ಮಾಣಿಕ್ಯ ಚೆಲುವೆ ರನ್ಯಾ ರಾವ್ಗೆ 2 ಕೋಟಿ ಉಂಡೆನಾಮ ಹಾಕಿದ್ಹೇಗೆ ಉಗಾಂಡಾದ ಕಿರಾತಕ ? ಜೈಲು ಹಕ್ಕಿಯ ಸ್ಮಗ್ಲಿಂಗ್ ಸ್ಕೆಚ್ ಬಯಲು
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ದುಡ್ಡಿಗಾಗಿ ಅನೇಕರು ಇಲ್ಲಿ ಆತ್ಮ ಸಾಕ್ಷಿಯನ್ನು ಮಾರಿಕೊಳ್ಳುತ್ತಾರೆ. ದೀಢೀರ್ ಶ್ರೀಮಂತರಾಗಲು ಅಡ್ಡದಾರಿಯನ್ನು ಹಿಡಿಯುತ್ತಾರೆ.
ಇನ್ನೂ ಕೆಲವರು ಮೋಸ, ಸುಲಿಗೆ, ವಂಚನೆಯ ಪ್ರಕರಣದಲ್ಲಿ ಕೂಡ ಸಿಲುಕಿಕೊಳ್ಳುತ್ತಾರೆ. ಮಾಡಬಾರದ ಪಾಪ ಕರ್ಮಗಳನ್ನೆಲ್ಲಾ ಮಾಡುತ್ತಾರೆ. ಇದಕ್ಕೆ ಭಾರತೀಯ ಚಿತ್ರರಂಗದಲ್ಲಿ ರಾಶಿ ರಾಶಿ ಉದಾಹರಣೆಗಳಿವೆ. ಆ ಪೈಕಿ ರನ್ಯಾ ರಾವ್ ಅವರ ಬದುಕಿನ ದುರಂತ ಕಥನ ಕೂಡ ಒಂದು.

ಹೌದು, ರನ್ಯಾ ರಾವ್.. ''ಮಾಣಿಕ್ಯ'' ಚಿತ್ರದ ಮನಮೋಹಕ ಚೆಲುವೆ.ಕನ್ನಡ ಚಿತ್ರರಂಗದ ''ಪಟಾಕಿ'' ಪೋರಿ. ನಿಯತ್ತಾಗಿ ಚಿತ್ರರಂಗದಲ್ಲಿ ದುಡಿದಿದ್ದರೆ ಇವತ್ತು ರನ್ಯಾ ರಾವ್ ನರಕ ದರ್ಶನ ಮಾಡುತ್ತಿರಲಿಲ್ಲ. ಆದರೆ ಆಗಲೇ ಹೇಳಿದಂತೆ ಮನಿ ಕಂಡರೆ ಮನುಷ್ಯತ್ವ ಮರೆಯುವ ಕಾಲ ಇದು. ಈ ಕಾಲದಲ್ಲಿ ದುಡ್ಡಿನಾಸೆಗೆ ಮಾದಕ ಮಾಯಾಜಾಲವನ್ನು ಹೆಣೆದ ರನ್ಯಾ ಕೊನೆಗೆ ಅದೇ ಜಾಲದಲ್ಲಿ ಸಿಲುಕಿ ಸದ್ಯ ಜೈಲು ಪಾಲಾಗಿದ್ದಾರೆ.
ಸದ್ಯ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಜೈಲು ಪಾಲಾಗಿ ಒಂದು ವರ್ಷವಾಗಿದೆ. ಈ ಒಂದು ವರ್ಷದಲ್ಲಿ ಹೊರ ಬರಲು ಹಲವು ಬಾರಿ ಪ್ರಯತ್ನ ಮಾಡಿದರೂ ಕೂಡ ಫಲ ಸಿಕ್ಕಿಲ್ಲ. ಬಹುಶಃ ಸಿಗುವುದು ಇಲ್ಲ. ಯಾಕೆಂದರೆ ರನ್ಯಾ ರಾವ್ ಅವರ ಚರಿತ್ರೆಯೇ ಭಯಾನಕವಾದದ್ದು ಎನ್ನುವ ವಿಚಾರ ಈಗ ಹೊರ ಬಂದಿದೆ. ಚಾರ್ಜ್ಶೀಟ್ನಲ್ಲಿ ಬೆಚ್ಚಿ ಬೀಳಿಸುವ ಸಂಗತಿಗಳು ಬಹಿರಂಗವಾಗಿವೆ.
