ಹನುಮಂತನ ಅವತಾರ ತಾಳಿದ ಗೋಲ್ಡನ್ ಸ್ಟಾರ್ ಗಣೇಶ್; ಯಾವ ಸಿನಿಮಾ?
ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದರೆ ಅವರ ಮುಂದಿನ ಸಿನಿಮಾಗಳ ಬಗ್ಗೆ ಸಾಕಷ್ಟು ಅಪ್ಡೇಟ್ ಸಿಕ್ಕಿದೆ. ಮುಖ್ಯವಾಗಿ ಹೊಸ ಚಿತ್ರವೊಂದರಲ್ಲಿ ಗಣಿ ಹನುಮನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ನೋಡಿದರೆ ಆರಂಭದಲ್ಲಿ ಯಾವುದೋ ಪೌರಾಣಿಕ ಸಿನಿಮಾ ಎನ್ನುವ ಅನುಮಾನ ಮೂಡುವಂತಿದೆ.
ಗಣಿ 47ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 'ಕೃಷ್ಣಂ ಪ್ರಣಯ ಸಖಿ' ಬಳಿಕ ನಾಲ್ಕೈದು ಸಿನಿಮಾಗಳು ಕೈಯಲ್ಲಿದೆ. ಮತ್ತೆ ಗೆಲುವಿನ ಲಯಕ್ಕೆ ಮರಳಿರುವ ಗೋಲ್ಡನ್ ಸ್ಟಾರ್ ಮತ್ತಷ್ಟು ಇಂಟ್ರೆಸ್ಟಿಂಗ್ ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಇನ್ನಷ್ಟು ಕಥೆಗಳನ್ನು ಕೇಳುತ್ತಲೇ ಇದ್ದಾರೆ.

ರಮೇಶ್ ಅರವಿಂದ್ ಹಾಗೂ ಗಣೇಶ್ ಒಂದೇ ಚಿತ್ರದಲ್ಲಿ ನಟಿಸುತ್ತಿರುವ ವಿಚಾರ ಗೊತ್ತೇಯಿದೆ. ಈ ವರ್ಷವೇ ಆ ಸಿನಿಮಾ ತೆರೆಗೆ ಬರಲಿದೆ. ವಿಖ್ಯಾತ್ ಎ ಆರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. 'Yours Sincerely ರಾಮ್' ಎಂದು ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಅದೇ ಚಿತ್ರದಿಂದ ಹೊಸ ಪೋಸ್ಟರ್ ಬಂದು ಗಮನ ಸೆಳೆಯುತ್ತಿದೆ. ಹನುಮಂತನ ವೇಷದಲ್ಲಿ ಗಣಿ ಮಿಂಚಿದ್ದಾರೆ. ಹಿಮಾಲಯದ ಬ್ಯಾಕ್ ಡ್ರಾಪ್ನಲ್ಲಿ ಮೂಡಿ ಬಂದಿರುವ ಪೋಸ್ಟರ್ನಲ್ಲಿ ರಾಮ ಸೈಕಲ್ ತುಳಿಯುತ್ತಿರುವಂತೆ ಹನುಮಂತ ಹಿಂದೆ ಸೈಕಲ್ ಕ್ಯಾರಿಯರ್ ಮೇಲೆ ಹಿಂದಕ್ಕೆ ಮುಖ ಮಾಡಿ ಕುಳಿತಂತೆ ಪೋಸ್ಟರ್ ಡಿಸೈನ್ ಮಾಡಿದ್ದಾರೆ.
