ಮತ್ತೆ ಒಂದಾಗಲಿದೆ ಸೂಪರ್ ಹಿಟ್ 'ಕೃಷ್ಣಂ ಪ್ರಣಯ ಸಖಿ' ಜೋಡಿ
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಕಳೆದ ವರ್ಷ ಸೂಪರ್ ಹಿಟ್ ಆಗಿತ್ತು. ಬಹಳ ದಿನಗಳ ಬಳಿಕ ಗಣಿಗೆ ಒಂದೊಳ್ಳೆ ಬ್ರೇಕ್ ಸಿಕ್ಕಿತ್ತು. ಇದೀಗ ಅವರು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ 'ಕೃಷ್ಣಂ ಪ್ರಣಯ ಸಖಿ' ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಬರುತ್ತದೆ ಎಂದು ನಿರ್ದೇಶಕ ಶ್ರೀನಿವಾಸ್ ರಾಜ್ ಹೇಳಿದ್ದಾರೆ.
'ದಂಡುಪಾಳ್ಯ' ಸರಣಿ ಸಿನಿಮಾಗಳಿಂದ ಶ್ರೀನಿವಾಸ್ ರಾಜು ಸಂಚಲನ ಸೃಷ್ಟಿಸಿದ್ದರು. ಅದಕ್ಕೂ ಮುನ್ನ ಎರಡ್ಮೂರು ಸಿನಿಮಾ ಮಾಡಿದ್ದರೂ ಗಣಿ ಕಾಂಬಿನೇಷನ್ನಲ್ಲಿ ರೊಮ್ಯಾಂಟಿಕ್ ಸಿನಿಮಾ ಸದ್ದು ಮಾಡಿದ್ದು ಗೊತ್ತೇಯಿದೆ. ಇದೀಗ ಮುಂದಿನ ಸಿನಿಮಾ ಸ್ಕ್ರಿಪ್ಟ್ ಕೆಲಸಗಳಲ್ಲಿ ನಿರ್ದೇಶಕರು ಬ್ಯುಸಿಯಾಗಿದ್ದಾರೆ. ಎರಡ್ಮೂರು ಸಿನಿಮಾಗಳನ್ನು ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಯಾವುದು ಮೊದಲು ಫೈನಲ್ ಆಗುತ್ತದೆ ಎನ್ನುವುದು ಗೊತ್ತಿಲ್ಲ.

ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಆಗಸ್ಟ್ 15ಕ್ಕೆ 'ಕೃಷ್ಣಂ ಪ್ರಣಯ ಸಖಿ' ಚಿತ್ರ ಬಿಡುಗಡೆ ಆಗಿತ್ತು. ಮಾಳವಿಕಾ ನಾಯರ್, ಶರಣ್ಯ ಶೆಟ್ಟಿ ನಾಯಕಿಯರಾಗಿ ಮಿಂಚಿದ್ದರು. ಮೊದಲ 10 ದಿನಗಳಲ್ಲಿ ಸಿನಿಮಾ 20 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ವರದಿಯಾಗಿತ್ತು. ಅರ್ಜುನ್ ಜನ್ಯಾ ಸಂಗೀತದ ಹಾಡುಗಳು ಹಿಟ್ ಆಗಿ ಚಿತ್ರಕ್ಕೆ ಬಲ ತುಂಬಿತ್ತು. 'ದ್ವಾಪರ' ಸಾಂಗ್ ಸದ್ದು ಕೊಂಚ ಜೋರಾಗಿಯೇ ಇತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ವೈರಲ್ ಆಗಿದ್ದು ಗೊತ್ತೇಯಿದೆ.
ಚಿತ್ರಮಂದಿರಗಳಲ್ಲಿ ಯಶಸ್ಸು ಕಂಡಿದ್ದ ಸಿನಿಮಾ ಬಳಿಕ ಸನ್ ನೆಕ್ಸ್ಟ್ ಓಟಿಟಿ ಪ್ಲಾಟ್ಫಾರ್ಮ್ಗೆ ಬಂದಿತ್ತು. ಸಾಧುಕೋಕಿಲ, ರಂಗಾಯಣ ರಘು, ಅವಿನಾಶ್, ಶಶಿಕುಮಾರ್, ಶ್ರುತಿ, ಅಶೋಕ್ ಸೇರಿ ದೊಡ್ಡ ತಾರಾಗಣ 'ಕೃಷ್ಣಂ ಪ್ರಣಯ ಸಖಿ' ಬಳಗದಲ್ಲಿತ್ತು.
