ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ನಮ್ಮ ಸ್ನೇಹ ಸಾಬೀತು ಪಡಿಸುವ ಅವಶ್ಯಕತೆ ನನಗಿಲ್ಲ-ಆದಿತ್ಯ ಕಿಡಿ
ದರ್ಶನ್ ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾದವರಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆ ದರ್ಶನ್ ಅವರದ್ದು. ಇದಕ್ಕೆ ಕೈಗನ್ನಡಿ ಎಂಬಂತೆ ಕನ್ನಡ ಚಿತ್ರರಂಗದ ಹಲವಾರು ತಾರೆಯರ ಚಿತ್ರಗಳಿಗೆ ಈ ಹಿಂದೆ ಬೆನ್ನೆಲುಬಾಗಿದ್ದರು. ತಮ್ಮ ಚಿತ್ರಕ್ಕೂ ಕೊಡದ ಮಹತ್ವವನ್ನು ಬೇರೆಯವರ ಚಿತ್ರಕ್ಕೆ ನೀಡಿ ಆ ಚಿತ್ರದ ಪ್ರಚಾರವನ್ನು ಕಾಯಾ ವಾಚಾ ಮನಸಿಂದ ಮಾಡಿದ್ದರು.
ಆದರೆ, ದುರ್ದೈವ ಇದೇ ಸಮಯದಲ್ಲಿ ಅ'ಪವಿತ್ರ' ಸಂಬಂಧಕ್ಕೆ ದರ್ಶನ್ ಹಾತೊರೆದರು. ಸಹವಾಸ ದೋಷದಿಂದ ತಮ್ಮ ಇಮೇಜ್ನ ತಾವೇ ಡ್ಯಾಮೇಜ್ ಮಾಡಿಕೊಂಡರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡರು.

ಇನ್ನು ಈ ಪ್ರಕರಣದಲ್ಲಿ ಮೊದಲ ಬಾರಿ ದರ್ಶನ್ ಜೈಲು ಪಾಲಾದಾಗ ದರ್ಶನ್ ಅವರ ನಿಜವಾದ ಅಭಿಮಾನಿಗಳು ಮಮ್ಮಲ ಮರುಗಿದ್ದರು. ಈ ಕ್ಷಣಕ್ಕೂ ಮರುಗುತ್ತಿದ್ದಾರೆ. ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಬೇಕಿದ್ದ ನಮ್ಮ ಹೀರೋ ಹೀಗೆ ದುಷ್ಕೃತ್ಯದ ಪಾಲುದಾರರಾಗಿ ಜೈಲು ಸೇರಿದರಲ್ಲ ಅಂಥಾ ಅಕ್ಷರಶಃ ಕೊರಗುತ್ತಿದ್ದಾರೆ.
ಆದರೆ ಇದೇ ಸಮಯದಲ್ಲಿ ಒಂದು ಕಡೆ ಕನ್ನಡ ಚಿತ್ರರಂಗದ ಹಲವರು, ಅದರಲ್ಲಿಯೂ ಒಂದು ಕಾಲದಲ್ಲಿ ದರ್ಶನ್ ಅವರ ಸಹಾಯ ಪಡೆದವರು, ದರ್ಶನ್ ಜೊತೆ ಗುರುತಿಸಿಕೊಂಡವರು ಮೌನಕ್ಕೆ ಶರಣಾಗಿದ್ದಾರೆ.
ಮತ್ತೊಂದು ಕಡೆ ದರ್ಶನ್ ರಾಮನಾದರೆ ನಾನು ಆಂಜನೇಯ ಎಂದು ಕೆಲವರು ಹೇಳುತ್ತಿದ್ದಾರೆ. ಅವರು ಯಾರು ಎನ್ನುವ ವಿಚಾರ ಎಲ್ಲರಿಗೆ ಗೊತ್ತಿರುವಂತಹದ್ದೇ. ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆದಿತ್ಯ ಮಾತನಾಡಿದ್ದಾರೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ದರ್ಶನ್ ಮತ್ತು ಆದಿತ್ಯ ಅವರ ಸ್ನೇಹ ಇಂದು ನಿನ್ನೆಯದ್ದಲ್ಲ. ಚಿತ್ರರಂಗಕ್ಕೆ ಬರುವ ಮುಂಚೆಯೇ ಇಬ್ಬರು ಸ್ನೇಹಿತರು. ಇಬ್ಬರು ಮೈಸೂರಿನ ಹುಡುಗರು. ''ಸ್ನೇಹಾನಾ.. ಪ್ರೀತಿನಾ''.. ಮತ್ತು ''ಚಕ್ರವರ್ತಿ''.. ಹೀಗೆ ಎರಡು ಸಿನಿಮಾಗಳನ್ನು ಜೊತೆಯಾಗಿ ಮಾಡಿದ ಇಬ್ಬರ ನಡುವೆ ಮಗಾ-ಮಚ್ಚಾ ಎನ್ನುವ ಆತ್ಮೀಯತೆ ಇದೆ.

