₹70 ಕೋಟಿ ಬಜೆಟ್ 'ವೃಷಭ' ಗಳಿಸಿದ್ದು ₹2 ಕೋಟಿ; ಈ ಸಿನಿಮಾ ಮಾಡ್ದೆ ಕನ್ನಡ ನಟರು ಬಚಾವಾದ್ರಾ?
ಸಿನಿಮಾ ಅನ್ನೋದು ಜೂಜು ಅಂತ ಕೆಲವರು ಹೇಳ್ತಾರೆ. ಗೆದ್ದರೆ ಲಾಟರಿ. ಸೋತ್ರೆ ನಿರ್ಮಾಪರು ಕಥೆ ಗೋವಿಂದ. ಸಿನಿಮಾ ಸಕ್ಸಸ್ ಸೀಕ್ರೆಟ್ ಅನ್ನೋದು ಇಲ್ಲ. ಯಾವ ಸಿನಿಮಾ ಯಾಕೆ ಗೆಲ್ಲುತ್ತೆ ಎನ್ನುವುದು ಹೇಳೋಕೆ ಸಾಧ್ಯವಿಲ್ಲ. ಆದರೆ ಕೆಲ ಸಿನಿಮಾಗಳ ಸೋಲು ಭಯನಕವಾಗಿರುತ್ತದೆ. ಇತ್ತೀಚೆಗೆ ಬಂದ ಮಲಯಾಳಂ ಸಿನಿಮಾ 'ವೃಷಭ' ಹೀನಾಯವಾಗಿ ಸೋತಿದ್ದು ಗೊತ್ತೇಯಿದೆ.
ಅಂದಾಜು 70 ಕೋಟಿ ರೂ. ಬಜೆಟ್ ಸಿನಿಮಾ ಗಳಿಸಿದ್ದು ಕೇವಲ 2 ಕೋಟಿ ರೂ. ಮಾತ್ರ. ನಿರ್ಮಾಪಕರಿಗೆ 1 ಕೋಟಿ ರೂ. ಕೂಡ ವಾಪಸ್ ಬರಲಿಲ್ಲ ಎನ್ನುವ ಚರ್ಚೆ ನಡೀತಿದೆ. ಕನ್ನಡ ನಿರ್ದೇಶಕ ನಂದ ಕಿಶೋರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಕನ್ನಡದ ಕಲಾವಿದರು ಚಿತ್ರದಲ್ಲಿ ನಟಿಸಿದ್ದರು. ಅಂದಹಾಗೆ ಕನ್ನಡದಲ್ಲೇ ಈ ಸಿನಿಮಾ ಮಾಡಲು ನಂದ ಕಿಶೋರ್ ಮನಸ್ಸು ಮಾಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಮೋಹನ್ ಲಾಲ್ ನಟಿಸುವಂತಾಯಿತು ಎನ್ನಲಾಗ್ತಿದೆ.

ನಿರ್ದೇಶಕ ಒಂದು ಕಥೆ ಮಾಡಿಕೊಂಡರೆ ಹಲವು ನಿರ್ಮಾಪಕರು, ನಟರಿಗೆ ಹೇಳುತ್ತಾರೆ. ಅಂತಿಮವಾಗಿ ಎಲ್ಲರೂ ಒಪ್ಪಿ ಫೈನಲ್ ಮಾಡಿದರೆ ಸಿನಿಮಾ ಶುರುವಾಗುತ್ತದೆ. ಹೀಗೆ ನಿರ್ದೇಶಕರು ನಾನಾ ಕಥೆಗಳನ್ನು ಬರೆದುಕೊಂಡಿರುತ್ತಾರೆ. ಅದೇ ರೀತಿ ನಂದ ಕಿಶೋರ್ ಬಳಿಕ ಸಾಕಷ್ಟು ಕಥೆಗಳಿತ್ತು. ಅದರಲ್ಲಿ 'ವೃಷಭ' ಕೂಡ ಒಂದು. ಬಹಳ ಹಿಂದೆ ಸಿದ್ಧವಾಗಿದ್ದ ಕಥೆ ಇದು. 2023ರಲ್ಲಿ ಸಿನಿಮಾ ಚಿತ್ರೀಕರಣ ಶುರುವಾಗಿತ್ತು. ಕೊಂಚ ತಡವಾಗಿ ಸಿನಿಮಾ ಬಿಡುಗಡೆ ಆಯಿತು.
ಈ ವರ್ಷ 3 ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ಮೋಹನ್ ಲಾಲ್ 'ವೃಷಭ' ಸಿನಿಮಾ ಮಾಡಿ ಕೈಸುಟ್ಟುಕೊಂಡಿದ್ದಾರೆ. ಬಹಳ ಹೀನಾಯವಾಗಿ ಸಿನಿಮಾ ಸೋತು ಮುಖಭಂಗ ಅನುಭವಿಸುವಂತಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಕಟ್ಟಿಕೊಟ್ಟು ಗೆಲ್ಲುವ ನಂದ ಕಿಶೋರ್ ಕನಸ್ಸಿಗೆ ಕೊಡಲಿ ಪೆಟ್ಟು ಬಿದ್ದಿದೆ. ಚಿತ್ರವನ್ನು ಓಟಿಟಿಗೆ ಕೊಂಡುಕೊಳ್ಳಲು ಯಾರು ಮುಂದೆ ಬರ್ತಿಲ್ಲ ಎನ್ನುವ ಊಹಾಪೋಹ ಶುರುವಾಗಿದೆ. ಮೊದಲಿಗೆ ಮೋಹನ್ ಲಾಲ್ ಮಗನ ಪಾತ್ರದಲ್ಲಿ ತೆಲುಗು ನಟ ರೋಷನ್ ನಟಿಸಿದ್ದರು. ಬಳಿಕ ರೋಷನ್ ಹೊರಬಂದು ಸಮರ್ಜಿತ್ ಲಂಕೇಶ್ ಆ ಪಾತ್ರ ಮಾಡುವಂತಾಯಿತು. ಅದಕ್ಕಾಗಿ ರೀ-ಶೂಟ್ ಮಾಡಿದ್ದರು.

