18 ವರ್ಷದ ಕನಸು ನನಸು, ಈ ಸಲ ಕಪ್ ನಮ್ದೇ ; ಕುಣಿದು ಕುಪ್ಪಳಿಸಿದ ಕನ್ನಡ ಚಿತ್ರರಂಗ..!
18 ವರ್ಷ. ಒಂದಲ್ಲ ಎರಡಲ್ಲ ಈ ದಿನ ಈ ಕ್ಷಣಕ್ಕೆ ಕನ್ನಡಿಗರು 18 ವರ್ಷ ಕಾದಿದ್ದರು. ಆ ದಿನ ನಿನ್ನೆ (ಜೂನ್ 3 ) ಕೊನೆಗೂ ಬಂತು. ಕೇವಲ ಕೊಹ್ಲಿ ಮಾತ್ರವಲ್ಲ ಕನ್ನಡಿಗರ ಕಣ್ಣೀರ ಕೋಡಿ ನಿನ್ನೆ ಹರಿಯಿತು. ಈ ಸಲ ಕಪ್ ನಮ್ದೇ ಎಂದು ಹಗಲಿರುಳು ಕನವರಿಸುತ್ತಿದ್ದ ಅಸಂಖ್ಯಾತ ಜನ ಈ ಸಲ ಕಪ್ ನಮ್ದೇ ಎಂದು ಕುಣಿದಾಡಿದರು. ಭಾವುಕರಾದರು.
ಆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಮಾಡಿದ ಪೂಜೆ-ಪುನಸ್ಕಾರಕ್ಕೆಲ್ಲ ಕೊನೆಗೂ ಫಲ ಸಿಕ್ಕಿದ ಹಿನ್ನೆಲೆ ಸಂಭ್ರಮದಲ್ಲಿ ಅಲೆಯಲ್ಲಿ ತೇಲಿದರು. ಅಬ್ಬಬ್ಬಾ.. ಆ ಪಟಾಕಿ ಸದ್ದು. ಕಿವಿಗಡಚುವ ಶಬ್ದ.. ಚಪ್ಪಾಳೆ- ಶಿಳ್ಳೆ.. ವರ್ಣಿಸಲು ಅಸಾಧ್ಯ.

ಕೇವಲ ಜನಸಾಮಾನ್ಯರಷ್ಟೇ ಅಲ್ಲ ಕನ್ನಡ ಚಿತ್ರರಂಗದ ಅನೇಕರು ಇಂತಹದ್ದೊಂದು ಐತಿಹಾಸಿಕ ದಿನಕ್ಕೆ ಕಾಯುತ್ತಿದ್ದರು. ಉಗುರು ಕಡಿಯುತ್ತಾ ನಿನ್ನೆ ನಡೆದ ಬೆಂಗಳೂರು ಮತ್ತು ಪಂಜಾಬ್ ನಡುವಿನ ರಣ ರೋಚಕ ಫೈನಲ್ ಪಂದ್ಯವನ್ನು ನೋಡುತ್ತಿದ್ದರು.
ಬೆಂಗಳೂರು ತಂಡ ಕಪ್ ಮುಡಿಗೇರಿಸಿಕೊಂಡ ಬೆನ್ನಲ್ಲೇ ಕೊಹ್ಲಿ ಮೈದಾನದಲ್ಲಿ ಬಿಕ್ಕಿದಂತೆ ಬಿಕ್ಕಿದರು. ತಮ್ಮ ಮನದ ಮಾತುಗಳಿಗೆ ಅಕ್ಷರದ ರೂಪವನ್ನು ಕೂಡ ನೀಡಿದರು. ತಮ್ಮ ಸಂಭ್ರಮವನ್ನು ಹಂಚಿಕೊಂಡರು. ಆ ಪೈಕಿ ಕೆಲವರ ಸಂಭ್ರಮಾಚರಣೆಯ ವಿವರ ಇಲ್ಲಿದೆ.
ಅಶ್ವಿನಿ ಪುನೀತ್ ರಾಜ್ ಕುಮಾರ್
ನಿರಂತರ ನಂಬಿಕೆ ಮತ್ತು ಬೆಂಬಲದಿಂದ ನಮ್ಮ ಕನಸುಗಳು ಕೊನೆಗೂ ನನಸಾಗಿವೆ. ನಮ್ಮ ತಂಡ ನಮ್ಮ ಗೆಲುವು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ನಮ್ಮ ತಂಡ, ನಮ್ಮ ಗೆಲುವು ನಮ್ಮ ಆರ್ಸಿಬಿ. ಕೊನೆಗೂ ಈ ಸಲ ಕಪ್ ನಮ್ದೇ ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ನಿಮ್ಮೆಲ್ಲರ ನೆಚ್ಚಿನ ಪುನೀತ್ ರಾಜ್ಕುಮಾರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಭಾರಿಯಾದಾಗ ಮೈದಾನದಲ್ಲಿ ಓಡಾಡಿದ್ದ ಫೋಟೊವನ್ನು ಕೂಡ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಂಚಿಕೊಂಡಿದ್ದಾರೆ.
