'ಗಂಧದ ಗುಡಿ' ಚಿತ್ರಕ್ಕೆ ತೆರಿಗೆ ವಿನಾಯಿತಿ: ಮಾತು ತಪ್ಪಿದ್ರಾ ಸಿಎಂ ಬೊಮ್ಮಾಯಿ?
ಪುನೀತ್ ರಾಜ್ಕುಮಾರ್ ಕೊನೆಯ ಸಿನಿಮಾ 'ಗಂಧದ ಗುಡಿ' ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣ್ತಿದೆ. ಕರ್ನಾಟಕದ ಅರಣ್ಯ ಸಂಪತ್ತು ಹಾಗೂ ವನ್ಯಜೀವಿ ಸಂಪತ್ತನ್ನು ಜಗತ್ತಿಗೆ ಪರಿಚಯಿಸಲು ಅಪ್ಪು ಕಂಡ ಕನಸು ಇದು. ಅಪ್ಪು ಇಲ್ಲದೇ ಇದ್ದರೂ ಅವರ ಕನಸು ನನಸಾಗಿದೆ. ಇನ್ನು ಚಿತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತೆರಿಗೆ ವಿನಾಯಿತಿ ಘೋಷಿಸಿದ್ದರು. ಆದರೆ ಸಿನಿಮಾ ಬಿಡುಗಡೆಯಾಗಿ 4 ದಿನ ಕಳೆದರೂ ಈ ಬಗ್ಗೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ.
'ಪುನೀತ ಪರ್ವ' ಕಾರ್ಯಕ್ರಮದ ದಿನ ವೇದಿಕೆ ಏರುವ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಗಳ ಜೊತೆ ಮಾತನಾಡಿದ್ದರು. ಈ ವೇಳೆ 'ಗಂಧದ ಗುಡಿ' ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಕುರಿತು ಕೇಳಿದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ಸಿಎಂ "ನಿಸರ್ಗದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ಮುಂದಿನ ಪೀಳಿಗೆಗೆ ನಿಸರ್ಗದ ಬಗ್ಗೆ ಜಾಗೃತಿ ಮೂಡಿಸೋ ಕೆಲಸದ ಅಗತ್ಯವಿದೆ. ಹಾಗಾಗಿ ಗಂಧದ ಗುಡಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ" ಎಂದು ಘೋಷಿಸಿದ್ದರು.
ಕರ್ನಾಟಕದ ಪ್ರಾಕೃತಿಕ ಶ್ರೀಮಂತಿಕೆ, ಜೀವ ವೈವಿಧ್ಯ, ಬುಡಕಟ್ಟು ಜನರ ಸಂಸ್ಕೃತಿಗಳನ್ನು ಪರಿಚಯಿಸುವ ಈ ಡಾಕ್ಯುಡ್ರಾಮ ಚಿತ್ರವನ್ನು ಎಲ್ಲರೂ ನೋಡಬೇಕು ಎನ್ನುವು ಎಲ್ಲರ ಆಶಯವಾಗಿದೆ. ಫಿಲ್ಮಿಬೀಟ್ ಕೂಡ ಈ ಚಿತ್ರಕ್ಕೆ ಸರ್ಕಾರ ತೆರಿಗೆ ವಿನಾಯಿತಿ ನೀಡಬೇಕು ಎಂದು ಎಲ್ಲರಿಗಿಂತ ಮುನ್ನ ಅಭಿಯಾನ ಮಾಡಿತ್ತು.

ತೆರಿಗೆ ವಿನಾಯಿತಿ ಆದೇಶ ಬಂದಿಲ್ಲ
ತೆರಿಗೆ ವಿನಾಯಿತಿಯಿಂದ ಟಿಕೆಟ್ ದರ ಸಹಜವಾಗಿಯೇ ಕಡಿಮೆ ಆಗುತ್ತದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಸಹಾಯಕವಾಗುತ್ತದೆ. ಸಿಎಂ 'ಗಂಧದ ಗುಡಿ' ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದರೂ "ಇನ್ನು ಈ ಬಗ್ಗೆ ಸರ್ಕಾರದಿಂದ ಯಾವುದೇ ಆದೇಶ ಹೊರ ಬಂದಿಲ್ಲ. ಹಾಗಾಗಿ ಅದು ಇನ್ನು ಅನುಷ್ಠಾನಕ್ಕೆ ಬಂದಿಲ್ಲ" ಎಂದು ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ. ವಿ ಚಂದ್ರಶೇಖರ್ ಫಿಲ್ಮಿಬೀಟ್ಗೆ ಮಾಹಿತಿ ನೀಡಿದ್ದಾರೆ. ತೆರಿಗೆ ವಿನಾಯಿತಿ ಆದೇಶ ಬಾರದ ಕಾರಣ ಪ್ರೇಕ್ಷಕರು ಸಂಪೂರ್ಣ ಹಣ ಪಾವತಿಸಿ ಸಿನಿಮಾ ನೋಡುತ್ತಿದ್ದಾರೆ.

