15 ವರ್ಷದಿಂದ ದೂರ ಇದ್ದೆ, ಅಪ್ಪ ನನ್ನ ಕ್ಷಮಿಸಿ ; ಕಣ್ಣೀರು ಹಾಕಿದ ರಾಜು ತಾಳಿಕೋಟೆ ಮಗ
ದುಡಿಮೆಯ ಬೆನ್ನತ್ತಿ ಹಲವು ಯುವಕ-ಯುವತಿಯರು ಹುಟ್ಟಿದ ಊರನ್ನು ತೊರೆದು ವಲಸೆ ಹೋಗುತ್ತಾರೆ. ಕೆಲಸ ಮಾಡುತ್ತಾರೆ. ಬದುಕು ರೂಪಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಆದರೆ ಹೀಗೆ ಚೆಂದದ ಬದುಕು ಕಟ್ಟಿಕೊಳ್ಳುವ ಭರದಲ್ಲಿ ತಂದೆ-ತಾಯಿಯ ಪ್ರೀತಿಯಿಂದ ಇವರು ವಂಚಿತರಾಗುತ್ತಾರೆ. ಬದುಕಿದ್ದಾಗ ಅವರ ಜೊತೆ ಸಮಯ ಕಳೆಯಲು ಸಾಧ್ಯವಾಗದೆ ಸದಾ ಕಾಲ ಕೆಲಸದಲ್ಲಿಯೇ ಮಗ್ನರಾಗುತ್ತಾರೆ. ಆದರೆ.. ವೃದ್ಧಾಪ್ಯದಲ್ಲಿರುವ ಹೆತ್ತವರಿಗೆ...
ತಮ್ಮ ಮಕ್ಕಳ ಸಂಪಾದನೆಗಿಂತ ಹೆಚ್ಚಾಗಿ ಅವರ ಜೊತೆಗಿನ ಒಂದಿಷ್ಟು ಪ್ರೀತಿಯ ಮಾತು, ಕಾಳಜಿಯ ಅವಶ್ಯಕತೆ ಇರುತ್ತೆ. ದುಡಿಯುವ ಮಕ್ಕಳು ತಮ್ಮ ಬದುಕನ್ನು ಉತ್ತಮಗೊಳಿಸುವ ಪ್ರಯತ್ನದಲ್ಲಿ ಮನೆಯಲ್ಲಿರುವ ಈ ಪ್ರೀತಿಯ ಮಹತ್ವ ಅರಿತುಕೊಳ್ಳುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ರಾಜು ತಾಳಿಕೋಟೆ ಅವರ ಮಗ ದಾವಲ್ ತಂದೆಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಅಪ್ಪಾ ನನ್ನ ಕ್ಷಮಿಸಿ ಎಂದು ಹೇಳಿದ್ದಾರೆ.

ಹೌದು, ನಗುವಿನ ಅಲೆಯಲ್ಲಿ ತೇಲಿಸಿ ಕರುನಾಡಿನ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದ ಕಲಿಯುಗದ ಕುಡುಗ ಎಂದೇ ಜನಪ್ರಿಯರಾಗಿದ್ದ ರಾಜು ತಾಳಿಕೋಟೆ ನಿನ್ನೆ ಮರೆಯಾಗಿದ್ದಾರೆ. ಇವರ ಈ ಹಠಾತ್ ನಿಧನದಿಂದ ಚಿತ್ರರಂಗಕ್ಕೆ ಮತ್ತು ರಂಗಭೂಮಿಗೆ ಬರಸಿಡಿಲು ಬಡಿದಂತಾಗಿದೆ.
ಇಂದು (ಅಕ್ಟೋಬರ್ 14 ) ಉತ್ತರ ಕರ್ನಾಟಕದ ದೈತ್ಯ ಪ್ರತಿಭೆ ಮಣ್ಣಲ್ಲಿ ಮಣ್ಣಾಗಿದೆ. ಇಡೀ ಚಿತ್ರರಂಗ ಮತ್ತು ವೃತ್ತಿ ರಂಗಭೂಮಿ ಅಗಲಿದ ಧ್ರುವತಾರೆಗೆ ನಮನ ಸಲ್ಲಿಸಿದೆ. ಇದೇ ಸಮಯದಲ್ಲಿ ತಮ್ಮ ತಂದೆಯ ಕುರಿತು ಮಾತನಾಡುತ್ತಾ ದಾವಲ್ ತಾಳಿಕೋಟೆ ಕಣ್ಣೀರು ಹಾಕಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿರುವ ದಾವಲ್ ತಾಳಿಕೋಟೆ ನಾನು ಕಳೆದ 15-20 ವರ್ಷಗಳಿಂದ ಸದಾ ಅವರಿಂದ ದೂರ ಉಳಿದಿದ್ದೆ. ಅವರ ಜೊತೆ ಹೆಚ್ಚಿನ ಸಮಯವನ್ನು ಕಳೆಯಲು ನನ್ನಿಂದ ಸಾಧ್ಯವಾಗಲೇ ಇಲ್ಲ ಎಂದು ಹೇಳಿದ್ದಾರೆ.
ಕೇವಲ ದುಡಿಯುವುದು, ಕಂಪನಿ, ಕಲಾವಿದರು ಹಂಗಿರಬೇಕು. ಪಾತ್ರ ಮಾಡಿ ಅವರ ಜೊತೆ ಇರಿ, ಬೆರೆಯಿರಿ, ಎಂದು ಹೇಳಿ ನಮ್ಮನ್ನು ಕಲಾವಿದರ ಜೊತೆಯಲ್ಲಿಯೇ ಬೆಳೆಸಿದರು ಎಂದು ಹೇಳಿರುವ ದಾವಲ್ ಕೊನೆಯವರೆಗೆ ಅವರ ಜೊತೆ ಇರಲು ಆಗಲೇ ಇಲ್ಲ ಎಂದು ಹೇಳಿದ್ದಾರೆ. ಅವರಿಗೆ ಮಕ್ಕಳ ಪ್ರೀತಿಯನ್ನು ಕೊಡಲು ಸಾಧ್ಯವಾಗಲೇ ಇಲ್ಲ. ದಯವಿಟ್ಟು ನಮ್ಮನ್ನು ಕ್ಷಮಿಸಿ ಅಪ್ಪಾ ಎಂದು ಕಣ್ಣೀರು ಹಾಕಿದ್ದಾರೆ.