ಆ ಪ್ರಕಾರ ಮಾರ್ಚ್ 2024ರಿಂದ ಮಾರ್ಚ್ 2025ರವರೆಗೆ ರನ್ಯಾ ರಾವ್ ಒಂದಲ್ಲ, ಎರಡಲ್ಲ, ಬದಲಿಗೆ 15 ಬಾರಿ ದುಬೈ ದರ್ಶನ ಮಾಡಿ ಬಂದಿದ್ದಾರೆ. ವಿಶೇಷ ಅಂದರೆ ಹೀಗೆ ಹೋದ ರನ್ಯಾ ರಾವ್ 127.87 ಕೆಜಿಯಷ್ಟು ಚಿನ್ನವನ್ನು ಇದೇ ಸಮಯದಲ್ಲಿ ಕಳ್ಳಸಾಗಣೆ ಮಾಡಿದ್ದಾರೆ.
ಇನ್ನೂ ರನ್ಯಾ ರಾವ್ ಅವರ ಈ ಗೋಲ್ಡನ್ ಗೇಮ್, ನಮ್ಮ ಆದಾಯ ಗುಪ್ತಚರ ನಿರ್ದೇಶನಾಲಯಕ್ಕೆ {DRI} ಅರ್ಥವಾಗಿದ್ದು ಕಳೆದ ವರ್ಷ ಮಾರ್ಚ್ನಲ್ಲಿ. ಮಾರ್ಚ್ 3 2025ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಅವರನ್ನು 12.56 ಕೋಟಿ ರೂಪಾಯಿ ಮೌಲ್ಯದ ಬರೋಬ್ಬರಿ 14 ಕೆಜಿ ಬಂಗಾರದ ಸಮೇತ ಅರೆಸ್ಟ್ ಮಾಡಲಾಗಿತ್ತು.

ಇದೇ ತಿಂಗಳು ಅಂದರೆ ಮಾರ್ಚ್ನಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿದ್ದರೆ, ಇಡಿ ಪ್ರಕರಣದ ಬಗ್ಗೆ ಹಣ ವರ್ಗಾವಣೆ ತನಿಖೆ ಆರಂಭಿಸಿ, ರನ್ಯಾ ರಾವ್ ಹೆಸರಿನಲ್ಲಿದ್ದ ₹34.12 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿತ್ತು. ಫೆಬ್ರವರಿ 25 ರಂದು, ED ಬೆಂಗಳೂರು ನ್ಯಾಯಾಲಯದಲ್ಲಿ ರನ್ಯಾ ರಾವ್, ರಾಜು ಮತ್ತು ಹವಾಲಾ ಡೀಲರ್ ಸಾಹಿಲ್ ಸಕಾರಿಯಾ ವಿರುದ್ಧ ಕಪ್ಪುಹಣ ವರ್ಗಾವಣೆ ತಡೆ ಕಾಯಿದೆ (PMLA) ಅಡಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು. ಮಾರ್ಚ್ 2024 ರಿಂದ ಮಾರ್ಚ್ 2025 ರ ನಡುವೆ ಸುಮಾರು 127 ಕೆ.ಜಿ. ಚಿನ್ನವನ್ನು ಸಾಗಿಸಿದ್ದು, ಅದರ ಮೌಲ್ಯ ₹102 ಕೋಟಿ ಎಂದು ಆರೋಪ ಮಾಡಲಾಗಿತ್ತು.
