ಕೊಟ್ಟ ಮಾತಿನಂತೆ ಸರ್ಪ್ರೈಸ್ ನೀಡಿದ ಗಣೇಶ್: ಪಿ-ಬಾಸ್ ಗೆ ಫುಲ್ ಕ್ಲಾಸ್
ಅಂದು ಪ್ರಥಮ್ ಅಭಿನಯದ ಎಂಎಲ್ಎ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದಾಗ, 'ನಿನ್ನ ಸಿನಿಮಾ ಶೂಟಿಂಗ್ ಗೆ ಒಂದು ಸಲ ಬರ್ತೀನಿ' ಎಂದಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಕೊಟ್ಟ ಮಾತಿನಂತೆ ಇಂದು ನಟಭಯಂಕರ ಸೆಟ್ ಗೆ ಸರ್ಪ್ರೈಸ್ ಭೇಟಿ ನೀಡಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಬರ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಸಿಕ್ಕಾಪಟ್ಟೆ ಖುಷಿಯಾದ ಪ್ರಥಮ್, ಮಳೆ ಹುಡುಗನನ್ನ ಭರ್ಜರಿಯಾಗಿ ಸ್ವಾಗತಿಸಿಕೊಂಡರು. ಪ್ರಥಮ್ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ಶೂಟಿಂಗ್ ನೋಡೋಣ ಎಂದು ಬಂದ ಗಣೇಶ್, ಹಲವು ಗಂಟೆಗಳ ಕಾಲ ಚಿತ್ರತಂಡದ ಜೊತೆ ಸಮಯ ಕಳೆದರು.

ಗಣೇಶ್ ಭೇಟಿಯಲ್ಲಿ ಹರಟೆ, ತರಲೆ, ಕಾಲೆಳೆಯುವುದು, ಬುದ್ದಿವಾದ, ಕಿವಿಮಾತು ಎಲ್ಲವೂ ಇತ್ತು. ಈ ವೇಳೆ ಪ್ರಥಮ್ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗಣೇಶ್ 'ನಟಭಯಂಕರ ಸಿನಿಮಾದ ಚೆನ್ನಾಗಿ ನಡೆಯುತ್ತಿದೆ, ನಿನ್ನ ಎಲ್ಲ ಕೆಲಸಗಳನ್ನ ನೋಡುತ್ತಿದ್ದೇನೆ. ತುಂಬಾ ಕಷ್ಟಪಟ್ಟು, ಇಷ್ಟಪಟ್ಟು ಮಾಡ್ತಿದ್ದೀಯಾ, ಸಿನಿಮಾ ನೋಡ್ತೀನಿ'' ಎಂದು ಹೇಳಿದರು.
ಟೀಸರ್ ಬಗ್ಗೆ ಮಾತನಾಡಿದ ಗಣೇಶ್ 'ಟೀಸರ್ ಚೆನ್ನಾಗಿ ಇದೆ, ಅದರಲ್ಲಿ ಪಿ ಬಾಸ್ ಅಂತ ನೋಡಿದೆ. ಫಿನಿಶಿಂಗ್ ಪುಟ್ಟು ಬಾಸ್ ಅಂತ ಸಖತ್ ಆಗಿದೆ. ಆದ್ರೆ, ಈ ಬಾಸ್ ಆ ಬಾಸ್ ಅಂತೆಲ್ಲಾ ಹೋಗ್ಬೇಡ. ಜನರೇ ನಮಗೆ ಬಾಸ್, ಅವರಿಗೆ ಒಳ್ಳೆಯ ಸಿನಿಮಾ ಮಾಡು'' ಎಂದು ಕಿವಿಮಾತು ಹೇಳಿದ್ದಾರೆ.

