14 ವರ್ಷದ ಬಳಿಕ ಕನ್ನಡಕ್ಕೆ ಬಂದ ಜೆನಿಲಿಯಾ: ಹೇಳಿದ್ದೇನು?
ನಟಿ ಜೆನಿಲಿಯಾ ಡಿ ಸೊಜಾ 2000 ದಶಕದಲ್ಲಿ ದಕ್ಷಿಣ ಭಾರತದ ನಂಬರ್ 1 ನಟಿ. ಸೌಂದರ್ಯದ ಜೊತೆಗೆ ನಟನಾ ಪ್ರತಿಭೆಯಿಂದಲೂ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವನ್ನು ಗಳಿಸಿದ್ದರು.
ಪರ ಭಾಷೆಗಳಲ್ಲಿ ಬಹಳ ಬ್ಯುಸಿಯಾಗಿರುವ ಹೊತ್ತಿನಲ್ಲಿಯೇ ಜೆನಿಲಿಯಾ ಡಿಸೋಜಾ ಕನ್ನಡದ ಸಿನಿಮಾ ಮಾಡಿದ್ದರು. ಸಿನಿಮಾದ ಹೆಸರು 'ಸತ್ಯ ಇನ್ ಲವ್'.
ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ 'ಸತ್ಯ ಇನ್ ಲವ್' ಸಿನಿಮಾ ಹಿಟ್ ಎನಿಸಿಕೊಂಡಿತ್ತು. ಸಿನಿಮಾದಲ್ಲಿ ಜೆನಿಲಿಯಾ ನಟನೆಯೂ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಆ ಸಿನಿಮಾದ ಬಳಿಕ ಮತ್ತೆ ಜೆನಿಲಿಯಾ ಇನ್ನಾವ ಕನ್ನಡ ಸಿನಿಮಾದಲ್ಲಿಯೂ ನಟಿಸಲೇ ಇಲ್ಲ. ಇದೀಗ 14 ವರ್ಷಗಳ ಬಳಿಕ ಜೆನಿಲಿಯಾ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಜೆನಿಲಿಯಾ ಡಿಸೋಜಾ 2012 ರಲ್ಲಿ ನಟ ರಿತೇಶ್ ದೇಶ್ಮುಖ್ರನ್ನು ವಿವಾಹವಾದ ಬಳಿಕ ಚಿತ್ರರಂಗದಿಂದ ದೂರ ಉಳಿದರು. ಕೆಲವು ಸಿನಿಮಾಗಳಲ್ಲಿ ಕೇವಲ ಅತಿಥಿ ಪಾತ್ರಗಳಲ್ಲಷ್ಟೆ ನಟಿಸುತ್ತಿದ್ದರು. ಇದೀಗ ಮತ್ತೆ ಚಿತ್ರರಂಗಕ್ಕೆ ಮರು ಪ್ರವೇಶ ಮಾಡಿದ್ದು ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.
ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಜೆನಿಲಿಯಾ ಡಿಸೋಜಾ ನಟಿಸುತ್ತಿದ್ದಾರೆ. ಇಂದು ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ನಿರ್ದೇಶಕ ರಾಜಮೌಳಿ ಭಾಗವಹಿಸಿದ್ದರು. ರವಿಚಂದ್ರನ್ ಹಾಗೂ ಜೆನಿಲಿಯಾ ಡಿಸೋಜಾ ಸಹ ಆಗಮಿಸಿದ್ದರು. ಚಿತ್ರರಂಗ ಪ್ರವೇಶಿಸುತ್ತಿರುವ ಕಿರೀಟಿಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜೆನಿಲಿಯಾ, ''ಇದು ಬಹಳ ವಿಶೇಷವಾದ ಸಿನಿಮಾ, ಈ ಸಿನಿಮಾದ ಬಗ್ಗೆ ನನಗೆ ಬಹಳ ಉತ್ಸುಕತೆ ಇದೆ. ನಿಮ್ಮ ಚಿತ್ರರಂಗ ಪ್ರವೇಶಕ್ಕೆ ಶುಭಾಶಯ. ನಿಮಗೆ ಒಳ್ಳೆಯ ನಿರ್ಮಾಪಕರು, ನಿರ್ದೇಶಕರು ಹಾಗೂ ತಂತ್ರಜ್ಞರು ಸಿಕ್ಕಿದ್ದಾರೆ. ನಾವೆಲ್ಲರೂ ನಿಮ್ಮ ಜೊತೆಗೆ ಇದ್ದೇವೆ'' ಎಂದರು ಜೆನಿಲಿಯಾ.
''ನನಗೆ ಇದು ಬಹಳ ವಿಶೇಷವಾದ ಸಮಯ ಏಕೆಂದರೆ ನಾನೂ ಸಹ ನಟನೆಗೆ ಮರಳುತ್ತಿದ್ದೇನೆ. ನಾನು ನಿಮ್ಮೊಂದಿಗೆ ನಟನೆಗೆ ಮರಳುತ್ತಿದ್ದೇನೆ. ಹಾಗಾಗಿ ನಾನು ಸಹ ನಿಮ್ಮಂತೆಯೇ ಹೊಸ ನಟಿ, ಇಬ್ಬರೂ ಒಟ್ಟಿಗೆ ಚೆನ್ನಾಗಿ ನಟಿಸೋಣ'' ಎಂದರು ಜೆನಿಲಿಯಾ ಡಿಸೋಜಾ.
ರಾಜಮೌಳಿ, ನಟ ರವಿಚಂದ್ರನ್ ಸೇರಿದಂತೆ ಇನ್ನೂ ಹಲವರು ಕಿರೀಟಿಯ ಮೊದಲ ಸಿನಿಮಾಕ್ಕೆ ಶುಭ ಹಾರೈಸಿದರು. ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ರವಿಚಂದ್ರನ್ ಸಹ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











