"ಮೊದ್ಲು ನಮ್ ತಾಯಿನ ನಾವ್ ಪ್ರೀತ್ಸೋದ್ ಕಲಿಯೋಣ.. ಕಾವೇರಿ ಬಗ್ಗೆ ಬೇರೆ ಯಾರಾದ್ರು ಮಾತಾಡಿದ್ರಾ?": ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸಿನಿಮಾಗಳ ಜೊತೆಗೆ ಹೊಸಬರ, ಆಪ್ತರ ಸಿನಿಮಾಗಳಿಗೆ ಬೆಂಬಲವಾಗಿ ನಿಲುತ್ತಾ ಬರ್ತಿದ್ದಾರೆ. ಇತ್ತೀಚೆಗೆ ಅಭಿಷೇಕ್ ಅಂಬರೀಶ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಪ್ರಚಾರಕ್ಕೆ ಕೈಜೋಡಿಸಿದ್ದರು. ಈಗ ಧನ್ವೀರ್ ನಟನೆಯ 'ಕೈವ' ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಚಿತ್ರದ ಟ್ರೈಲರ್ ರಿಲೀಸ್ ಈವೆಂಟ್ಗೆ ಹಾಜರಾಗಿ ಶುಭ ಕೋರಿದ್ದಾರೆ.
ಜಯತೀರ್ಥ ನಿರ್ದೇಶನದ 'ಕೈವ' ಸಿನಿಮಾ ಡಿಸೆಂಬರ್ 8ಕ್ಕೆ ರಿಲೀಸ್ ಆಗುತ್ತಿದೆ. ರಾರಾಜಿನಗರದ ಕೆ.ಎಲ್. ಇ ಮೈದಾನದಲ್ಲಿ ಬಹಳ ಅದ್ಧೂರಿಯಾಗಿ 'ಕೈವ' ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೀತು. ವೇದಿಕೆ ಪಕ್ಕದಲ್ಲೇ ದರ್ಶನ್ ನಟನೆಯ 'ಕಾಟೇರ' ಕಟೌಟ್ ನಿಲ್ಲಿಸಿ ಅಭಿಮಾನಿಗಳು ಸಂಭ್ರಮಿಸಿದರು. ನೆಚ್ಚಿನ ನಟನನ್ನು ನೋಡಲು ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದರು.

ವೇದಿಕೆ ಏರಿ ನಟ ದರ್ಶನ್ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದರು. 'ಕೈವ' ತಂಡಕ್ಕೆ ಶುಭಕೋರಿದ್ದರು. ದರ್ಶನ್ ವೇದಿಕೆ ಏರುವುದಕ್ಕೂ ಮುನ್ನ ಹಾಸ್ಯನಟ ಚಿಕ್ಕಣ್ಣ ವೇದಿಕೆಯಲ್ಲಿ ಮಾತನಾಡಿದ್ದರು. ದಯವಿಟ್ಟು ಎಲ್ಲರೂ ಕನ್ನಡ ಸಿನಿಮಾಗಳನ್ನು ನೋಡಿ ಎಂದು ಮನವಿ ಮಾಡಿದ್ದರು. ಚಿಕ್ಕಣ್ಣನ ಮಾತನ್ನು ಪ್ರಸ್ತಾಪಿಸಿ ದರ್ಶನ್ ಕೂಡ ಮೊದಲು ನಮ್ಮ "ಮೊದ್ಲು ನಮ್ ತಾಯಿನ ನಾವ್ ಪ್ರೀತ್ಸೋದ್ ಕಳಿಯೋಣ" ಎಂದರು.
"ಸ್ವಾರ್ಥ ಆದ್ರು ಅಂದ್ಕೊಳಿ, ಇಲ್ಲ ಹೊಟ್ಟೆ ಉರಿ ಅಂತ ಆದ್ರು ಅಂದ್ಕೊಳಿ, ಇನ್ನು ಏನು ಬೇಕಾದರೂ ಅಂದ್ಕೊಳಿ. ಈಗಾಗಲೇ ಅಕ್ಕಪಕ್ಕದ ರಾಜ್ಯದವರು ಜಕ್ಕೂರಿನಿಂದ ಹೊರಗಡೆ ಸಿನಿಮಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಅವರ ಸಿನಿಮಾ ಪ್ರಚಾರಕ್ಕೆ. ಮುಂದಿನ ಬಾರಿ ಇಲ್ಲಿಗೆ ಬಂದಿರುತ್ತಾರೆ. ನಾವು ಎಲ್ಲೋ ಹೊರಗಡೆ ಹೋಗಬೇಕಾಗಿರುತ್ತದೆ. ಅದು ಸರಿ ಅಂತೀರಾ? ಏನಂತೀರಾ?" ಎಂದು ದರ್ಶನ್ ಪ್ರಶ್ನಿಸಿದ್ದರು.
