ಮರಿ ಟೈಗರ್ಗೆ ಬಿಗ್ ಬಾಸ್ ಆನೆ ಸವಾಲು, ಬಲರಾಮನ ದಿನಗಳು ಚಿತ್ರದಲ್ಲಿ ವಿನೋದ್ಗೆ ವಿನಯ್ ಗೌಡ್ ವಿಲನ್..!
ಬೇರೆ ಭಾಷೆಯ ಕಥೆ ಗೊತ್ತಿಲ್ಲ. ಆದರೆ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮ ಹಲವರ ಬದುಕಿನ ದಿಕ್ಕನ್ನು ಬದಲಿಸಿದೆ. ಈ ಕಾರ್ಯಕ್ರಮದಲ್ಲಿ ಮಿಂಚಿದವರಲ್ಲಿ ಇವತ್ತು ಅನೇಕರು ಕರುನಾಡಿನೆಲ್ಲೆಡೆ ಮನೆ ಮಾತಾಗಿದ್ದಾರೆ. ಕಿರುತೆರೆ-ಬೆಳ್ಳಿತೆರೆಯಲ್ಲಿ ಬದುಕು ರೂಪಿಸಿಕೊಂಡಿದ್ದಾರೆ. ಆ ಪೈಕಿ ವಿನಯ್ ಗೌಡ ಕೂಡ ಒಬ್ಬರು.
ಹೌದು. ಹಾಗೇ ನೋಡಿದರೆ ವಿನಯ್ ಗೌಡ ಕಿರುತೆರೆಗೆ 2012ರಲ್ಲಿಯೇ ಬಂದಿದ್ದರು. ಹಲವು ಕಡೆ ತಮ್ಮ ಅದೃಷ್ಟದ ಪರೀಕ್ಷೆಯನ್ನು ಕೂಡ ಮಾಡಿಕೊಂಡಿದ್ದರು. ಆದರೆ, ಹರಹರ ಮಹಾದೇವ ಧಾರಾವಾಹಿ ಹೊರತು ಪಡಿಸಿದರೆ ವಿನಯ್ ಗೌಡಗೆ ಬೇರೆ ಯಾವ ಪಾತ್ರ ಕೂಡ ಇವರಿಗೆ ಹೆಸರನ್ನು ತಂದು ಕೊಡಲಿಲ್ಲ. ಹಾಗಂಥ ವಿನಯ್ ಗೌಡ ಸುಮ್ಮನೆ ಕೂಡ ಕುಳಿತುಕೊಂಡಿರಲಿಲ್ಲ. ಕಿರುತೆರೆಯ ಜೊತೆ ಬೆಳ್ಳಿ ತೆರೆಯಲ್ಲಿ ಕೂಡ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಳ್ಳುತ್ತಿದ್ದರು. ಪೊಗರು, ಶಿವಾಜಿ ಸುರತ್ಕಲ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರು. ಆದರೆ ಇದ್ಯಾವದರಿಂದ ಸಿಗದ ಜನಪ್ರಿಯತೆ ವಿನಯ್ ಗೌಡ ಅವರಿಗೆ ಬಿಗ್ ಬಾಸ್ ತಂದು ಕೊಡ್ತು. ಆನೆ ಎಂಬ ಸಿಂಹಾಸನದ ಮೇಲೆ ಕೂಡ ಕೂರಿಸಿತು.

ಇಂಥಾ ವಿನಯ್ ಗೌಡ ಈಗ ಕನ್ನಡ ಚಿತ್ರರಂಗದ ಮರಿ ಟೈಗರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಬಲರಾಮನ ದಿನಗಳು' ಚಿತ್ರದಲ್ಲಿ ಅಬ್ಬರಿಸಿ ಬೊಬ್ಬಿರಿಯಲು ಅಣಿಯಾಗಿದ್ದಾರೆ. ವಿನೋದ್ ಪ್ರಭಾಕರ್ ಅವರ ಎದುರು ಸರಿಸಮಾನವಾದ ಪಾತ್ರದಲ್ಲಿ ಧಗಧಗಿಸಲಿದ್ದಾರೆ. ಈ ಕುರಿತು ತಮ್ಮ ಖುಷಿಯನ್ನು ಕೂಡ ಹಂಚಿಕೊಂಡಿರುವ ವಿನಯ್ ಗೌಡ ಬಲರಾಮನ ದಿನಗಳು ಚಿತ್ರದ ನಿರ್ಮಾಪಕರು ಶ್ರೇಯಸ್ ನನ್ನನ್ನು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನೋಡಿದ್ದರು.ಆಗ 'ಕತ್ತಿ' ಎನ್ನುವ ಪಾತ್ರಕ್ಕೆ ನಾನೇ ಸೂಕ್ತ ಎಂದು ನಿರ್ದೇಶಕ ಕೆ.ಎಂ.ಚೈತನ್ಯ ಅವರಿಗೆ ರೆಫರ್ ಮಾಡಿದರು, ನಿರ್ದೇಶಕರು ಕೂಡ ನನ್ನನ್ನು ಒಪ್ಪಿಕೊಂಡರು, ಅಲ್ಲಿಂದ ಬಲರಾಮನ ದಿನಗಳು ಪ್ರಯಾಣ ಆರಂಭವಾಯ್ತು ಎಂದು ಹೇಳಿದ್ದಾರೆ.