ಪೋಸ್ಟ್ಮ್ಯಾನ್ ರೀತಿ ಹನುಮಂತ ಲೆಟರ್ಗಳನ್ನು ಹಿಡಿದು ಕಾಣಿಸಿಕೊಂಡಿದ್ದಾನೆ. ಭುಜದಲ್ಲಿ ಪೋಸ್ಟ್ ಮ್ಯಾನ್ ಬ್ಯಾಗ್ ಕೂಡ ನೋಡಬಹುದು. ಗಣೇಶ್ ಹೊಸ ಅವತಾರಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಅಂದಹಾಗೆ ಇದು ಪೌರಾಣಿಕ ಸಿನಿಮಾ ಅಲ್ಲ, ಇಡೀ ಸಿನಿಮಾ ಹನುಮಂತನ ಅವತಾರದಲ್ಲಿ ಗಣೇಶ್ ನಟಿಸುತ್ತಿಲ್ಲ. ಇದು ಚಿತ್ರದ ಒಂದು ಸನ್ನಿವೇಶ ಅಷ್ಟೆ. ರಾಮಾಯಣದ ಶ್ರೀರಾಮ ಹಾಗೂ ಹನುಮಂತ ಪಾತ್ರಗಳ ಹಿನ್ನೆಲೆಯಲ್ಲಿ ಚಿತ್ರದ ಕಥೆ ಸಾಗುವಂತಿದೆ. ಸಿನಿಮಾ ಟೈಟಲ್ ಕೂಡ ಆ ಬಗ್ಗೆ ಸುಳಿವು ಕೊಡುವಂತಿದೆ.
ಐರಾ ಫಿಲ್ಮ್ಸ್ ಮತ್ತು ದಿ ರಾಯಲ ಸ್ಟುಡಿಯೋಸ್ ಬ್ಯಾನರ್ ಅಡಿ ಸತ್ಯ ರಾಯಲ 'Your's sincerely ರಾಮ್' ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ, ಗುಣ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಶಾಂತ್ ರಾಜಪ್ಪ , ಯದುನಂದನ್ ಹಾಗೂ ಸಚಿನ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಈ ಚಿತ್ರದ ಮೂಲಕ ಚಿತ್ರತಂಡ ನಟ ರಮೇಶ್ ಅರವಿಂದ್ ಅವರಿಗೆ ಹೊಸ ಬಿರುದು ಕೊಡುತ್ತಿದೆ. 'ಮಿ. ಪರ್ಫೆಕ್ಟ್' ಎಂಬ ಹೆಸರನ್ನು ರಮೇಶ್ ಅವರ ಹೆಸರಿನ ಜೊತೆ ಪೋಸ್ಟರ್ನಲ್ಲಿ ಹಾಕಿದ್ದಾರೆ. ಬಾಲಿವುಡ್ನಲ್ಲಿ ಆಮೀರ್ ಖಾನ್ ಮಿ. ಪರ್ಫೆಕ್ಷನಿಸ್ಟ್ ಎನಿಸಿಕೊಂಡಿರುವುದು ಗೊತ್ತೇಯಿದೆ. ವರ್ಷಾಂತ್ಯಕ್ಕೆ 'Your's sincerely ರಾಮ್' ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ.
ಗಣೇಶ್ ನಟನೆಯ ಮತ್ತೆರಡು ಸಿನಿಮಾಗಳು ಘೋಷಣೆಯಾಗಿದೆ. 'ಕೃಷ್ಣಂಪ್ರಣಯ ಸಖಿ' ಜೋಡಿ ಮತ್ತೆ ಒಂದಾಗುತ್ತಿದೆ. ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ಗಣಿ ಮತ್ತೆ ನಟಿಸುವುದರ ಬಗ್ಗೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಧಿಕೃತ ಮಾಹಿತಿ ಸಿಕ್ಕಿದೆ. ಅರಸು ಅಂತಾರೆ ನಿರ್ದೇಶನದ ಸಿನಿಮಾ ಕೂಡ ಘೋಷಣೆಯಾಗಿದೆ. ಚಿತ್ರಕ್ಕೆ 'ಡಿ ಜಂಗೋ ಕೃಷ್ಣಮೂರ್ತಿ' ಎಂಬ ಟೈಟಲ್ ಇಟ್ಟಿದ್ದಾರೆ. ಇನ್ನು ಬಹದ್ದೂರ್ ಚೇತನ್ ನಿರ್ದೇಶನದಲ್ಲಿ ಗಣಿ ನಟಿಸುವ ಸುದ್ದಿ ಕೂಡ ಇದೀಗ ಪಕ್ಕಾ ಆಗಿದೆ. ಮತ್ತಷ್ಟು ಚಿತ್ರ ನಿರ್ಮಾಣ ಸಂಸ್ಥೆಗಳು ಗಣೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿವೆ.


Click it and Unblock the Notifications











