ಫರ್ನಾಂಡಿಸ್ ಗಾಗಿ ಜೈಲು ಸೇರಿ ಚಿತ್ರಹಿಂಸೆ ಅನುಭವಿಸಿದ್ದರಂತೆ ಕನ್ನಡದ ಈ ನಟಿ
ಇಂದಿರಾ ಗಾಂಧಿ ಸರ್ಕಾರ ಘೋಷಿಸಿದ್ದ ತುರ್ತುಪರಿಸ್ಥಿತಿಯನ್ನ ವಿರೋಧಿಸಿದ ಪ್ರಮುಖರಲ್ಲಿ ಜಾರ್ಜ್ ಫರ್ನಾಂಡಿಸ್ ಕೂಡ ಒಬ್ಬರು. ಇಂದಿರಾ ಸರ್ವಾಧಿಕಾರತ್ವದ ವಿರುದ್ಧ ಬಂಡೆದ್ದು, ಭೂಗತ ಚಟುವಟಿಕೆಗಳನ್ನ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದರು ಫರ್ನಾಂಡಿಸ್.
ಅಂದು ಇಂದಿರಾಗಾಂಧಿ ಸರ್ಕಾರಕ್ಕೆ ತಲೆ ನೋವು ತಂದಿದ್ದ ಫರ್ನಾಂಡಿಸ್ ಅವರನ್ನ ಬಂಧಿಸಲು ವಾರಂಟ್ ಜಾರಿ ಮಾಡಲಾಗುತ್ತೆ. ಆದ್ರೆ, ಪೊಲೀಸರ ಕೈಗೆ ಸಿಗದ ಫರ್ನಾಂಡಿಸ್ ಭೂಗತವಾಗಿ ಸರ್ಕಾರದ ವಿರುದ್ಧ ಚಟುವಟಿಕೆಗಳನ್ನ ಮುಂದುವರಿಸ್ತಾರೆ.
ಜೈಲಿಂದಲೇ ಚುನಾವಣೆಗೆ ನಿಂತು, ಗೆದ್ದಿದ್ದ ಮೋಡಿಗಾರ ಜಾರ್ಜ್ ಫರ್ನಾಂಡಿಸ್!
ಇದರಿಂದ ಸಹಜವಾಗಿ ಆಕ್ರೋಶಗೊಂಡಿದ್ದ ಸರ್ಕಾರ ಜಾರ್ಜ್ ಅವರ ಸಹೋದರ ಲಾರೆನ್ಸ್ ಫರ್ನಾಂಡಿಸ್ ಹಾಗೂ ಫರ್ನಾಂಡಿಸ್ ಅವರ ಸ್ನೇಹಿತೆಯಾಗಿದ್ದ ಕನ್ನಡ ನಟಿ ಸ್ನೇಹಲತಾ ರೆಡ್ಡಿ ಅವರನ್ನ ಬಂಧಿಸಿ ಚಿತ್ರಹಿಂಸೆ ನೀಡಿದ್ದರಂತೆ. ಏನಿದು ಇತಿಹಾಸ ಎಂದು ತಿಳಿಯಲು ಮುಂದೆ ಓದಿ.....

ಸ್ನೇಹಲತಾ ಫರ್ನಾಂಡಿಸ್ ಸ್ನೇಹಿತೆ
'ಸಂಸ್ಕಾರ' ಚಿತ್ರದಲ್ಲಿ ನಟಿಸಿದ್ದ ಸ್ನೇಹಲತಾ ರೆಡ್ಡಿ ಮತ್ತು ಸಮಾಜಿಕ ಹೋರಟಗಾರ ಜಾರ್ಜ್ ಫರ್ನಾಂಡಿಸ್ ಇಬ್ಬರು ಸ್ನೇಹಿತರಾಗಿದ್ದರು. ಸಮಾಜವಾದದಲ್ಲಿ ದೃಢನಂಬಿಕೆಯಿಟ್ಟಿದ್ದ ಆಕೆ, ಫರ್ನಾಂಡಿಸ್ ಜೊತೆ ಕಾಣಿಸಿಕೊಳ್ಳುತ್ತಿದ್ದರು. ಫರ್ನಾಂಡಿಸ್ ಪೊಲೀಸರ ಕೈಗೆ ಸಿಗದೇ ಇದ್ದಾಗ ಈ ನಟಿಯನ್ನ ಬಂಧಿಸಿ, ಫರ್ನಾಂಡಿಸ್ ಬಗ್ಗೆ ಮಾಹಿತಿ ನೀಡುವಂತೆ ಹಿಂಸೆ ನೀಡಿದ್ದರಂತೆ. ದೈಹಿಕವಾಗಿ (ಥರ್ಡ್ ಡಿಗ್ರಿ ಟ್ರೀಟ್ ಮೆಂಟ್) ಹಿಂಸೆ ನೀಡಿದ್ದರಂತೆ.