ಈಗ ಹೀಗೆ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಆ ನಂತರ ಮಧ್ಯವರ್ತಿಗಳು ಮತ್ತು ಆಭರಣ ವ್ಯಾಪಾರಿಗಳ ಜಾಲದ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ ಎಂದು ಇಡಿಗೆ ತನಿಖೆಯ ನಂತರ ಗೊತ್ತಾಗಿದೆ. ರನ್ಯಾ ರಾವ್ ಮತ್ತು ತರುಣ್ ಕೊಂಡೂರು ರಾಜು, ಉಗಾಂಡಾ, ಕೀನ್ಯಾ ಮತ್ತು ಟಾಂಜಾನಿಯಾದಂತಹ ಆಫ್ರಿಕನ್ ರಾಷ್ಟ್ರಗಳಿಂದ ಚಿನ್ನವನ್ನು ಪಡೆದು, ಆ ಚಿನ್ನವನ್ನು ಸುಗಮವಾಗಿ ಸಾಗಿಸಲು ದುಬೈನಲ್ಲಿ ''ವೀರಾ ಡೈಮಂಡ್ಸ್ ಟ್ರೇಡಿಂಗ್ LLC'' ಎಂಬ ಕಂಪನಿಯನ್ನು 2023ರಲ್ಲಿ ಸ್ಥಾಪಿಸಿದ್ದರು ಎನ್ನುವ ವಿಚಾರ ಈಗ ಬಯಲಾಗಿದೆ. ದುಬೈಯನ್ನು ಟ್ರಾನ್ಸಿಟ್ ಮತ್ತು ವ್ಯಾಪಾರ ಕೇಂದ್ರವಾಗಿ ಬಳಸುವ ಉದ್ದೇಶ ಅವರಿಗಿತ್ತು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ.
ದುಬೈ ಮಾರುಕಟ್ಟೆಗೆ ಚಿನ್ನದ ಮೂಲ ಆಫ್ರಿಕಾದ ಗಣಿಗಳು ಎಂದು ರನ್ಯಾ ರಾವ್ಗೆ ಸಲಹೆ ನೀಡಲಾಗಿತ್ತು. ಹೀಗಾಗಿಯೇ, ಆಫ್ರಿಕಾದಿಂದ ನೇರವಾಗಿ ಚಿನ್ನವನ್ನ ಖರೀದಿಸಲು ಇಬ್ಬರೂ ಪ್ರಯತ್ನಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದ್ದು, ರನ್ಯಾ ರಾವ್ ಮತ್ತು ಅವರ ಸಹಚರ ತರುಣ್ ಕೊಂದುರು ರಾಜು ಉಗಾಂಡಾದ 'ಬೆನ್' ಎಂಬ ಏಜೆಂಟ್ ಜೊತೆ ಸಂಪರ್ಕ ಸಾಧಿಸಿದರು. ಮೊದಲು 5 ಕೆಜಿ ಚಿನ್ನವನ್ನ ಸಾಗಿಸಿ, ಆನಂತರ 50 ಕೆಜಿ ಚಿನ್ನ ಸಾಗಿಸುವ ಬಗ್ಗೆ ಮೂವರೂ ಒಪ್ಪಂದ ಮಾಡಿಕೊಂಡಿದ್ದರು. ಡೀಲ್ನಂತೆ ಮೊದಲಿಗೆ ಲಕ್ಷಾಂತರ ರೂಪಾಯಿ ಹಾಗೂ ನಂತರ ಡಾಲರ್ಗಳಲ್ಲಿ ಹಣ ಪಾವತಿಸಲಾಗಿತ್ತು. ಆದರೆ, ಏಜೆಂಟ್ ಚಿನ್ನವನ್ನ ಒದಗಿಸಲಿಲ್ಲ ಎಂಬ ವಿಚಾರ ಕೂಡ ಚಾರ್ಜ್ಶೀಟ್ನಲ್ಲಿ ಬಹಿರಂಗವಾಗಿದೆ.
