'ಮಾಸ್ಟರ್ ಪೀಸ್' ಸಿನಿಮಾ ಟಿಕೆಟ್ ಗಾಗಿ ಗುಂಪುಗಳ ನಡುವೆ ಘರ್ಷಣೆ
ಬಹುನಿರೀಕ್ಷಿತ ಸಿನಿಮಾ 'ಮಾಸ್ಟರ್ ಪೀಸ್' ಯಾವಾಗ ಬಿಡುಗಡೆ ಆಗುತ್ತೆ, ಅಷ್ಟಕ್ಕೂ ಸಿನಿಮಾದಲ್ಲಿ ಅಂತಹ ವಿಶೇಷ ಏನಿದೆ? ಅಂತ ಅಭಿಮಾನಿಗಳ ಮತ್ತು ಪ್ರೇಕ್ಷಕರ ಕುತೂಹಲಕ್ಕೆ ಇಂದು (ಡಿಸೆಂಬರ್ 24) ತೆರೆ ಬಿದ್ದಿದೆ.
'ಮಾಸ್ಟರ್ ಪೀಸ್' ಸಿನಿಮಾ ನೋಡಲು ಟಿಕೆಟ್ ಸಿಗದೆ ಎಲ್ಲಾ ಕಡೆ ಜನ ನೂಕುನುಗ್ಗಲು ಮಾಡುತ್ತಿರುವುದರಿಂದ ಅಲ್ಲಲ್ಲಿ ಕೆಲವು ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ನಡುವೆ ಘರ್ಷಣೆ ಮತ್ತು ಮಾರಾಮಾರಿ ನಡೆದಿದೆ.
ಅಂದಹಾಗೆ ಚಿತ್ರದ ಟಿಕೆಟ್ ಗಳು ಸಿನಿಮಾ ಬಿಡುಗಡೆಯ ಎರಡು ಮುನ್ನವೇ ಸೋಲ್ಡ್ ಔಟ್ ಆಗಿರುವಾಗ ಇನ್ನು ಇವತ್ತು ಟಿಕೆಟ್ ಬೇಕು ಅಂದ್ರೆ ಎಲ್ಲಿಂದ ಬರುತ್ತೆ ಅಲ್ವಾ?.[ಮಾಸ್ಟರ್ ಪೀಸ್: ಮೊದಲು ದಾರಿ ತಪ್ಪಿದ ಮಗ, ನಂತರ ತಾಯಿಗೆ ತಕ್ಕ ಮಗ]
ಗಂಗಾವತಿಯ ಶಿವ ಚಿತ್ರಮಂದಿರದಲ್ಲಿ 'ಮಾಸ್ಟರ್ ಪೀಸ್' ಸಿನಿಮಾ ಟಿಕೆಟ್ ತೆಗೆದುಕೊಳ್ಳುವ ಭರಾಟೆಯಲ್ಲಿ ಎರಡು ಅಭಿಮಾನಿಗಳ ಗುಂಪಿನ ನಡುವೆ ಘರ್ಷಣೆ ನಡೆದು ಗಲಾಟೆಯಲ್ಲಿ ಇಬ್ಬರು ತೀವ್ರ ಗಾಯಗೊಂಡಿದ್ದಾರೆ.
ಇದೀಗ ಹಲ್ಲೆ ನಡೆಸಿರುವ ಇಬ್ಬರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಘಟನೆ ಗಂಗಾವತಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಗಂಗಾವತಿ ಪೊಲೀಸರು ಹಲ್ಲೆ ನಡೆಸಿದವರ ಮೇಲೆ ಕೇಸು ದಾಖಲಿಸಿದ್ದಾರೆ.[ಟ್ವಿಟ್ಟರ್ ನಲ್ಲಿ 'ಮಾಸ್ಟರ್ ಪೀಸ್' ಚಿಂದಿ ಚಿತ್ರಾನ್ನ]
ದೇವರಾಜ್ ಮತ್ತು ವಾಸಿಂ ಎಂಬಿಬ್ಬರು ಗಂಭೀರವಾಗಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಂಗಾವತಿಯ ಶಿವ ಚಿತ್ರಮಂದಿರದಲ್ಲಿ ಇಂದು ಬಿಡುಗಡೆಯಾದ ಯಶ್ ಅವರ 'ಮಾಸ್ಟರ್ ಪೀಸ್' ಸಿನಿಮಾ ನೋಡಲು ಟಿಕೆಟ್ ಕೊಳ್ಳಲು ಬಂದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ನಂತರ ಜಗಳ ವಿಕೋಪಕ್ಕೆ ತಿರುಗಿದಾಗ ಬಡಿಗೆಗಳಿಂದ ಬಡಿದಾಡಿಕೊಂಡಿದ್ದಾರೆ.
ದೇವರಾಜ್ ಎಂಬವರ ಮೇಲೆ ವಾಸಿಂ ಗುಂಪಿನ ಕಡೆಯವರು ಹಲ್ಲೆ ಮಾಡಿದ್ದಾರೆ. ನಂತರ ದೇವರಾಜ್ ಮತ್ತು ಸ್ನೇಹಿತರು ಎದುರಾಳಿ ತಂಡದ ಮೇಲೆ ದಾಳಿ ನಡೆಸಿದ್ದರಿಂದ ಇದೀಗ ಇಬ್ಬರು ಗಾಯಗೊಂಡಿದ್ದಾರೆ.[ರಾಕಿಂಗ್ ಸ್ಟಾರ್ ಯಶ್ ವಿರುದ್ದ ಮಂಡ್ಯ ಸ್ಟಾರ್ ಪ್ರತಿಭಟನೆ]
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪನ್ನು ಚದುರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಚಿತ್ರಮಂದಿರದ ಬಳಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇನ್ನು ನಮ್ಮ ಬೆಂಗಳೂರಿನ ಸಂತೋಷ್ ಚಿತ್ರಮಂದಿರದ ಎದುರು ಕೂಡ ಅಭಿಮಾನಿಗಳು ಟಿಕೆಟ್ ಸಿಗಲಿಲ್ಲ ಎಂದು ಭಾರಿ ಬೇಸರ ವ್ಯಕ್ತಪಡಿಸಿ ಟಿಕೆಟ್ ಬೇಕೇ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.


Click it and Unblock the Notifications