"ದಯಮಾಡಿ ಇದನ್ನು ಸ್ವಾರ್ಥ ಅಂದುಕೊಂಡ್ರು ಪರವಾಗಿಲ್ಲ. ಮೊದ್ಲು ನಮ್ಮ ತಾಯಿನ ನಾವ್ ಪ್ರೀತ್ಸೋದು ಕಲಿಯೋಣ. ಆಮೇಲೆ ಪಕ್ಕದವರ ತಾಯಿನಾ ನೋಡೋಣ. ನಾನು ಪ್ರೀತಿಸಬೇಡಿ ಎನ್ನುತ್ತಿಲ್ಲ. ತಪ್ಪದು. ಆದರೆ ನಮ್ಮ ತಾಯಿ ನಮಗೆ ದೊಡ್ಡವ್ರು. ಅದಕ್ಕೆ ಏನು ಬೇಕಾದ್ರು ಮಾಡೋಣ. ಯಾರಾದರೂ ನಮ್ಮ ತಾಯಿನ ಏನಾದ್ರೂ ಅಂದ್ರೆ ಸುಮ್ನೆ ಬಿಟ್ಟುಬಿಡ್ತೀವಾ? ಇಲ್ಲ ನಮ್ಮ ತಾಯಿ ಬಗ್ಗೆ ಏನಾದ್ರು ಹೇಳಿದಾಗ ಅವ್ರು ಒಬ್ರು ಮಾತಾಡ್ತಾರಾ?"
"ಇದೇ ಕಾವೇರಿ ಇಷ್ಯೂ.. ಅವತ್ತು ನಾವು ಮಾತನಾಡಿದಾಗ ದೊಡ್ಡದಾಗಿ ತಪ್ಪಾಗಿ ಕಾಣಿಸಿದ್ವಿ. ನಾವು ವಿಲನ್ಗಳೇ ಬಿಡಿ. ನಾವೇನು ಹೀರೋಗಳಲ್ಲ. ಆದ್ರು ನಿಯತ್ತು ಮಾತನಾಡ್ತೀವಿ. ಬೇರೆ ಯಾರಾದರೂ ಒಂದು ಮಾತು ಎತ್ತಿದ್ರಾ ಇದರ ಬಗ್ಗೆ? ಯಾಕೆ ಅವರಿಗೆಲ್ಲಾ ಸಂಬಂಧನೇ ಇಲ್ವಾ? ಬರೀ ಪ್ರಮೋಷನ್ ಅಷ್ಟೇನಾ? ಹಾಗಾಗಿ ದಯಮಾಡಿ ಕನ್ನಡ ಸಿನಿಮಾಗಳನ್ನು ಹರಸಿ, ಬೆಳೆಸಿ ಆರ್ಶೀವದಿಸಿ."
"ಚಿಕ್ಕಣ್ಣ ಹೇಳಿದ್ದಂತೆ ಎರಡೂವರೆ ಗಂಟೆ ಸಿನ್ಮಾದಲ್ಲಿ 10 ನಿಮಿಷ ಇಷ್ಟ ಆಗ್ಲಿಲ್ಲ ಅಂದ್ರೆ ಸಿನ್ಮಾನೆ ಇಷ್ಟ ಆಗ್ಲಿಲ್ಲ ಅನ್ನೋದು ತಪ್ಪು. ಪೂರ್ತಿ ಸಿನಿಮಾ ನೋಡಿದ್ರೆ ಅರ್ಥ ಆಗೋದು ಏನು ಸಿನಿಮಾ ಅಂತ. ನಮ್ಮ ಜ್ಯೂನಿಯರ್ 'ಬ್ಯಾಡ್ ಮ್ಯಾನರ್ಸ್' ಚಿತ್ರವನ್ನು ಹರಸಿದ್ರಿ, ಬೆಳೆಸಿದ್ರೆ ಥ್ಯಾಂಕ್ಸ್. ಈಗ 'ಕೈವ' ಬರ್ತಿದೆ ಹರಸಿ. ಚಿಕ್ಕಣ್ಣನ ಸಿನಿಮಾ ಕೂಡ ಹರಸಿ" ಎಂದರು.
'ಕೈವ' ಚಿತ್ರದಲ್ಲಿ ಧನ್ವೀರ್ ಜೋಡಿಯಾಗಿ ಮೇಘಾಶೆಟ್ಟಿ ನಟಿಸಿದ್ದಾರೆ. ಇನ್ನುಳಿದಂತೆ ದಿನಕರ್ ತೂಗುದೀಪ, ಜೆಕೆ, ನಂದ ಗೋಪಾಲ್, ಉಗ್ರಂ ಮಂಜು, ರಘು ಶಿವಮೊಗ್ಗ ತಾರಾಗಣದಲ್ಲಿದ್ದಾರೆ. ರವೀಂದ್ರ ಕುಮಾರ್ ನಿರ್ಮಾಣದ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ. ಶ್ವೇತಾ ಪ್ರಿಯಾ ನಾಯಕ್ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದಲ್ಲಿ 80ರ ದಶಕದ ಬೆಂಗಳೂರು ಭೂಗತಲೋಕದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ.


Click it and Unblock the Notifications











