ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಸಾಮಾಜಿಕ ಜಾಲತಾಣದಲ್ಲಿ, ಟಿವಿಗಳಲ್ಲಿ ಸಿದ್ದರಾಮಯ್ಯ ಅವರನ್ನು ಕೇಂದ್ರವಾಗಿಟ್ಟುಕೊಂಡು 'ಮೊಟ್ಟೆ', 'ಮಾಂಸಾಹಾರ' ವಿಷಯ ಚರ್ಚೆ ಆಗುತ್ತಿರುವಾಗ ಸಿದ್ದರಾಮಯ್ಯ ಆರಾಮವಾಗಿ ಇಂದು ಒರಾಯನ್ ಮಾಲ್ನಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಸಿನಿಮಾ 'ಡೊಳ್ಳು' ವೀಕ್ಷಿಸಿದರು.
'ಡೊಳ್ಳು' ಸಿನಿಮಾದ ನಿರ್ಮಾಪಕ ಪವನ್ ಒಡೆಯರ್ ಹಾಗೂ ತಂಡದ ಆಹ್ವಾನದ ಮೇರೆಗೆ ನಗರದ ಒರಾಯನ್ ಮಾಲ್ಗೆ ತೆರಳಿದ ಸಿದ್ದರಾಮಯ್ಯ, 'ಡೊಳ್ಳು' ಸಿನಿಮಾ ವೀಕ್ಷಿಸಿದರು. ಜನಪದ ಕಲೆಯನ್ನು ಆಧರಿಸಿ ನಿರ್ಮಿಸಿದ ಈ ಸಿನಿಮಾವನ್ನು ಮೆಚ್ಚಿದ ಮಾಜಿ ಸಿಎಂ, ನಿರ್ದೇಶಕ ನಿರ್ದೇಶಕ ಸಾಗರ್ ಪುರಾಣಿಕ್ ಹಾಗೂ ನಿರ್ಮಾಪಕರಾದ ಪವನ್ ಒಡೆಯರ್, ಅಪೇಕ್ಷಾ ಒಡೆಯರ್ ಅವರನ್ನು ಅಭಿನಂದಿಸಿದರು.
'ಡೊಳ್ಳು' ಸಿನಿಮಾವು ಡೊಳ್ಳು ಭಾರಿಸುವ ಕಲೆಯನ್ನು ಪ್ರಧಾನವಾಗಿರಿಸಿಕೊಂಡು ನಿರ್ಮಿಸಿರುವ ಸಿನಿಮಾ ಆಗಿದ್ದು, ಸಿನಿಮಾವನ್ನು ಸುನಿಲ್ ಪುರಾಣಿಕ್ ಪುತ್ರ ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಪವನ್ ಒಡೆಯರ್.
ಸಿನಿಮಾಕ್ಕೆ ಶಬ್ದ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಸಹ ಲಭಿಸಿದ್ದು, ಇದೀಗ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಸಿನಿಮಾದಲ್ಲಿ ನಾಯಕ ನಟ ಕಾರ್ತಿಕ್ ಮಹೇಶ್, ನಾಯಕಿ ನಿಧಿ ಹೆಗಡೆ ನಟಿಸಿದ್ದಾರೆ. ಇಂದು ಸಿದ್ದರಾಮಯ್ಯ ಜೊತೆ ಮಾಜಿ ಸಚಿವ ಜಮೀರ್ ಅಹಮದ್ ಸಿನಿಮಾ ವೀಕ್ಷಿಸಿದರು. ಈ ಸಂದರ್ಭದಲ್ಲಿ ಚಿತ್ರತಂಡ ಸಹ ಹಾಜರಿತ್ತು.

ಸ್ವತಃ ಜನಪದ ಕಲಾವಿದರಾಗಿರುವ ಸಿದ್ದರಾಮಯ್ಯ ಸಿದ್ದರಾಮನ ಹುಂಡಿಯಲ್ಲಿ ಸಾಂಪ್ರದಾಯಿಕ ಕುಣಿತ, ಹಾಡುಗಾರಿಗೆ ಮಾಡುತ್ತಾರೆ. ಊರಿಗೆ ಹೋದಾಗ ಗೆಳೆಯರೊಟ್ಟಿಗೆ ಸೇರಿ ಹೆಜ್ಜೆ ಹಾಕುತ್ತಾರೆ ಸಿದ್ದರಾಮಯ್ಯ. ಹಾಗಾಗಿ ಜನಪದ ಕಲೆ ಆಧರಿಸಿ ನಿರ್ಮಿಸಲಾದ ಈ ಸಿನಿಮಾ ಸಹ ಇಷ್ಟವಾಗಿದೆ.
ಸಿದ್ದರಾಮಯ್ಯ ಈ ಹಿಂದೆಯೂ ಆಹ್ವಾನದ ಮೇರೆಗೆ ಹಲವು ಕನ್ನಡ ಸಿನಿಮಾಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಚಿತ್ರತಂಡಗಳಿಗೆ ಬೆಂಬಲ ಸೂಚಿಸಿದ್ದಾರೆ. ಸಿಎಂ ಆಗಿದ್ದಾಗಲೂ ಕೆಲವಾರು ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ರಾಜಕಾರಣದ ಆರಂಭದಿಂದಲೂ ಸಿನಿಮಾ ರಂಗದೊಟ್ಟಿಗೆ ಉತ್ತಮ ಬಾಂಧವ್ಯವನ್ನು ಸಿದ್ದರಾಮಯ್ಯ ಹೊಂದಿದ್ದಾರೆ.


Click it and Unblock the Notifications