ಅಂದ್ಹಾಗೇ ವಿನಯ್ ಗೌಡ ಅವರಿಗೆ ಮೊದಲಿಂದ ವಿಲನ್ ಪಾತ್ರಗಳತ್ತ ಆಕರ್ಷಿತರಾಗುತ್ತಾ ಬಂದವರು. ತಮಿಳಿನ ರಘುವರನ್, ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕ ವಜ್ರಮುನಿ ವಿನಯ್ ಅವರಿಗೆ ಮೊದಲಿಂದ ತುಂಬಾ ಇಷ್ಟ. ಇನ್ನು ನಾಯಕ ಆದರೆ ಅಲ್ಲಿ ಚೌಕಟ್ಟು ಇರುತ್ತೆ. ಒಳ್ಳೆ ಮಗ, ಒಳ್ಳೆ ಗಂಡ, ಒಳ್ಳೆ ಬಾಯ್ಫ್ರೆಂಡ್ ಎಂಬ ಆಲೋಚನೆ ಇರುತ್ತೆ. ಆದರೆ ವಿಲನ್ ಪಾತ್ರಗಳಿಗೆ ಯಾವ ಇತಿಮಿತಿ ಇರುವುದಿಲ್ಲ. ಹೀಗಾಗಿಯೇ ಖಳನಾಯಕನ ಪಾತ್ರ ನನಗೆ ಅಚ್ಚು ಮೆಚ್ಚು ಎನ್ನುವ ವಿನಯ್ ಗೌಡ ಅವರಿಗೆ ಮುಂದೆ ಚಿತ್ರರಂಗದಲ್ಲಿ ಖ್ಯಾತ ವಿಲನ್ ಎಂದು ಕರೆಸಿಕೊಳ್ಳುವ ಹೆಬ್ಬಯಕೆ.
ಇನ್ನುಳಿದಂತೆ 20ರಿಂದ 25 ದಿನಗಳ ಚಿತ್ರೀಕರಣ ಇನ್ನು ಮುಕ್ತಾಯವಾದರೆ ವಿನಯ್ ಗೌಡ ಈ ಚಿತ್ರದ ಕೆಲಸವನ್ನು ಮುಗಿಸಿದಂತೆಯೇ. ಸದ್ಯ ಶೇಕಡಾ 50 ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯದಲ್ಲಿಯೇ ಹೈವೋಲ್ಟೇಜ್ ಸಾಹಸ ಸನ್ನಿವೇಶಗಳ ಚಿತ್ರೀಕರಣವನ್ನು ಮಾಡಲಿದೆ. ಅದು ಮುಗಿದರೆ ಬಹುತೇಕ ಚಿತ್ರದ ಚಿತ್ರೀಕರಣ ಮುಕ್ತಾಯವಾಗಲಿದೆ.
ಇನ್ನು ಈ ಚಿತ್ರವನ್ನು ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ನಿರ್ಮಾಣ ಮಾಡುತ್ತಿದ್ದಾರೆ. ಬಲರಾಮನ ದಿನಗಳು ಚಿತ್ರ ವಿನೋದ್ ಪ್ರಭಾಕರ್ ಅಭಿನಯದ 25ನೇ ಚಿತ್ರ ಎನ್ನುವುದು ವಿಶೇಷ. ಅಪ್ಪು ಅಭಿನಯದ ರಾಜಕುಮಾರ ಮತ್ತು ಜೇಮ್ಸ್ನಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾ ಆನಂದ್ ಈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ತಮಿಳಿನಲ್ಲಿ ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಸಂಗೀತ ನೀಡಿದ ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತವನ್ನು ನೀಡುತ್ತಿದ್ದಾರೆ.ಇದು ಇವರ ಸಂಗೀತ ನಿರ್ದೇಶನದ 51ನೇ ಸಿನಿಮಾ ಎನ್ನುವುದು ಮತ್ತೊಂದು ವಿಶೇಷ. ಸದ್ಯ ವಿನಯ್ ಗೌಡ ಅವರ ಲುಕ್ ರಿವೀಲ್ ಆಗಿದ್ದು ಚಿತ್ರದಲ್ಲಿ ಆಶೀಷ್ ವಿದ್ಯಾರ್ಥಿ ಮತ್ತು ಅತುಲ್ ಕುಲಕರ್ಣಿ ಕೂಡ ಇದ್ದಾರೆ.


Click it and Unblock the Notifications











