'ಗಾಳಿಪಟ 2' ಗೆಲ್ಲಿಸಿದ ಅಭಿಮಾನಿಗಳಿಗೆ ಗಣೇಶ್ ಪ್ರೀತಿಯ ಪತ್ರ
ಗಣೇಶ್-ಯೋಗರಾಜ್ ಭಟ್ಟರ್ ಕಾಂಬಿನೇಶನ್ ಮತ್ತೆ ವರ್ಕ್ ಆಗಿದೆ. ಸೂಪರ್ ಡೂಪರ್ ಹಿಟ್ ಆಗಿದ್ದ ಇವರದ್ದೇ ಕಾಂಬಿನೇಷನ್ನ 'ಗಾಳಿಪಟ' ಸಿನಿಮಾದ ಹೆಸರನ್ನೇ ಇರಿಸಿಕೊಂಡು ಮಾಡಿದ 'ಗಾಳಿಪಟ 2' ಹಿಟ್ ಆಗಿದ್ದು ಗಣೇಶ್ ಖುಷಿಯಲ್ಲಿ ತೇಲುತ್ತಿದ್ದಾರೆ.
Recommended Video
ಬಹಳ ಸಮಯದ ಬಳಿಕ ದೊಡ್ಡ ಗೆಲುವು ಪಡೆದಿರುವ ಗಣೇಶ್, ಈ ಖುಷಿಯ ಸಂದರ್ಭದಲ್ಲಿ ಮೆಚ್ಚಿನ ಅಭಿಮಾನಿಗಳನ್ನು ಮರೆತಿಲ್ಲ. ಈಗಾಗಲೇ ಸಕ್ಸಸ್ ಮೀಟ್ ಮಾಡಿ ಖುಷಿ ಹಂಚಿಕೊಂಡು, ಸಿನಿಮಾ ತಂಡಕ್ಕೆ ಹಾಗೂ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾಗಿದೆ.
ಆದರೆ ಗಣೇಶ್, ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಪತ್ರವೊಂದನ್ನು ಬರೆದು ವಿಶೇಷವಾಗಿ ಧನ್ಯವಾದ ಹೇಳಿದ್ದಾರೆ. ಅಭಿಮಾನಿಗಳಿಗೆ ಮಾತ್ರವೇ ಅಲ್ಲದೆ, ಮಾಧ್ಯಮದವರಿಗೆ, ವಿತರಕರಿಗೆ, ಪ್ರದರ್ಶಕರಿಗೆ ಹಾಗೂ ಸಾಮಾಜಿಕ ಜಾಲತಾಣದ ಸ್ನೇಹಿತರೆಲ್ಲರಿಗೂ ಈ ಪತ್ರವನ್ನು ಬರೆದಿದ್ದು, ಅದು ಹೀಗಿದೆ...

ನನಗೆ ಅತೀವ ಸಂತಸ ಉಂಟು ಮಾಡಿದೆ: ಗಣೇಶ್
''ನಮ್ಮ 'ಗಾಳಿಪಟ 2' ಚಿತ್ರವನ್ನು ನೀವೆಲ್ಲರೂ ಪ್ರೀತಿಯಿಂದ ಸ್ವೀಕರಿಸಿ, ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿರುವುದು ನನಗೆ ಅತೀವ ಸಂತಸ ಉಂಟು ಮಾಡಿದೆ. ಅಭಿಮಾನಿಗಳು ಸಂಭ್ರಮಿಸುವ ಪ್ರತಿ ಕ್ಷಣವೂ ಕಲಾವಿದನನ್ನು ಆಶೀರ್ವದಿಸಿದಂತೆ. ಆ ನಿಟ್ಟಿನಲ್ಲಿ ನಾನು ನಿಜಕ್ಕೂ ಅದೃಷ್ಟವಂತ. ನನ್ನ ಮೊದಲನೇ ಸಿನಿಮಾದಿಂದ ಶುರುವಾಗಿ ಈಗಿನವರೆಗೂ ನನ್ನನ್ನು ಆಶೀರ್ವದಿಸುತ್ತಾ ತೋರುತ್ತಿರುವ ಪ್ರೀತಿಗೆ ನಾನು ಋಣಿ'' ಎಂದಿದ್ದಾರೆ ಗಣೇಶ್.

