'ಗುರು ಶಿಷ್ಯರು' ಸಿನಿಮಾ ನೋಡಿ ಭೇಷ್ ಎಂದ ಯಡಿಯೂರಪ್ಪ
ಯಡಿಯೂರಪ್ಪ ಸಿಎಂ ಖುರ್ಚಿಯಿಂದ ಇಳಿದ ಬಳಿಕ ಪಕ್ಷ ಸಂಘಟನೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಒಂದಿಷ್ಟು ಓದು, ಓಡಾಟಗಳಲ್ಲಿಯೂ ತೊಡಗಿಕೊಂಡಿರುವುದಾಗಿ ಕೆಲ ತಿಂಗಳ ಹಿಂದೊಮ್ಮೆ ಹೇಳಿದ್ದರು.
ಯಡಿಯೂರಪ್ಪ ಅವರು ಇದೀಗ ಕನ್ನಡದ ಹೊಸ ಸಿನಿಮಾ 'ಗುರು ಶಿಷ್ಯರು' ವೀಕ್ಷಿಸಿದ್ದಾರೆ. ಶರಣ್ ನಟಿಸಿರುವ 'ಗುರು ಶಿಷ್ಯರು' ಸಿನಿಮಾ ಶಿಕ್ಷನ-ವಿದ್ಯಾರ್ಥಿ ನಡುವಿನ ಭಾವುಕ ಬಂಧದ ಜೊತೆಗೆ ಖೋ-ಖೋ ಆಟದ ಮಹತ್ವವನ್ನು ಸಾರುವ ಕತೆಯನ್ನು ಒಳಗೊಂಡಿದೆ.
ಯಡಿಯೂರಪ್ಪನವರು ಒರಾಯಿನ್ ಮಾಲ್ನಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಅವರಿಗೆ ಸಚಿವ ಆರ್.ಅಶೋಕ್ ಸಹ ಸಾಥ್ ನೀಡಿದ್ದಾರೆ. ಜೊತೆಗೆ ಇನ್ನೂ ಕೆಲವು ಬಿಜೆಪಿ ಮುಖಂಡರುಗಳು ಸಹ ಬಿಎಸ್ವೈ ಜೊತೆಗಿದ್ದರು.
ಕೆಲ ದಿನಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಸಹ 'ಗುರು ಶಿಷ್ಯರು' ಸಿನಿಮಾ ತಂಡವನ್ನು ಅಭಿನಂದಿಸಿದ್ದರು. ಗ್ರಾಮೀಣ ಕ್ರೀಡೆಯ ಮಹತ್ವ ಸಾರುವ ಸಿನಿಮಾ ಮಾಡಿದ್ದಕ್ಕೆ ಚಿತ್ರತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ದಿನ ಸಚಿವ ಆರ್.ಅಶೋಕ್ ಸೇರಿದಂತೆ ಇನ್ನೂ ಕೆಲವು ರಾಜಕಾರಣಿಗಳನ್ನು ಸಿನಿಮಾ ವೀಕ್ಷಣೆಗೆ ಚಿತ್ರತಂಡ ಆಹ್ವಾನಿಸಿತ್ತು.

'ಗುರು ಶಿಷ್ಯರು' ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ನೆಲದ ಕತೆಯನ್ನು ಒಳಗೊಂಡಿದೆ ಎಂದು ಕೆಲವರು ವಿಮರ್ಶಿಸಿದ್ದಾರೆ. ಸರಳ ಕತೆಯನ್ನು ಬಹಳ ಸುಂದರವಾಗಿ ನಿರೂಪಣೆ ಮಾಡಲಾಗಿದೆ ಎಂದು ಹಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ಗರು ಶಿಷ್ಯರು' ಸಿನಿಮಾದಲ್ಲಿ ಶರಣ್ ದೈಹಿಕ ಶಿಕ್ಷಕನ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮ ಗುರುಗಳ ಬಲವಂತದಿಂದ ಹಳ್ಳಿಯೊಂದಕ್ಕೆ ದೈಹಿಕ ಶಿಕ್ಷಕನಾಗಿ ಬರುವ ಶರಣ್, ಬಳಿಕ ಊರನ್ನು ದುಷ್ಟರ ಕೈಯಿಂದ ಬಿಡಿಸಿಕೊಳ್ಳುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಖೋ-ಖೋ ಆಡುವ ವಿದ್ಯಾರ್ಥಿಗಳ ಪಾತ್ರದಲ್ಲಿ ಶರಣ್ ಪುತ್ರ, ನಟ ಪ್ರೇಮ್ ಪುತ್ರ, ಬುಲೆಟ್ ಪ್ರಕಾಶ್ ಪುತ್ರ, ಶಾಸಕ ರಾಜು ಗೌಡ ಪುತ್ರ ಹೀಗೆ ನಟರ ಮಕ್ಕಳೇ ನಟಿಸಿರುವುದು ವಿಶೇಷ.
'ಗುರು ಶಿಷ್ಯರು' ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ನಿರ್ದೇಶನ ಮಾಡಿರುವುದು ಜಡೇಶ್ ಕೆ ಹಂಪಿ, ಸಿನಿಮಾಕ್ಕೆ ನಟ ಶರಣ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಒಟ್ಟಿಗೆ ಬಂಡವಾಳ ಹೂಡಿದ್ದಾರೆ.


Click it and Unblock the Notifications











