ಯುದ್ಧ ಅಂದ್ರೆ ಗುಪ್ತಚರ ಇಲಾಖೆ ಮುಖ್ಯ; ಅಪ್ಪು ಸರ್ ಇಂಟೆಲಿಜೆನ್ಸ್ ಆಫೀಸರ್ ಆಗಿ ನಟಿಸ್ಬೇಕಿತ್ತು; ನಿರ್ದೇಶಕ ಕೃಷ್ಣ
ಇರಾನ್ ಮತ್ತು ಇಸ್ರೇಲ್ ದೇಶಗಳ ನಡುವಿನ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಎರಡೂ ದೇಶಗಳಲ್ಲಿ ಪರಿಸ್ಥಿತಿ ಉದ್ವಿಗ್ನವಾಗುತ್ತಿದೆ. ಇರಾನ್ನಲ್ಲಿ 18 ಜನ ಕನ್ನಡಿಗರು ಇತ್ತೀಚೆಗೆ ಬೆಂಗಳೂರಿಗೆ ವಾಪಸ್ ಆಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಯುದ್ಧ ಎಂದಾಕ್ಷಣ ಗುಪ್ತಚರ ಇಲಾಖೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದೆ.
ಯಾವುದೇ ದೇಶದ ಗಡಿಗಳ ಬಗ್ಗೆ ಗುಪ್ತಚರ ಇಲಾಖೆ ನಾನಾ ಮಾರ್ಗಗಳಲ್ಲಿ ಮಾಹಿತಿ ಸಂಗ್ರಹಿಸಿ ಸೇನೆಗೆ ನೀಡುತ್ತದೆ. ಅದನ್ನು ಆಧರಿಸಿ ಮುಂದೆ ಏನು ಮಾಡಬೇಕು ಎಂದು ತೀರ್ಮಾನಿಸಲಾಗುತ್ತದೆ. 9 ವರ್ಷಗಳ ಹಿಂದೆ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ ಮೇಲೆ ಏರ್ಸ್ಟ್ರೈಕ್ ಮಾಡಿ ಉಗ್ರರನ್ನು ಸದೆಬಡಿದಿತ್ತು. ಇತ್ತೀಚೆಗೆ ಪಾಕಿಸ್ತಾನದ ಉಗ್ರರ ಶಿಬಿರಗಳ ಮೇಲೆ ಸೇನೆ ದಾಳಿ ಮಾಡಿತ್ತು. ಈ ಸಂದರ್ಭಗಳಲ್ಲಿ ಗುಪ್ತಚರ ಇಲಾಖೆ ಮಾಹಿತಿ ಬಹಳ ಮಹತ್ವದ್ದಾಗಿತ್ತು.

ಕೃಷ್ಣ ನಿರ್ದೇಶನದ 'ಹೆಬ್ಬುಲಿ' ಚಿತ್ರದಲ್ಲಿ ಸರ್ಜಿಕಲ್ ಸ್ಟ್ರೈಕ್ ಸನ್ನಿವೇಶವನ್ನು ತೋರಿಸಲಾಗಿತ್ತು. ಸುದೀಪ್ ಮೇಜರ್ ರಾಮ್ ಪಾತ್ರದಲ್ಲಿ ನಟಿಸಿದ್ದರು. ಆ ಚಿತ್ರಕ್ಕಾಗಿ ಗುಪ್ತಚರ ಇಲಾಖೆಯ ಬಗ್ಗೆ ನಿರ್ದೇಶಕ ಕೃಷ್ಣ ಬಹಳ ಸಂಶೋಧನೆ ನಡೆಸಿ ಮಾಹಿತಿ ಕಲೆ ಹಾಕಿದ್ದರು. ಪುನೀತ್ ರಾಜ್ಕುಮಾರ್ ಜೊತೆಗೆ ಕೃಷ್ಣ ಒಂದು ಸಿನಿಮಾ ಮಾಡಲು ಮುಂದಾಗಿದ್ದರು. ಆ ಚಿತ್ರದಲ್ಲಿ ಗುಪ್ತಚರ ಇಲಾಖೆಯ ಬಗ್ಗೆಯೇ ಕಥೆಯಿತ್ತು. ಹಾಗಾಗಿ ಆ ಬಗ್ಗೆ ಹೆಚ್ಚು ವಿಚಾರಗಳನ್ನು ಸಂಗ್ರಹಿಸಿದ್ದಾಗಿ ನಿರ್ದೇಶಕ ಕೃಷ್ಣ ಫಿಲ್ಮಿಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ.
