ಸಾಹಸ ಸಿಂಹ ವಿಷ್ಣುವರ್ಧನ್ ಅವರ ಈ ಚಿತ್ರವನ್ನು ನೋಡಿದ್ದಾರಂತೆ ಟಿಮ್ ಡೇವಿಡ್..!
ಸಾಹಸ ಸಿಂಹ ವಿಷ್ಣುವರ್ಧನ್. ಕನ್ನಡ ಚಿತ್ರರಂಗದ ಯಜಮಾನ. ಸಾಂಸ್ಕ್ರತಿಕ ರಾಯಭಾರಿ. ಬದುಕಿದ್ದಷ್ಟು ದಿನ ಯಾರಿಗೂ ನೋವನ್ನ ನೀಡದ ಕರುಣಾಮಯಿ. ರೂಪ, ಅಭಿನಯ, ಸಂಸ್ಕಾರ, ಸಹನೆ, ಸರಳತೆ, ಸಹಿಸುವಿಕೆ, ಕ್ಷಮಿಸುವಿಕೆ ಎಲ್ಲದಕ್ಕೂ ಅತ್ಯುತ್ತಮ ಉದಾಹರಣೆಯೆನ್ನುವಂತಿದ್ದ ವಿಷ್ಣು ಆದರ್ಶಕ್ಕೆ ಮತ್ತೊಂದು ಹೆಸರು. ಇಂಥಾ ವಿಷ್ಣುವರ್ಧನ್ ಅವರ ಚಿತ್ರವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಪ್ಲೇಯರ್ ಟಿಮ್ ಡೇವಿಡ್ ನೋಡಿದ್ದಾರೆ ಎಂದರೆ ಯಾರಿಗಾದರೂ ಅಚ್ಚರಿಯಾಗದಿರದು.
ಅಚ್ಚರಿಯಾದರು ಕೂಡ ಇದು ಸತ್ಯ. ಖುದ್ದು ಟಿಮ್ ಡೇವಿಡ್ ಈ ವಿಚಾರವನ್ನು ಹೇಳಿದ್ದಾರೆ. ಹೌದು, ಆನ್ ಲೈನ್ನಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ದಾನಿಶ್ ಸೇಠ್ ಅನೇಕ ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕನ್ನಡದ ಅಸ್ಮಿತೆಯನ್ನು ಸಾರುತ್ತಿದ್ದಾರೆ. ವಿದೇಶಿ ಆಟಗಾರರ ಜೊತೆ ಕನ್ನಡದಲ್ಲಿ ಮಾತನಾಡುತ್ತಾರೆ. ಅವರಿಗೆ ಕನ್ನಡವನ್ನೂ ಕೂಡ ಹೇಳಿ ಕೊಡುತ್ತಾರೆ.

ಇಂಥ ದಾನಿಶ್ ಸೇಠ್ ಸದ್ಯ ಟಿಮ್ ಡೇವಿಡ್ ಜೊತೆ ಹರಟೆ ಹೊಡೆದಿದ್ದಾರೆ. ಕೆಲ ವಿಚಾರಗಳ ಕುರಿತು ಮಾತನಾಡಿದ್ದಾರೆ. ಹೀಗೆ ಮಾತನಾಡುತ್ತಾ ತಮ್ಮ ಜನ್ಮ ಸ್ಥಳ ಸಿಂಗಾಪುರ್ ಎಂದು ಟಿಮ್ ಡೇವಿಡ್ ಹೇಳಿದ್ದಾರೆ.
ಇದಕ್ಕೆ ದಾನಿಶ್ ಸೇಠ್ ಸಿಂಗಾಪುರ್ ನಲ್ಲಿ ರಾಜಾ ಕುಳ್ಳ ಎಂಬ ಚಿತ್ರ ಬಂದಾಗಲೇ ನಾನು ಮೊದಲು ಸಿಂಗಾಪೂರ್ ನೋಡಿದ್ದು ಎಂದು ಹೇಳಿದ್ದಾರೆ. ನೀವೇನಾದರೂ ಆ ಸಿನಿಮಾ ನೋಡಿದ್ದೀರಾ ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಟಿಮ್ ಡೇವಿಡ್ ಹೌದು ಎಂದಿದ್ದಾರೆ. ಇಷ್ಟೇ ಅಲ್ಲ ಚಿತ್ರದಲ್ಲಿ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಇದ್ದಾರೆ ಎಂದು ಕೂಡ ಟಿಮ್ ಡೇವಿಡ್ ಹೇಳಿದ್ದಾರೆ. ಕುಳ್ಳರ ರಾಜಾ ಬಾರೋ ಹಾಡನ್ನು ಕೂಡ ಹಾಡಿದ್ದಾರೆ.
ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಂಚಿಕೊಂಡಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಗಮನ ಸೆಳೆಯುತ್ತಿದೆ. ಇದಕ್ಕೆ ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು ಅನೇಕರು ಈ ವಿಡಿಯೋ ಸ್ಕ್ರಿಪ್ಟೆಡ್ ಆಗಿರಬಹುದು, ತಮಾಷೆಗಾಗಿ ಹೀಗೆ ಮಾತುಗನ್ನಾಡಿರಬಹುದು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಟಿಮ್ ಡೇವಿಡ್ ನಿಜಕ್ಕೂ ಸಿಂಗಾಪುರದಲ್ಲಿ ರಾಜಾ ಕುಳ್ಳ ನೋಡಿರುವುದು ಅನುಮಾನ ಎನ್ನುತ್ತಿದ್ದಾರೆ.


Click it and Unblock the Notifications











