ಪತಿ -ಪತ್ನಿ ನಟಿಸಿರುವ ಚಿತ್ರ ಈ ತಿಂಗಳೇ ಬಿಡುಗಡೆ
ನಿರ್ದೇಶಕ ಕಮ್ ಹಿರೋ ಕಮ್ ಕತೆಗಾರ ಕಮ್, ಪ್ರಡ್ಯೂಸರ್ ಕಮ್....... ಕಮ್ಗೆ ಕನ್ನಡದಲ್ಲೇನೂ ಕಮ್ಮಿ ಇಲ್ಲ. ಅಂದ ಹಾಗೆ ಈಗ, ಸದಾ ಅಳುವ ಪಾತ್ರಗಳಲ್ಲೇ ಮಿಂಚಿದ ಶ್ರುತಿಯ ಪತಿ ಹಾಗೂ ಹೆಸರಾಂತ ನಿರ್ದೇಶಕ ಮಹೇಂದರ್ ನಾಯಕರಾಗಿಬಿಟ್ಟಿದ್ದಾರೆ. .
ಗಟ್ಟಿಮೇಳ ಎಂಬ ಅಭಿದಾನದ ಈ ಚಿತ್ರ ಯಶಸ್ವಿಯಾಗಿ ಚಿತ್ರೀಕರಣ, ಡಬ್ಬಿಂಗ್ ಇತ್ಯಾದಿ, ಇತ್ಯಾದಿ ಮುಗಿಸಿ ಸೆನ್ಸಾರ್ ಮುಂದೂ ಹೋಗಿ ಬಂದಿದೆ. ಸೆನ್ಸಾರ್ ಒಪ್ಪಿಗೆಯೂ ಚಿತ್ರಕ್ಕೆ ಸಿಕ್ಕಿದೆ. ಬಹುತೇಕ ಗಣರಾಜ್ಯೋತ್ಸವದ ದಿನ ಈ ಚಿತ್ರ ರಾಜ್ಯಾದ್ಯಂತ ತೆರೆಕಾಣುವ ಸಾಧ್ಯತೆ ಇದೆ.
ಇತ್ತೀಚೆಗಷ್ಟೇ ಗಟ್ಟಿಮೇಳದ ಕ್ಯಾಸೆಟ್ ಕೂಡ ಬಿಡುಗಡೆ ಆಯಿತು. ಗಟ್ಟಿ ಮೇಳದ ಕ್ಯಾಸೆಟ್ ಅನ್ನು ಆನಂದ್ ಆಡಿಯೋ ಸಂಸ್ಥೆ ಹೊರತಂದಿದೆ. ಶ್ರುತಿ ಅರ್ಪಿಸಿ, ಆರ್.ಸಿ. ಗೌಡ ಹಾಗೂ ರಮೇಶ್ ಯಾದವ್ ನಿರ್ಮಿಸಿರುವ ಈ ಚಿತ್ರಕ್ಕೆ ಹಂಸಲೇಖರ ಸಾಹಿತ್ಯ ಹಾಗೂ ಸಂಗೀತ ಇದೆ. ಗಟ್ಟಿಮೇಳದಲ್ಲಿ ಆರು ಹಾಡುಗಳನ್ನು ರಿkುೕ ಟಿ.ವಿ.ಯ ಸರಿಗಮ ಖ್ಯಾತಿಯ ಸೋನು ನಿಗಮ್, ಚಿತ್ರಾ, ರಾಜೇಶ್, ರಮೇಶ್ ಚಂದ್ರ, ಹೇಮಂತ್, ನಂದಿತಾ ಹಾಗೂ ಮನು ಹಾಡಿದ್ದಾರೆ.
ಗಣರಾಜ್ಯೋತ್ಸವದ ಕೊಡುಗೆಯಾಗಿ ಕನ್ನಡಿಗರ ಮುಂದೆ ಬರಲಿರುವ ಗಟ್ಟಿ ಮೇಳದಲ್ಲಿ ಮಹೇಂದರ್ ಗಟ್ಟಿಯಾದ ಅಭಿನಯಿಸಿದ್ದಾರೋ ಇಲ್ಲವೋ ಎಂಬುದನ್ನು ಪ್ರೇಕ್ಷಕರೇ ನಿರ್ಧರಿಸುತ್ತಾರೆ. ಮಹೇಂದ್ರ ಆಕ್ಟರಾಗೇ ಉಳಿತಾರೋ, ಡೈರೆಕ್ಟರಾಗೇ ಇರ್ತಾರೋ ಇಲ್ಲ ಆಕ್ಟರ್ ಕಮ್ ಡೈರೆಕ್ಟರ್ ಆಕ್ತಾರೋ ಅನ್ನೋದನ್ನ ಮಾತ್ರ ರಜತ ಪರದೆಯ ಮೇಲೇ ಕಾಣಬೇಕು.
ಶುಕ್ರದೆಶೆ : ನವರಸ ನಾಯಕ ಜಗ್ಗೇಶ್ ಅಭಿನಯದ ಶುಕ್ರದೆಶೆ ಷೂಟಿಂಗ್, ಡಬ್ಬಿಂಗ್, ರೀರಿಕಾರ್ಡಿಂಗ್ ವಗೈರೆ ವಗೈರೆ ಎಲ್ಲ ಮುಗಿದಿದೇ ಹೋಗಿದೆ. ಚಿತ್ರದ ಮೊದಲ ಪ್ರತಿಯೂ ಹೊರಬಿದ್ದಿದೆ. ಸುಷ್ಮಾ ಫಿಲಂಸ್ರವರ ಹಾಸ್ಯಪ್ರಧಾನ ಶುಕ್ರದೆಶೆ ಸೆನ್ಸಾರ್ ಮುಂದೆ ಹೋಗಲು ಸಜ್ಜಾಗಿದೆ.
ಚಿತ್ರ ಫೆಬ್ರುವರಿಯಲ್ಲಿ ತೆರೆಕಾಣಲಿದೆ. ಆದರೂ ನಿರ್ಮಾಪಕರು ಜನವರಿಯಲ್ಲೇ ಚಿತ್ರ ಬಿಡುಗಡೆ ಮಾಡಲು ಪ್ರಯತ್ನ ನಡೆಸಿದ್ದಾರೆ. ಚಿತ್ರಕ್ಕೆ ಸೀನು ಛಾಯಾಗ್ರಹಣ, ವಿಜಯಾನಂದ್ ಸಂಗೀತ, ಶ್ರೀರಂಗರ ಸಂಭಾಷಣೆ, ಕೆ.ಡಿ. ವೆಂಕಟೇಶ್ ಸಾಹಸ, ಮನೋಹರ್ ಸಂಕಲನ ಇದೆ. ತಾರಾಬಳಗದಲ್ಲಿ ಜಗ್ಗೇಶ್, ದೊಡ್ಡಣ್ಣ, ಶ್ರೀಲಕ್ಷ್ಮೀ, ಟೆನ್ನಿಸ್ ಕೃಷ್ಣ, ಜಯರಾಂ, ಜಯಲಕ್ಷ್ಮೀ, ವೆಂಕಟೇಶ್, ಅರಸೀಕೆರೆ ರಾಜು ಮೊದಲಾದವರಿದ್ದಾರೆ.


Click it and Unblock the Notifications