ಸಿಂಬು- ತ್ರಿಶಾ ಜೋಡಿ ಮ್ಯಾಜಿಕ್ ಮತ್ತೆ ತೆರೆಗೆ : ಗೌತಮ್ ಮೆನನ್
ತಮಿಳು ಚಿತ್ರರಂಗದಲ್ಲಿ 2010ರಲ್ಲಿ ಹೊಸ ಪ್ರೇಮಕಾವ್ಯ ರಚಿಸಿದ್ದ ನಿರ್ದೇಶಕ ಗೌತಮ್ ವಾಸುದೇವ ಮೆನನ್ ಅವರು ಮತ್ತೊಮ್ಮೆ ರೋಮ್ಯಾಂಟಿಕ್ ಕಥೆಯನ್ನು ಹೆಣೆಯುವುದಾಗಿ ಹೇಳಿದ್ದಾರೆ. ಸಿಂಬು ಹಾಗೂ ತ್ರಿಶಾ ಜೋಡಿಯಲ್ಲಿ ತೆರೆ ಕಂಡ ವಿನ್ನೈತಾಂಡಿ ವರುವಾಯ(ವಿಟಿವಿ) ಚಿತ್ರದ ಎರಡನೇ ಭಾಗವನ್ನು ತೆರೆಗೆ ತರಲು ಯೋಜಿಸಿದ್ದೇನೆ, ತ್ರಿಶಾ ಹಾಗೂ ಸಿಂಬು ಮತ್ತೆ ಅದೇ ಮ್ಯಾಜಿಕ್ ಮೋಡಿ ಮಾಡುವ ನಿರೀಕ್ಷೆಯಿದೆ ಎಂದಿದ್ದಾರೆ.
ಸದ್ಯಕ್ಕೆ ಸಿಂಬು ಹಾಗೂ ಮಂಜಿಮಾ ಮೋಹನ್ ಅಭಿನಯದ 'ಅಚ್ಚಂ ಎಬ್ದದು ಮದಮೈಯಾದ' ಚಿತ್ರದಲ್ಲಿ ನಿರತರಾಗಿರುವ ಮೆನನ್ ಅವರು ವಿಟಿವಿ-2 ಆರಂಭಿಸುವ ಸೂಚನೆ ನೀಡಿದ್ದಾರೆ. ಆದರೆ, ಈ ಬಾರಿ ಈ ಚಿತ್ರ ತಮಿಳಿನಲ್ಲಿ ಮಾತ್ರ ಬರಲಿದೆ ಎಂದಿದ್ದಾರೆ. ಈ ಚಿತ್ರದ ಮೊದಲ ತೆಲುಗಿನಲ್ಲಿ 'ಯೇ ಮಾಯ ಚೇಸಾವೇ' ಎಂದು ತೆರೆ ಕಂಡಿದ್ದು ಅಕ್ಕಿನೇನಿ ನಾಗಾ ಚೈತನ್ಯ ಹಾಗೂ ಸಮಂತಾ ಮುಖ್ಯ ಪಾತ್ರಧಾರಿಗಳಾಗಿದ್ದರು.
ಇತ್ತೀಚೆಗೆ ಅಜಿತ್ ಅವರ ನಾಯಕರಾಗಿ ನಟಿಸಿದ್ದ 'ಯೆನ್ನೈ ಅರಿಂಧಾಳ್' ಚಿತ್ರದ ಯಶಸ್ಸಿನಿಂದ ಗೌತಮ್ ಅವರು ಸಿನಿಮಾ ಪ್ರೊಡೆಕ್ಷನ್ ನಲ್ಲೂ ಕೈಯಾಡಿಸಿ ವಿಭಿನ್ನ ಚಿತ್ರಗಳ ನಿರ್ಮಾಣಕ್ಕೆ ಕೈ ಹಾಕಿದರು. 'ನಾಡುನಿಸಿ ನಾಯ್ಗಲ್', ವೆಪ್ಪಂ, ಥಂಗ ಮೀಂಗಲ್, ಹಿಂದಿಯಲ್ಲಿ ಏಕ್ ದೀವಾನಾ ಥಾ ಮುಂತಾದ ಚಿತ್ರಗಳನ್ನು ತೆರೆಗೆ ತಂದರು. ಗೌತಮ್ ಮೆನನ್ ನಿರ್ದೇಶನದ ಚಿತ್ರಗಳತ್ತ ಒಂದು ನೋಟ ಇಲ್ಲಿದೆ..