ಪದೇ ಪದೆ ಚಿತ್ರೀಕರಣ ತಡವಾಗಿ ಸಿನಿಮಾ ಬಿಡುಗಡೆ ಮುಂದೂಡಲಾಗಿತ್ತು. ಐತಿಹಾಸಿಕ ಕಥೆಯ ಜೊತೆಗೆ ಮಾಡ್ರನ್ ಕಥೆಯನ್ನು ಸೇರಿಸಿ ನಂದ ಕಿಶೋರ್ ಸಿನಿಮಾ ಮಾಡಿದ್ದಾರೆ. ಮೊದಲಿನಿಂದಲೂ ಅಷ್ಟೇನು ನಿರೀಕ್ಷೆ ಹುಟ್ಟಾಕದ ಸಿನಿಮಾ ತೆರೆಕಂಡ ಬಳಿಕ ಕೂಡ ಪ್ರೇಕ್ಷಕರ ಮನಗೆಲ್ಲಲಿಲ್ಲ. ಸಿನಿಮಾ ನೋಡಲು ಪ್ರೇಕ್ಷಕರು ಬರದ ಕಾರಣ ಒಂದೇ ವಾರಕ್ಕೆ ಚಿತ್ರಮಂದಿರಗಳಿಂದ ಸಿನಿಮಾ ಎತ್ತಂಗಡಿ ಆಗಿತ್ತು. ಅಂದಹಾಗೆ ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ನಲ್ಲಿ 'ವೃಷಭ' ಕಥೆಯನ್ನು ಸಿನಿಮಾ ಮಾಡಲು ನಂದಕಿಶೋರ್ ಬಯಸಿದ್ದರಂತೆ. 'ಪೊಗರು' ಸೋಲಿನ ಬಳಿಕ ಲೆಕ್ಕಾಚಾರ ಎಲ್ಲಾ ತಲೆ ಕೆಳಗಾಗಿತ್ತು. ಹಾಗಾಗಿ ಮತ್ತೆ ಇಬ್ಬರು ಸಿನಿಮಾ ಮಾಡುವ ಸಾಹಸ ಮಾಡಲಿಲ್ಲ ಎನ್ನಲಾಗ್ತಿದೆ.
ನಂದ ಕಿಶೋರ್ ಬಳಿ 3 ಕಥೆಗಳಿತ್ತು. ಅದರಲ್ಲಿ 'ವೃಷಭ' ಕೂಡ ಒಂದು. ಮೊದಲಿಗೆ ಅಮಿತಾಬ್ ಬಚ್ಚನ್, ಅಭಿಷೇಕ್ ಕಾಂಬಿನೇಷನ್ನಲ್ಲಿ ಸಿನಿಮಾ ಮಾಡಬಹುದು ಎಂದುಕೊಂಡಿದ್ದರಂತೆ. ತದ ನಂತರ ನಾಗಾರ್ಜುನ ಹಾಗೂ ರಾಣಾ ದಗ್ಗುಬಾಟಿ ಬಳಿ ಕಥೆ ಹೋಗಿತ್ತು. ಅರ್ಜುನ್ ಸರ್ಜಾ, ಧ್ರುವ ಸರ್ಜಾ ಕೂಡ ಮಾಡಬಹುದು ಎನ್ನುವ ಚರ್ಚೆ ನಡೆದಿತ್ತಂತೆ. ಅಂತಿಮವಾಗಿ ಮೋಹನ್ ಲಾಲ್, ಸಮರ್ಜಿತ್ ನಟಿಸುವಂತಾಯಿತು ಎಂದು ಗಾಂಧಿನಗರದಲ್ಲಿ ಗುಲ್ಲಾಗಿದೆ. 'ವೃಷಭ' ಸಿನಿಮಾ ಚೆನ್ನಾಗಿ ಮೂಡಿ ಬಂದಿದ್ದರೂ ಪ್ರಚಾರ ಸರಿಯಾಗಿ ಮಾಡದೇ ಸೋತ ಹೋಯಿತು ಎನ್ನುವವರು ಇದ್ದಾರೆ.
ನಿರ್ದೇಶಕ ನಂದ ಕಿಶೋರ್ ಸೋತಾಗಲೆಲ್ಲಾ ಮತ್ತೆ ಎದ್ದು ಬಂದಿದ್ದಾರೆ. ಮುಂದೆ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಸಿನಿಮಾ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಆಲ್ ದಿ ಬೆಸ್ಟ್ ಹೇಳೋಣ.


Click it and Unblock the Notifications











