'ಗರುಡ ಗಮನ, ವೃಷಭ ವಾಹನ' ಬಿಡುಗಡೆ ದಿನಾಂಕ ಪ್ರಕಟ: ಭರವಸೆ ಮೂಡಿಸಿದ ಟ್ರೇಲರ್
'ಒಂದು ಮೊಟ್ಟೆಯ ಕತೆ' ಸಿನಿಮಾದ ಮೂಲಕ ನಿರೀಕ್ಷೆ ಹುಟ್ಟಿಸಿರುವ ನಿರ್ದೇಶಕ, ನಟ ರಾಜ್ ಬಿ ಶೆಟ್ಟಿ ತಮ್ಮ ಎರಡನೇ ಸಿನಿಮಾದೊಂದಿಗೆ ಪ್ರೇಕ್ಷಕರಿಗೆ ಅಚ್ಚರಿ ನೀಡಲು ತಯಾರಾಗಿದ್ದಾರೆ.
ರಾಜ್ ಬಿ ಶೆಟ್ಟಿ, ನಟಿಸಿ, ನಿರ್ದೇಶಿಸಿರುವ 'ಗರುಡ ಗಮನ, ವೃಷಭ ವಾಹನ' ಸಿನಿಮಾದ ಟ್ರೇಲರ್ ಇಂದಷ್ಟೆ ಬಿಡುಗಡೆ ಆಗಿದ್ದು, ತನ್ನ ಭಿನ್ನತೆಯಿಂದ ಟ್ರೇಲರ್ ಗಮನ ಸೆಳೆಯುತ್ತಿದೆ. ಸಿನಿಮಾದ ಬಗ್ಗೆ ದೊಡ್ಡ ಕುತೂಹಲವನ್ನು ಹುಟ್ಟುಹಾಕುತ್ತಿದೆ ಟ್ರೇಲರ್.
ಶಿವ ಹಾಗೂ ಹರಿ ಎಂಬ ಇಬ್ಬರು ಸ್ನೇಹಿತರ ಕತೆ ಇದೆಂಬುದು ಟ್ರೇಲರ್ ನೋಡಿದರೆ ಗೊತ್ತಾಗುತ್ತಿದೆ. ಮುಂಗೋಪಿ, ಹಿಂಸೆಗೆ ಹಿಂಜರಿಯದ ವ್ಯಕ್ತಿ ಶಿವನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದು, ಹರಿ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸಿದ್ದಾರೆ. ಕರಾವಳಿ ಭಾಗದ ಕತೆಯನ್ನು ಸಿನಿಮಾ ಹೊಂದಿದ್ದು, ಕರಾವಳಿ ಸಂಸ್ಕೃತಿಯು ಕತೆಯ ಒಳಗೆ ಸೇರಿಕೊಂಡಿದೆ ಎಂಬುದು ಟ್ರೇಲರ್ನಲ್ಲಿ ವೇದ್ಯವಾಗುತ್ತಿದೆ.

ಟ್ರೇಲರ್ನಲ್ಲಿಯೇ ರಾಜ್ ಬಿ ಶೆಟ್ಟಿ ನಟನೆ ಗಮನ ಸೆಳೆಯುತ್ತಿದೆ, ಸಿನಿಮಾದಲ್ಲಿ ಇನ್ನಷ್ಟು ಇಂಟೆನ್ಸ್ ಆಗಿ ರಾಜ್ ಬಿ ಶೆಟ್ಟಿ ಆವರಿಸಿಕೊಳ್ಳುವ ಎಲ್ಲ ಕುರುಹು ಟ್ರೇಲರ್ನಲ್ಲಿದೆ. ಹರಿ ಪೊಲೀಸ್ ಅಧಿಕಾರಿ ಆಗಿದ್ದು ಆತನ ಗೆಳೆಯ ಶಿವ ಕೊಲೆಗಾರನಾಗಿರುವ ಬಗ್ಗೆಯೂ ಟ್ರೇಲರ್ನಲ್ಲಿ ಸುಳಿವಿದೆ. ಕತೆಯ ಕೆಲವು ಸುಳಿವುಗಳನ್ನಷ್ಟೆ ಟ್ರೇಲರ್ ಬಿಟ್ಟುಕೊಟ್ಟಿದ್ದು, ಪೂರ್ಣ ಕತೆಯನ್ನು ಆಸ್ವಾದಿಸಲು ಸಿನಿಮಾ ಬಿಡುಗಡೆವರೆಗೆ ಕಾಯಬೇಕು.
ಸಿನಿಮಾ ಬಿಡುಗಡೆ ದಿನಾಂಕವನ್ನೂ ಘೋಷಿಸಲಾಗಿದ್ದು, ನವೆಂಬರ್ 19 ಕ್ಕೆ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಜೂನ್ ತಿಂಗಳಿನಲ್ಲಿಯೇ ಸಿನಿಮಾ ಬಿಡುಗಡೆ ಅಗುವುದಿತ್ತು, ಆದರೆ ಕೊರೊನಾ ಕಾರಣದಿಂದ ಬಿಡುಗಡೆ ತಡವಾಗಿದೆ. ತಮ್ಮ ಸಿನಿಮಾದ ಮೇಲೆ ಬಹಳ ನಂಬಿಕೆ ಹೊಂದಿರುವ ರಾಜ್ ಬಿ ಶೆಟ್ಟಿ, ''ಯಾವುದೇ ಕಾರಣಕ್ಕೂ ನೇರವಾಗಿ ಒಟಿಟಿಯಲ್ಲಿ ನಮ್ಮ ಸಿನಿಮಾ ಬಿಡುಗಡೆ ಆಗುವುದಿಲ್ಲ'' ಎಂದಿದ್ದರು. ಅಂತೆಯೇ ತಡವಾದರೂ ಸರಿ ಚಿತ್ರಮಂದಿರಗಳಿಗೆ ಸಿನಿಮಾವನ್ನು ತರುತ್ತಿದ್ದಾರೆ.
'ಒಂದು ಮೊಟ್ಟೆಯ ಕತೆ' ಮೂಲಕ ಹಾಸ್ಯ, ಜೀವನ ಸಂದೇಶ ತುಂಬಿದ್ದ ಕತೆ ಹೇಳಿದ್ದ ರಾಜ್ ಬಿ ಶೆಟ್ಟಿ ಈಗ ಭಿನ್ನವಾದ ಕತೆಯೊಂದಿಗೆ ಬರುತ್ತಿದ್ದಾರೆ. ತಮ್ಮ ನಿರ್ದೇಶನದ ಎರಡನೇ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಏನು ನೀಡುತ್ತಿದ್ದಾರೆ ಎಂಬ ಕುತೂಹಲ ಸಿನಿ ಪ್ರೇಮಿಗಳಿಗಿದೆ. ಸಿನಿಮಾವನ್ನು ರಕ್ಷಿತ್ ಶೆಟ್ಟಿಯವರ ಪರಮ್ವಹ ಸ್ಟುಡಿಯೋಸ್ ಪ್ರೆಸೆಂಟ್ ಮಾಡುತ್ತಿದೆ.


Click it and Unblock the Notifications