ತೆರಿಗೆ ವಿನಾಯಿತಿಗಾಗಿ ಅಭಿಯಾನ
ಒಂದೊಳ್ಳೆ ಸಂದೇಶ ಹೊತ್ತು ಬಂದಿರುವ ಈ ಡಾಕ್ಯುಡ್ರಾಮ ಚಿತ್ರವನ್ನು ಎಲ್ಲರೂ ನೋಡಬೇಕು. ಎಲ್ಲರೂ ಅಪ್ಪು ನೀಡಿರುವ ಪರಿಸರ ಉಳಿಸಿ ಎನ್ನುವ ಸಂದೇಶವನ್ನು ಪಾಲಿಸಬೇಕು. ಹಾಗಾಗಿ ಇಂತಹ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಸಾಕಷ್ಟು ಜನ ಮನವಿ ಮಾಡಿದ್ದರು. ನಟಿ ರಮ್ಯಾ ಕೂಡ ಸಿನಿಮಾ ನೋಡಿ ಸಿಎಂ ಬೊಮ್ಮಾಯಿಯವರು ಇಂತಹ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂದಿದ್ದರು.

ಕೆಲ ಚಿತ್ರಗಳಿಗೆ ತೆರಿಗೆ ವಿನಾಯಿತಿ
ಇತ್ತೀಚೆಗಷ್ಟೇ ಬಾಲಿವುಡ್ನ 'ಕಾಶ್ಮೀರಿ ಫೈಲ್ಸ್' ಚಿತ್ರಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಿತ್ತು. ಅದೇ ರೀತಿ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಚಿತ್ರಕ್ಕೂ ಸಿಎಂ ಬಸವರಾಜ ಬೊಮ್ಮಾಯಿ ತೆರಿಗೆ ವಿನಾಯಿತಿ ಘೋಷಿಸಿದ್ದರು. ಇನ್ಬ್ರೀಡಿಂಗ್ನಿಂದಾಗಿ ಶ್ವಾನಗಳ ಮೇಲಾಗುವ ಅಡ್ಡಪರಿಣಾಮ ಹಾಗೂ ಪ್ರಾಣಿ ಹಿಂಸೆಯ ವಿರುದ್ಧ ಸಂದೇಶವನ್ನು ಸಿನಿಮಾ ಒಳಗೊಂಡಿದೆ ಹಾಗೂ ಬೀದಿ ನಾಯಿಗಳನ್ನು ದತ್ತು ಪಡೆಯುವ ಕುರಿತಾಗಿ ಸಂದೇಶ ಸಾರುತ್ತಿದೆ ಎಂದು ಸರ್ಕಾರವು ರಾಜ್ಯ ಪತ್ರದಲ್ಲಿ ತಿಳಿಸಿತ್ತು.

ಪ್ರೇಕ್ಷಕರ ಮನಗೆದ್ದ 'ಗಂಧದ ಗುಡಿ'
ಶುಕ್ರವಾರ ತೆರೆಕಂಡ 'ಗಂಧದ ಗುಡಿ' ಸಿನಿಮಾ ಎಲ್ಲಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ. ಫಸ್ಟ್ ವೀಕೆಂಡ್ ನಂರ ಸೋಮವಾರವೂ ಸಿನಿಮಾ ನೋಡಲು ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಮುಗಿಬಿದ್ದಿದ್ದಾರೆ. ಇನ್ನು ಮೊದಲ 3 ದಿನಕ್ಕೆ ಸಿನಿಮಾ 14.5 ಕೋಟಿ ರೂ. ಕಲೆಕ್ಷನ್ ಮಾಡಿದೆ. ನಿಧಾನವಾಗಿ ಪ್ರೇಕ್ಷಕರು ಮಕ್ಕಳನ್ನು ಕರೆದುಕೊಂಡು ಸಿನಿಮಾ ನೋಡಲು ಬರುತ್ತಿದ್ದಾರೆ.


Click it and Unblock the Notifications











