'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಜೊತೆ ಈ ವಾರ ಬಿಡುಗಡೆ ಆಗಿರುವ ಕನ್ನಡ ಸಿನಿಮಾಗಳು
ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಮೆರವಣಿಗೆ ಜೋರಾಗಿದೆ. ವರ್ಷದ ಆರಂಭದಲ್ಲಿ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಲಿಲ್ಲ. ಬಳಿಕ ನಿಧಾನವಾಗಿ ಸಾಲು ಸಾಲು ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಈ ವಾರ ಕೂಡ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿವೆ.
ಈ ವರ್ಷ 'ಲ್ಯಾಂಡ್ಲಾರ್ಡ್', 'ರಕ್ಕಸಪುರದೋಳ್' ಸೇರಿ ಕೆಲ ಸಿನಿಮಾಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ಸು ಕಂಡಿವೆ. ಆದರೆ 'ಟಾಕ್ಸಿಕ್' ಚಿತ್ರಕ್ಕಾಗಿ ಎಲ್ಲರೂ ಕಾಯುವಂತಾಗಿದೆ. ದೊಡ್ಡ ಸಿನಿಮಾಗಳ ನಡುವೆ ಸಣ್ಣ ಸಿನಿಮಾಗಳನ್ನು ಗೆಲ್ಲಿಸಬೇಕಿದೆ. ಈ ವಾರ ಅಣ್ಣಾವ್ರ 'ಸಂಪತ್ತಿಗೆ ಸವಾಲ್' ಸಿನಿಮಾ ರೀ-ರಿಲೀಸ್ ಆಗುತ್ತಿದೆ.

1. ಸಂಪತ್ತಿಗೆ ಸವಾಲ್
1974ರಲ್ಲಿ ತೆರೆಕಂಡಿದ್ದ ಡಾ, ರಾಜ್ಕುಮಾರ್, ಮಂಜುಳಾ ಹಾಗೂ ವಜ್ರಮುನಿ ನಟನೆಯ 'ಸಂಪತ್ತಿಗೆ ಸವಾಲ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು 51 ವರ್ಷಗಳ ಬಳಿಕ ಹೊಸ ತಂತ್ರಜ್ಞಾನದಲ್ಲಿ ಪ್ರೇಕ್ಷಕರ ಮುಂದೆ ತರಲಾಗಿದೆ. ಸಿನಿಮಾ ಸ್ಕೋಪ್ ಹಾಗೂ 5.1 ಡಿಟಿಎಸ್ ಅಳವಡಿಸಿ ಸಿನಿಮಾ ಬಿಡುಗಡೆ ಮಾಡಲಾಗಿದೆ.
ಬೆಂಗಳೂರಿನ ಮಾಗಡಿ ರಸ್ತೆಯ ಪ್ರಸನ್ನ, ಬೇಗೂರು ಗೆಲಾಕ್ಸಿ ಪ್ಯಾರಡೈಸ್, ಮೈಸೂರಿನ ಸಂಗಮ್, ಹಾಸನದ ಸಹ್ಯಾದ್ರಿ, ಗುಂಡ್ಲುಪೇಟೆಯ ವೆಂಕಟೇಶ್ವರ ಚಿತ್ರಮಂದಿರ ಸೇರಿ ಹಲವು ಭಾಗಗಳಲ್ಲಿ ಸಿನಿಮಾ ಪ್ರದರ್ಶನ ಆರಂಭಿಸಿದೆ. ಎ. ವಿ ಶೇಷಗಿರಿ ರಾವ್ ನಿರ್ದೇಶನದ ಚಿತ್ರವನ್ನು ಎ. ಎನ್ ಮೂರ್ತಿ ನಿರ್ಮಿಸಿದ್ದರು. ಜಿ. ಕೆ ವೆಂಕಟೇಶ್ ಸಂಗೀತದಲ್ಲಿ ಚಿತ್ರದ ಹಾಡುಗಳನ್ನು ಇವತ್ತಿಗೂ ಜನ ಮರೆತ್ತಿಲ್ಲ.
2. ಮಾರ್ನಮಿ
ರಿತೀಶ್ ಶೆಟ್ಟಿ ನಿರ್ದೇಶನದ 'ಮಾರ್ನಮಿ' ಸಿನಿಮಾ ಕೂಡ ಈ ವಾರ ಪ್ರೇಕ್ಷಕರ ಮುಂದೆ ಬಂದಿದೆ. ಭಾವನಾತ್ಮಕ ಪ್ರೇಮಕಥೆ ಜೊತೆಗೆ ಕರಾವಳಿಯ ಆಚರಣೆಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಕಿರುತೆರೆ ನಟ ರಿತ್ವಿಕ್ ಮಠದ್ ಜೊತೆ ಚೈತ್ರಾ ಆಚಾರ್ ನಾಯಕಿಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ.