ಬೆಳಗಾವಿಯಲ್ಲಿದ್ದಾಗ ನನಗೆ ಈ ಆಘಾತಕಾರಿ ವಿಚಾರ ಗೊತ್ತಾಯ್ತು, ಅಲ್ಲಿಂದ ಹುಬ್ಬಳ್ಳಿಗೆ ಬಂದು, ಹುಬ್ಬಳ್ಳಿಯಿಂದ ಉಡುಪಿಗೆ ಹೋದೆ. ನಾನು ಹೋಗುವಾಗ ಕೂಡ ಅವರು ಕೈ ಕಾಲು ಆಡಿಸ್ತಿದ್ದರು ಎಂದು ಹೇಳಿರುವ ದಾವಲ್ ಆಸ್ಪತ್ರೆಗೆ ಹೋದ ತಕ್ಷಣ ವೈದ್ಯರು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು ಎಂದು ಹೇಳಿದ್ದಾರೆ. ಸಂಜೆ ನಾಲ್ಕೂವರೆ ಗಂಟೆಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು ಎಂದು ಹೇಳಿದ್ದಾರೆ.
ಕೊನೆಯವರೆಗೂ ದುಡಿತಾನೇ ಇರಬೇಕು ಎನ್ನುವ ಆಸೆ ಇತ್ತು ಅವರಿಗೆ.ನಾನು ಯಾವಾಗಲೂ ವೃತ್ತಿಯಲ್ಲಿಯೇ ಇರಬೇಕು, ಸಾಯೋ ಸಮಯದಲ್ಲಿ ಕೂಡ ಬಣ್ಣ ಹಚ್ಚಿಕೊಂಡೆ ಸಾಯಬೇಕು ಎಂದು ಹೇಳುತ್ತಿದ್ದರು. ಅವರ ಆಸೆಯಂತೆಯೇ ಆಗಿದೆ. ಬಣ್ಣ ಹಚ್ಚಿಕೊಂಡಾಗಲೇ ಆ ಭಗವಂತ ಅವರನ್ನು ಕರೆದುಕೊಂಡಿದ್ದಾನೆ ಎಂದು ಕೂಡ ದಾವಲ್ ಮಾಧ್ಯಮದವರ ಎದುರು ಹೇಳಿದ್ದಾರೆ.
ಇಂದು (ಅಕ್ಟೋಬರ್ 14 ) ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿರುವ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆದಿದೆ. ಅಂತ್ಯಕ್ರಿಯೆ ವೇಳೆ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಜು ಬಸಯ್ಯ ಸೇರಿ ಹಲವರು ರಾಜು ತಾಳಿಕೋಟೆ ಅವರ ಅಂತಿಮ ದರ್ಶನವನ್ನು ಪಡೆದರು.


Click it and Unblock the Notifications