"ಭಾರತದಲ್ಲೇ ಸಾಕಷ್ಟು ರೀತಿಯ ಇಂಟೆಲಿಜೆನ್ಸ್ ಇರುತ್ತೆ. ಡಿಜಿಟಲ್ ಇಂಟೆಲಿಜೆನ್ಸ್ ಬೇರೆ, ಆರ್ಮಿ ಇಂಟೆಲಿಜೆನ್ಸ್ ಬೇರೆ, ನೌಕಾ ಸೇನೆಯದ್ದೇ ಬೇರೆ ಇರುತ್ತೆ. NIA ಹಾಗೂ RAW ಇದೆ. ಅದೇ ರೀತಿ ಡಿಜಿಟಲ್ ಇಂಟೆಲಿಜೆನ್ಸ್ ಇದೆ. ಇವರೆಲ್ಲರ ಮಾಹಿತಿ ಆಧರಿಸಿ ಶತ್ರು ಏನು ಮಾಡುತ್ತಿದ್ದಾನೆ ಎಂದು ಗೆಸ್ ಮಾಡಲಾಗುತ್ತದೆ. ಶತ್ರು ದುಷ್ಕೃತಕ್ಕೆ ಮುಂದಾದಾಗ ಅದರ ಮಾಹಿತಿ ಕಲೆ ಹಾಕುವುದು ಈ ಇಲಾಖೆ ಕೆಲಸ" ಎಂದು ನಿರ್ದೇಶಕ ಕೃಷ್ಣ ಹೇಳಿದ್ದಾರೆ.

ಮಾತು ಮುಂದುವರೆಸಿದ ನಿರ್ದೇಶಕ ಕೃಷ್ಣ "ಇತ್ತೀಚೆಗೆ ಪಾಕ್ ವಿರುದ್ಧ ಯುದ್ಧ ನಡೀತು. ಅವರು ನಮ್ಮ ಮೇಲೆ ನಾವು ಅವರ ಮೇಲೆ ದಾಳಿ ಮಾಡಿದ್ದೆವು. ಅದಕ್ಕೆ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸುತ್ತದೆ. ಯಾರು ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ? ಎನ್ನುವುದರ ಬಗ್ಗೆ ಇಲಾಖೆ ಮಾಹಿತಿ ಸಂಗ್ರಹಿಸಿ ಕೊಡುತ್ತದೆ. ಅದನ್ನು ಆಧರಿಸಿ ಸೇನೆ ಮುಂದಿನ ನಡೆ ನಿರ್ಧಾರವಾಗುತ್ತದೆ. ಇಂದೇ ಮಾಹಿತಿಯನ್ನು ನಂಬುವುದಿಲ್ಲ, ನಾನಾ ವಿಧಗಳಲ್ಲಿ ಮಾಹಿತಿ ಕಲೆಹಾಕಿ ಅಂತಿಮವಾಗಿ ನಿರ್ಧಾರಕ್ಕೆ ಬರ್ತಾರೆ. ಭಾರತ -ಚೀನಾ ಯುದ್ಧದ ಸಮಯದಲ್ಲಿ ಗುಪ್ತಚರ ಇಲಾಖೆ ಬಗ್ಗೆ ಹೆಚ್ಚು ಚರ್ಚೆ ಆಗಿತ್ತು" ಎಂದು ಹೇಳಿದ್ದಾರೆ.
