'ಗಜ' ನಾಯಕಿ ನವ್ಯಾ ನಾಯರ್ ಆತ್ಮಕಥನ ಕನ್ನಡದಲ್ಲಿ ಬಿಡುಗಡೆ
ಚಾಲೆಂಜಿಂಗ್ ಸ್ಟಾರ್ ನಟನೆಯ ಸೂಪರ್ ಹಿಟ್ ಗಜ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಾಲಯಾಳಂನ ಖ್ಯಾತ ನಟಿ ನವ್ಯಾ ನಾಯರ್ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಗಜ ಸಿನಿಮಾದಲ್ಲಿ ನವ್ಯಾ ಅಭಿನಯಕ್ಕೆ ಕನ್ನಡಿಗರು ಫಿದಾ ಆಗಿದ್ದರು.
ಗಜ ಸಿನಿಮಾ ಬಳಿಕ ನವ್ಯಾ ನಾಯರ್ ಕನ್ನಡದಲ್ಲಿ ಶಿವರಾಜ್ ಕುಮಾರ್ ಜೊತೆ ಭಾಗ್ಯದ ಬಳೆಗಾರ ಮತ್ತು ದರ್ಶನ್ ಜೊತೆ ಎರಡನೇ ಬಾರಿಗೆ ಬಾಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಬಳಿಕ ಮತ್ತೆ ರವಿಚಂದ್ರನ್ ನಟನೆಯ ದೃಶ್ಯ ಸಿನಿಮಾ ಮೂಲಕ 2014ರಲ್ಲಿ ಕನ್ನಡಿಗರ ಮುಂದೆ ಬಂದ ನವ್ಯಾ ನಂತರ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿಲ್ಲ.
ಇದೀಗ ಆತ್ಮಕಥನ ಬರೆಯುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ನವ್ಯಾ ನಾಯರ್ ಬರೆದಿರುವ ಆತ್ಮಚರಿತ್ರೆ ನವ್ಯಾ ರಸಂಗಳ್ ರಿಲೀಸ್ ಆಗಿದೆ. ಇದೇ ಪುಸ್ತಕ ಈಗ ಕನ್ನಡದಲ್ಲಿ 'ಧನ್ಯ ವೀಣಾ' ಹೆಸರಿನಲ್ಲಿ ಇತ್ತಿಚೀಗಷ್ಟೆ ಬಿಡುಗಡೆಯಾಗಿದೆ. ಕನ್ನಡದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸ್ವತಹ ನವ್ಯಾ ನಾಯರ್ ಅವರೇ ಬೆಂಗಳೂರಿಗೆ ಆಗಮಿಸಿದ್ದರು.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್, ಭಾವನ ಬೆಳಗೆರೆ ಸೇರಿದಂತೆ ಅನೇಕರು ಹಾಜರಿದ್ದರು. ಅಂದಹಾಗೆ ಮೂಲ ಪುಸ್ತಕವನ್ನು ಲೇಖಕಿ ಜಾನೆಟ್ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ನಟಿ ನವ್ಯಾ ನಾಯರ್, ದೃಶ್ಯ ಚಿತ್ರದ ಪ್ರೀಮಿಯರ್ ಗೆ ಬೆಂಗಳೂರಿಗೆ ಬಂದಿದ್ದೆ, ಬಳಿಕ ಈಗಲೇ ಬಂದಿರುವುದು ಎಂದಿದ್ದಾರೆ. ಕನ್ನಡ ಸಿನಿಮಾರಂಗದ ಬಗ್ಗೆ ನನಗೆ ಒಳ್ಳೇ ಅನುಭವಗಳಿವೆ, ಉತ್ತಮ ವಾತಾವರಣವಿದೆ ಎಂದಿದ್ದಾರೆ.
ನನ್ನ ಮೊದಲ ಸಿನಿಮಾ ಗಜ ಚಿತ್ರದಲ್ಲಿ ದರ್ಶನ್ ಜೊತೆ ನಟಿಸಿದ್ದೇನೆ. ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್ ಜೊತೆ ಸಿನಿಮಾಗಳನ್ನು ಮಾಡಿದ್ದೇನೆ. ಉತ್ತಮ ಅವಕಾಶ ಬಂದರೆ ಖಂಡಿತ ಕನ್ನಡದಲ್ಲಿ ಸಿನಿಮಾ ಮಾಡುತ್ತೇನೆ. ಇದು ನನ್ನ ಆತ್ಮಕಥನವಲ್ಲ, ಕಲಾ ಜೀವನದ ಅನುಭವಗಳನ್ನು ಅಕ್ಷರ ರೂಪಕ್ಕೆ ಇಳಿಸಿದ್ದೇನೆ' ಎಂದು ಹೇಳಿದ್ದಾರೆ.
ಸದ್ಯ ನವ್ಯಾ ನಾಯರ್ ಮತ್ತೆ ಬಣ್ಣದ ಲೋಕದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ನಾಯಕಿ ಪ್ರಧಾನ ಸಿನಿಮಾ ಉರುಪಿನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ನವ್ಯಾ ಮತ್ತೆ ಅಭಿಮಾನಿಗಳ ಮುಂದೆ ಬರಲಿದ್ದಾರೆ.


Click it and Unblock the Notifications