ಎರಡು ರಾಷ್ಟ್ರಪ್ರಶಸ್ತಿ ಗೆದ್ದಿರುವ ಗೌತಮ್ ಮೆನನ್
2008ರಲ್ಲಿ ವಾರನಂ ಆಯಿರಮ್ ಹಾಗೂ 2013ರಲ್ಲಿ ಥಾಂಗ ಮೀಂಗಲ್ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಗೆದ್ದಿದ್ದಾರೆ. ಇದಲ್ಲದೆ 4 ಫಿಲಂಫೇರ್ ಪ್ರಶಸ್ತಿ, ಮೂರು ಬಾರಿ ವಿಜಯ್ ಅವಾರ್ಡ್, ಒಂದು ಬಾರಿ ಸ್ಕ್ರಿಪ್ಟ್ ರೈಟರ್ ಆಗಿ ಆಂಧ್ರಪ್ರದೇಶದ ನಂದಿ ಪ್ರಶಸ್ತಿಗಳಿಸಿದ್ದಾರೆ.

ವೇಟೈಯಾಡು ವಿಲೈಯಾಡು
ವೇಟೈಯಾಡು ವಿಲೈಯಾಡು-ಗೌತಮ್ ಅವರ ಶ್ರೇಷ್ಠ ಚಿತ್ರಗಳಲ್ಲಿ ಒಂದು. ಕಮಲ್ ಹಾಸನ್, ಜ್ಯೋತಿಕಾ, ಪ್ರಕಾಶ್ ರಾಜ್, ಡೇನಿಯಲ್ ಬಾಲಾಜಿ ಇರುವ ಈ ಚಿತ್ರದಲ್ಲಿ ಸೀರಿಯಲ್ ಕಿಲ್ಲರ್ ಸೆರೆ ಹಿಡಿಯಲು ಪೊಲೀಸ್ ಅಧಿಕಾರಿ ಪಡುವ ಪಾಡು ಮನೋಜ್ಞವಾಗಿ ಮೂಡಿ ಬಂದಿದೆ.

ಪಚೈಕಿಳಿ ಮುತ್ತುಚರಂ
ಮೊದಲ ಬಾರಿಗೆ ಸಾಹಸ ನಟ ಶರತ್ ಕುಮಾರ್ ಅವರು ಸಾಫ್ಟ್ ಕ್ಯಾರೆಕ್ಟರ್ ನಲ್ಲಿ ಹಾಗೂ ಜ್ಯೋತಿಕಾ ನೆಗಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡ ಚಿತ್ರ. 2005ರ ಬ್ರಿಟಿಷ್ ಅಮೆರಿಕನ್ ಥ್ರಿಲ್ಲರ್ ಡೀರೈಲ್ಡ್ ಕಾದಂಬರಿ ಹಾಗೂ ಚಿತ್ರ ಆಧಾರಿತವಾಗಿತ್ತು. ಈ ಚಿತ್ರ ಟೈಟಲ್ ಕಾರ್ಡ್ ನಲ್ಲಿ ಮೆನನ್ ಕೃಪೆ ಸಲ್ಲಿಸಿದ್ದರು. ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ ಮ್ಯೂಸಿಕಲ್ ಹಿಟ್ ಆಯಿತು.