"ಬರೀ ಯುದ್ಧ.. ಬಾಂಬ್ ಹಾಕುವುದು ಮಾತ್ರವಲ್ಲ. ಎಲ್ಲಾ ರೀತಿಯ ಚಲನವಲನಗಳ ಬಗ್ಗೆ ಗುಪ್ತಚರ ಇಲಾಖೆ ಕಣ್ಣಿಟ್ಟಿರುತ್ತದೆ. ನಾನಾ ಬಗೆಯ ಗುಪ್ತಚರ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ಮುಂದೇನು ಎಂದು ಸೇನೆ ನಿರ್ಧರಿಸುತ್ತದೆ. ಇತ್ತೀಚೆಗೆ ಪಾಕ್ ಉಗ್ರ ಶಿಬಿರಗಳ ಮೇಲೆ ದಾಳಿ ಮಾಡಿದಾಗ ಗುಪ್ತಚರ ಇಲಾಖೆ ಮೊದಲೇ ಮಾಹಿತಿ ಸಂಗ್ರಹಿಸಿತ್ತು. ಅದನ್ನೆಲ್ಲಾ ವರ್ಷಾನುಗಟ್ಟಲೆ ಗುಪ್ತಚರ ಇಲಾಖೆ ಗಮನಿಸುತ್ತಿತ್ತು. ಆ ಮಾಹಿತಿ ಮೇಲೆ ದಾಳಿ ನಡೀತು. ಗುಪ್ತಚರ ಇಲಾಖೆ, ಯುದ್ಧ ಎಲ್ಲವೂ ಬೇರೆ ಬೇರೆ. ಗುಪ್ತಚರ ಇಲಾಖೆ ಅನ್ನೋದು ಒಂದು ಹೊಸ ಪ್ರಪಂಚ" ಎಂದು ನಿರ್ದೇಶಕ ಕೃಷ್ಣ ವಿವರಿಸಿದ್ದಾರೆ.
ಇರಾಕ್ನ ಪರಮಾಣು ಸ್ಥಾವರಗಳನ್ನ ಗುರಿಯಾಗಿಸಿ ಇಸ್ರೇಲ್ ದಾಳಿ ಮಾಡಿತ್ತು ಅಂದ್ರೆ ಗುಪ್ತಚರ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ. ಅದನ್ನು ಆಧರಿಸಿ ದಾಳಿ ಮಾಡಿದ್ದರು. ಇಸ್ರೇಲ್, ಇರಾನ್ ದೇಶಗಳು ಗಡಿಯನ್ನು ಹಂಚಿಕೊಂಡಿಲ್ಲ. ಹಾಗಾಗಿ ಕ್ಷಿಪಣಿಗಳನ್ನು ಬಳಸಿ ಯುದ್ಧ ಮಾಡುತ್ತಿದ್ದಾರೆ. ಇಸ್ರೇಲ್ ಗುಪ್ತಚರ ಇಲಾಖೆ ಬಗ್ಗೆ ಸಾಕಷ್ಟು ಓದಿದ್ದೇನೆ. ಪ್ರಪಂಚದಲ್ಲೇ ಅದ್ಭುತ ಗುಪ್ತಚರ ಇಲಾಖೆ ಅವರದ್ದು ಎನ್ನಲಾಗುತ್ತದೆ. ಇದೇ ವಿಚಾರಗಳನ್ನು ಆಧರಿಸಿ ಪುನೀತ್ ಸರ್ ಸಿನಿಮಾ ಮಾಡಬೇಕಿತ್ತು. ಅದರಲ್ಲಿ ಅಪ್ಪು ಸರ್ ಇಂಟೆಲಿಜೆನ್ಸ್ ಆಫೀಸರ್ ಆಗಿ ಕೆಲಸ ಮಾಡುವಂತಹ ಪಾತ್ರ ಮಾಡಬೇಕಿತ್ತು. ಹಾಗಾಗಿ ಈ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದೆ" ಎಂದು ಕೃಷ್ಣ ತಿಳಿಸಿದ್ದಾರೆ.


Click it and Unblock the Notifications











