ಶರಣ್ ಮತ್ತು ರಿಷಿ ಜಾಗಕ್ಕೆ ಬಂದ್ರು ಗಣೇಶ್ ಮತ್ತು ದಿಗಂತ್
ಸ್ಯಾಂಡಲ್ ವುಡ್ ನ ಕಾಮಿಡಿ ಅಧ್ಯಕ್ಷ ಶರಣ್ ಮತ್ತು ರಿಷಿ ಇಬ್ಬರು ಸೇರಿ ಗಾಳಿಪಟ ಹಾರಿಸಲು ಸಜ್ಜಾಗಿದ್ದರು. ನಿರ್ದೇಶಕ ಯೋಗರಾಜ್ ಭಟ್ ಸಾರಥ್ಯದಲ್ಲಿ ಶರಣ್ ಮತ್ತು ರಿಷಿ ಇಬ್ಬರು ಈಗಾಗಲೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದರು. ಆದ್ರೀಗ ಏಕಾಏಕಿ ಶರಣ್ ಮತ್ತು ರಿಷಿ ಜಾಗದಲ್ಲಿ ಮತ್ತಿಬ್ಬರು ನಟರು ಎಂಟ್ರಿಯಾಗಿದ್ದಾರೆ.
ಹೌದು, ನಿರ್ದೇಶಕ ಯೋಗರಾಜ್ ಭಟ್ ಅಕ್ಷನ್ ಕಟ್ ಹೇಳುತ್ತಿರುವ ಗಾಳಿಪಟ-2 ಚಿತ್ರಕ್ಕೆ ದಿಢೀರನೆ ಸ್ಟಾರ್ ಕಾಸ್ಟ್ ಬದಲಾಗಿದೆ. ಈಗಾಗಲೆ ಶರಣ್, ರಿಷಿ ಮತ್ತು ಪವನ್ ಮುಖ್ಯ ಭೂಮಿಕೆಯಲ್ಲಿ 'ಗಾಳಿಪಟ-2' ಹಾರಿಸಲು ಸಜ್ಜಾಗಿದ್ದ ಭಟ್ರು ಈಗ ಶರಣ್ ಮತ್ತು ರಿಷಿ ಜಾಗಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದಿಗಂತ್ ಬಂದಿದ್ದಾರೆ.
ಅಂದ್ಹಾಗೆ ಏಕಾಏಕಿ ಚಿತ್ರದ ಕಲಾವಿದರು ಬದಲಾಗಿದ್ದೇಕೆ ಎನ್ನುವ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ. ಮಳೆಗಾಗಿ ಕಾದು ಚಿತ್ರೀಕರಣಕ್ಕೆ ಸಿದ್ಧವಾಗಿದ್ದ ಚಿತ್ರತಂಡ ಈಗ ಬೇರೆ ಕಲಾವಿದರನ್ನು ಕಟ್ಟಿಕೊಂಡು ಚಿತ್ರೀಕರಣಕ್ಕೆ ಹೊರಟ ಅಸಲಿ ಕಾರಣವೇನು? ಮುಂದೆ ಓದಿ..

