ಡಬ್ಬಿಂಗ್ ಸಿನಿಮಾಗಳ ಪರವಾಗಿ ಗಣೇಶ್ ಮಾತು: ಆದರೆ...!
ಪರಭಾಷೆ ಸಿನಿಮಾಗಳ ಹಾವಳಿ, ಪರಭಾಷೆ ಸಿನಿಮಾಗಳು ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡುವ ವಿಚಾರವಾಗಿ ವಾದ-ವಿವಾದ ಇಂದು ನಿನ್ನೆಯದಲ್ಲ. ಹಲವು ವರ್ಷಗಳ ಕಾಲ ಚಿತ್ರರಂಗ ಒಕ್ಕೊರಲಾಗಿ ಡಬ್ಬಿಂಗ್ ವಿರೋಧಿ ನಿಲವು ತಳೆದಿತ್ತು. ಆದರೆ ನ್ಯಾಯಾಲಯದಲ್ಲಿಯೇ ಹಿನ್ನಡೆ ಆದ ಬಳಿಕ ಒಗ್ಗಟ್ಟು ಒಡೆದು ಡಬ್ಬಿಂಗ್ ಸಿನಿಮಾಗಳು ರಾಜಾರೋಷವಾಗಿ ಕನ್ನಡ ಮಾರುಕಟ್ಟೆ ಪ್ರವೇಶಿಸಿದರು.
ಇದೀಗ ಕನ್ನಡದ ಸಿನಿಮಾಗಳೇ ಪರಭಾಷೆಗೆ ಡಬ್ ಆಗಿ ನೆರೆ-ಹೊರೆ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿವೆ, ಹಾಗಾಗಿ ಈಗ ನಾಯಕ ನಟರ್ಯಾರೂ ಡಬ್ಬಿಂಗ್ ವಿರೋಧಿಸಿ ಮಾತನಾಡುತ್ತಿಲ್ಲ. ಜಗ್ಗೇಶ್ ಅಂಥ ಕೆಲವು ಹಿರಿಯ ನಟರು ಆಗಾಗ್ಗೆ ಡಬ್ಬಿಂಗ್ ವಿರೋಧಿಸಿ ಮಾತನಾಡಿದ್ದಾರಾದರೂ ಅವರ ದನಿ ಅಡಗಿಸುವ ಯತ್ನವನ್ನು ಸ್ಟಾರ್ ನಟರ ಅಭಿಮಾನಿಗಳೇ ಮಾಡಿದ್ದಾರೆ.
ಇದೀಗ ಕೊರೊನಾ ಹಾವಳಿ ತುಸು ಕಡಿಮೆ ಆದ ಬಳಿಕ ನೆರೆ-ಹೊರೆಯ ಬಿಗ್ ಬಜೆಟ್ ಸಿನಿಮಾಗಳು ಭಾರಿ ಪ್ರಮಾಣದಲ್ಲಿ ಕನ್ನಡ ಮಾರುಕಟ್ಟೆ ಪ್ರವೇಶಿಸುತ್ತಿವೆ. ಹಾಗಾಗಿ ಈಗ ಮತ್ತೆ ಡಬ್ಬಿಂಗ್ ಸಿನಿಮಾಗಳು ಹಾಗೂ ಪರಭಾಷೆ ಸಿನಿಮಾಗಳ ಹಾವಳಿ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಬಗ್ಗೆ ನಟ ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿದ್ದಾರೆ.

''ಪರಭಾಷೆಯ ಬಿಗ್ ಬಜೆಟ್ ಸಿನಿಮಾಗಳು ಕನ್ನಡ ಸಿನಿಮಾ ಮಾರುಕಟ್ಟೆ ಮೇಲೆ ದಾಳಿ ಮಾಡುವುದನ್ನು ಸರ್ಕಾರ, ಚಿತ್ರರಂಗದ ಹಿರಿಯರು ತಡೆಯಬೇಕಿದೆ. ಪರಭಾಷೆ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬೇಕಿದ್ದರೆ ಇಲ್ಲಿ ಬಿಡುಗಡೆ ಆಗಲಿ. ಆದರೆ ಪರಭಾಷೆಯ ಸಿನಿಮಾಗಳು ಅವುಗಳ ಮೂಲ ಭಾಷೆಯಲ್ಲಿಯೇ ಬಿಡುಗಡೆ ಆಗುವುದಕ್ಕೆ ನನ್ನ ವಿರೋಧವಿದೆ. ಮೂಲ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆದ ತಿಂಗಳ ಬಳಿಕ ಬೇಕಾದರೆ ಕರ್ನಾಟಕದಲ್ಲಿ ಬಿಡುಗಡೆ ಆಗಲಿ'' ಎಂದಿದ್ದಾರೆ ಗಣೇಶ್.
