ಸಾಹಿತಿ ಗಿರೀಶ್ ಕಾರ್ನಾಡ್ ಹುಟ್ಟುಹಬ್ಬ: ಅಭಿಮಾನಿಗಳಿಂದ ಶುಭಾಶಯ
ಕನ್ನಡ ಸಾಹಿತ್ಯ ಲೋಕಕ್ಕೆ ಗಿರೀಶ್ ಕಾರ್ನಾಡ್ ಅಪಾರ ಕೊಡುಗೆಯನ್ನು ನೀಡಿದ್ದಾರೆ. ತಮ್ಮ ನಾಟಕ, ಕೃತಿಗಳ ಮೂಲಕ ಓದುಗರ ಹೃದಯಕ್ಕೆ ಮತ್ತಷ್ಟು ಮಹತ್ವದ ಚಿಂತನೆಗಳನ್ನು ಬಿತ್ತಿದ್ದಾರೆ. ಇಂದಿಗೂ ಕೂಡ ಅವರ ಹಲವು ನಾಟಕಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಕೇವಲ ನಾಟಕಗಳು ಹಾಗೂ ಬರವಣಿಗೆ ಮಾತ್ರವಲ್ಲದೆ ಸಿನಿಮಾ ರಂಗದಲ್ಲೂ ಗಿರೀಶ್ ಕಾರ್ನಾಡ್ ತಮ್ಮದೇ ಆದ ಚಾಪು ಮೂಡಿಸಿದ್ದಾರೆ.
ಗಿರೀಶ್ ಕಾರ್ನಾಡ್ ಅವರ ಬರಹಕ್ಕೆ ಅವರ ಸಿನಿಮಾಗಳಿಗೆ ಇಂದಿಗೂ ಕೂಡ ಅಪಾರ ಅಭಿಮಾನಿಗಳಿದ್ದಾರೆ. ಸಿನಿಮಾಗಳಲ್ಲಿ ನಿರ್ದೇಶಕರಾಗಿ, ಚಿತ್ರಕಥೆಗಾರರಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ತಾವು ಸಹ ಹಲವು ಭಾಷೆಗಳಲ್ಲಿ ನಟಿಸುವ ಮೂಲಕ ನಟನಾಗಿಯೂ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೂರಾರು ಬಗೆಯ ಪಾತ್ರಗಳಿಗೆ ಗಿರೀಶ್ ಕಾರ್ನಾಡ್ ಜೀವ ತುಂಬಿದ್ದಾರೆ. ಹಲವು ನಟರಿಗೆ ಮಾರ್ಗದರ್ಶಕರಾಗಿದ್ದಾರೆ. 1970 ರಿಂದ ಸಿನಿಮಾ ಪಯಣ ಶುರು ಮಾಡಿದ ಕಾರ್ನಾಡ್ 2019 ರವರೆಗೂ ಅನೇಕ ನಾಟಕಗಳು, ಸಿನಿಮಾಗಳಲ್ಲಿ ಕೆಲಸ ಮಾಡಿ ತಮ್ಮದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಇಂದು (ಮೇ 19) ಅವರ ಜನ್ಮದಿನ. ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸಾಹಿತಿಗಳು, ಸಿನಿ ಕಲಾವಿದರು ಶುಭಾಶಯದ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ರಂಗಕರ್ಮಿಯಾದ ಗಿರೀಶ್ ಕಾರ್ನಾಡ್ ಎಷ್ಟೋ ನಟ ನಟಿಯರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. 'ಸಂಸ್ಕಾರ'ದಿಂದ ನಟನೆ ಪ್ರಾರಂಭವಾಗಿ ಹತ್ತು ಹಲವು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಸಿನಿ ಜಗತ್ತಿನಲ್ಲಿ ಅಚ್ಚಳಿಯದೇ ಉಳಿದು ಬಿಟ್ಟಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾ 'ಸಂಸ್ಕಾರ' ಅಂದಿನ ಕಾಲದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತ್ತು. ಆ ಮಟ್ಟಿಗೆ ಗಿರೀಶ್ ಕಾರ್ನಾಡ್ ಅಭಿನಯಿಸಿದ್ದರು. ಇದಾದ ಬಳಿಕ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಇದಾದ ಬಳಿಕ ಎಸ್ .ಎಲ್ ಭೈರಪ್ಪ ಅವರ 'ವಂಶವೃಕ್ಷ' ಕೃತಿಯನ್ನೇ ಆಧರಿಸಿ ಸಿನಿಮಾ ಮಾಡುವ ಮೂಲಕ ನಿರ್ದೇಶಕರಾಗಿರೂ ಹೊರ ಹೊಮ್ಮಿದ್ದರು.
ಇನ್ನು ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಶಂಕರ್ ನಾಗ್ ಹಾಗೂ ವಿಷ್ಣುವರ್ಧನ್ ಅವರಿಗೆ ಆಕ್ಷನ್ ಕಟ್ ಹೇಳುವ ಮೂಲಕ ಇಬ್ಬರು ದಿಗ್ಗಜರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. 'ವಂಶವೃಕ್ಷ' ಸಿನಿಮಾ ಮೂಲಕ ಡಾ. ವಿಷ್ಣುವರ್ಧನ್ ತೆರೆ ಮೇಲೆ ಕಾಣಿಸಿಕೊಂಡರೆ, 'ಒಂದಾನೊಂದು ಕಾಲದಲ್ಲಿ' ಸಿನಿಮಾ ಮೂಲಕ ಶಂಕರ್ನಾಗ್ ಮೊದಲ ಬಾರಿಗೆ ಕ್ಯಾಮರಾ ಎದುರಿಸಿದರು. ಈ ಎರಡು ಚಿತ್ರಗಳನ್ನು ಗಿರೀಶ್ ಕಾರ್ನಾಡ್ ಅವರೇ ನಿರ್ದೇಶನ ಮಾಡಿದ್ದರು.

ಹಲವಾರು ಸಿನಿಮಾಗಳಲ್ಲಿ ನಿರ್ದೇಶನ ಹಾಗೂ ನಟಿಸಿದ ಗಿರೀಶ್ ಕಾರ್ನಾಡ್ ಅವರಿಗೆ ಹಲವು ಪ್ರಶಸ್ತಿಗಳ ಲಭಿಸಿವೆ. 'ವಂಶವೃಕ್ಷ', 'ಕಾಡು', 'ಒಂದಾನೊಂದು ಕಾಲದಲ್ಲಿ' ಸಿನಿಮಾಗಳಿಗೆ ಅತ್ಯುತ್ತಮ ಸಿನಿಮಾ ಫಿಲ್ಮ ಫೇರ್ ಅವಾರ್ಡ್, ಆನಂದ ಭೈರವಿ' ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.


Click it and Unblock the Notifications











