ಶ್ರುತಿ-ಮಹೇಂದ್ರ ದಂಪತಿಗಳೊಂದಿಗೆ ‘ಮಾಫಿಯಾ’
\ಹತ್ತು ವರ್ಷಗಳ ನಂತರ ಮಂಜುನಾಥನ ದಯೆಯಿಂದ ಅಂಬರೀಶ್ - ಸುಮಲತಾ ದಂಪತಿಗಳಿಗೆ ರಾಜಯೋಗ ಪ್ರಾಪ್ತವಾಗಿರುವುದು ನಿಮಗೂ ಗೊತ್ತು. ಈ ವಾರ ಶ್ರುತಿ ಹಾಗೂ ಅವರ ಪತಿ ಹಾಗೂ ಖ್ಯಾತ ನಿರ್ದೇಶಕ ಮಹೇಂದ್ರ ಮೊದಲ ಬಾರಿಗೆ ನಾಯಕ ನಟನಾಗಿ ಬಡ್ತಿ ಪಡೆದಿರುವ ಗಟ್ಟಿಮೇಳ ಮೊಳಗಲಿದ್ದರೆ, ಇದರೊಂದಿಗೆ ಮಾಫಿಯಾ ಆರ್ಭಟವೂ ಜತೆಗೂಡಲಿದೆ.
ಗಟ್ಟಿಮೇಳ : ಹೆಣ್ಣಿನ ಭಾವನೆ ಸಾವಿರ, ಗಂಡಿನ ಭಾವನೆ ಸಾವಿರ, ಎರಡೂ ಒಂದೇ ಆದರೆ ಬದುಕು ಸುಮಧುರ ಎಂಬ ಸಂದೇಶ ಸಾರುತ್ತಾ ಮಾಂಗಲ್ಯಂ ತಂತುನಾನೇನಾ.... ಎನ್ನುವ ಹೊತ್ತಿನಲ್ಲಿ ಜೋರಾಗಿ ಮೊಳಗುವ ಮಂಗಳವಾದ್ಯದಂದದಿ ಮಾರ್ಚ್ 2ರ ಶುಕ್ರವಾರ ತೆರೆಕಾಣುತ್ತಿರುವ ಚಿತ್ರ ಗಟ್ಟಿಮೇಳ.
ಶ್ರುತಿ ಅರ್ಪಿಸುತ್ತಿರುವ ಹಂಸ ಚಿತ್ರ ಅವರ ಗಟ್ಟಿಮೇಳದ ನಿರ್ದೇಶಕರೂ ಎಸ್. ಮಹೇಂದ್ರರೇ. ರಾಜ್ಕುಮಾರ್ ಅಪಹರಣಕ್ಕೂ ಮೊದಲೇ ಸೆಟ್ಟೇರಿದ ಈ ಚಿತ್ರದ ಚಿತ್ರೀಕರಣ ಈ ವರ್ಷದ ಜನವರಿ ತಿಂಗಳವರೆಗೂ ಕುಂಟುತ್ತಾ ಸಾಗಿತ್ತು. ಆರ್.ಸಿ. ಗೌಡ, ರಮೇಶ್ ಯಾದವ್ ಈ ಚಿತ್ರದ ನಿರ್ಮಾಪಕರು. ಸೋನು ನಿಗಮ್, ಚಿತ್ರಾ, ರಾಜೇಶ್, ರಮೇಶ್ ಚಂದ್ರ, ಹೇಮಂತ್, ನಂದಿತಾ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.
ಬೆಂಗಳೂರಿನ ನರ್ತಕಿ, ನವರಂಗ್, ವೀರೇಶ್, ನಳಂದ, ನಂದಾ, ಬಾಲಾಜಿ (ದಿನ ಮೂರು ಆಟ) ಬೆಳಗಿನ ಪ್ರದರ್ಶನ - ನರ್ತಕಿ, ಪ್ರಸನ್ನ, ಸಿದ್ಧಲಿಂಗೇಶ್ವರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ಗಟ್ಟಿಮೇಳ ಗಟ್ಟಿಯಾಗಿ ಚಿತ್ರಮಂದಿರಗಳಲ್ಲಿ ಕದಲದೇ ನಿಂತೀತೆ ಎಂಬುದನ್ನು ಕಾದು ನೋಡಬೇಕು.
ಮಾಫಿಯಾ : ಬಹು ನಾಯಕರ ಚಿತ್ರ ಇದು. ವಿನೋದ್ಆಳ್ವ, ಚರಣ್ರಾಜ್ ಹಾಗೂ ಥ್ರಿಲ್ಲರ್ ಮಂಜು ಹಾಗೂ ಅಭಿಜಿತ್. ಚರಣ್ರಾಜ್, ಥ್ರಿಲ್ಲರ್ ಮಂಜು, ಆಳ್ವ ಇದ್ದ ಮೇಲೆ ಹೊಡೆದಾಟ - ಬಡಿದಾಟ ಇಲ್ಲದಿರಲು ಸಾಧ್ಯವೇ? ಹೆಸರೇ ಚಿತ್ರ ಸಾಹಸ ಪ್ರಧಾನ ಚಿತ್ರ ಎಂಬುದನ್ನು ಸಾರಿಸಾರಿ ಹೇಳುತ್ತಿದೆ.
ಕನ್ನಡದ ಹಾಸ್ಯನಟ ದಿವಂಗತ ಮುಸುರಿ ಕೃಷ್ಣಮೂರ್ತಿ ಅವರ ಪುತ್ರರಾದ ಗುರುದತ್ ಮುಸುರಿ ಹಾಗೂ ಜಯಸಿಂಹ ಮುಸುರಿ ನಿರ್ಮಿಸಿರುವ ಈ ಚಿತ್ರದ ನಿರ್ದೇಶಕರು ಆನಂದ್ ಪಿ. ರಾಜು.
ಮನೋಹರ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್ ಸಾಹಸ, ಪ್ರಸಾದ್, ತ್ರಿಭುವನ್ ನೃತ್ಯ, ಹಂಸಲೇಖಾ ಸಾಹಿತ್ಯ ಇರುವ ಚಿತ್ರದಲ್ಲಿ ವಿನೋದ್ ಆಳ್ವ, ಥ್ರಿಲ್ಲರ್ ಮಂಜು, ಚರಣ್ರಾಜ್, ಶೋಭರಾಜ್, ಅಭಿಜಿತ್, ಅನುಷಾ, ಮಧುರಾ, ಶ್ರೀಲಲಿತಾ, ಚಿತ್ರಾಶೆಣೈ, ಕಿಶೋರಿ ಬಲ್ಲಾಳ್, ಸತ್ಯಜಿತ್, ನಾಗೇಶ್ ಕಶ್ಯಪ್, ಜಯಸಿಂಹ ಮುಸುರಿ ಮೊದಲಾದವರಿದ್ದಾರೆ.
ಪ್ರದರ್ಶನ : ಕಲ್ಪನ, ಗೀತಾಂಜಲಿ, ಶಾಂತಿ, ಉಲ್ಲಾಸ್, ವಿಶಾಲ್, ನಂದಿನಿ, ಸಿದ್ದೇಶ್ವರ, ವೆಂಕಟೇಶ್ವರ, ರಾಜೇಶ್ವರಿ, ಮಾರುತಿ, ಚೇತನ (ದಿನ ಮೂರು ಆಟ) ಬೆಳಗಿನ ಪ್ರದರ್ಶನ - ಕಲ್ಪನಾ, ಉಮಾ, ಶಾಂತಿ, ವೀರೇಶ, ವೀರಭದ್ರೇಶ್ವರ.


Click it and Unblock the Notifications