ಮಂಡ್ಯ ಶಾಸಕ ಅಂಬರೀಶ್ ಗೆ ಇಷ್ಟೊಂದು ಅಸಡ್ಡೆ ಯಾಕೆ.?
''ನನ್ನ ದೌರ್ಭಾಗ್ಯ, ಕಾವೇರಿ ಸಮಸ್ಯೆ ನಾನು ಇಲ್ಲದೇ ಇರುವಾಗ ಆಗಿದೆ. ಹೋರಾಟದಲ್ಲಿ ನಾನು ಸಕ್ರಿಯವಾಗಿ ಪಾಲ್ಗೊಳ್ಳಲು ಆಗ್ಲಿಲ್ಲ ಅಂತ ನನ್ನ ಮನಸ್ಸಿನಲ್ಲೂ ಗಾಯ ಇದೆ. ಅದಕ್ಕೆ ನಾನು ಕರ್ನಾಟಕದ ಜನತೆಗೆ ಕ್ಷಮೆ ಕೇಳುತ್ತೇನೆ''
''ಸೆಪ್ಟೆಂಬರ್ 30 ರಂದು (ಶುಕ್ರವಾರ) ಸುಪ್ರೀಂ ಕೋರ್ಟ್ ನಿಂದ ತೀರ್ಪು ಬಂದ್ಮೇಲೆ ನಾನು ಮಂಡ್ಯಗೆ ಹೋಗುತ್ತೇನೆ'' - ಹೀಗಂತ ಅಮೇರಿಕಾದಿಂದ ಬೆಂಗಳೂರಿಗೆ ಬಂದ ತಕ್ಷಣ ದಿಢೀರ್ ಪ್ರೆಸ್ ಮೀಟ್ ಮಾಡಿ ಹೇಳಿದವರು ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್.! [ಇಷ್ಟುದಿನ ಅಮೇರಿಕಾದಲ್ಲಿ ಅಂಬಿ ಮೋಜು ಮಾಡ್ಲಿಲ್ಲ, ಮತ್ತೇನ್ ಮಾಡ್ತಿದ್ರು?]
ಆಡಿದ ಮಾತಿನಂತೆ ಅಂಬರೀಶ್ ಸೆಪ್ಟೆಂಬರ್ 30 ರಂದು ಮಂಡ್ಯಗೆ ಹೋಗಿಲ್ಲ. ಇನ್ನೂ 'ಕಾವೇರಿ' ಕುರಿತು ನಡೆಯುತ್ತಿರುವ ವಿಶೇಷ ವಿಧಾನ ಮಂಡಲ ಅಧಿವೇಶನದಲ್ಲೂ ಮಂಡ್ಯ ಕ್ಷೇತ್ರದ ಶಾಸಕನಾಗಿ ಸತತ ಎರಡನೇ ಬಾರಿಗೆ ಅಂಬರೀಶ್ ಗೈರಾಗಿದ್ದಾರೆ.!

ಮಾತು ತಪ್ಪಿದ ಅಂಬರೀಶ್
ರೆಬೆಲ್ ಸ್ಟಾರ್ ಅಂಬರೀಶ್ ನುಡಿದಂತೆ ನಡೆದಿಲ್ಲ. ಸೆಪ್ಟೆಂಬರ್ 30 ರಂದು ಮಂಡ್ಯಗೆ ಭೇಟಿ ನೀಡುತ್ತೇನೆ ಅಂತ ಹೇಳಿಕೆ ನೀಡಿದ್ದ ಅಂಬರೀಶ್, ಮಾತು ತಪ್ಪಿದ್ದಾರೆ. [ಕಾವೇರಿ ವಿಶೇಷ ಅಧಿವೇಶನ: 'ಮಂಡ್ಯದ ಗಂಡು' ಅಂಬರೀಶ್ ನಾಪತ್ತೆ]

ಇದುವರೆಗೂ ತಿರುಗಿ ನೋಡಿಲ್ಲ.!
ಕಾವೇರಿ ನದಿ ನೀರು ಹಂಚಿಕೆ ಕುರಿತಾಗಿ ಕಳೆದ ತಿಂಗಳಿನಿಂದ ಮಂಡ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದರೂ, ಸ್ಥಳೀಯ ಶಾಸಕನಾಗಿ ಅಂಬರೀಶ್ ಇಲ್ಲಿಯವರೆಗೂ ಮಂಡ್ಯ ಕಡೆ ತಿರುಗಿ ನೋಡಿಲ್ಲ.

ಈಗ ಬೆಂಗಳೂರಿನಲ್ಲಿ ಇದ್ದಾರಲ್ವಾ?
''ಅಮೇರಿಕಾದಲ್ಲಿ 'ಅಕ್ಕ' ಸಮ್ಮೇಳನ ಇತ್ತು. ಅದು ಮುಗಿದ ಬಳಿಕ ಆರೋಗ್ಯ ತಪಾಸಣೆ ಇದ್ದಿದ್ರಿಂದ ವಾಪಸ್ ಬರುವುದು ತಡವಾಯಿತು. ಹೀಗಾಗಿ ಕಾವೇರಿ ಹೋರಾಟದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ'' ಅಂತ ಹೇಳಿದ್ದ ಅಂಬರೀಶ್ ಈಗ ಬೆಂಗಳೂರಿನಲ್ಲಿ ಇದ್ದಾರಲ್ವಾ? ಈಗೇನು ಮಾಡ್ತಿದ್ದಾರೆ? ಎಂಬ ಪ್ರಶ್ನೆ ಮಂಡ್ಯ ಜನತೆಯನ್ನ ಕಾಡುತ್ತಿದೆ.

