ಜೈಲಲ್ಲಿ ಚಿತ್ರ ಹಿಂಸೆ ; ನನಗೆ ವಿಷ ಕೊಡಿ - ಜಡ್ಜ್ ಮುಂದೆ ದರ್ಶನ್ ಕಣ್ಣೀರು
ತೂಗುದೀಪ ಶ್ರೀನಿವಾಸ್ ಅವರಂತಹ ಮೇರು ನಟನ ಮಗನಾದರೂ ಕೂಡ ಕಡುಗಷ್ಟದಿಂದ ಮೇಲೆ ಬಂದವರು ದರ್ಶನ್. ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲನ್ನೇರುತ್ತಾ ಚಾಲೆಂಜಿಂಗ್ ಸ್ಟಾರ್ ಆಗಿ ಹೊರ ಹೊಮ್ಮಿದ ದರ್ಶನ್ ಅವರದ್ದು ಕಳೆದ ವರ್ಷದವರೆಗೆ ನಿಜಕ್ಕೂ ಪ್ರೇರಣಾದಾಯಕ ವ್ಯಕ್ತಿತ್ವವಾಗಿತ್ತು. ಆದರೆ.. ಕಳೆದ ವರ್ಷ ಇದೇ ದರ್ಶನ್ ಎತ್ತರಕ್ಕೇರಿದವರು ಪಾತಾಳಕ್ಕೆ ಬೀಳಬಹುದು ಎನ್ನುವುದಕ್ಕೆ ಕೂಡ ಮಾದರಿ ವ್ಯಕ್ತಿಯಾದರು.
ಮನೆಯ ತುಂಬಾ ನಾಯಿಗಳ ಜೊತೆ ದಿಕ್ಕು ತಪ್ಪಿಸುವ ನರಿಗಳನ್ನೂ ಕೂಡ ಸಾಕಿ ಕಳೆದ ವರ್ಷ ಅಕ್ಷರಶಃ ನರಕ ಯಾತನೆಯನ್ನು ಅನುಭವಿಸಿದ ದರ್ಶನ್, ಅಪವಿತ್ರ ಸಂಬಂಧಕ್ಕೆ ಹಾತೊರೆದು ಕಳೆದ ವರ್ಷ 131 ದಿನಗಳವರೆಗೆ ಜೈಲಿನಲ್ಲಿ ಕಾಲ ಕಳೆದರು. ಈ ವರ್ಷ ಮತ್ತೆ ಜೈಲು ಪಾಲಾದರು.

ಇಂಥಾ ದರ್ಶನ್ ಸದ್ಯ ನ್ಯಾಯಾಧೀಶರ ಎದುರು ವಿಷ ಕೊಡುವಂತೆ ಮನವಿಯನ್ನು ಮಾಡಿದ್ದಾರೆ. ಈ ಮೂಲಕ ನ್ಯಾಯಾಧೀಶರಿಗೆ ಶಾಕ್ ನೀಡಿದ್ದಾರೆ. ಹೌದು, ನಿಮಗೆ ಗೊತ್ತಿರಲಿ.. ದರ್ಶನ್ಗೆ ಈ ಪರಪ್ಪನ ಅಗ್ರಹಾರ ಅರಮನೆಯಲ್ಲ. ಬದಲಿಗೆ ಅಕ್ಷರಶಃ ಸೆರೆಮನೆ. ಸುಪ್ರೀಂ ಆದೇಶದ ಹಿನ್ನೆಲೆ ವಿಶೇಷ ಸವಲತ್ತುಗಳನ್ನು ಬಿಡಿ ಸಾಮಾನ್ಯ ಸವಲತ್ತುಗಳನ್ನು ಕೂಡ ದರ್ಶನ್ಗೆ ನೀಡಲಾಗುತ್ತಿಲ್ಲ.
