೆ.

ಶನಿವಾರ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖಾಝಾಫೀರ್ ''ನನ್ನ ಜೀವಕ್ಕೆ ತೊಂದರೆ ಆದರೆ ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಅವರೇ ಹೊಣೆ ಕೋಟಿಗೊಬ್ಬ-3 ಚಿತ್ರ ವಿತರಣೆಗಾಗಿ 1 ಕೋಟಿ 90 ಲಕ್ಷಕ್ಕೆ ಅಗ್ರಿಮೆಂಟ್ ಮಾಡಿಕೊಂಡಿದ್ದೆವು. ಅವರು ಮುಂಗಡವಾಗಿ 60 ಲಕ್ಷ ಹಣ ಪಡೆದಿದ್ದರು. ಆದರೆ ನಮಗೆ ಚಿತ್ರವೂ ನೀಡದೆ ಇತ್ತ ಹಣವೂ ನೀಡದೆ ಧಮ್ಕಿ ಹಾಕುತ್ತಿದ್ದಾರೆಂದು ಆರೋಪಿಸಿದರು. ಇದೀಗ ನಮ್ಮ ಜೀವಕ್ಕೆ ಪ್ರಾಣಭಯವಿದೆ ನಮಗೆ ರಕ್ಷಣೆ ಬೇಕು'' ಎಂದು ಹೇಳಿದ್ದಾರೆ.
''ನಮ್ಮ ಹಣ ನೀಡುವಂತೆ ಕೇಳಿದರೆ ವಾಪಾಸ್ ಕೊಡದೇ ದೌರ್ಜನ್ಯದಿಂದ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಟ ಸುದೀಪ್ ಅವರ ಅಭಿಮಾನಿಗಳನ್ನು ನನ್ನ ವಿರುದ್ಧ ಎತ್ತಿಕಟ್ಟಿ ಧಮಕಿ ಹಾಕುತ್ತಿದ್ದಾರೆ. ಅಲ್ಲದೇ ಪ್ರಾಣ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನಾನು ಚಿತ್ರದುರ್ಗ ನಗರ ಠಾಣೆಗೆ ದೂರು ಕೊಟ್ಟಿದ್ದೇನೆ'' ಎಂದು ಖಾಝಾಫೀರ್ ತಿಳಿಸಿದ್ದಾರೆ.
ಖಾಝಾಪೀರ್ ನೀಡಿರುವ ದೂರಿನ ಮೇರೆಗೆ ನಿರ್ಮಾಪಕ ಸೂರಪ್ಪಬಾಬು ವಿರುದ್ಧ ಚಿತ್ರದುರ್ಗ ನಗರ ಠಾಣೆಯಲ್ಲಿ ಐಪಿಸಿ ಕಲಂ 506 ಹಾಗೂ 504 ಅಡಿ ಎಫ್ಐಆರ್ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಕುಮಾರ್ ಫಿಲಮ್ಸ್ನ ವಿತರಕ ಕುಮಾರ್ ಸಹ ಜೊತೆಗಿದ್ದರು.
ಸೂರಪ್ಪ ಬಾಬು ಅವರೊಟ್ಟಿಗೆ ದೂರವಾಣಿ ಮೂಲಕ ಮಾತನಾಡಿದ ಖಾಝಾಫೀರ್ ಕೆಲವ ಆಡಿಯೋ ಕ್ಲಿಪ್ಗಳನ್ನು ಬಿಡುಗಡೆ ಮಾಡಿದ್ದು, ಆಡಿಯೋ ಕ್ಲಿಪ್ಗಳಲ್ಲಿ ಸೂರಪ್ಪ ಬಾಬು ಖಾಝಾಫೀರ್ಗೆ ಧಮ್ಕಿ ಹಾಕಿರುವುದು ಸ್ಪಷ್ಟವಾಗಿದೆ. ''ನಿನ್ನಂದ ಕರ್ನಾಟಕದಲ್ಲಿ ನನ್ನ ಮಾನ ಹೋಯಿತು. ಅವರಿವರ ಕಾಲು ಹಿಡಿಯುವಂತಾಯಿತು. ನಿನ್ನನ್ನು ಚಿತ್ರದುರ್ಗ ಬಿಡಿಸುತ್ತೇನೆ. ನಿನ್ನ ಹಣ ವಾಪಸ್ ಕೊಡುವುದಿಲ್ಲ'' ಎಂದಿದ್ದಾರೆ. ಹಾಗೂ ಅತ್ಯಂತ ಅವಾಚ್ಯ ಶಬ್ದಗಳನ್ನು ಬಳಸಿ ಬೈದಿದ್ದಾರೆ ಸೂರಪ್ಪ ಬಾಬು.
ಅಕ್ಟೋಬರ್ 14 ರಂದು 'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಆಗುವುದಕ್ಕಿತ್ತು. ಆದರೆ ಮೈಸೂರು ಹಾಗೂ ಚಿತ್ರದುರ್ಗದ ವಿತರಕರು ಸರಿಯಾದ ಸಮಯಕ್ಕೆ ಬಾಕಿ ಹಣ ಪಾವತಿ ಮಾಡದ ಕಾರಣ ಸಿನಿಮಾ ಬಿಡುಗಡೆ ಒಂದು ದಿನ ತಡವಾಯ್ತು. ಇದರಿಂದ ತಮಗೆ ಸುಮಾರು 8 ರಿಂದ 10 ಕೋಟಿ ನಷ್ಟವಾಗಿದೆ ಎಂದು ಸೂರಪ್ಪ ಬಾಬು ಆರೋಪಿಸಿದ್ದು, ತಾವು ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಈ ನಡುವೆ ವಿತರಕರೇ ಸೂರಪ್ಪ ಬಾಬು ವಿರುದ್ಧ ಬೆದರಿಕೆ ದೂರು ನೀಡಿದ್ದಾರೆ.
ಇಬ್ಬರು ವಿತರಕರು ಕೊನೆ ಕ್ಷಣದಲ್ಲಿ ಕೈಕೊಟ್ಟ ಕಾರಣ ವಿತರಣೆಯನ್ನು ಜಾಕ್ ಮಂಜು ಹಾಗೂ ಅವರ ಗೆಳೆಯರು ವಹಿಸಿಕೊಂಡು ಸಿನಿಮಾ ಬಿಡುಗಡೆ ಸುಗಮವಾಗಿ ಆಗುವಂತೆ ಮಾಡಿದ್ದಾರೆ. ಅಕ್ಟೋಬರ್ 15 ರಂದು ಬಿಡುಗಡೆ ಆದ ಸಿನಿಮಾ ಇದೀಗ ರಾಜ್ಯದಾದ್ಯಂತ ಪ್ರದರ್ಶನ ಕಾಣುತ್ತಿದ್ದು, ಅಭಿಮಾನಿಗಳು ಉತ್ಸಾಹದಿಂದ ಬಂದು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಯಶಸ್ಸು ಗಳಿಸುತ್ತಿದೆ.


Click it and Unblock the Notifications