''ಪರಭಾಷೆಯ 150-200 ಕೋಟಿ ಸಿನಿಮಾಗಳು ಬಂದಾಗೆಲ್ಲ ನಮ್ಮ ಸಿನಿಮಾಗಳು ಕಷ್ಟ ಅನುಭವಿಸುತ್ತವೆ. ಇದು ಕಳೆದ 10-12 ವರ್ಷಗಳಿಂದಲೂ ಹೀಗೆಯೇ ನಡೆಯುತ್ತಾ ಬರುತ್ತಿದೆ. ಈ ವಿಷಯದಲ್ಲಿ ಸರ್ಕಾರ ನಮಗೆ ಸಂಪೂರ್ಣ ಬೆಂಬಲ ಕೊಡಬೇಕು. ಅವರು ಕನ್ನಡ ಭಾಷೆಗೆ ಡಬ್ ಮಾಡಿ ಬೇಕಾದರೆ ಸಿನಿಮಾ ಬಿಡುಗಡೆ ಮಾಡಲಿ. ಅದಕ್ಕೆ ವೈಯಕ್ತಿಕವಾಗಿ ನನ್ನ ಅಭ್ಯಂತರವಿಲ್ಲ. ಆ ರೀತಿಯಾಗಿ ಕನ್ನಡ ಭಾಷೆಗೆ ಒತ್ತು ನೀಡುವ ಪ್ರಯತ್ನ ಆಗಲಿ. ಆದರೆ ಮೂಲ ಭಾಷೆಯಲ್ಲಿ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುವುದು ಬೇಡ'' ಎಂದರು ಗಣೇಶ್.
''ಅಂತಿಮವಾಗಿ ಇದೆಲ್ಲ ವಾಣಿಜ್ಯ ಲೆಕ್ಕಾಚಾರವಷ್ಟೆ. ಅವರು ಹೆಚ್ಚು ಬಜೆಟ್ ಹಾಕುತ್ತಾರೆ, ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಾರೆ. ಸತ್ಯ ಹೇಳಬೇಕೆಂದರೆ, ನಾವು ಅವರಿಗೆ ಸ್ಪರ್ಧೆ ಒಡ್ಡುವ ರೀತಿಯಲ್ಲಿ ಸಿನಿಮಾ ಮಾಡಬೇಕು. ಬೇರೆಯವರ ಮೇಲೆ ದೂರು ಹೇಳಿ ಪ್ರಯೋಜನವಿಲ್ಲ. ನಾವು ನಮ್ಮ ಸಿನಿಮಾಗಳ ಬಜೆಟ್ ಹೆಚ್ಚು ಮಾಡಿಕೊಳ್ಳಬೇಕು, ಗಲ್ಲಿ-ಗಲ್ಲಿಯಲ್ಲೂ ನಮ್ಮ ಸಿನಿಮಾಗಳನ್ನು ಪ್ರದರ್ಶನ ಮಾಡುವ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಬಜೆಟ್ ಜೊತೆಗೆ ನಮ್ಮ ಕಂಟೆಂಟ್ ಅನ್ನು ಇನ್ನಷ್ಟು ಚೆನ್ನಾಗಿ ಮಾಡಿಕೊಳ್ಳಬೇಕು'' ಎಂದರು ಗಣೇಶ್.
ತೆಲುಗಿನ 'ಪುಷ್ಪ' ಸಿನಿಮಾ ಕರ್ನಾಟಕದಲ್ಲಿ ನಾಳೆ ಬಿಡುಗಡೆ ಆಗಲಿದೆ. ಸಿನಿಮಾದ ಕನ್ನಡ ಡಬ್ಬಿಂಗ್ ಆವೃತ್ತಿ ಕೇವಲ ಎರಡು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಆದರೆ ನೂರಾರು ಚಿತ್ರಮಂದಿರಗಳಲ್ಲಿ ಮೂಲ ಭಾಷೆ ತೆಲುಗಿನಲ್ಲಿಯೇ ಬಿಡುಗಡೆ ಆಗಿದೆ. ಇದರಿಂದಾಗಿ ನಾಳೆ ಬಿಡುಗಡೆ ಆಗುತ್ತಿರುವ ಮತ್ತೊಂದು ಕನ್ನಡ ಸಿನಿಮಾ 'ಆನಾ'ಕ್ಕೆ ಚಿತ್ರಮಂದಿರದ ಸಮಸ್ಯೆ ಎದುರಾಗಿದೆ. ಗಣೇಶ್ ನಟನೆಯ 'ಸಖತ್' ಸಿನಿಮಾಕ್ಕೂ ಇದೇ ಸಮಸ್ಯೆ ಎದುರಾಗಿದೆ.


Click it and Unblock the Notifications











