ದಿಲೀಪ್ ಕುಮಾರ್ ಗೆಳೆತನ ನೆನೆದ ದೇವೆಗೌಡರು
ಭಾರತ ಚಿತ್ರರಂಗದ ಹಿರಿಯ, ಮೇರು ನಟ ದಿಲೀಪ್ ಕುಮಾರ್ ಇಂದು ನಿಧನರಾಗಿದ್ದಾರೆ. ದಿಲೀಪ್ ಕುಮಾರ್ ಅಗಲಿಕೆಗೆ ಚಿತ್ರರಂಗದ ಗಣ್ಯರ ಜೊತೆಗೆ ರಾಜಕೀಯ ನಾಯಕರು ಸಹ ಕಂಬನಿ ಮಿಡಿದಿದ್ದಾರೆ. ರಾಜ್ಯದ ಮುತ್ಸಧಿ ನಾಯಕ ದೇವೇಗೌಡ ಸಹ ದಿಲೀಪ್ ಕುಮಾರ್ ಅವರನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ.
ದಿಲೀಪ್ ಕುಮಾರ್ ಜೊತೆಗಿರುವ ಚಿತ್ರಗಳನ್ನು ಹಂಚಿಕೊಂಡಿರುವ ಮಾಜಿ ಪ್ರಧಾನಿ ದೇವೇಗೌಡ, ''ದಿಲೀಪ್ ಸಾಬ್ ಅವರ ನಿಧನ ತೀವ್ರ ಆಘಾತ ತಂದಿದೆ. ಸಾಯಿರಾ ಬಾನು ಅವರಿಗೆ ನನ್ನ ಹೃದಯ ತುಂಬಿದ ಸಂತಾಪಗಳು. ನನಗಂತೂ ಅವರು ಭಾರತದ ಜಾತ್ಯಾತೀತ ಸಂಸ್ಕೃತಿಯ ರೂಪಕದಂತೆ ಕಾಣುತ್ತಾರೆ. ನಾನು ಸದಾ ಅವರೊಂದಿಗೆ ಒಳ್ಳೆಯ ಚರ್ಚೆಗಳಲ್ಲಿ ಭಾಗಿಯಾಗಿದ್ದೇನೆ'' ಎಂದಿದ್ದಾರೆ ದೇವೇಗೌಡ.
ದಿಲೀಪ್ ಕುಮಾರ್ ಅವರು ದೇವೇಗೌಡರೊಟ್ಟಿಗೆ ಕೂತು ಮಾತುಕತೆಯಾಡುತ್ತಿರುವ ಹಾಗೂ ದೇವೇಗೌಡರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಚಿತ್ರಗಳನ್ನು ದೇವೇಗೌಡ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.

ದೇವೇಗೌಡ ಮಾತ್ರವೇ ಅಲ್ಲದೆ ಸಿಎಂ ಯಡಿಯೂರಪ್ಪ ಸಹ ದಿಲೀಪ್ ಕುಮಾರ್ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ, ''ದಶಕಗಳ ಕಾಲ ತಮ್ಮ ಅಭಿನಯ ಪ್ರತಿಭೆಯಿಂದ ಚಿತ್ರರಂಗದ ದಿಗ್ಗಜ ಸ್ಥಾನಕ್ಕೇರಿದ್ದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಪದ್ಮವಿಭೂಷಣ ದಿಲೀಪ್ ಕುಮಾರ್ ಅವರ ನಿಧನದಿಂದ ಯುಗವೊಂದು ಅಂತ್ಯವಾದಂತಾಗಿದೆ'' ಎಂದಿದ್ದಾರೆ.
ಮುಂದುವರೆದು, ''ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಕುಟುಂಬದವರಿಗೆ, ಅಸಂಖ್ಯಾತ ಅಭಿಮಾನಿಗಳಿಗೆ ಆ ಮಹಾನ್ ಕಲಾವಿದನನ್ನು ಕಳೆದುಕೊಂಡ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ'' ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Recommended Video
ಪ್ರಧಾನಿ ಮೋದಿ ಸಹ ದಿಲೀಪ್ ಸಾಬ್ ಅಗಲಿಕೆಗೆ ಸಂತಾಪ ಸೂಚಿಸಿದ್ದು, ''ದಿಲೀಪ್ ಕುಮಾರ್ ಸಿನಿಮಾರಂಗದ ದಂತಕತೆಯಾಗಿದ್ದರು. ಸಾಟಿಯಿಲ್ಲದ ಪ್ರತಿಭೆ ಅವರದ್ದು. ಅದರಿಂದಾಗಿಯೇ ವಿವಿಧ ವಯೋಮಾನದ ಪ್ರೇಕ್ಷಕರು ಅವರತ್ತ ಸೆಳೆಯಲ್ಪಟ್ಟಿದ್ದರು. ದಿಲೀಪ್ ಕುಮಾರ್ ಅಗಲಿಕೆ ಸಾಂಸ್ಕೃತಿಕ ಜಗತ್ತಿಗೆ ಆದ ದೊಡ್ಡ ನಷ್ಟ. ದಿಲೀಪ್ ಅವರ ಕುಟುಂಬ, ಸ್ನೇಹಿತರು, ಹಿತೈಷಿಗಳು ಹಾಗೂ ಅವರ ಅಸಂಖ್ಯ ಅಭಿಮಾನಿಗಳಿಗೆ ನನ್ನ ಸಂತಾಪಗಳು'' ಎಂದಿದ್ದಾರೆ.


Click it and Unblock the Notifications