ಸದ್ಯ ಗಣೇಶ್ ಪಿನಾಕ, 'ಯುವರ್ಸ್ ಸಿನ್ಸಿಯರ್ಲಿ ರಾಮ್' ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮತ್ತೆರಡು ಸಿನಿಮಾಗಳಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದರ ನಡುವೆ ಶ್ರೀನಿವಾಸ್ ರಾಜು ಜೊತೆಗೂ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೀತಿದೆ. ಈ ಬಗ್ಗೆ ಶ್ರೀನಿವಾಸ್ ರಾಜು ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ.
"ಗಣೇಶ್ ಅವರೊಟ್ಟಿಗೆ ಸಿನಿಮಾ ಮಾಡುವ ಪ್ಲ್ಯಾನಿಂಗ್ ನಡೀತಿದೆ. ನಡುವೆ ಬೇರೊಂದು ಸಿನಿಮಾ ಎಂದುಕೊಂಡಿದ್ದೆ. ಕಾರಣಾಂತರಗಳಿಂದ ಅದು ಡ್ರಾಪ್ ಆಯ್ತು. ಹಾಗಾಗಿ ಗಣೇಶ್ ಅವರೊಟ್ಟಿಗೆ ಸಿನಿಮಾ ಪ್ಲ್ಯಾನ್ ಇದೆ. ಯಾವಾಗ ಎನ್ನುವುದು ಗೊತ್ತಿಲ್ಲ. ಗಣೇಶ್ ಅವರು 3 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ನಡುವೆ ಮಾಡೋಣ ಎಂದಿದ್ದಾರೆ. ಕಥೆ ಸಿದ್ಧ ಆಗಬೇಕು" ಎಂದು ಶ್ರೀನಿವಾಸ್ ರಾಜು ಹೇಳಿದ್ದಾರೆ.
ಬೇರೆ ನಟರ ಜೊತೆಗೂ ಸಿನಿಮಾ ಮಾಡುವ ಆಲೋಚನೆಯಲ್ಲಿ ಶ್ರೀನಿವಾಸ್ ರಾಜು ಇದ್ದಾರೆ. ಈ ಬಗ್ಗೆ ಮಾತನಾಡಿ "ಉಪೇಂದ್ರ ಹಾಗೂ ಯುವರಾಜ್ಕುಮಾರ್ ಜೊತೆಗೂ ಸಿನಿಮಾ ಮಾಡಬೇಕು ಎಂದುಕೊಂಡಿದ್ದೀನಿ. ಇಬ್ಬರೂ ಒಂದೇ ಚಿತ್ರದಲ್ಲಿ ಅಲ್ಲ, ಬೇರೆ ಬೇರೆ ಸಿನಿಮಾ. ಆದರೆ ಯಾವುದು ಫೈನಲ್ ಆಗಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತದೆ ನೋಡೋಣ. ಆದಷ್ಟು ಬೇಗ ಅಪ್ಡೇಟ್ ಕೊಡ್ತೀನಿ" ಎಂದು ತಿಳಿಸಿದ್ದಾರೆ.
2010ರಲ್ಲಿ ಬಂದಿದ್ದ 'ನನ್ನವನು' ಚಿತ್ರಕ್ಕೆ ಮೊದಲಿಗೆ ಶ್ರೀನಿವಾಸ್ ರಾಜು ಆಕ್ಷನ್ ಕಟ್ ಹೇಳಿದ್ದರು. ಪ್ರಜ್ವಲ್ ದೇವರಾಜ್ ಹಾಗೂ ಐಂದ್ರಿತಾ ರೇ ನಟಿಸಿದ್ದ ಸಿನಿಮಾ ಅದು. ಬಳಿಕ ಪ್ರಜ್ವಲ್ ನಟಿಸಿದ 'ಕೋಟೆ' ಚಿತ್ರ ನಿರ್ದೇಶನ ಮಾಡಿದ್ದರು. 'ದಂಡುಪಾಳ್ಯ' ಬಳಿಕ 'ಕತೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ', 'ದಂಡುಪಾಳ್ಯ-2' ಹಾಗೂ 'ದಂಡುಪಾಳ್ಯ-3' ಚಿತ್ರಗಳನ್ನು ಕಟ್ಟಿಕೊಟ್ಟಿದ್ದರು. 'ತಗ್ಗದೆಲೇ' ಎಂಬ ಚಿತ್ರದ ಮೂಲಕ ಟಾಲಿವುಡ್ ಅಂಗಳಕ್ಕೂ ಎಂಟ್ರಿ ಕೊಟ್ಟಿದ್ದರು. ಬಳಿಕ 'ಕೃಷ್ಣಂ ಪ್ರಣಯ ಸಖಿ' ಕಥೆ ಹೇಳಿದ್ದರು.


Click it and Unblock the Notifications