ವಾರನಂ ಆರಿಯಂ
ಅಪ್ಪ ಮಗನ ಸಂಬಂಧದ ಕಥೆಯುಳ್ಳ ಈ ಚಿತ್ರ ಸೂರ್ಯ ಅವರ ವೃತ್ತಿ ಬದುಕಿನ ಮಹೋನ್ನತ ಚಿತ್ರ. ಫಿಲಂಫೇರ್ ಪ್ರಶಸ್ತಿಯನ್ನು ಬಾಚಿಕೊಂಡಿತು. ಕನ್ನಡ ತಾರೆ ರಮ್ಯಾ ಕೂಡಾ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಎನ್ನೈ ಅರಿಂಧಾಳ್
ಗೌತಮ್ ಮೆನನ್ ಅವರು ಪೊಲೀಸ್ ಅಧಿಕಾರಿ ಕಥೆಯ ಮೂರನೇ ಭಾಗವಾಗಿ ತೆರೆಗೆ ತಂದ ಕಥೆ ಇದು. ಅಜಿತ್ ಅವರ ಅಭಿನಯ, ತ್ರಿಶಾ, ಅನುಷ್ಕಾ ಶೆಟ್ಟಿ ನಟನೆ, ಸಂಗೀತ ಎಲ್ಲವೂ ಚಿತ್ರದ ಭರ್ಜರಿ ಯಶಸ್ಸಿಗೆ ಕಾರಣವಾಯಿತು.

ಮಿನ್ನಾಲೆ
ಗೌತಮ್ ಮೆನನ್ ಅವರು ಸ್ವಂತ ನಿರ್ದೇಶಕರಾಗಿ ತೆರೆಗೆ ತಂದ ಮೊದಲ ಪ್ರೇಮಕಾವ್ಯ. ಮಿನ್ನಾಲೆ ಹೆಸರಿನಂತೆ ಮಿಂಚಾಗಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತು. ಮಾಧವನ್ ಹಾಗೂ ರೀಮಾ ಸೇನ್ ನಟನೆ ಈ ಚಿತ್ರವನ್ನು ಹಿಂದಿಯಲ್ಲೂ ನಿರ್ಮಾಣಕ್ಕೆ ಪ್ರೇರೇಪಿಸಿತು. ರೆಹನಾ ಹೈ ತೇರೇ ದಿಲ್ ಮೇ ಚಿತ್ರ ಕೂಡಾ ಮೆಚ್ಚುಗೆಗೆ ಪಾತ್ರವಾಯಿತು.

ಕಾಕಾ ಕಾಕಾ
ಪೊಲೀಸ್ ಅಧಿಕಾರಿಯ ಕಥೆಯುಳ್ಳ ಈ ಚಿತ್ರದ ಸೂರ್ಯ ಹಾಗೂ ಜ್ಯೋತಿಕಾ ನಟನೆ, ಹ್ಯಾರೀಸ್ ಜಯರಾಜ್ ಸಂಗೀತ ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿದೆ. ತೆಲುಗು, ಹಿಂದಿ ಹಾಗೂ ಕನ್ನಡಕ್ಕೆ ಈ ಚಿತ್ರ ರಿಮೇಕ್ ಆಗಿದೆ.

ವಿನ್ನೈಥಾಂಡಿ ವರುವಾಯ
ವಿನ್ನೈಥಾಂಡಿ ವರುವಾಯ ಒಂದು ಸರಳ ಪ್ರೇಮಕಥೆಯಾದರೂ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು. ತೆಲುಗು ಹಿಂದಿಯಲ್ಲಿ ರಿಮೇಕ್ ಆಯಿತು. ಈಗ ಈ ಚಿತ್ರದ ಎರಡನೇ ಭಾಗಕ್ಕಾಗಿ ಪ್ರೇಕ್ಷಕರು ಕಾದಿದ್ದಾರೆ.


Click it and Unblock the Notifications