ವಿಶೇಷ ಅಧಿವೇಶನಕ್ಕೂ ಗೈರು.!
ಹೋರಾಟದಲ್ಲಿ ಭಾಗವಹಿಸಲಿಲ್ಲ ಅಂದರೂ, ಕಾವೇರಿ ಕೊಳ್ಳದ ಮಂಡ್ಯ ಕ್ಷೇತ್ರದ ಶಾಸಕನಾಗಿ ಇಂದು ನಡೆಯುತ್ತಿರುವ ವಿಧಾನ ಮಂಡಲ ವಿಶೇಷ ಅಧಿವೇಶನದಲ್ಲಿ ಅಂಬರೀಶ್ ಪಾಲ್ಗೊಳ್ಳಬೇಕಿತ್ತು. ಆದ್ರೆ, ಜನ ಪ್ರತಿನಿಧಿಯಾಗಿ ಅಂಬರೀಶ್ ತಮ್ಮ ಕರ್ತವ್ಯ ನಿರ್ವಹಿಸಿಲ್ಲ.

ಇಷ್ಟೊಂದು ಅಸಡ್ಡೆ ಯಾಕೆ?
ಕಾವೇರಿ ನೀರಿಗಾಗಿ ರೈತರು ಕಣ್ಣೀರು ಇಡುತ್ತಿದ್ದಾರೆ. ತೆರೆಮೇಲೆ 'ಮಂಡ್ಯದ ಗಂಡು' ಎಂದು ಕುಣಿದು ಕುಪ್ಪಳಿಸುವ ಅಂಬರೀಶ್ ಇಂದು ಅದೇ ಮಂಡ್ಯ ಜನತೆ ಬಗ್ಗೆ ಇಷ್ಟೊಂದು ಅಸಡ್ಡೆ ತೋರುತ್ತಿರುವುದು ಯಾಕೆ?

ಅಭಿಮಾನ ಇದೆ ಎಂದರೆ ಸಾಕೇ?
''ನಾನು ಇವತ್ತಿನ ಈ ಮಟ್ಟಕ್ಕೆ ಬರಬೇಕಾದರೆ ಮಂಡ್ಯ ಜನತೆಯ ಆಶೀರ್ವಾದ, ಅಭಿಮಾನ, ಪ್ರೀತಿ ಕಾರಣ. ಅವರ ಮೇಲೆ ಗೌರವ ನನಗೆ ಇದ್ದೇ ಇದೆ. ಹನುಮಂತನ ತರಹ ನಾನು ಎದೆ ಬಗಿದು ತೋರಿಸಲು ಸಾಧ್ಯವಿಲ್ಲ'' ಅಂತ ಹೇಳುವ ಅಂಬರೀಶ್ ಅಭಿಮಾನ ಬರೀ ಬಾಯಿ ಮಾತಿಗೆ ಮಾತ್ರ ಸೀಮಿತವಾಯಿತೇ?

ಮಂಡ್ಯ ಜನ 'ದಡ್ಮನೆ'ಯಿಂದ ಬಂದವರಲ್ಲ.!
''ಮಂಡ್ಯ ಕ್ಷೇತ್ರದ ಶಾಸಕರಾಗಿರುವ ಅಂಬರೀಶ್ ಗೆ ಜವಾಬ್ದಾರಿ ಇರಬೇಕು. ಸಚಿವ ಸ್ಥಾನ ಹೋದ್ಮೇಲೆ ವಿಧಾನಸಭೆ ಕಲಾಪಕ್ಕೂ ಹಾಜರಾಗದೆ, ಕ್ಷೇತ್ರದ ಕಡೆಯೂ ತಿರುಗಿ ನೋಡದೆ ಅಮೇರಿಕಾ ಸುತ್ತುವುದು ಸರಿಯಲ್ಲ. ಒಬ್ಬ ಜನಪ್ರತಿನಿಧಿಯಾಗಿ ಚಳುವಳಿಯಿಂದ ದೂರ ಉಳಿದದ್ದು ಸರಿಯಲ್ಲ. ವಿದೇಶದಿಂದ ಬಂದ ಮೇಲೆ 'ದೊಡ್ಮನೆ ಹುಡ್ಗ'ನ ಮೇಲಿನ ಪ್ರೀತಿಯಿಂದ 'ಸಾರಿ' ಕೇಳಿದರೆ ಅದನ್ನು ಕೇಳುವುದಕ್ಕೆ ನಾವು 'ದಡ್ಮನೆ'ಯಿಂದ ಬಂದವರೇ'' ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಪ್ರಶ್ನಿಸಿದ್ದಾರೆ. ['ದೊಡ್ಮನೆ'ಗಾಗಿ ಸಾರಿ ಕೇಳಿದರೆ ಕ್ಷಮಿಸಲು ನಾವು 'ದಡ್ಮನೆ'ಯವರೇ?]


Click it and Unblock the Notifications