ಒಂದು ದಿನ ಮುನ್ನ 'ಮಾರ್ನಮಿ' ಚಿತ್ರದ ಪ್ರೀಮಿಯರ್ ಶೋ ನಡೆದು ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಪದೇ ಪದೆ ರಿಲೀಸ್ ಡೇಟ್ ಬದಲಾಗಿ ಕೊನೆಗೂ ಸಿನಿಮಾ ತೆರೆಗಪ್ಪಳಿಸಿದೆ. ಕಿಚ್ಚ ಸುದೀಪ್ ಕೂಡ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ.
3. ಸರಳ ಸುಬ್ಬಾರಾವ್
ಅಜಯ್ ರಾವ್ ಹಾಗೂ ಮಿಶಾ ನಾರಂಗ್ ಜೋಡಿ ನಟನೆಯ 'ಸರಳ ಸುಬ್ಬಾರಾವ್' ಚಿತ್ರಕ್ಕೂ ಈ ವಾರ ಬಿಡುಗಡೆ ಭಾಗ್ಯ. ರಿಯಾನ್ ಕ್ರಿಯೇಷನ್ಸ್ ಅಡಿಯಲ್ಲಿ ಲೋಹಿತ್ ನಂಜುಂಡಯ್ಯ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 70ರ ದಶಕದಲ್ಲಿ ಮೈಸೂರಿನಲ್ಲಿ ನಡೆಯುವ ಪ್ರೇಮಕಥೆಯನ್ನು ಈ ಚಿತ್ರದಲ್ಲಿ ನೋಡಬಹುದು. 'ಶ್ರಾವಣಿ ಸುಬ್ರಹ್ಮಣ್ಯ' ಸಿನಿಮಾ ಖ್ಯಾತಿಯ ಮಂಜು ಸ್ವರಾಜ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ರಂಗಾಯಣ ರಘು, ವೀಣಾ ಸುಂದರ್, ರಘು ರಾಮನಕೊಪ್ಪ, ವಿಜಯ್ ಚಂಡೂರ್ ತಾರಾಗಣದಲ್ಲಿದ್ದಾರೆ. ತ್ರಿವೇಣಿ ಅವರು ಬರೆದ ಕಾದಂಬರಿ ಆಧರಿಸಿ 'ಸರಳ ಸುಬ್ಬಾರಾವ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ.
4. ಸೆಕೆಂಡ್ ಕೇಸ್ ಆಫ್ ಸೀತಾರಾಮ್
ವಿಜಯ ರಾಘವೇಂದ್ರ ನಟಿಸಿದ್ದ 'ಸೀತಾರಾಮ್ ಬಿನೋಯ್' ಚಿತ್ರದ ಮುಂದುವರೆದ ಭಾಗ ಈ ವಾರ ತೆರೆಗೆ ಬರ್ತಿದೆ. 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಹೆಸರಿನಲ್ಲಿ ಹೊಸ ಕಥೆ ಹೇಳಲಾಗ್ತಿದೆ. ಮತ್ತೊಮ್ಮೆ ವಿಜಯ್ ಖಾಕಿ ತೊಟ್ಟು ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ದೇವಿ ಪ್ರಸಾದ್ ಶೆಟ್ಟಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
5. ಆಲ್ಫಾ
ವಿಜಯ್ ನಾಗೇಂದ್ರ ನಿರ್ದೇಶನದ ಸಿನಿಮಾ 'ಆಲ್ಫಾ'. ಹೇಮಂತ್ ಕುಮಾರ್ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಕಾರ್ತಿಕ್ ಮಹೇಶ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಡ್ರಗ್ಸ್ ದಂಧೆ ಹಾಗೂ ಲವ್ ಸ್ಟೋರಿ ಚಿತ್ರದಲ್ಲಿದೆ. 'ಸೂರಿ ಅಣ್ಣ' ಎಂಬ ಮತ್ತೊಂದು ಕನ್ನಡ ಸಿನಿಮಾ ಕೂಡ ಈ ವಾರವೇ ತೆರೆಗಪ್ಪಳಿಸಿದೆ.


Click it and Unblock the Notifications