ರಂಜಿಸುವ ನಿರಂತರ ಪ್ರಯತ್ನ: ಗಣೇಶ್
''ವಿಭಿನ್ನ ಬಗೆಯ ಪಾತ್ರಗಳ ಮೂಲಕ ಕನ್ನಡ ಸಿನಿ ರಸಿಕರಾದ ನಿಮ್ಮನ್ನು ರಂಜಿಸಿ ಖುಷಿಪಡಿಸುವ ಕಾರ್ಯವನ್ನು ನಾನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇನೆ. ಅವುಗಳಲ್ಲಿ ಅನೇಕ ಪಾತ್ರಗಳು ನಿಮಗೆ ಆಪ್ತವೆನಿಸಿದರೆ ಒಂದಷ್ಟು ನಿಮ್ಮನ್ನು ನಿರಾಸೆಗೊಳಿಸಿರಬಹುದು. ಹಾಗಾಗಿ ಸಿನಿಮಾ ಬಗ್ಗೆ ನೀವು ನೀಡಿರುವ ತೀರ್ಪುಗಳನ್ನು ಸಮಭಾವ, ಸಮಚಿತ್ತದಿಂದ ಸ್ವೀಕರಿಸಿದ್ದೇನೆ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗದೆ, ಪ್ರತೀ ಚಿತ್ರದಲ್ಲೂ ನನ್ನಲ್ಲಿ ನಾನೇ ಒಬ್ಬ ಉತ್ತಮ ಕಲಾವಿದನಿಗಾಗಿ ಹುಡುಕಾಟ ನಡೆಸಿದ್ದೇನೆ'' ಎಂದಿದ್ದಾರೆ ಗಣೇಶ್.

ನಿಮ್ಮ ನಂಬಿಕೆ ಹುಸಿ ಮಾಡದಂತೆ ಎಚ್ಚರವಹಿಸಿದ್ದೇನೆ: ಗಣೇಶ್
''ನಿಮ್ಮ ನಂಬಿಕೆಯ ಗಣೇಶ ನಿಮ್ಮ ನಿರೀಕ್ಷೆಯನ್ನು ಯಾವುದೇ ಕಾರಣಕ್ಕೆ ಹುಸಿ ಮಾಡದಂತೆ ಎಚ್ಚರ ವಹಿಸಿದ್ದೇನೆ. ಇದೆಲ್ಲವೂ ನೀವುಗಳು ನನ್ನ ಹಾಗೂ ನನ್ನ ಅಭಿನಯದ ಮೇಲಿಟ್ಟಿರುವ ಅಪಾರ ನಂಬಿಕೆಗೆ ನಾನು ಸಲ್ಲಿಸಬಹುದಾದ ಪುಟ್ಟ ಗೌರವ ಎಂಬುದಷ್ಟೆ ನನ್ನ ಭಾವನೆ'' ಎಂದು ವಿನೀತರಾಗಿದ್ದಾರೆ ಗಣೇಶ್.

ಅಭಿಮಾನ ಜೊತೆಗಿದ್ದರೆ ಸಾಕು: ಗಣೇಶ್
''ಗಾಳಿಪಟ 2' ಸಿನಿಮಾದ ಮೂಲಕ ಮನೆ-ಮನೆಗೆ ಖುಷಿಯನ್ನು ಹಂಚಿದ ನಿರ್ದೇಶಕರಾದ ನಲ್ಮೆಯ ಶ್ರೀ ಯೋಗರಾಜ್ ಭಟ್ ಅವರಿಗೆ, ಹೆಮ್ಮೆಯ ನಿರ್ಮಾಪಕರಾದ ರಮೇಶ್ ರೆಡ್ಡಿ ಅವರಿಗೆ, ವಿತರಿಸಿದ ಕೆವಿಎನ್ ಸಂಸ್ಥೆಗೆ ಹಾಗೂ ನಮ್ಮ 'ಗಾಳಿಪಟ 2' ಸಿನಿಮಾದ ಇಡೀಯ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಮನದಾಳದ ಧನ್ಯವಾದಗಳು ಹಾಗೂ ಹೃತ್ಪೂರ್ವಕ ಅಭಿನಂದನೆಗಳು. ಮನರಂಜಿಸುವ ಕಾಯಕ ನಿರಂತರವಾಗಿ ಸಾಗಲು ನಿಮ್ಮ ಪ್ರೀತಿ ಜೊತೆಗೆ ಅಕ್ಕರೆ ತುಂಬಿದ ಅಭಿಮಾನ ಸದಾ ಜೊತೆಗಿದ್ದರೆ ಸಾಕು'' ಎಂದಿದ್ದಾರೆ ಗಣೇಶ್.


Click it and Unblock the Notifications











