ತಮಾಷೆಯಾಗಿ ಪ್ರಶಾಂತ್ ನೀಲ್ ಅವರನ್ನು ಟ್ರೋಲ್ ಮಾಡಿ ಕಾಲೆಳೆದ ಪತ್ನಿ ಲಿಖಿತಾ!
ಕನ್ನಡ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿ ಗೆದ್ದಿದ್ದಾರೆ. ಮತ್ತಷ್ಟು ಅದ್ಭುತ ಸಿನಿಮಾಗಳ ತಯಾರಿಯಲ್ಲಿದ್ದಾರೆ. ಆದರೆ ನೀಲ್ ಸಿನಿಮಾಗಳ ಬಗ್ಗೆ ಒಂದು ಆರೋಪವಿದೆ. ಆ ಬಗ್ಗೆ ಇದೀಗ ಸ್ವತಃ ಪತ್ನಿ ಲಿಖಿತಾ ತಮಾಷೆ ಮಾಡಿದ್ದಾರೆ.
ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ಬರೀ ಡಾರ್ಕ್ ಶೇಡ್ ಹೆಚ್ಚು. ಕಪ್ಪು ಬಣ್ಣ, ಪ್ರತಿ ಫ್ರೇಮ್ ಧೂಳು, ಕಲಾವಿದರ ಕಾಸ್ಟ್ಯೂಮ್ಸ್ ಶೂಟಿಂಗ್ ಸೆಟ್ ಕೂಡ ಕಪ್ಪು ಬಣ್ಣದ್ದಾಗಿರುತ್ತದೆ. ಚಿನ್ನದ ಗಣಿ, ಕಲ್ಲಿದ್ದಲು ಗಣಿ ಹೀಗೆ ಎಲ್ಲವೂ ಡಾರ್ಕ್ ಆಗಿರುತ್ತದೆ. ಅವರ ಸಿನಿಮಾಗಳಲ್ಲಿ ಬೇರೆ ಬಣ್ಣಗಳನ್ನು ಹುಡುಕುವುದು ಕಷ್ಟ ಎನ್ನುವಂತಾಗಿದೆ. 'ಕೆಜಿಎಫ್' ಸರಣಿ ಸಿನಿಮಾಗಳಲ್ಲಿ ಇದ್ದನ್ನೇ ನೋಡಿ ನೋಡಿ ಸುಸ್ತಾಗಿದ್ದವರು ಬಳಿಕ 'ಸಲಾರ್' ಚಿತ್ರದಲ್ಲೂ ನೋಡಿ ಸುಸ್ತಾಗಿದ್ದರು.

ಸದ್ಯ ಜ್ಯೂ. ಎನ್ಟಿಆರ್ ಕಾಂಬಿನೇಷನ್ನಲ್ಲಿ 'ಡ್ರ್ಯಾಗನ್' ಎಂಬ ಚಿತ್ರವನ್ನು ನೀಲ್ ಮಾಡುತ್ತಿದ್ದಾರೆ. ಆ ಚಿತ್ರದ ಪೋಸ್ಟರ್ಗಳಲ್ಲಿ ಕೂಡ ಅದೇ ಕಪ್ಪು ಬಣ್ಣ ರಾರಾಜಿಸುತ್ತಿದೆ. ನನಗ ಕಲರ್ ಒಸಿಡಿ ಇದೆ ಎಂದು ಸ್ವತಃ ನೀಲ್ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದರು. ಅಭಿಮಾನಿಗಳು, ಸಿನಿರಸಿಕರು ಮಾತ್ರವಲ್ಲ ಆಪ್ತರು ಕೂಡ ಪ್ರಶಾಂತ್ ನೀಲ್ ವಿಚಾರದಲ್ಲಿ ಈ ಬಗ್ಗೆ ಆರೋಪ ಮಾಡುತ್ತಿರುತ್ತಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಶಾಂತ್ ನೀಲ್ "KGF ಮತ್ತು ಸಲಾರ್ ಒಂದೇ ರೀತಿ ಕಾಣಲು ಕಾರಣ ನನಗಿರುವ ಒಸಿಡಿ. ನಾನು ಹೆಚ್ಚು ಬಣ್ಣವಿರುವ ಬಟ್ಟೆಗಳನ್ನು ಧರಿಸಲು ಇಷ್ಟಪಡುವುದಿಲ್ಲ. ಈ ನನ್ನ ವ್ಯಕ್ತಿತ್ವದ ಪ್ರತಿಬಿಂಬವೇ ಪರದೆಯ ಮೇಲೆ ಕಾಣುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಒಳ್ಳೆಯದು ಇರಬಹುದು, ಕೆಟ್ಟದು ಇರಬಹುದು" ಎಂದಿದ್ದರು. ಸದ್ಯ ಛಾಯಾಗ್ರಾಹಕ ಭುವನ್ ಗೌಡ ಮದುವೆ ಸಮಾರಂಭಲ್ಲಿ ಬಿಳಿ ಅಂಗಿ, ಬಿಳಿ ಪಂಚೆ ತೊಟ್ಟು ನೀಲ್ ಕಾಣಿಸಿಕೊಂಡಿದ್ದಾರೆ.