''ಮುಂದುವರೆದ ಅಧ್ಯಾಯ'' ಸೇರಿ ಆದಿತ್ಯ ಅಭಿನಯದ ಹಲವು ಚಿತ್ರಗಳ ಕಾರ್ಯಕ್ರಮಕ್ಕೆ ದರ್ಶನ್ ಅತಿಥಿಯಾಗಿ ಬಂದಾಗ ತಮ್ಮ ಫ್ರೆಂಡ್ ಶಿಪ್ ಕುರಿತು ದರ್ಶನ್ ಖುದ್ದು ಮಾತನಾಡಿದ್ದು ಇದೆ.
ಆದರೂ ಕೂಡ ಹಲವರಿಗೆ ದರ್ಶನ್ ಮತ್ತು ಆದಿತ್ಯ ಸ್ನೇಹದಲ್ಲಿ ಬಿರುಕು ಮೂಡಿದೆ ಎನ್ನುವ ಅನುಮಾನ ಇದೆ. ಈ ಕುರಿತು ಆದಿತ್ಯ ಈಗ ಮಾತನಾಡಿದ್ದಾರೆ.
''SStv''ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮತ್ತು ದರ್ಶನ್ ನಡುವಿನ ಸ್ನೇಹದ ಕುರಿತು ಮಾತನಾಡಿರುವ ಆದಿತ್ಯ, ದರ್ಶನ್ ಜೊತೆಗಿನ ಸ್ನೇಹವನ್ನು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿ ಅಥವಾ ತಮಟೆ ಬಾರಿಸಿ ಸಾಬೀತುಪಡಿಸುವ ಅಗತ್ಯ ನನಗೆ ಇಲ್ಲ ಎಂದು ಹೇಳಿದ್ದಾರೆ.
ದರ್ಶನ್ ಏನು ಅಂತ ನನಗೆ ಗೊತ್ತು, ನಾನೇನು ಅಂತ ದರ್ಶನ್ಗೆ ಗೊತ್ತು. ಅಷ್ಟು ಸಾಕು. ಬೇರೆ ಇನ್ಯಾರಿಗೂ ನಮ್ಮ ಸ್ನೇಹವನ್ನು ಸಾಬೀತುಪಡಿಸುವ ಅನಿವಾರ್ಯತೆ ನನಗಿಲ್ಲ ಎಂದು ಹೇಳಿರುವ ಆದಿತ್ಯ ನನ್ನ ಮತ್ತು ದರ್ಶನ್ ನಡುವಿನ ಸ್ನೇಹ ಯಾವತ್ತು ಬದಲಾಗುವುದಿಲ್ಲ ಎಂದು ಹೇಳಿದ್ಧಾರೆ.
ದರ್ಶನ್ ಬಲಗೈ ಭಂಟರ ಕುರಿತು ಕೂಡ ಮಾತನಾಡಿರುವ ಆದಿತ್ಯ ನಿನ್ನೆ ಮೊನ್ನೆ ಬಂದವರೆಲ್ಲಾ ನಾವು ದರ್ಶನ್ಗೆ ತುಂಬಾ ಕ್ಲೋಸ್ ಅಂತ ಹೇಳುತ್ತಿದ್ದಾರೆ, ಹೇಳ್ಕೊಂಡು ಓಡಾಡ್ಲಿ ಬಿಡಿ, ಅದರ ಬಗ್ಗೆ ನಾನು ಕೇರ್ ಮಾಡಲ್ಲ. ನಮ್ಮಿಬ್ಬರ ಸ್ನೇಹ ಏನು ಎಂಬುದು ನಮಗೆ ಮಾತ್ರ ತಿಳಿದಿದೆ ಎಂದು ಹೇಳಿದ್ಧಾರೆ.
ಇನ್ನೂ ಇದೇ ಸಮಯದಲ್ಲಿ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ ಮಾತನಾಡಿರುವ ಆದಿತ್ಯ, ದರ್ಶನ್ ನಿಜಕ್ಕೂ ತಪ್ಪು ಮಾಡಿದ್ದಾರಾ.. ಇಲ್ವಾ.. ಎಂಬುದು ಯಾರಿಗೂ ಪೂರ್ಣವಾಗಿ ಗೊತ್ತಿಲ್ಲ. ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಹೇಳಿದ್ಧಾರೆ. ಒಬ್ಬ ಸ್ನೇಹಿತನಾಗಿ ನನ್ನ ಜೀವನದಲ್ಲಿ ಅವರ ಮಹತ್ವ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಹೇಳಿರುವ ಆದಿತ್ಯ ಅವನು ನನಗೆ ಅಣ್ಣನ ಸ್ಥಾನದಲ್ಲಿ ನಿಂತಿರುವ ಸ್ನೇಹಿತ. ಜೀವನಪೂರ್ತಿ ಅವನು ನನ್ನ ದೋಸ್ತಾಗಿಯೇ ಇರುತ್ತಾನೆ ಎಂದು ಹೇಳಿದ್ಧಾರೆ.
ಅಂದ್ಹಾಗೇ ಆದಿತ್ಯ ಅಭಿನಯದ ''ಟೆರರ್'' ಚಿತ್ರ ಕಳೆದ ವಾರ ಬಿಡುಗಡೆಯಾಗಿದೆ. ಈ ಚಿತ್ರದ ಪ್ರಚಾರದ ಸಮಯದಲ್ಲಿ ದರ್ಶನ್ ಕುರಿತು ಆದಿತ್ಯ ಮಾತನಾಡಿದ್ದು ಇಂದು ದರ್ಶನ್ ಹೊರಗಡೆ ಇದ್ದಿದ್ದರೆ, ನಾನು ಅವರನ್ನು ಸಿನಿಮಾ ಪ್ರಚಾರಕ್ಕೆ ಕರೆಯುವ ಅಗತ್ಯವೇ ಇರುತ್ತಿರಲಿಲ್ಲ. ವಿಷಯ ತಿಳಿದ ತಕ್ಷಣ ತಾನಾಗಿಯೇ ಪ್ರಚಾರಕ್ಕೆ ಬರುತ್ತಿದ್ದ. ಆ ಮಟ್ಟದ ಬಾಂಧವ್ಯ ನಮ್ಮದು ಎಂದು ಕೂಡ ಹೇಳಿದ್ದಾರೆ.


Click it and Unblock the Notifications