Ganesh Birthday: ಕನ್ನಡದಲ್ಲಿ ಮೊದಲು ಕೋಟಿ ಸಂಭಾವನೆ ಪಡೆದ ಗಣಿ ಬಗ್ಗೆ ನಿಮಗೆಷ್ಟು ಗೊತ್ತು?
ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು, ಆಪ್ತರು ನೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ. 'ಮುಂಗಾರು ಮಳೆ' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಗಣಿ ಮುಂದೆ ಹಲವು ಸಿನಿಮಾಗಳಲ್ಲಿ ನಟಿಸಿ ಗೆದ್ದರು. ನಮಸ್ಕಾರ.. ನಮಸ್ಕಾರ.. ನಮಸ್ಕಾರ ಎನ್ನುತ್ತ ಕಿರುತೆರೆಯಿಂದ ಹಿರಿತೆರೆಗೆ ಬಂದು ಗಣೇಶ್ ಸೂಪರ್ ಸಕ್ಸಸ್ ಕಂಡಿದ್ದು ಗೊತ್ತೇಯಿದೆ.
ಮಾಸ್, ರೌಡಿಸಂ ಸಿನಿಮಾಗಳ ಟ್ರೆಂಡ್ ನಡೆಯುತ್ತಿದ್ದ ಸಮಯದಲ್ಲಿ 'ಮುಂಗಾರುಮಳೆ' ಎನ್ನುವ ರೊಮ್ಯಾಂಟಿಕ್ ಸಿನಿಮಾ ಬಂದು ಸಂಚಲನ ಸೃಷ್ಟಿಸಿತ್ತು. ಯಾವುದೇ ನಿರೀಕ್ಷೆ ಇಲ್ಲದೇ ಬಂದಿದ್ದ ಈ ಸಿನಿಮಾ ನೋಡ ನೋಡುತ್ತಲೇ ಜಾದೂ ಮಾಡಿತ್ತು. ಅಕ್ಕಪಕ್ಕದ ಇಂಡಸ್ಟ್ರಿಯವರು ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮಾಡಿತ್ತು. ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಷನ್ ಸೂಪರ್ ಹಿಟ್ ಆಯಿತು. ಸಿನಿಮಾ ನಿರ್ಮಾಣದ ವಿಚಾರದಲ್ಲಿ ಗಣಿ ಮುತುವರ್ಜಿ ವಹಿಸಿದ್ದರು.

'ಚೆಲುವಿನ ಚಿತ್ತಾರ' ಚಿತ್ರದಿಂದ ಗೋಲ್ಡನ್ ಸ್ಟಾರ್ ಪಟ್ಟ ಅಲಂಕರಿಸಿದ್ದರು. 'ಗಾಳಿಪಟ' ಚಿತ್ರದಲ್ಲಿ 1 ಕೋಟಿ ರೂ. ಸಂಭಾವನೆ ಪಡೆದು ಎಲ್ಲರ ಹುಬ್ಬೇರಿಸಿದ್ದರು. ಇತ್ತೀಚೆಗೆ 'ಗಾಳಿಪಟ'- 2 ಪ್ರಮೋಷನ್ ವೇಳೆ ಈ ವಿಚಾರದ ಬಗ್ಗೆ ಗಣಿ ಮಾತನಾಡಿದ್ದರು.
ಕನ್ನಡದ ಮೊದಲ ಕೋಟಿ ಹೀರೊ
ಸ್ಯಾಂಡಲ್ವುಡ್ನಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ನಟ ಗಣೇಶ್ ಎನ್ನುವ ಮಾತಿದೆ. 'ಮುಂಗಾರು ಮಳೆ' ಅದ್ಭುತ ಯಶಸ್ಸಿನ ಬಳಿಕ ಗಣಿ- ಭಟ್ರು ಸೇರಿ 'ಗಾಳಿಪಟ' ಸಿನಿಮಾ ಮಾಡಿದ್ದರು. ಈ ಚಿತ್ರಕ್ಕೆ 1 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆದಿದ್ದರು. ಈ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಗಣಿ ""ನನಗೂ ಗೊತ್ತಿಲ್ಲ ಅವಾಗ ಅಷ್ಟೆಲ್ಲಾ ಕೊಡ್ತಾರೆ ಅಂತ. ಅವ್ರು ಕೊಟ್ರು ನಾನು ತಗೊಂಡೆ. ನಾನೇನು ಡಿಮ್ಯಾಂಡ್ ಮಾಡಿ ತಗೊಳ್ಳಿಲ್ಲ. ನಿಜ ಹೇಳಬೇಕು ಅಂದ್ರೆ, ಅದು ಬಂದಿದ್ದೆ 'ಗಾಳಿಪಟ' ಚಿತ್ರಕ್ಕೆ" ಎಂದಿದ್ದರು.
ಕೋಟಿ ಕೇಳಿದ್ದಲ್ಲ, ಕೊಟ್ಟಿದ್ದು
ಎಸ್ಪಿಆರ್ ಎಂಟರ್ಟೈನರ್ಸ್ ಸಂಸ್ಥೆ ಗಣೇಶ್- ಯೋಗರಾಜ್ ಭಟ್ ಕಾಂಬಿನೇಷನ್ನಲ್ಲಿ ಹೊಸ ಪ್ರಾಜೆಕ್ಟ್ ಪ್ಲ್ಯಾನ್ ಮಾಡಿತ್ತು. ಆ ಸಮಯದಲ್ಲಿ ಇಬ್ಬರ ಕ್ರೇಜ್ಗೆ ತಕ್ಕಂತೆ ಭಾರೀ ಸಂಭಾವನೆ ಆಫರ್ ಮಾಡಿತ್ತು. ಈ ಬಗ್ಗೆ ಗಣಿ ಮಾತನಾಡುತ್ತಾ "ಅಷ್ಟು ತಗೋತ್ತಾರೆ, ಇಷ್ಟು ತಗೋತ್ತಾರೆ ಅಂತೆಲ್ಲಾ ಆಗ ಸುದ್ದಿ ಆಗಿತ್ತು. ಆ ಆಫರ್ ಮಾಡಿದ್ದು ಪ್ರೊಡಕ್ಷನ್ ಹೌಸ್. ನಾನು ಯಾವತ್ತೂ ಯಾರಿಗೂ ಡಿಮ್ಯಾಂಡ್ ಮಾಡುತ್ತಿರಲಿಲ್ಲ. ಆಮೇಲೆ ಗೊತ್ತಾಯ್ತು, ಹೋ ನಾನು ಇಷ್ಟು ತಗೊಬಹುದು ಅಂತ" ಎಂದು ವಿವರಿಸಿದ್ದರು.