'ಗಾಳಿಪಟ' ಸೀಕ್ವೆಲ್ ನಲ್ಲಿ ಮೂಲ ಕಲಾವಿದರು
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದ 'ಗಾಳಿಪಟ' ಮೊದಲ ಭಾಗದಲ್ಲಿ ಗಣೇಶ್ ಮತ್ತು ದಿಗಂತ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಜೋಡಿ 'ಮುಂಗಾರುಮಳೆ' ಚಿತ್ರದಲ್ಲೂ ಒಟ್ಟಿಗೆ ಅಭಿನಯಿಸಿದ್ದರು. ಈಗ ಮತ್ತೆ 'ಗಾಳಿಪಟ-2' ಚಿತ್ರದಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಮೂರನೆ ಬಾರಿಗೆ ಒಂದಾಗುತ್ತಿದ್ದಾರೆ. ಗಾಳಿಪಟ ಚಿತ್ರದಲ್ಲಿ ದಿಗಂತ್ ಮತ್ತು ಗಣೇಶ್ ಕಾಂಬಿನೇಷನ್ ಗೆ ಅಭಿಮಾನಿಗಳು ಸಹ ಫಿದಾ ಆಗಿದ್ದರು. ಚಿತ್ರ ಕೂಡ ಸೂಪರ್ ಹಿಟ್ ಆಗಿತ್ತು. 'ಗಾಳಿಪಟ-2'ನಲ್ಲಿ ಗಾಯಕ ರಾಜೇಶ್ ಕೃಷ್ಣನ್ ಇರುವುದಿಲ್ಲ. ರಾಜೇಶ್ ಜಾಗದಲ್ಲಿ ಪವನ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಹಿರಿಯ ನಟ ಅನಂತ್ ನಾಗ್ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಲಾವಿದರ ಬದಲಾವಣೆಗೆ ಕಾರಣವೇನು?
'ಗಾಳಿಪಟ-2' ಸಿನಿಮಾ ಅನೌನ್ಸ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ಸಂಚಲನ ಕ್ರಿಯೆಟ್ ಮಾಡಿತ್ತು. ಶರಣ್ ಮತ್ತು ರಿಷಿ ಅವರನ್ನು ಕಾಸ್ಟ್ ಮಾಡಿದ್ದ ಚಿತ್ರತಂಡಕ್ಕೆ, ಎಲ್ಲಾ ಕಡೆಯಿಂದ ಗಣೇಶ್ ಮತ್ತು ದಿಗಂತ್ ಇದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಮಾತುಗಳು ಹೆಚ್ಚಾಗಿ ಕೇಳಿ ಬರುತ್ತಿತ್ತಂತೆ. ದಿಗಂತ್ ಮತ್ತು ಗಣೇಶ್ ಇಬ್ಬರಿಗೆ ಬೇಡಿಕೆ ಹೆಚ್ಚಾದ ಕಾರಣ 'ಗಾಳಿಪಟ-'2 ಚಿತ್ರಕ್ಕೆ ಇಬ್ಬರನ್ನು ಮತ್ತೆ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ. ಪ್ರೇಕ್ಷಕರ ಆಸೆಯಂತೆ ಗಾಳಿಪಟದಲ್ಲಿ ಅಭಿನಯಿಸಿದ್ದ ಗಣೇಶ್ ಮತ್ತು ದಿಗಂತ್ ಅವರೆ 'ಗಾಳಿಪಟ-2' ಚಿತ್ರದಲ್ಲೂ ಮುಂದುವರೆಸುವ ನಿರ್ಧಾರ ಮಾಡಿದ್ರಂತೆ. ಈ ನಿರ್ಧಾರವನ್ನು ಶರಣ್ ಮತ್ತು ರಿಷಿ ಕೂಡ ಒಪ್ಪಿಕೊಂಡರಂತೆ.

2008ರಲ್ಲಿ ರಿಲೀಸ್ ಆಗಿದ್ದ 'ಗಾಳಿಪಟ'
2008ರಲ್ಲಿ ರಿಲೀಸ್ ಆಗಿದ್ದ ಗಾಳಿಪಟ ಚಿತ್ರಾಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತು ಚಿತ್ರತ. ಅಂದ್ಹಾಗೆ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಆದ್ರೆ ಹಾಡುಗಳು. ವಿ ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಸಂಗೀತ ಪ್ರಿಯರನ್ನು ಮೋಡಿ ಮಾಡಿತ್ತು. ಈ ಬಾರಿ ಹರಿಕೃಷ್ಣ ಜಾಗದಲ್ಲಿ ಅರ್ಜುನ್ ಜನ್ಯ ಬಂದಿದ್ದಾರೆ.

ಮೂವರು ನಾಯಕಿಯರು
ಈಗಾಗಲೆ ಚಿತ್ರಕ್ಕೆ ಮೂವರು ನಾಯಕಿಯರು ಆಯ್ಕೆಯಾಗಿದ್ದಾರೆ. ನಟಿ ಶರ್ಮಿಳ ಮಾಂಡ್ರೆ, ಅದಿತಿ ಪ್ರಭುದೇವ ಮತ್ತು ಸೋನಾಲ್ ಮೊಂತೆರೋ ಕಾಣಿಸಕೊಳ್ಳುತ್ತಿದ್ದಾರೆ. ಈ ಮೂಲರು ನಾಯಕಿಯರು ಬದಲಾಗಿಲ್ಲ. ಗಾಳಿಪಟ-2 ಚಿತ್ರದಲ್ಲಿ ಈ ಮೂವರೆ ಕಾಣಿಸಿಕೊಳ್ಳಲಿದ್ದಾರೆ. ಗಾಳಿಪಟ ಚಿತ್ರದಲ್ಲಿ ಡೈಸಿ ಬೋಪಣ್ಣ, ನೀತು ಮತ್ತು ಭಾವನ ರಾವ್ ಕಾಣಿಸಿಕೊಂಡಿದ್ದರು.


Click it and Unblock the Notifications