ಜನವರಿ 1 2024 ರಂದು ತರುಣ್ ರಾಜು ಉಗಾಂಡಾದ ಕಂಪಾಲಾಗೆ ತೆರಳಿ ಆ ಏಜೆಂಟ್ನ ಭೇಟಿಯಾಗಿದ್ದರು. ಆದರೆ ಅಲ್ಲಿ ಹಿಂದೆ 5 ಕೆಜಿ ಚಿನ್ನವನ್ನು 25,000 ಡಾಲರ್ ಪಡೆದು ನೀಡಿದ್ದ ಬೆನ್ ಮತ್ತೆ ಚಿನ್ನವನ್ನ ತೋರಿಸಿ, 1.7 ಕೋಟಿ ರೂಪಾಯಿ ಹೆಚ್ಚುವರಿ ಹಣ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದ. ಬೇರೆ ದಾರಿ ಇಲ್ಲದೆ ದುಬೈನಲ್ಲಿದ್ದ ಬೆನ್ ಸಹಚರನಿಗೆ ಹಣವನ್ನ ವರ್ಗಾವಣೆ ಮಾಡಲಾಗಿತ್ತು. ಆದರೆ, ತಾವು ಮೋಸ ಹೋದ ವಿಚಾರ ಆ ನಂತರ ಇಬ್ಬರಿಗೆ ಗೊತ್ತಾಗಿತ್ತು. ಈ ಕುರಿತ ಪೇಮೆಂಟ್ ಬಗ್ಗೆ ಸಾಕ್ಷಿಗಳು ವಾಟ್ಸ್ ಆಪ್ ಚಾಟ್ಸ್ನಲ್ಲಿ ಸಿಕ್ಕಿವೆ ಎಂದು ಇಡಿ ಅಧಿಕಾರಿಗಳು ಸದ್ಯ ತಮ್ಮ ವರದಿಯಲ್ಲಿ ಉಲ್ಲೇಖ ಮಾಡಿದ್ಧಾರೆ.
ಆಫ್ರಿಕಾದಲ್ಲಿ 2 ಕೋಟಿ ಉಂಡೆನಾಮ ತಿಕ್ಕಿಸಿಕೊಂಡ ಮೇಲೆ, ಕೀನ್ಯಾದಲ್ಲಿಯೂ ಕೂಡ ಇದೇ ರೀತಿಯ ವ್ಯವಹಾರಕ್ಕೆ ಇಬ್ಬರೂ ಪ್ರಯತ್ನಿಸಿದ್ದರು. ಆದರೆ, ಅಲ್ಲೂ ವಂಚನೆಗೆ ಒಳಗಾದರು ಎಂದು ಚಾರ್ಜ್ಶೀಟ್ನಲ್ಲಿ ವರದಿ ಮಾಡಲಾಗಿದ್ದು ಕೀನ್ಯಾ ಅಧಿಕಾರಿಗಳ ಸಹಾಯ ಪಡೆದರೂ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಉಲ್ಲೇಖ ಮಾಡಲಾಗಿದೆ.
ಹೀಗೆ ಎರಡು ಬಾರಿ ಕೈಸುಟ್ಟುಕೊಂಡ ಮೇಲೆ ಆಫ್ರಿಕಾದಿಂದ ನೇರವಾಗಿ ಚಿನ್ನ ಖರೀದಿಸುವ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟ ರನ್ಯಾ ರಾವ್ ಮತ್ತು ರಾಜು, ದುಬೈನ ಡೈರಾ ಗೋಲ್ಡ್ ಸೂಕ್ನಲ್ಲಿ ಆಫ್ರಿಕಾ ಮೂಲದ ವ್ಯಾಪಾರಿಗಳಿಂದ ನಗದು ಪಾವತಿಯಲ್ಲಿ ಚಿನ್ನ ಖರೀದಿಸಲು ಮುಂದಾದರು, ದುಬೈನಲ್ಲಿದ್ದ ಆಫ್ರಿಕಾ ಮೂಲದ ಗೋಲ್ಡ್ ಡೀಲರ್ಸ್ಗಳೊಂದಿಗೆ ಸಂಪರ್ಕ ಸಾಧಿಸಿದರು, ಕಡಿಮೆ ಪ್ರಮಾಣದ ಚಿನ್ನವನ್ನು ರಿಯಾಯಿತಿ ದರದಲ್ಲಿ ಪಡೆಯುತ್ತಿದ್ದರು ಎಂದು ಕೂಡ ಚಾರ್ಜ್ಶೀಟ್ನಲ್ಲಿ ನಮೂದಿಸಲಾಗಿದೆ ಎಂದು ''ಹಿಂದೂಸ್ತಾನ್ ಟೈಮ್ಸ್'' ಸೇರಿ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.


Click it and Unblock the Notifications