ಕಿಚ್ಚ ಸುದೀಪ್
ಇನ್ನು ಈ ಬಾರಿಯ ಸಿಸಿಎಲ್ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಕನಸು ಭಗ್ನವಾಗಿದ್ದು ಪಂಜಾಬ್ ತಂಡದಿಂದ. ಈ ಹಿನ್ನೆಲೆ ನಿನ್ನೆಯ ಗೆಲುವು ಸುದೀಪ್ ಅವರ ಪಾಲಿಗೆ ತುಂಬಾನೇ ವಿಶೇಷವಾದದ್ದು. ತಮ್ಮ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸುದೀಪ್ ದೀರ್ಘ ಕಾಯುವಿಕೆ ಕೊನೆಗೂ ಮುಗಿದಿದೆ . ವರ್ಷಗಳ ಉತ್ಸಾಹ, ಪರಿಶ್ರಮ ಮತ್ತು ನಂಬಿಕೆಯ ನಂತರ. ಆರ್ಸಿಬಿ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿದೆ ಎಂದು ಹೇಳಿದ್ದಾರೆ. ಪ್ರತಿಯೊಬ್ಬ ಆರ್ಸಿಬಿ ಅಭಿಮಾನಿಗೂ ಎಂತಹ ಕ್ಷಣ.ಈ ಸಲ ಕಪ್ ನಮ್ದು ಎಂದು ಬರೆದುಕೊಂಡಿದ್ದಾರೆ.
ಚಾಂಪಿಯನ್ಸ್ ಆಫ್ ಹಾರ್ಟ್- ಶಿವಣ್ಣ
ಕಮಲ್ ಹಾಸನ್ ವಿಚಾರಕ್ಕೆ ವಿವಾದದ ಕೇಂದ್ರ ಬಿಂದುವಾಗಿರುವ ಶಿವಣ್ಣ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಸೂಪರ್ ಕಿಂಗ್ಸ್ ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಆರ್ಸಿಬಿ ಗೆಲುವನ್ನು ಸಂಭ್ರಮಿಸಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಶಿವಣ್ಣ ಚಾಂಪಿಯನ್ಸ್ ಆಫ್ ಹಾರ್ಟ್ ಈಗ ಕಪ್ನ ಮಾಲೀಕರು. ಅಭಿನಂದನೆಗಳು ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ಫೋಟೊವನ್ನು ಹಂಚಿಕೊಂಡಿದ್ದಾರೆ.
Enjoy guys ಕಪ್ -ಜಗ್ಗೇಶ್
ಸದಾ ಕನ್ನಡ, ಕನ್ನಡ ಚಿತ್ರರಂಗ ಮತ್ತು ರಾಜಕೀಯದ ಕುರಿತು ಮಾತನಾಡುವ ನವರಸನಾಯಕ ಜಗ್ಗೇಶ್ ಕೂಡ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯವನ್ನು ನೋಡಿದ್ದಾರೆ. ಆರ್ಸಿಬಿ ಗೆಲುವುನ್ನು ಸಂಭ್ರಮಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಜಗ್ಗೇಶ್ ಯಾಕೋ ಬೆಳಗ್ಗೆ ಹೀಗೆ ಅನ್ನಿಸಿತು ಠಂಕಿಸಿದೆ..ಚನ್ನಾಗಿ ನಿದ್ರಿಸುತ್ತಿದ್ದೆ ಪಟಾಕಿ ಸದ್ದು ಎಚ್ಚರಿಸಿತು ಯತಿರಾಜನಿಗೆ ಕೇಳಿದೆ we won ಎಂದ.. ಖುಷಿಯಾಯಿತು ಮತ್ತೆ ನಿದ್ರೆಗೆ ಜಾರುವೆ Enjoy guys ಕಪ್ ಕೊನೆಗು ನಮ್ಮದೆ ಆಯಿತು ಎಂದು ಹೇಳಿದ್ದಾರೆ.
ಕೇವಲ ಇವರಷ್ಟೇ ಅಲ್ಲ ಕನ್ನಡದವರಾಗಿಯೂ ಕೂಡ ನಾನು ಕನ್ನಡತಿ ಎಂದು ಹೇಳಿಕೊಳ್ಳಲು ಹಿಂಜರಿಯುವ, ತಮ್ಮ ಹೇಳಿಕೆಗಳಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುವ ರಶ್ಮಿಕಾ ಮಂದಣ್ಣ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವುನ್ನು ಸಂಭ್ರಮಿಸಿದ್ದಾರೆ. ಆರ್ಸಿಬಿಯ ಪೋಸ್ಟರ್ ಹಂಚಿಕೊಂಡಿದ್ದಾರೆ. ಇನ್ನು ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ ಕೂಡ ತಮ್ಮ ಮಗನ ಜೊತೆ ಆರ್ಸಿಬಿಯ ಗೆಲುವನ್ನು ಸಂಭ್ರಮಿಸಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವನ್ನು ಸಂಭ್ರಮಿಸಿದ್ದಾರೆ. ಹೆಚ್ಚು ಕಡಿಮೆ ಆರು ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿ ಪ್ರಚಾರ ಮಾಡುತ್ತಾ ಅಭಿಮಾನಿಗಳನ್ನು ಹುರುದುಂಬಿಸಿ, ರಂಜಿಸಿದ್ದ ರಮ್ಯಾ, ವಿರಾಟ್ ಕೊಹ್ಲಿಯ ವಿಶೇಷ ಭಾವಚಿತ್ರವನ್ನು ಹಂಚಿಕೊಂಡು ಈ ಸಲ ಕಪ್ ನಮ್ದು ಎಂದು ಹೇಳಿದ್ದಾರೆ.


Click it and Unblock the Notifications