ಇತ್ತೀಚಿಗಷ್ಟೆ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದಲ್ಲಿ ನಟಭಯಂಕರ ಚಿತ್ರದ ಆಕ್ಷನ್ ದೃಶ್ಯಗಳ ಚಿತ್ರೀಕರಣ ನಡೆದಿತ್ತು. ಈ ವೇಳೆ ಪ್ರಥಮ್ ರಿಸ್ಕ್ ತಗೊಂಡು ಶೂಟಿಂಗ್ ಮಾಡುತ್ತಿದ್ದರು. ಇದನ್ನ ಗಮನಿಸಿರುವ ಗಣೇಶ್ ಪ್ರಥಮ್ ಗೆ 'ನೋಡ್ಕೊಂಡು ಮಾಡು, ಜಾಸ್ತಿ ರಿಸ್ಕ್ ತೆಗೆದುಕೊಳ್ಳಬೇಡ' ಎಂದು ಶುಭಕೋರಿದ್ದಾರೆ.
ಇದೇ ವೇಳೆ ನಟಭಯಂಕರ ಚಿತ್ರದ ಸೆಟ್ ನಲ್ಲಿ ನಾಯಕಿನಟಿ ಸುಶ್ಮಿತಾ ಜೋಶಿ ಹಾಗೂ ಪವನ್ ಕೂಡ ಇದ್ದರು. ಅವರ ಬಗ್ಗೆಯೂ ಮೆಚ್ಚುಗೆ ಮಾತಗಳನ್ನಾಡಿದ ಗಣೇಶ್ ಅವರಿಗೂ ವಿಶ್ ಮಾಡಿದ್ರು. ಸಾಮಾನ್ಯವಾಗಿ ಬೇರೆ ಸಿನಿಮಾಗಳ ಸೆಟ್ ಗೆ ಗಣೇಶ್ ವಿಸಿಟ್ ಮಾಡುವುದು ಅಪರೂಪ. ಆದ್ರೆ, ಪ್ರಥಮ್ ಮೇಲಿನ ಪ್ರೀತಿಗಾಗಿ ಗಣಿ ನಟಭಯಂಕರನನ್ನ ನೋಡಲು ಬಂದಿದ್ದರು.

ಇನ್ನುಳಿದಂತೆ ಉದಯ್ ಮೆಹ್ತಾ ಅವರ ಕಥೆ ಈ ಚಿತ್ರಕ್ಕಿದ್ದು, ಇದೇ ಮೊದಲ ಬಾರಿಗೆ ಪ್ರಥಮ್ ನಿರ್ದೇಶನ ಮಾಡ್ತಿದ್ದಾರೆ. ದೇವ್ರಂಥಾ ಮನುಷ್ಯ ಚಿತ್ರದ ಬಳಿಕ ಸೈಲೆಂಟ್ ಆಗಿರುವ ಪ್ರಥಮ್, ನಾನು ಮಾತನಾಡಬಾರದು, ನನ್ನ ಕೆಲಸ ಮಾತನಾಡಬೇಕು ಎಂಬ ಮಾತಿನಂತೆ ಗಂಭೀರವಾಗಿ ಕೆಲಸ ಮಾಡುತ್ತಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಇದಾಗಿದ್ದು, ಹಿರಿಯ ನಟರಾದ ಶಂಕರ್ ಅಶ್ವಥ್, ಉಮೇಶ್, ಸತ್ಯಜಿತ್ ಮತ್ತು ಲೀಲಾವತಿ ಅಂತಹ ಕಲಾವಿದರನ್ನ ತಮ್ಮ ಚಿತ್ರದಲ್ಲಿ ನಟನೆ ಮಾಡಿಸುತ್ತಿರುವುದು ವಿಶೇಷ. ಸಾಯಿಕುಮಾರ್, ಕುರಿ ಪ್ರತಾಪ್, ಶೋಭ್ ರಾಜ್, ಬಿರಾದರ್, ನಿಹಾರಿಕ ಶಣೈ, ಚಂದನ್ ರಾಘವೇಂದ್ರ, ಅನುಪಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಉಪೇಂದ್ರ ಅವರ ಟೈಟಲ್ ಟ್ರಾಕ್ ಹಾಡಿದ್ದು, ಮೈಸೂರಿನ ಉದ್ಯಮಿಯೊಬ್ಬರು ನಿರ್ಮಾಣ ಮಾಡುತ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ನಟಭಯಂಕರ ಎಲ್ಲಾ ಮುಗಿಸಿ ಜನರ ಮುಂದೆ ಬರ್ತಾರಂತೆ.


Click it and Unblock the Notifications