9 ತಿಂಗಳು ಜೈಲು ವಾಸ
ಪೊಲೀಸರು ಎಷ್ಟೇ ವಿಚಾರಿಸಿದರೂ, ಫರ್ನಾಂಡಿಸ್ ಅವರ ಬಗ್ಗೆ ಯಾವ ಮಾಹಿತಿಯೂ ನೀಡಲಿಲ್ಲ. ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಒಂಬತ್ತು ತಿಂಗಳ ಕಾಲ, 1976 ಮೇ 1 ರಿಂದ 1977 ಜನವರಿ 13ರ ವರೆಗೆ ಸೆರೆವಾಸದಲ್ಲಿದ್ದರು. ಸೆರೆಯಲ್ಲಿದ್ದಾಗ ಇವರು ಬಂಧಿತ ಮಹಿಳೆಯರ ಸೆರೆವಾಸದ ಕಠಿಣ ಪರಿಸ್ಥಿತಿಯನ್ನು ನೀಗಲು 9 ದಿನ ಉಪವಾಸವಿದ್ದು ಅವರಿಗೆ ಒಳ್ಳೆಯ ಆಹಾರ ದೊರಕುವಂತೆ ಮಾಡಿದರು.
ಪಾದ್ರಿಯಾಗಲು ಹೊರಟಿದ್ದ ಜಾರ್ಜ್ ಹೋರಾಟದ ಹಾದಿ ತುಳಿದಿದ್ದಾದರೂ ಏಕೆ?

ಅನಾರೋಗ್ಯವಿದ್ದರೂ ಬಿಡಲಿಲ್ಲ ಪೊಲೀಸರು
ಸ್ನೇಹಲತಾ ರೆಡ್ಡಿ ಅವರನ್ನ ಬಂಧಿಸುವ ವೇಳೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆದ್ರೂ, ಬಿಡದ ಪೊಲೀಸರು ಅವರನ್ನ ಅರೆಸ್ಟ್ ಮಾಡಿ ಸೆರೆಮನೆಯಲ್ಲಿರಿಸಿದರು. ಇವರಿಗೆ ಆಸ್ತಮ ವ್ಯಾಧಿ ಇದ್ದು ಸೆರೆವಾಸದಲ್ಲಿದ್ದಾಗ ಸರಿಯಾದ ಆರೋಗ್ಯರಕ್ಷಣೆ ಇಲ್ಲದೆ ರೋಗ ಉಲ್ಬಣಿಸಿ ದೇಹಸ್ಥಿತಿ ಕೆಟ್ಟಿತು. ಅನಾರೋಗ್ಯ, ಪತಿ ಹಾಗೂ ಮಕ್ಕಳನ್ನು ಕಾಣದಂತಹ ಪರಿಸ್ಥಿತಿ ಇವರ ವ್ಯಥೆಯನ್ನು ಹೆಚ್ಚಿಸಿತು.
ಜೈಂಟ್ ಕಿಲ್ಲರ್ ಫರ್ನಾಂಡಿಸ್ ಬಗ್ಗೆ 10 ಅಚ್ಚರಿಯ ಸಂಗತಿ

ಜೈಲಿನಿಂದ ಹೊರಬಂದ ಬಳಿಕ ಸಾವು
ಜೈಲಿನಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ (1977 ಜನವರಿ 25) ಸ್ನೇಹಲತಾ ರೆಡ್ಡಿ ನಿಧನರಾದರು. ಇವರು ಸಾಹಿತ್ಯದಲ್ಲಿ ಆಸಕ್ತಿಯುಳ್ಳವರಾಗಿದ್ದರು. ಅನೇಕ ಲೇಖನಗಳನ್ನು ಬರೆದಿದ್ದಾರೆ. ತಮ್ಮ ಸೆರೆವಾಸದ ಘೋರ ಅನುಭವಗಳನ್ನು ಜೈಲಿನ ದಿನಚರಿ ಎಂಬ ಗ್ರಂಥದಲ್ಲಿ ನಿರೂಪಿಸಿದ್ದಾರೆ. ಇವರನ್ನು ಕುರಿತು ತೆಲುಗಿನಲ್ಲಿ ಸ್ನೇಹಾಭಿರಾಮಮ್ (1978) ಮತ್ತು ಕನ್ನಡದಲ್ಲಿ ಸ್ನೇಹಲತಾ (1977) ಎಂಬ ಎರಡು ಸಂಸ್ಮರಣ ಸಂಪುಟಗಳು ಪ್ರಕಟವಾಗಿವೆ.

ಸಂಸ್ಕಾರ ಮತ್ತು ಚಂಡಮಾರುತ
ಚಲನಚಿತ್ರದ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದ ಸ್ನೇಹಲತಾ ಅವರು ತಮ್ಮ ಪತಿ ತಯಾರಿಸಿದ ಸಂಸ್ಕಾರ (1970), ಚಂಡಮಾರುತ (1978) ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದರು. ಸಂಸ್ಕಾರದ ನಾಯಕಿ ಚಂದ್ರಿಯ ಪಾತ್ರದಲ್ಲಿನ ಇವರ ಅಭಿನಯ ಮನೋಜ್ಞವಾಗಿತ್ತು. ಈ ಚಿತ್ರಕ್ಕೆ 1970ರಲ್ಲಿ ಅತ್ಯುತ್ತಮ ರಾಷ್ಟ್ರೀಯ ಚಿತ್ರವೆಂಬ ಪ್ರಶಸ್ತಿ (ಸುವರ್ಣ ಪದಕ) ಲಭಿಸಿತು.


Click it and Unblock the Notifications