ಪತಿ ಜೊತೆಗಿರುವ ಫೋಟೊಗಳನ್ನು ಹಂಚಿಕೊಂಡು ಲಿಖಿತಾ ರೆಡ್ಡಿ ಕ್ರೇಜಿ ಕ್ಯಾಪ್ಷನ್ ಕೊಟ್ಟಿದ್ದಾರೆ. "ಬಿಳಿ ಬಣ್ಣದಲ್ಲಿ ನನ್ನ ಕಳ್ಳ ಗಂಡ. ಕೊನೆಗೂ ನನ್ನ ನನ್ನ ಲವ್ ಸ್ಟೋರಿ ಕಲರ್ಫುಲ್ ಆಯಿತು" ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಭಿನ್ನ ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ನಿನ್ನೆ(ಅಕ್ಟೋಬರ್ 24) ನಗರದ ಜಾಲಹಳ್ಳಿ ಬಳಿ ಇರುವ ರೆಸಾರ್ಟ್ವೊಂದರಲ್ಲಿ ಡಿಓಪಿ ಭುವನ್ ಗೌಡ ಹಾಗೂ ನಿಖಿತಾ ಮದುವೆ ನೆರವೇರಿದೆ. ನಟ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ, ಶ್ರೀಲೀಲಾ ಸೇರಿದಂತೆ ಹಲವರು ಈ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಪತ್ನಿ ಸಮೇತ ಆಪ್ತನ ಮದುವೆಗೆ ಪ್ರಶಾಂತ್ ನೀಲ್ ಆಗಮಿಸಿದ್ದರು. ಕಲರ್ಫುಲ್ ಕಾಸ್ಟ್ಯೂಮ್ಗಳಲ್ಲಿ ಎಲ್ಲರೂ ಮಿರಿಮಿರಿ ಮಿಂಚಿದ್ದಾರೆ.
ಬಿಳಿ ಅಂಗಿ, ಬಿಳಿ ಪಂಚೆ ಧರಿಸಿದ್ದರೂ ಕಪ್ಪು ಬಣ್ಣದ ಸನ್ ಗ್ಲಾಸ್ ಹಾಕಿಕೊಂಡಿದ್ದಾರೆ. ಇಲ್ಲಿ ಕೂಡ ತಮ್ಮ ಟ್ರೇಡ್ಮಾರ್ಕ್ ಮರೆಯಲಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇನ್ನು ಎನ್ಟಿಆರ್ ಹಾಗೂ ನೀಲ್ ಸಿನಿಮಾ ಅಪ್ಡೇಟ್ ಕೊಡಿ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. "ಸರಿಯಾದ ಸಮಯಕ್ಕೆ ಅಪ್ಡೇಟ್ ಸಿಗುತ್ತದೆ" ಎಂದು ನಿಖಿಲ್ ರಿಪ್ಲೇ ಮಾಡಿದ್ದಾರೆ.
ಜ್ಯೂ. ಎನ್ಟಿಆರ್ ಸಿನಿಮಾಗಳಿಗೆ ನಾನು ದೊಡ್ಡ ಅಭಿಮಾನಿ ಎಂದು ಪ್ರಶಾಂತ್ ನೀಲ್ ಹೇಳ್ತಾ ಬರ್ತಿದ್ದಾರೆ. ಹಾಗಾಗಿ ತನ್ನ ಅಭಿಮಾನದ ಹೀರೊ ಸಿನಿಮಾವನ್ನು ಹೇಗೆ ಕಟ್ಟಿಕೊಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಇತ್ತೀಚೆಗೆ ತಾರಕ್- ನೀಲ್ ನಡುವೆ ಭಿನ್ನಾಭಿಪ್ರಾಯ ಮೂಡಿ ಸಿನಿಮಾ ಚಿತ್ರೀಕರಣ ನಿಂತುಹೋಗಿದೆ ಎನ್ನುವ ಊಹಾಪೋಹ ಕೇಳಿಬಂದಿತ್ತು. ಅದೆಲ್ಲಾ ಸುಳ್ಳು ಎನ್ನುವುದು ಗೊತ್ತಾಗುತ್ತಿದೆ. ಮುಂದಿನ ವರ್ಷ ಜೂನ್ 25ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಬಳಿಕ 'ಸಲಾರ್- 2' ಹಾಗೂ 'ಕೆಜಿಎಫ್- 3' ಚಿತ್ರಗಳನ್ನು ನೀಲ್ ಕಟ್ಟಿಕೊಡಬೇಕಿದೆ.


Click it and Unblock the Notifications