ಗೋಲ್ಡನ್ ಸ್ಟಾರ್ ಹಿಟ್ ಚಿತ್ರಗಳು
'ಚೆಲುವಿನ ಚಿತ್ತಾರ', 'ಕೃಷ್ಣ', 'ಮಳೆಯಲಿ ಜೊತೆಯಲಿ', 'ಶ್ರಾವಣಿ ಸುಬ್ರಮಣ್ಯ', 'ದಿಲ್ ರಂಗೀಲಾ', 'ಮಗುಳು ನಗೆ', 'ಚಮಕ್', 'ಗಾಳಿಪಟ- 2' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ಗೋಲ್ಡನ್ ಸ್ಟಾರ್ ನಟಿಸಿದ್ಧಾರೆ. 'ಕೂಲ್' ಚಿತ್ರಕ್ಕಾಗಿ ಡೈರೆಕ್ಟರ್ ಕ್ಯಾಪ್ ಕೂಡ ತೊಟ್ಟಿದ್ದರು. 'ಚೆಲ್ಲಾಟ' ಗಣಿ ಹೀರೊ ಆಗಿ ನಟಿಸಿದ ಮೊದಲ ಸಿನಿಮಾ. ಆದರೆ ಅದಕ್ಕೂ ಮುನ್ನ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದರು. ಕಿರುತೆರೆಯ 'ಕಾಮಿಡಿ ಟೈಮ್' ಶೋ ಒಳ್ಳೆ ಹೆಸರು ತಂದುಕೊಟ್ಟಿತ್ತು.
ಗಣಿ ಸಕತ್ ಬ್ಯುಸಿ
'ತ್ರಿಬಲ್ ರೈಡಿಂಗ್' ನಂತರ ಗಣಿ ನಟಿಸಿದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. 'ಬಾನ ದಾರಿಯಲ್ಲಿ' ಸಿನಿಮಾ ರಿಲೀಸ್ ತಡವಾಗುತ್ತಿದೆ. ಪ್ರೀತಂ ಗುಬ್ಬಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಹುಟ್ಟುಹಬ್ಬದ ಸಂಭ್ರಮದಲ್ಲಿ 'ಕೃಷ್ಣಂ ಪ್ರಣಯ ಸಖಿ' ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಸದ್ಯ ಈ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮತ್ತಷ್ಟು ಸಿನಿಮಾ ಮಾತುಕತೆ ನಡೀತಿದೆ.


Click it and Unblock the Notifications