ಈ ಹಿನ್ನೆಲೆ ಕೊನೆ ಪಕ್ಷ ಹಾಸಿಗೆ, ತಲೆದಿಂಬು, ಹೊದಿಕೆ ಸೇರಿದಂತೆ ಕನಿಷ್ಠ ಸೌಲಭ್ಯವಾದರೂ ಕೊಡಿ ಎಂದು ದರ್ಶನ್ ಪರ ವಕೀಲರು ಬೆಂಗಳೂರಿನ 64ನೇ ಸಿಟಿ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣಾಧೀನ ಕೈದಿಗೆ ಕೊಡಬಹುದಾದ ಕನಿಷ್ಠ ಸೌಲಭ್ಯಗಳನ್ನು ನೀಡುವಂತೆ ನಾವು ಕೇಳುತ್ತಿದ್ದೇವೆ. ಕಾನೂನು ಪ್ರಕಾರ ಏನು ಕೊಡಬೇಕೋ ಅದನ್ನೇ ಕೊಡಲಿ ಎಂದು ದರ್ಶನ್ ಪರ ವಕೀಲರು ವಾದವನ್ನು ಮಾಡಿದ್ದರು. ಪ್ರಿಸನ್ಸ್ ಕಾಯ್ದೆಯ 63ರ ಪ್ರಕಾರ ಸ್ವಂತ ವಸ್ತುಗಳನ್ನು ಹೊಂದಲು ಅವಕಾಶ ಇದೆ ಎಂದು ಕೇಳಿಕೊಂಡಿದ್ದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೊನ್ನೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು (ಸೆಪ್ಟೆಂಬರ್ 9) ಆದೇಶ ಕಾಯ್ದಿರಿಸಿತ್ತು. ಅದ್ರಂತೆ ಇಂದು ಮತ್ತೆ ಹೆಚ್ಚುವರಿ ಹಾಸಿಗೆ ಹಾಗೂ ದಿಂಬು ವಿಚಾರಕ್ಕೆ ವಿಚಾರಣೆಯನ್ನು ನಡೆಸಲಾಯ್ತು. ಈ ವಿಚಾರಣೆ ಸಂದರ್ಭದಲ್ಲಿ ಪರಪ್ಪನ ಅಗ್ರಹಾರದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ದರ್ಶನ್, ನನಗೆ ದಯಮಾಡಿ ವಿಷ ನೀಡಿ ಎಂದು ನ್ಯಾಯಾಧೀಶರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ದರ್ಶನ್ ಅವರ ಈ ಮಾತು ಕೇಳಿ ಶಾಕ್ ಆದ ನ್ಯಾಯಾಧೀಶರು ಹಾಗೆಲ್ಲ ಕೇಳಬಾರದು ಎಂದು ಹೇಳಿದ್ದಾರೆ.
ನ್ಯಾಯಾಧೀಶರು ಹಾಗೆಲ್ಲಾ ಮಾಡಲು ಸಾಧ್ಯ ಇಲ್ಲ ಎಂದು ಹೇಳಿದ ನಂತರವೂ ಸುಮ್ಮನಾಗದ ದರ್ಶನ್, ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಬಟ್ಟೆಗಳು ವಾಸನೆ ಬರುತ್ತಿವೆ. ಫಂಗಸ್ನಿಂದಾಗಿ ಇಲ್ಲಿ ಬದುಕಲು ಆಗುತ್ತಿಲ್ಲ. ಬೇರೆ ಯಾರಿಗೂ ಬೇಡ ನನಗೆ ಮಾತ್ರ ವಿಷ ನೀಡಲಿ. ಕೋರ್ಟ್ನಿಂದಲೇ ಈ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ದರ್ಶನ್ ಅವರ ಈ ಮಾತುಗಳಿಗೆ ಹಾಗೆಲ್ಲ ಆದೇಶ ನೀಡಲು ಸಾಧ್ಯ ಇಲ್ಲ ಎಂದು ಹೇಳಿದ ಜಡ್ಜ್, ಜೈಲು ಅಧಿಕಾರಿಗಳಿಗೆ ಯಾವ ಆದೇಶ ನೀಡಬೇಕೋ ಆ ಆದೇಶವನ್ನು ನೀಡುತ್ತೇವೆ ಎಂದು ಹೇಳಿ ವಿಚಾರಣೆಯನ್ನು ಇಂದು ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಿದ್ದಾರೆ.
ಮತ್ತೊಂದು ಕಡೆ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ ? ಅಥವಾ ಪರಪ್ಪನ ಅಗ್ರಹಾರದಲ್ಲಿಯೇ ಇರ್ತಾರಾ ? ಎನ್ನುವ ಪ್ರಶ್ನೆಗೆ ಕೂಡ ಇಂದೇ ಉತ್ತರ ಸಿಗುವ ನಿರೀಕ್ಷೆ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೂಡ ಇಂದು ಆದೇಶ ಹೊರ ಬರುವ ನಿರೀಕ್ಷೆ ಇದೆ.


Click it and Unblock the Notifications











